Puttakkana Makkalu Serial: ಮನಸ್ಸು ಬದಲಾಯಿಸಿ ಬಂದ ಬಂಗಾರಮ್ಮನನ್ನು ಕೆಣಕಿಬಿಟ್ಟಳಾ ನಂಜಮ್ಮ?
'ಪುಟ್ಟಕ್ಕನ ಮಕ್ಕಳು' ಧಾರಾವಾಹಿ ಶುರುವಾದಾಗಿನಿಂದ ನಂಬರ್ ಒನ್ ಸ್ಥಾನದಲ್ಲೇ ಇದೆ. ಇಲ್ಲಿವರೆಗೂ ಒಂದು ಎಪಿಸೋಡಿನಲ್ಲೂ ಬೋರ್ ಎನಿಸೋ ವಿಚಾರಗಳು ನಡೆದಿಲ್ಲ. ಬಡತನ, ಸಿರಿತನ, ಹಗೆತನ, ಪ್ರೀತಿ-ಪ್ರೇಮದ ಒದ್ದಾಟ ಈ ಎಲ್ಲಾ ಅಂಶಗಳು ಪ್ರೇಕ್ಷಕರನ್ನು ಹಾಗೇ ಹಿಡಿದಿಟ್ಟುಕೊಂಡಿದೆ. ಧಾರಾವಾಹಿ ಅಂದರೆ ಮೂಗು ಮುರಿಯುತ್ತಿದ್ದವರು ಕೂಡ ಇಂದು ಪುಟ್ಟಕ್ಕನ ಮಕ್ಕಳನ್ನು ಬಿಟ್ಟು ಬಿಡದಂತೆ ನೋಡಲು ಶುರು ಮಾಡಿದ್ದಾರೆ.
'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲಿ ಬರುವ ಒಂದೊಂದು ಪಾತ್ರಗಳು ಧಾರಾವಾಹಿಗೆ ಒಂದೊಂದು ತಿರುವು ನೀಡುತ್ತವೆ. ಕಥೆಯೂ ಅಷ್ಟೇ ಅಚ್ಚುಕಟ್ಟಾಗಿ ಸಾಗುತ್ತಿದೆ. ಕ್ಯೂರಿಯಾಸಿಟಿಯನ್ನು, ನೋಡುವ ಹಂಬಲವನ್ನು ಹಾಗೆ ಉಳಿಸಿಕೊಂಡು ಸಾಗುತ್ತಿದೆ. ಈಗ ಬಂಗಾರಮ್ಮ ಮತ್ತು ನಂಜಮ್ಮನ ಸ್ಪರ್ಧೆ ನೋಡೋದೆ ಚೆಂದ ಎನ್ನುತ್ತಿದ್ದಾರೆ ಪ್ರೇಕ್ಷಕರು.

ಬಂಗಾರಮ್ಮ ನಂಜಮ್ಮನ ಮನೆಗೆ ಹೋಗಿದ್ದೇಕೆ?
'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲಿ ಬಂಗಾರಮ್ಮನ ಪಾತ್ರಕ್ಕೆ ಎಷ್ಟು ಮಹತ್ವವಿದೆಯೋ ನಂಜಮ್ಮನ ಪಾತ್ರಕ್ಕೂ ಅಷ್ಟೇ ಮಹತ್ವವಿದೆ. ನಂಜಮ್ಮನ ಮಗ ಚಂದ್ರುಗೆ ಬಂಗಾರಮ್ಮ ತನ್ನ ಮಗಳು ವಸು ಕೊಟ್ಟು ಮದುವೆ ಮಾಡಿದ್ದಾರೆ. ಆದರೆ ಗಂಡ ಹೆಂಡತಿ ದೂರ ದೂರವಾಗಿ ವಾಸಿಸುತ್ತಿದ್ದಾರೆ. ಇಬ್ಬರ ನಡುವೆ ಪ್ರೀತಿ ಇದ್ದರು, ಒಂದಾಗಿ ಬಾಳಬೇಕೆಂಬ ಆಸೆಯಿದ್ದರು ಎರಡು ಮನೆಯವರ ಸ್ವಾಭಿಮಾನ ಇದಕ್ಕೆ ಅಡ್ಡಿ ಬರುತ್ತಿದೆ. ಕಾಲಿಗೆ ಬಿದ್ದರೆ ಮಾತ್ರ ಮಗಳು ಅಂತ ಬಂಗಾರಮ್ಮ ಹಠ ಹಿಡಿದಿದ್ದರೆ ಅವಳು ಬೇಡವೇ ಬೇಡ ಅಂತ ನಂಜಮ್ಮ ಹೋರಾಟ ನಡೆಸುತ್ತಿದ್ದಾಳೆ. ಈ ಎಫೆಕ್ಟ್ ವಸು ಮತ್ತು ಚಂದ್ರು ದೂರ ಇರುವಂತೆ ಮಾಡಿದೆ. ಆದರೆ ಗಟ್ಟಿಗಿತ್ತಿ, ತೀರ್ಮಾನ ಅಂದ್ರೆ ಒಂದೇ ಸಲ ತೆಗೆದುಕೊಳ್ಳುವುದು ಎಂದುಕೊಂಡಿದ್ದ ಬಂಗಾರಮ್ಮನ ಮನಸ್ಸನ್ನು ಪುಟ್ಟಕ್ಕ ಬದಲಾಯಿಸಿದ್ದಾರೆ. ಗಂಡ ಹೆಂಡತಿ ಆಸೆ ಇದ್ದರೂ, ಜೊತೆಗೆ ಬದುಕದೆ ಹೋದರೆ ಅದೆಷ್ಟು ನೋವು ತಿಂತಾರೆ ಗೊತ್ತೇನವ್ವ ಎಂದಾಗ ಬಂಗಾರಮ್ಮನಿಗೆ ತನ್ನ ಮಗಳ ಬದುಕಿನ ನೆನಪಾಗಿದೆ. ಮನಸ್ಸು ಬದಲಾಯಿಸಿ ನಂಜಮ್ಮನ ಮನೆ ಕಡೆ ಹೊರಟಿದ್ದಾಳೆ.

