ಕೊಲೆ ಕೇಸ್ನಲ್ಲಿ 'ಕೆಜಿಎಫ್' ಹರೀಶ್ ರೈ ಹೆಸರು ಬಂದಾಗ ಸಾಕ್ಷಿ ಹೇಳಲಿಲ್ಲ ಉಪ್ಪಿ; ಆದರೆ, ಅಣ್ಣಾವ್ರು ಮುಂದೆ ಬಂದಿದ್ಯಾಕೆ?
'ಕೆಜಿಎಫ್' ಸಿನಿಮಾದಲ್ಲಿ ರಾಕಿ ಭಾಯ್ಗೆ ಚಾಚಾನಾಗಿ ನಟಿಸಿದ್ದ ಹಿರಿಯ ನಟ ಹರೀಶ್ ರೈ. ಅನಾರೋಗ್ಯದಿಂದ ಬಳಲುತ್ತಿರುವ ಹರೀಶ್ ರೈಗೆ ಯಶ್ ಸಹಾಯದ ಹಸ್ತ ಚಾಚಿದ್ದು ಕೂಡ ಗೊತ್ತೇ ಇದೆ. ಕನ್ನಡ ಚಿತ್ರರಂಗದಲ್ಲಿ ಹಲವು ಸಿನಿಮಾಗಳಲ್ಲಿ ಖಳನಾಯಕನಾಗಿ, ಪೋಷಕ ಪಾತ್ರದಲ್ಲಿ ನಟಿಸಿರುವ ಹರೀಶ್ ರೈ ಕನ್ನಡಿಗರಿಗೆ ಚಿರಪರಿಚಿತ. ದಕ್ಷಿಣ ಕನ್ನಡ ಮೂಲದ ಈ ನಟ ಮೊದಲ ಸಿನಿಮಾದಲ್ಲಿಯೇ ಅಣ್ಣಾವ್ರ ಗಮನ ಸೆಳೆದಿದ್ದರು.
ಆರಂಭದ ದಿನಗಳಲ್ಲಿ ಉಪೇಂದ್ರ ಅವರೊಂದಿಗೆ ಹರೀಶ್ ರೈ ಹೆಚ್ಚಾಗಿ ಗುರುತಿಸಿಕೊಂಡಿದ್ದರು. 'ಓಂ' ಸಿನಿಮಾ ಮಾಡುವಾಗ ಉಪೇಂದ್ರ ಜೊತೆ ಕಥೆ ಒಪ್ಪಿಸುವುದಕ್ಕೆ ಅಣ್ಣಾವ್ರ ಮನೆಗೆ ಹೋಗಿದ್ದರು. ಅಲ್ಲಿಂದ ರಾಜ್ಕುಮಾರ್ ಕುಟುಂಬವನ್ನು ಹತ್ತಿರದಿಂದ ಬಲ್ಲವರು. ದೊಡ್ಮೆನೆಯ ಸಹಾಯ ಮನೋಭಾವ, ಸರಳತೆ ಎಲ್ಲವನ್ನೂ ಹರೀಶ್ ರೈ ಹತ್ತಿರದಿಂದ ನೋಡಿದ್ದರು.

