ಅಮಿತಾಬ್ಗೆ ಗಾಯ ಮಾಡಿದ ತಪ್ಪಿಗೆ ನಟಿಸುವ ಅವಕಾಶಗಳನ್ನೇ ಕಳೆದುಕೊಂಡಿದ್ದ ನಟ
ನಟ ಅಮಿತಾಬ್ ಬಚ್ಚನ್ ಬೆಂಗಳೂರಿನಲ್ಲಿ 'ಕೂಲಿ' ಚಿತ್ರೀಕರಣದ ವೇಳೆ ಗಾಯ ಮಾಡಿಕೊಂಡಿದ್ದ ಘಟನೆ ಇಡೀ ದೇಶದ ಗಮನ ಸೆಳೆದಿತ್ತು. ತೀವ್ರ ಗಾಯಗೊಂಡಿದ್ದ ಅಮಿತಾಬ್, ತಿಂಗಳುಗಟ್ಟಲೆ ಚಿಕಿತ್ಸೆ ಪಡೆದು ನಂತರ ಚೇತರಿಸಿಕೊಂಡಿದ್ದರು. ಆ ಗಾಯದಿಂದ ಆದ ಪರಿಣಾಮವನ್ನು ಅಮಿತಾಬ್ ಈಗಲೂ ಅನುಭವಿಸುತ್ತಿದ್ದಾರೆ.
Recommended Video
ಆದರೆ ಈ ಚಿತ್ರೀಕರಣದ ವೇಳೆ ಅಮಿತಾಬ್ ಬಚ್ಚನ್ ಗಾಯಗೊಳ್ಳಲು ಆಕಸ್ಮಿಕವಾಗಿ ಕಾರಣಕರ್ತರಾಗಿದ್ದ ನಟ ಕೂಡ ಆಘಾತ ಅನುಭವಿಸಿದ್ದರು. ತಮ್ಮದಲ್ಲದ ತಪ್ಪಿಗೆ ದೊಡ್ಡ ಶಿಕ್ಷೆಯನ್ನೂ ಅನುಭವಿಸಿದ್ದರು ಎನ್ನುವುದು ಬಹಿರಂಗವಾಗಿದೆ.
1983ರಲ್ಲಿ 'ಕೂಲಿ' ಚಿತ್ರೀಕರಣದ ವೇಳೆ ಆಕಸ್ಮಿಕವಾಗಿ ಅಮಿತಾಬ್ ಬಚ್ಚನ್ ತೀವ್ರವಾಗಿ ಗಾಯಗೊಳ್ಳಲು ಕಾರಣವಾಗಿದ್ದರಿಂದಾಗಿ ಏಳೆಂಟು ಸಿನಿಮಾಗಳಲ್ಲಿ ನಟಿಸುವ ಅವಕಾಶವನ್ನೇ ಕಳೆದುಕೊಂಡಿದ್ದಾಗಿ ನಟ ಪುನೀತ್ ಇಸ್ಸಾರ್ ತಿಳಿಸಿದ್ದಾರೆ. ಮುಂದೆ ಓದಿ...