ನಂಜಮ್ಮನ ಮಾತಿಗೆ ಮತ್ತೆ ಕೋಪಗೊಂಡ ಬಂಗಾರಮ್ಮ
ಮಗಳ ಜೀವನಕ್ಕಾಗಿ ಬಂಗಾರಮ್ಮನ ಮನಸ್ಸು ಬದಲಾಗಿದೆ. ಹೀಗಾಗಿಯೇ ನಂಜಮ್ಮನ ಮನೆಗೆ ಚಂದ್ರು ಮತ್ತು ನಂಜಮ್ಮನ ಜೊತೆ ಮಾತನಾಡಲು ಬಂದಿದ್ದಾಳೆ. ಆದರೆ ಇಲ್ಲಿ ಮಹಾಯುದ್ಧವೇ ನಡೆದು ಹೋಗಿದೆ. ಯಾವ ಸಂಬಂಧವನ್ನು ಒಂದು ಮಾಡಬೇಕು ಎಂದು ಬಯಸಿದ್ದರೋ ಮತ್ತೆ ಆ ಸಂಬಂಧಗಳು ದೂರ ದೂರ ಆಗುವ ಲಕ್ಷಣಗಳೇ ಗೋಚರಿಸುತ್ತಿದೆ. ನಂಜಮ್ಮನ ಮನೆಗೆ ಬಂದ ಬಂಗಾರಮ್ಮನಿಗೆ ಅವಮಾನವೇ ಎದುರಾಗಿದೆ. ನನ್ನ ಮಗನಿಗೆ ನಿನ್ನ ಮಗಳು ಬೇಕಾಗಿಲ್ಲ. ನಾನು ಇನ್ನೊಂದು ಮದುವೆ ಮಾಡಿಯೇ ಮಾಡ್ತೀನಿ ಅಂತ ನಂಜಮ್ಮ ಹೇಳಿದ್ದು, ಬಂಗಾರಮ್ಮನ ಕೋಪಕ್ಕೆ ಕಾರಣವಾಗಿದೆ. ವಸು ಬಗ್ಗೆ ಕೆಟ್ಟದಾಗಿ ಮಾತನಾಡಿದ್ದು ಬಂಗಾರಮ್ಮ ತಾಳ್ಮೆಯನ್ನು ಕೆದಕಿದೆ. ನಂಜಮ್ಮನನ್ನು ಮಾತಾಡೋದಕ್ಕೆ ಬಿಟ್ಟ ಬಂಗಾರಮ್ಮ ತನ್ನ ಉಗ್ರ ಸ್ವರೂಪವನ್ನು ತೋರಿಸಿದ್ದಾಳೆ. ನಿನ್ನ ಮನೆಗೆ ನನ್ನ ಮಗಳು ಬಾರದೆ ಇದ್ದದ್ದು ಒಳ್ಳೆಯದ್ದೆ ಆಯಿತು ಎಂದಿದ್ದಾಳೆ.

