"ಅಪ್ಪಾಜಿಗೆ ಇವತ್ತು ವ್ಯಾಯಾಮ ಮಾಡಿಸಿದ್ದೀನಿ.. ನಾಳೆ ಅವರಿಲ್ಲ"; ಸ್ಟಂಟ್ ಟ್ರೈನರ್ ಅಪ್ಪು ವೆಂಕಟೇಶ್
ಕನ್ನಡ ಚಿತ್ರರಂಗದ ವರನಟ ಡಾ.ರಾಜ್ಕುಮಾರ್ ನಟನೆಯಷ್ಟೇ ಅಲ್ಲ. ಫಿಟ್ನೆಸ್ ಕಡೆಗೆ ಬಲು ಆಸಕ್ತಿ. ಸದಾ ಫಿಟ್ ಆಗಿ ಇರಬೇಕು ಅಂತ ಬಯಸುತ್ತಿದ್ದರು. ಹೀಗಾಗಿ ಯೋಗವನ್ನು ಕರಗತ ಮಾಡಿಕೊಂಡಿದ್ದರು. 50ನೇ ವಯಸ್ಸಿನಲ್ಲಿ ಯೋಗವನ್ನು ಅಭ್ಯಾಸ ಮಾಡಿದ್ದರೂ, ಬಹುಬೇಗನೇ ಎಕ್ಸ್ಪರ್ಟ್ ಆಗಿದ್ದರು. ಆದರೆ, ಅಣ್ಣಾವ್ರನ್ನು ವೀರಪ್ಪನ್ ಕಿಡ್ನಾಪ್ ಮಾಡಿದ ಬಳಿಕ ಇವರ ಫಿಟ್ನೆಸ್ ಬದಲಾಗಿತ್ತು.
ವೀರಪ್ಪ ಕಿಡ್ನಾಪ್ ಮಾಡಿ ಬಿಡುಗಡೆಯಾದ ಮೇಲೆ ಅಣ್ಣಾವ್ರಿಗೆ ಆರೋಗ್ಯದಲ್ಲಿ ಏರು ಪೇರಾಗಿತ್ತು. ಅವರಿಗೆ ಮಂಡಿ ನೋವು ಹಾಗೂ ಬೆನ್ನು ನೋವು ಕಾಣಿಸಿಕೊಂಡಿತ್ತು. ಹೀಗಾಗಿ ಅವರಿಗೆ ಮಂಡಿ ಹಾಗೂ ಸೊಂಟದ ಆಪರೇಷನ್ ಕೂಡ ಮಾಡಿಸಿದ್ದರು. ಅಲ್ಲಿಂದ ಅವರಿಗೆ ಯೋಗ ಮಾಡುವುದಕ್ಕೆ ಕಷ್ಟ ಆಗುತ್ತಿತ್ತು. ಹೀಗಾಗಿ ಫಿಟ್ನೆಸ್ಗಾಗಿ ಜಿಮ್ ಮಾಡುವ ಮನಸ್ಸು ಮಾಡಿದ್ದರು.

ಅದಾಗಲೇ ಅಪ್ಪು ಹೀರೋ ಆಗಿ ಎಂಟ್ರಿ ಕೊಡುವುದಕ್ಕೆ ತಯಾರಿ ನಡೆಸುತ್ತಿದ್ದರು. ಮನೆಯಲ್ಲಿ ಜಿಮ್ ಮಾಡುವುದಕ್ಕೆ ಬೇಕಿದ್ದ ಸಲಕರಣೆಗಳನ್ನು ಅಳವಡಿಸಲಾಗಿತ್ತು. ಪ್ರತಿ ದಿನ ಅಪ್ಪುಗೆ ಸ್ಟಂಟ್ ಹೇಳಿಕೊಡುವುದಕ್ಕೆ ವೆಂಕಟೇಶ್ ಮನೆಗೆ ಬರುತ್ತಿದ್ದರು. ಆಗ ಅಣ್ಣಾವ್ರು ಕೂಡ ತಮಗೂ ಹೇಳಿ ಕೊಡುವಂತೆ ಒತ್ತಾಯ ಮಾಡಿದ್ದರು. ಅಣ್ಣಾವ್ರ ವ್ಯಾಯಾಮ ಹೇಳಿ ಕೊಟ್ಟ ದಿನಗಳನ್ನು ಡೈಲಿ ಮಾಧ್ಯಮ ಯೂಟ್ಯೂಬ್ ಚಾನೆಲ್ನಲ್ಲಿ ಸ್ಟಂಟ್ ಟ್ರೈನರ್ ಅಪ್ಪು ವೆಂಕಟೇಶ್ ಹೇಳಿಕೊಂಡಿದ್ದಾರೆ. ಆ ಇಂಟ್ರೆಸ್ಟಿಂಗ್ ವಿಷಯಗಳು ಇಲ್ಲಿವೆ.