ಆಕಸ್ಮಿಕವಾಗಿ ಆದ ಗಾಯ
'ಮಹಾಭಾರತ' ಧಾರಾವಾಹಿಯಲ್ಲಿ 'ಧುರ್ಯೋದನ' ಪಾತ್ರದ ಮೂಲಕ ಹೆಸರಾಗಿರುವ ನಟ ಪುನೀತ್ ಇಸ್ಸಾರ್, ಮೂರೂವರೆ ದಶಕಗಳ ಹಿಂದೆ ನಡೆದಿದ್ದ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. ಈ ಘಟನೆ ಬಳಿಕವೂ ಅಮಿತಾಬ್ ಬಚ್ಚನ್ ತಮ್ಮನ್ನು ಹೇಗೆ ಪ್ರೀತಿ, ಆದರದಿಂದ ನೋಡಿಕೊಳ್ಳುವ ಮೂಲಕ ತಮ್ಮಿಬ್ಬರ ವಿರುದ್ಧ ಯಾವುದೇ ಕೋಪ-ದ್ವೇಷ ಇಲ್ಲ ಎಂಬುದನ್ನು ಜಗತ್ತಿಗೆ ಸಾಬೀತುಪಡಿಸಿದ್ದರು ಎಂದೂ ವಿವರಿಸಿದ್ದಾರೆ.
'ಅಮಿತಾಬ್ ಬಚ್ಚನ್ ಅವರೊಂದಿಗಿನ ನನ್ನ ಮುಖಾಮುಖಿ ದುರದೃಷ್ಟಕರವಾಗಿತ್ತು. 'ಕೂಲಿ' ಚಿತ್ರೀಕರಣ ಮಾಡುವಾಗ ನಾವು ಆ ಆಕ್ಷನ್ ಸನ್ನಿವೇಶ ಮಾಡಬೇಕಿತ್ತು. ಕೊನೆಯ ಟೇಕ್ ತೆಗೆದುಕೊಳ್ಳುವಾಗ ನಾನು ತಪ್ಪಿ ಬಚ್ಚನ್ ಅವರಿಗೆ ಗಾಯ ಮಾಡಿದೆ' ಎಂದು ಪುನೀತ್ ನೆನಪಿಸಿಕೊಂಡಿದ್ದಾರೆ.

ಗಾಯಗೊಂಡಿದ್ದ ಅಮಿತಾಬ್
1982ರ ಜುಲೈ 26ರಂದು ಮನಮೋಹನ್ ದೇಸಾಯಿ ನಿರ್ದೇಶನದ 'ಕೂಲಿ' ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯುತ್ತಿತ್ತು. ಇದರ ಆಕ್ಷನ್ ದೃಶ್ಯದಲ್ಲಿ ಪುನೀತ್, ಅಮಿತಾಬ್ಗೆ ಹೊಡೆದಂತೆ ಮಾಡಬೇಕಿತ್ತು. ಆಗ ಅಮಿತಾಬ್ ಸಮೀಪದ ಕಬ್ಬಿಣದ ಟೇಬಲ್ ಮೇಲೆ ಬೀಳಬೇಕಿತ್ತು. ಆದರೆ ಇಲ್ಲಿ ಅವರ ಆಕ್ಷನ್ ಹೊಂದಾಣಿಕೆಯಾಗದೆ ಕಬ್ಬಿಣದ ಮೇಜಿನ ಅಂಚು ಬಿಗ್ಬಿಯ ಕೆಳಹೊಟ್ಟೆಗೆ ಹೊಕ್ಕಿತು. ಇದರಿಂದ ಅವರು ಗಂಭೀರವಾಗಿ ಗಾಯಗೊಂಡು ಹಲವು ತಿಂಗಳು ಆಸ್ಪತ್ರೆಗೆ ದಾಖಲಾಗಿದ್ದರು.

ಸಮಾಧಾನಪಡಿಸಿದ್ದ ಅಮಿತಾಬ್
ಈ ಘಟನೆ ಹಾಗೂ ನಂತರದ ಬೆಳವಣಿಗೆಗಳನ್ನು ಸ್ಮರಿಸಿಕೊಂಡಿರುವ ಪುನೀತ್, 'ಅವರು ಬಹಳ ಕರುಣಾಳು. ನನಗೆ ಬಹಳ ಆತಂಕಗೊಂಡಿದ್ದೆ ಎನ್ನುವುದು ಅವರಿಗೆ ತಿಳಿದಿತ್ತು. ಆಸ್ಪತ್ರೆಯಲ್ಲಿ ಅವರನ್ನು ಭೇಟಿ ಮಾಡಲು ಹೋದಾಗ ನನ್ನನ್ನು ಪ್ರೀತಿಯಿಂದಲೇ ಮಾತನಾಡಿಸಿದರು. ನಿನ್ನ ಮನಸ್ಸಲ್ಲಿ ಏನು ನಡೆಯುತ್ತಿದೆ ಎನ್ನುವುದು ನನಗೆ ತಿಳಿದಿದೆ. ಏಕೆಂದರೆ ನನ್ನ ಮತ್ತು ವಿನೋದ್ ಖನ್ನಾ ನಡುವೆಯೂ ಈ ರೀತಿಯ ಅಪಘಾತ ಸಂಭವಿಸಿತ್ತು. ಆಗ ವಿನೋದ್ ಅವರು ಆಕಸ್ಮಿಕವಾಗಿ ಗಾಯಗೊಂಡಿದ್ದರು. ಅವರ ಹಣೆಗೆ ಎಂಟು ಹೊಲಿಗೆ ಹಾಕುವಂತಾಗಿತ್ತು ಎಂದು ತಮ್ಮ ಅನುಭವವನ್ನು ಹೇಳಿಕೊಂಡಿದ್ದರು' ಎಂಬುದನ್ನು ವಿವರಿಸಿದ್ದಾರೆ.