ಚಂದ್ರು ಮತ್ತೊಂದು ಮದುವೆ ಆಗುತ್ತಾನಾ..?
'ಪುಟ್ಟಕ್ಕನ ಮಕ್ಕಳು' ಸಂಸಾರದಲ್ಲಿ ಇದು ಎರಡು ಮನೆಯವರ ನಡುವೆ ನಡೆಯುತ್ತಿರುವ ಯುದ್ಧ. ಚಂದ್ರುಗೆ ಅಮ್ಮ ಇನ್ನೆಲ್ಲಿ ಸತ್ತು ಹೋಗುತ್ತಾರೋ ಎಂಬ ಭಯಕ್ಕೆ ದೂರ ಇದ್ದರೆ ವಸು ಅಮ್ಮನ ಮಾತಿಗೆ ಬೆಲೆ ಕೊಟ್ಟು ದೂರ ಇದ್ದಾಳೆ. ಆದರೆ ಬದಲಾಗಿ ಬಂದ ಬಂಗಾರಮ್ಮನ ಮುಂದೆ ನಂಜಮ್ಮನ ಮಾತುಗಳು ಮತ್ತೆ ಭಾವನೆಗಳ ಯುದ್ಧಕ್ಕೆ ನಾಂದಿ ಆಡಿದೆ. ವಸು ಅಂದ್ರೆ ಉಸಿರಂತೆ ಪ್ರೀತಿಸುವ ಚಂದ್ರು ಬಾಯನ್ನು ನಂಜಮ್ಮ ಕಟ್ಟಿ ಹಾಕಿದ್ದಾಳೆ. ಮತ್ತೊಂದು ಮದುವೆ ಮಾಡ್ತೀನಿ ಎಂದಾಗ ಪುಟ್ಟಕ್ಕನ ಕೋಪ ನೆತ್ತಿಗೇರಿದೆ. ನನ್ನನ್ನು ಮೀರಿ ಅದೇಗೆ ನಿನ್ನ ಮಗನಿಗೆ ಮತ್ತೊಂದು ಮದುವೆ ಮಾಡ್ತೀಯಾ ಅನ್ನೋದನ್ನು ನಾನು ನೋಡುತ್ತೇನೆ. ನೀನು, ನಿನ್ನ ಮಗ ಇಬ್ಬರು ನನ್ನ ಮಗಳ ಕಾಳಿಗೆ ಬಿದ್ದು ಕ್ಷಮೆ ಕೇಳಿ ಕರೆದುಕೊಂಡು ಹೋಗುವಂತೆ ಮಾಡುತ್ತೀನಿ ಎಂದು ಸವಾಲು ಹಾಕಿದ್ದಾರೆ.

ನಂಜಮ್ಮ-ಬಂಗಾರಮ್ಮ ಯುದ್ಧದ ಗತಿಯೇನು?
ಇಬ್ಬರ ಕುಟುಂಬದ ಜಗಳದಿಂದ ಅಕ್ಷರಶಃ ನಲುಗಿರುವುದು ಚಂದ್ರು-ವಸು. ಚಂದ್ರುಗೆ ಮತ್ತೊಂದು ಮದುವೆ ಎಂದು ಗೊತ್ತಾದಾಗಲೇ ವಸು ತುಂಬಾ ನೊಂದಿದ್ದಳು. ಅತ್ತು ಕರೆದು ನಾವೂ ದೂರ ಓಡಿ ಹೋಗಿ ಬದುಕೋಣಾ ಬನ್ನಿ ಚಂದ್ರು ಎಂದಿದ್ದಳು. ಇದೀಗ ಒಂದು ವಾರದ ಮಹಾಸಂಚಿಕೆ ಶುರುವಾಗಿದೆ. ಈ ಸಂಚಿಕೆಯಲ್ಲಿ ಬಂಗಾರಮ್ಮ ಮತ್ತು ನಂಜಮ್ಮನ ನಡುವೆ ಯುದ್ಧ ಶುರುವಾಗಿದೆ. ಈಗ ಇಬ್ಬರ ಪ್ರೀತಿಯನ್ನು ಮನೆಯವರು ಸೋತು ಉಳಿಸುತ್ತಾರಾ? ಇಲ್ಲ ಸ್ಟ್ರಾಂಗ್ ನಿರ್ಧಾರ ತೆಗೆದುಕೊಂಡು ಅವರಿಬ್ಬರೇ ಪ್ರೀತಿ ಉಳಿಸಿಕೊಳ್ಳುತ್ತಾರಾ ಎಂಬ ಪ್ರಶ್ನೆ ನೋಡುಗರದ್ದಾಗಿದೆ.


Click it and Unblock the Notifications