ಯೋಗ ಮಾಡುವ ಹಾಗಿರಲಿಲ್ಲ
ವೀರಪ್ಪನ್ ಅಪಹರಣದ ಬಳಿಕ ಅಣ್ಣಾವ್ರಿಗೆ ಮಂಡಿ ಆಪರೇಷನ್ ಮಾಡಿಸಿದ್ದರಿಂದ ಯೋಗ ಮಾಡುವಂತಿರಲಿಲ್ಲ. ಆಗ ವೈದ್ಯರು ಅಣ್ಣಾವ್ರಿಗೆ ಲೈಟ್ ಆಗಿ ಸೈಕಲಿಂಗ್, ವಾಕಿಂಗ್ ಇಂತಹ ವ್ಯಾಯಾಮ ಮಾಡುವಂತೆ ಸಲಹೆಯನ್ನು ನೀಡಿದ್ದರು. "ಅಪ್ಪಾಜಿಯವರು ವೀರಪ್ಪನ್ ಕಿಡ್ನಾಪ್ ಮಾಡಿಕೊಂಡು ಹೋಗಿ ಬಂದ್ಮೇಲೆ ಅವರಿಗೆ ಆಪರೇಷನ್ ಆಯ್ತು. ಮಂಡಿ ಮತ್ತು ಸೊಂಟದ ಆಪರೇಷನ್ ಆಯ್ತು. ಆಗ ಅಪ್ಪು ನನ್ನನ್ನು ಕರೆದುಕೊಂಡು ಹೋಗಿದ್ದರು. ಅದಾದ್ಮೇಲೆ ಮನೆಗೆ ಬಂದರು. ಮನೆಗೆ ಬಂದ್ಮೇಲೆ ಅವರು ಯೋಗ ಮಾಡುವ ಹಾಗೆ ಇರಲಿಲ್ಲ. ಅಮ್ಮ ನನ್ನನ್ನು ಕರೆದು ಎರಡು ಕಾಲುಗಳನ್ನು ಹಿಡಿದುಕೊಂಡು ಸೈಕಲಿಂಗ್ ತರ ತುಳಿಯೋದಿತ್ತು. ನಾನು ಕೈಯಿಂದ ತಳ್ಳಬೇಕಿತ್ತು. ಇದು ಮಂಡಿಗಳಿಗೆ ಸ್ಟ್ರೆಂಥ್ ಬರುವುದಕ್ಕಾಗಿ ಮಾಡುತ್ತಿದ್ವಿ. ಆಮೇಲೆ ಡಾಕ್ಟರ್ ವಾಕ್ ಮಾಡುವುದಕ್ಕೆ ಹೇಳಿದ್ದರಂತೆ. ಅದನ್ನು ಮಾಡುತ್ತಿದ್ದರು." ಎನ್ನುತ್ತಾರೆ ಅಪ್ಪು ವೆಂಕಟೇಶ್.