'ಓಂ' ಸಿನಿಮಾ ಬಳಿಕ ಕೊಲೆ ಹಾಗೂ ಜ್ಯುವೆಲರಿ ರಾಬರಿ ಕೇಸ್ನಲ್ಲಿ ಹರೀಶ್ ರೈ ಹೆಸರು ಕೇಳಿ ಬಂದಿತ್ತು. ಪತ್ರಿಕೆಗಳಲ್ಲೆಲ್ಲ ಈ ಕೊಲೆ ಕೇಸ್ನಲ್ಲಿ ಹರೀಶ್ ರೈ ಹೆಸರು ಪ್ರಕಟ ಆಗಿತ್ತು. ಆಗ ಹರೀಶ್ ರೈ ಅವರು ಉಪೇಂದ್ರ ಬಳಿ ಸಾಕ್ಷಿ ಹೇಳುವಂತೆ ಕೇಳಿಕೊಂಡಿದ್ದರು. ಉಪೇಂದ್ರ ಸಾಕ್ಷಿ ಹೇಳುವುದಕ್ಕೆ ಒಪ್ಪಲಿಲ್ಲ. ಆದರೆ, ಈ ವಿಷಯ ತಿಳಿದ ಬಳಿಕ ಅಣ್ಣಾವ್ರು ತಾನು ಸಾಕ್ಷಿ ಹೇಳುತ್ತೇನೆ ಎಂದು ಮುಂದೆ ಬಂದಿದ್ದರು. ಅಷ್ಟಕ್ಕೂ ಏನಿದು ಕೇಸ್? ಉಪ್ಪಿ ಯಾಕೆ ಒಪ್ಪಲಿಲ್ಲ? ಅಣ್ಣಾವ್ರ ಮುಂದೆ ಬಂದಿದ್ದೇಕೆ? ಈ ಎಲ್ಲಾ ಪ್ರಶ್ನೆಗಳಿಗೆ ಕುಡ್ಲದಕ್ಲು ಯೂಟ್ಯೂಬ್ ಚಾನೆಲ್ನಲ್ಲಿ ಹರೀಶ್ ರೈ ಹೇಳಿಕೊಂಡಿದ್ದಾರೆ.
"ಏನು 200 ವರ್ಷ ಬದುಕಬೇಕು ಅಂತ ಆಸೆನಾ?" ಅಣ್ಣಾವ್ರಿಗೆ ರಜನಿ ಹೀಗೆ ಕೇಳಿದ್ದಿದ್ದು ಏಕೆ?
ಪಡುಬಿದ್ರಿಯಲ್ಲಿ ಎರಡು ಕೊಲೆ ಕೇಸ್ ಹಾಗೂ ಜ್ಯುವೆಲರಿ ರಾಬರಿ ಕೇಸ್ ದಾಖಲಾಗಿತ್ತು. ಅದರಲ್ಲಿ ಹರೀಶ್ ರೈ ಹೆಸರು ಕೇಳಿ ಬಂದಿತ್ತು. ಆ ಘಟನೆ ನಡೆದಾಗ ಉಪ್ಪಿ ಜೊತೆ ಹರೀಶ್ ರೈ ಅಣ್ಣಾವ್ರ ಮನೆಗೆ ಕಥೆ ಹೇಳುವುದಕ್ಕೆ ಹೋಗಿದ್ದರು. ಅದರ ಮಾರನೇ ದಿನವೇ ಪತ್ರಿಕೆಗಳಲ್ಲಿ ಹರೀಶ್ ಕೊಲೆ ಕೇಸ್ನಲ್ಲಿ ಭಾಗಿ ಎಂದು ಪ್ರಕಟ ಆಗಿತ್ತು. "ಓಂ ಆದ್ಮೇಲೆ ನನ್ನ ಮೇಲೆ ಒಂದು ಕೇಸ್ ಆಗಿತ್ತು. ಪಡುಬಿದ್ರಿಯಲ್ಲಿ ಎರಡು ಕೊಲೆ ಮಾಡಿ ಒಂದು ಜ್ಯುವೆಲರಿ ಶಾಪ್ ಅನ್ನು ದೋಚಲಾಗಿತ್ತು. ಆ ದಿನ ನಾನು ನಮ್ಮ ಅಕ್ಕನ ಮಗಳ ಬರ್ತ್ಡೇಗೆ ಉಪೇಂದ್ರರನ್ನು ಕರೆದುಕೊಂಡು ಹೋಗಿದ್ದೆ. ಮರುದಿನ ಉದಯವಾಣಿ ಪತ್ರಿಕೆಯಲ್ಲಿ ಓಂ ನಟ ಉಡುಪಿಯ ಹರೀಶ್ ರೈ ಕೊಲೆಯಲ್ಲಿ ಭಾಗಿ ಎಂದು ಬಂದಿತ್ತು." ಎಂದು ಆ ಘಟನೆಯ ಬಗ್ಗೆ ಹರೀಶ್ ರೈ ಕುಡ್ಲದಕ್ಲು ಯೂಟ್ಯೂಬ್ ಚಾನೆಲ್ನಲ್ಲಿ ಹೇಳಿಕೊಂಡಿದ್ದಾರೆ.