ಹೆಂಡತಿ ರಕ್ತ ನೀಡಿದ್ದಳು
ಬಿಗ್ ಬಿ ಸ್ಥಿತಿ ನೋಡಿ ನಾನು ಕಲ್ಲಿನಂತೆ ನಿಂತುಬಿಟ್ಟಿದ್ದೆ. ಆದರೆ ಆ ಮಹಾನ್ ವ್ಯಕ್ತಿ ಹೇಗೆಂದರೆ, ನನ್ನ ಹೆಗಲ ಮೇಲೆ ಕೈ ಹಾಕಿ ಗೇಟಿನವರೆಗೂ ನನ್ನ ಜತೆ ನಡೆದುಬಂದಿದ್ದರು. ಇದು ಈ ಘಟನೆಯಿಂದ ನಮ್ಮಿಬ್ಬರ ನಡುವೆ ಯಾವುದೇ ಮನಸ್ತಾಪ ಉಂಟಾಗಿಲ್ಲ ಎಂಬುದನ್ನು ಜಗತ್ತಿಗೆ ತೊರಿಸಲು ಅವರು ಮಾಡಿದ್ದ ಉಪಾಯ. ಅವರಿಗೆ ನನ್ನ ಹೆಂಡತಿ ಕೂಡ ರಕ್ತ ನೀಡಿದ್ದಳು ಎಂದು ತಿಳಿಸಿದ್ದಾರೆ.

ಒಲಿದ ಮಹಾಭಾರತದ ದುರ್ಯೋಧನ
ಆದರೆ, ಕೂಲಿಯ ಅವಘಡದ ಬಳಿಕ ತಮಗೆ ಸಿನಿಮಾಗಳಲ್ಲಿ ಕೆಲಸವೇ ಸಿಗಲಿಲ್ಲ ಎಂಬುದನ್ನೂ ಅವರು ಹೇಳಿದ್ದಾರೆ. ಈ ಘಟನೆ ಬಳಿಕ ನಾನು ಏಳೆಂಟು ಸಿನಿಮಾಗಳಲ್ಲಿ ಅವಕಾಶ ಕಳೆದುಕೊಂಡೆ. 'ಮಹಾಭಾರತ' ಧಾರಾವಾಹಿ ಸಿಗುವವರೆಗೂ ನಾನು ಅವಕಾಶ ವಂಚಿತನಾಗಿದ್ದೆ. ಇದರಲ್ಲಿ ಮೊದಲು ನನಗೆ ಭೀಮನ ಪಾತ್ರಕ್ಕಾಗಿ ಕರೆ ಮಾಡಲಾಗಿತ್ತು. ಆದರೆ ನಾನು ದುರ್ಯೋಧನ ಪಾತ್ರದ ಮೇಲೆ ಕಣ್ಣಿಟ್ಟಿದ್ದೆ. ದುರ್ಯೋಧನನ ಡೈಲಾಗ್ಗಳನ್ನು ಹೇಳಿ ಪಾತ್ರ ಗಿಟ್ಟಿಸಿಕೊಂಡೆ. ಮುಂದಿನದ್ದು ಇತಿಹಾಸ ಎಂದು ವಿವರಿಸಿದ್ದಾರೆ.


Click it and Unblock the Notifications