ಜಿಮ್ ಮಾಡೋಣ ಅಂದ್ರು ಅಪ್ಪಾಜಿ
ವಾಕಿಂಗ್, ಸೈಕಲಿಂಗ್ ಬಳಿಕ ಅಣ್ಣಾವ್ರು ನೇರವಾಗಿ ಅಪ್ಪು ವೆಂಕಟೇಶ್ ಬಳಿ ಬಂದು ಜಿಮ್ ಮಾಡಬೇಕು ಅಂತ ಹಠಕ್ಕೆ ಬಿದ್ದಿದ್ದರು. ಆ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. "ಆಗ ನಾನು ಅಪ್ಪುಗೆ ಪ್ರಾಕ್ಟೀಸ್ ಮಾಡಿಸುತ್ತಿದ್ದೆ. ವೆಂಕಟೇಶ್ ಅವರೇ ಬನ್ನಿ ಇಲ್ಲಿ ಅಂದರು. ನಾನು ಅವರ ಬಳಿ ಹೋದೆ. ಊಟ ಮಾಡ್ತೀವಲ್ಲ. ಅದು ಜೀರ್ಣ ಆಗಬೇಕು ಅಂದರೆ ಏನು ಮಾಡಬೇಕು? ಅಂದರು. ಅದಕ್ಕೆ ನಾನು ವ್ಯಾಯಾಮ ಮಾಡಬೇಕು ಅಂತ ಅಂದೆ. ಬನ್ನಿ ಇಲ್ಲಿ ಅಂತ ನನ್ನನ್ನು ಪುನೀತ್ ರಾಜ್ಕುಮಾರ್ ಅವರಿಗೆ ಜಿಮ್ ಐಟಂಗಳನ್ನು ಮೂಲೆಯಲ್ಲಿ ಹಾಕಿಸಿದ್ವಿ. ಇದನ್ನು ಮಾಡೋಣ ಅಂದರು. ಅಪ್ಪಾಜಿ ನೀವು ಮಾಡುವಂತಹದ್ದಲ್ಲ. ಹುಡುಗರು ಮಾಡುವಂತಹದ್ದು ಅಂದೆ. ಏನಾಗಲ್ಲ ಬನ್ನಿ ಅಂತ ಕಳೆದುಕೊಂಡು ಹೋದರು." ಎಂದು ಆ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.

ಎರಡು ಗಂಟೆ ವ್ಯಾಯಾಮ
ಅಣ್ಣಾವ್ರ ಹಠವನ್ನು ಬಿಟ್ಟಿರಲಿಲ್ಲ. ಹಾಗಾಗಿ ಪಾರ್ವತಮ್ಮ ರಾಜ್ಕುಮಾರ್ ಅವರೂ ಕೂಡ ಸ್ವಲ್ಪ ಹೇಳಿಕೊಡಿ ಎಂದಿದ್ದರು. ಅಲ್ಲಿಂದ ಅಣ್ಣಾವ್ರು ಜಿಮ್ನಲ್ಲಿ ಕಸರತ್ತು ಮಾಡುವುದು ನಿರಂತರವಾಗಿ ಸಾಗಿತ್ತು. "ಅಪ್ಪುನೂ ಅಲ್ಲೇ ಇದ್ದರು. ಅಮ್ಮನೂ ಅಲ್ಲೇ ಇದ್ದರು. ಆಗ ಪಾರ್ವತಮ್ಮ ಅವರು ಯಾರ ಮಾತನ್ನು ಕೇಳುವುದಿಲ್ಲ. ಸ್ವಲ್ಪ ಸ್ವಲ್ಪ ಮಾಡಿಸಿ ಎಂದು ಹೇಳಿದರು. ನನಗೆ ಫುಲ್ ಖುಷಿ. ಅಪ್ಪು ದೇವರಿಗೆ ಮಾಡಿಸಿದ್ದು ಖುಷಿ. ಅಪ್ಪಾಜಿ ಮಾಡಿಸಿದ್ದು ರಾಯರ ಆಶೀರ್ವಾದ. ಎಷ್ಟು ಜನಕ್ಕೆ ಸಿಗುತ್ತೆ ಆ ಪುಣ್ಯ. ಅಪ್ಪಾಜಿ ಏಳು ಗಂಟೆಯಿಂದ 9 ಗಂಟೆವರೆಗೂ ವ್ಯಾಯಾಮ ಮಾಡುತ್ತಿದ್ದರು." ಎಂದಿದ್ದಾರೆ.
ಭಕ್ತ ಅಂಬರೀಶಗೆ ಸಿದ್ಧತೆ ನಡೆಯುತ್ತಿತ್ತು
"ವರದಪ್ಪಣ್ಣ ಇದ್ದಾಗ ಅಪ್ಪು ಸಿನಿಮಾ ಆಗಿದ್ದು. ಅದಾದ್ಮೇಲೆ ವ್ಯಾಯಾಮ ಮಾಡಿಸಬೇಕಾದರೆ, ವರದಪ್ಪಣ್ಣ ಅವರು ಕಾಲವಾಗುತ್ತಾರೆ. ಆಗ ಅಣ್ಣಾವ್ರು ಕುಗ್ಗಿ ಹೋಗುತ್ತಾರೆ. ಅಣ್ಣಾವ್ರಿಗೆ ವ್ಯಾಯಾಮ ಮಾಡಿಸುವಾಗ ಬೈಸಿಪ್ಸ್ ಎಲ್ಲಾ ಚೆನ್ನಾಗಿ ಆಗಿತ್ತು. ಗದೆ ಹಿಡಿದುಕೊಂಡರೆ ಹೇಗಿರುತ್ತಲ್ಲಾ ಅಂತ ಹೇಳಿದ ಸಮಯದಲ್ಲಿ ವಿಜಯ ರೆಡ್ಡಿಯವರು ಸಾಂಗ್ ರೆಕಾರ್ಡಿಂಗ್ಗೆ ಬಂದಿದ್ದರು. ಯಾಕಂದ್ರೆ ಭಕ್ತ ಅಂಬರೀಶ ಸಿನಿಮಾ ಮಾಡುವುದಕ್ಕೆ. ಆಗ ವರದಪ್ಪಣ್ಣ ಅವರು ತೀರಿಕೊಂಡು ಬಿಟ್ರಲ್ಲ. ಆಗ ಕುಸಿದು ಹೋದರು. ಅದಾದ ಕೆಲವೇ ದಿನಗಳಲ್ಲಿ ಇವರು ಹೋಗ್ಬಿಟ್ರು" ಎಂದು ಬೇಸರ ಪಟ್ಟುಕೊಳ್ಳುತ್ತಾರೆ.
ಹಿಂದಿನ ದಿನ ವ್ಯಾಯಾಮ ಬೇಡ ಅಂದಿದ್ರು
ಅಣ್ಣಾವ್ರಿಗೆ ಅದೇನು ಅನಿಸಿತ್ತು ಗೊತ್ತಿಲ್ಲ. ಅವರು ಅಗಲುವ ಹಿಂದಿನ ದಿನ ಸಹಾಯಕರು ಅಪ್ಪು ವೆಂಕಟೇಶ್ಗೆ ಫೋನ್ ಮಾಡಿ, ನಾಳೆ ವ್ಯಾಯಮ ಬೇಡ ಎಂದಿದ್ದರು. ಅವತ್ತೇ ಅಣ್ಣಾವ್ರು ಇಹಲೋಕ ತ್ಯಜಿಸಿದ್ದರು. "ನಾಳೆ ಬೆಳಗ್ಗೆ ಅವರಿಗೆ ವ್ಯಾಯಾಮ ಮಾಡಿಸಬೇಕು. ಇವತ್ತು ರಾತ್ರಿ ಫೋನ್ ಬಂದಿತ್ತು. ಮಾಸ್ಟ್ರೇ ನಾಳೆ ಅಪ್ಪಾಜಿಯವರಿಗೆ ವ್ಯಾಯಾಮ ಬೇಡವಂತೆ ಅಂದರು. ಆಗ ನಮ್ಮ ಊರಿಗೆ ಚೆನ್ನಪಟ್ಟಣಕ್ಕೆ ಹೊರಟು ಹೋದೆ. ಊರಿಗೆ ಇನ್ನೂ ಹೋಗಿಲ್ಲ. ಆಗ ಜೋರಾಗಿ ಗಲಾಟೆ. ಅಪ್ಪಾಜಿಯವರು ತೀರಿಕೊಂಡಿದ್ದಾರೆ ಅಂತ. ಇವತ್ತು ವ್ಯಾಯಾಮ ಮಾಡಿಸಿದ್ದೀನಿ. ನಾಳೆ ಅವರು ಇಲ್ಲ." ಎಂದು ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ.

"ಇಫ್ ಯು ಕಮ್ ಟುಡೇ"
"ಅವರು ಅಗಲುವ ಹಿಂದಿನ ದಿನ ಏನು ಕೇಳಿದೆ ಅನ್ನೋದು ನನಗೆ ನೆನಪಿದೆ. ಇಫ್ ಯು ಕಮ್ ಟುಡೇ ಹಾಡನ್ನು ಪೂರ್ತಿ ಇಂಗ್ಲಿಷ್ನಲ್ಲೇ ಹಾಡಿದ್ದಾರೆ. ನಾನು ಅವರ ಬಳಿ ಈ ಹಾಡನ್ನು ಅಷ್ಟು ಸ್ವಚ್ಚವಾಗಿ ಹಾಡಿದ್ದೀರಲ್ಲ ಹೇಗೆ ಅಂತ ಕೇಳಿದೆ. ಜಿಕೆ ವೆಂಕಟೇಶ್ ಅವರು ಚೆನ್ನಾಗಿ ಬಾಯಿಪಾಠ ಮಾಡಿಸಿ ಹಾಡಿಸಿದ್ದರು. ಅದಕ್ಕೆ ಚೆನ್ನಾಗಿ ಬಂತು ಎಂದಿದ್ದರು." ಎಂದು ಹೇಳುತ್ತಾರೆ ಅಪ್ಪು ವೆಂಕಟೇಶ್.
ಅಗಲಿದ ದಿನ ಶರ್ಟ್ಗೆ ರಕ್ತ ಅಂಟಿತ್ತು
2006, ಏಪ್ರಿಲ್ 12 ರಂದು ಅಣ್ಣಾವ್ರು ಅಗಲಿದ ಸುದ್ಧಿ ಕರುನಾಡಿಗೆ ಬರ ಸಿಡಿಲಿನಂತೆ ಬಂದಿತ್ತು. "ನನಗೆ ಈಗಲೂ ನೆನಪಿದೆ. ಪೂರ್ಣ ಪ್ರಜ್ಞಾ ಗ್ರೌಂಡ್ಗೆ ಅಪ್ಪಾಜಿಯವರನ್ನು ತಂದರು. ಚಿಕ್ಕ ಆಂಬುಲೆನ್ಸ್ನಲ್ಲಿ ಕರೆದುಕೊಂಡು ಬಂದರು. ನಾನು ಒಳಗೆ ನುಗ್ಗಿದೆ. ಅಪ್ಪು ಆ ಕಡೆ. ನಾನು ಈ ಕಡೆ ಇದ್ದೀನಿ. ನಾನು ಅಪ್ಪಾಜಿಯ ಒಂದು ಕೈ ಕಡೆ ಇದ್ದೆ. ಆಗ ಅಪ್ಪಾಜಿಯವರಿಗೆ ಹಾಕಿದ್ದ ಡ್ರಿಪ್ಸ್ ತೆಗೆದು ಸ್ಟಿಕ್ಕರ್ ಅಂಟಿಸಿದ್ದರು. ಜನ ಬಿಟ್ಟಿದ್ದರೆ, ಅವತ್ತು ಕೈ ಕಾಲುಗಳನ್ನು ಕಿತ್ತುಕೊಂಡು ಹೋಗಿರೋರು. ಹಾಗೆ ಎಳಿತ್ತಿದ್ದಾರೆ. ಅಪ್ಪು ಅವತ್ತು ವೆಂಕಟೇಶ್ ಅಪ್ಪಾಜಿ ಕೈ ಕೈ ಅಂದರು. ಹತ್ತತ್ತು ಕೈ ಒಂದು ಕೈಯನ್ನು ಎಳೆಯುತ್ತಿದೆ. ಹಾಗೆ ಎಳೆದಾಗ ನನ್ನ ಶರ್ಟ್ಗೆ ರಕ್ತ ಅಂಟಿತ್ತು. ಆ ಶರ್ಟ್ ಅನ್ನು ಒಂದು ವರ್ಷ ಇಟ್ಟಿದ್ದೆ. ಆ ಮೇಲೆ ನೋಡಿದ್ದೇ ಅಪ್ಪು ಅವರದ್ದು. ಆತರ ಕಲಾವಿದರನ್ನು ನೋಡಿಯೇ ಇಲ್ಲ." ಎನ್ನುತ್ತಾರೆ.


Click it and Unblock the Notifications