ಆಗ ಉಪೇಂದ್ರಗೆ ಸಾಕ್ಷಿ ಹೇಳುವುದಕ್ಕೆ ಹರೀಶ್ ರೈ ಕೇಳಿಕೊಂಡಿದ್ದರು. ಆದರೆ, ಉಪ್ಪಿ ಒಪ್ಪಲಿಲ್ಲ. "ಹರೀಶ್ ರೈ ನಿಮ್ಮ ಹಿಂದೆ ಯಾವುದೋ ದೊಡ್ಡ ಕೈವಾಡವಿದೆ ಎಂದು ಜೊತೆಗಿದ್ದ ಉಪೇಂದ್ರ ಸಾಕ್ಷಿ ಹೇಳುವುದಕ್ಕೆ ರೆಡಿಯಿರಲಿಲ್ಲ. ಬೇಡ ಹರೀಶ್ ನಾನು ಈಗಷ್ಟೇ ಸಿನಿಮಾದಲ್ಲಿ ಹೆಸರು ಮಾಡುತ್ತಿದ್ದೇನೆ. ದಯವಿಟ್ಟು ತಪ್ಪು ತಿಳಿದುಕೊಳ್ಳಬೇಡಿ. ಬೇರೆಯಾದರೂ ಕತೆ ಕೇಳಿದರೆ ಹೇಳಿ ಮಾಡುತ್ತೇನೆ. ನೀವು ಸ್ವಲ್ಪ ಸಪರೇಟ್ ಆಗಿ ಇರಿ ಅಂದರು. ನನಗೆ ಏನು ಮಾಡಬೇಕು ಅನ್ನೋದೇ ತೋಚುತ್ತಿರಲಿಲಲ್ಲ." ಎಂದಿದ್ದಾರೆ.

ಈ ಘಟನೆ ನಡೆಯುವ ಹಿಂದಿನ ದಿನ ಅಣ್ಣಾವ್ರ ಮನೆಗೆ ಹರೀಶ್ ರೈ ಕತೆ ಹೇಳುವುದಕ್ಕೆ ಹೋಗಿದ್ದರು. ಮಾರನೇ ದಿನ ಅಣ್ಣಾವ್ರಿಗೆ ನ್ಯೂಸ್ ಪೇಪರ್ನಲ್ಲಿ ಬಂದ ಸುದ್ದಿ ಶಾಕಿಂಗ್ ಆಗಿತ್ತು. ಬೇರೆ ಯಾವುದೋ ವಿಷಯಕ್ಕೆ ಅಣ್ಣಾವ್ರ ಮನೆಗೆ ಹೋಗಿದ್ದ ಪತ್ರಕರ್ತರ ಬಳಿ ಅಚ್ಚರಿ ವ್ಯಕ್ತಪಡಿಸಿದ್ದರು. ತಾನು ಸಾಕ್ಷಿ ಹೇಳುತ್ತೇನೆ ಎಂದು ಹೇಳಿದ್ದರಂತೆ.
"ಹಿಂದಿನ ಕಥೆ ಹೇಳುವುದಕ್ಕೆ ಅಣ್ಣಾವ್ರ ಮನೆಗೆ ಹೋಗಿದ್ದೆವು. ಪೇಪರ್ನಲ್ಲಿ ವಿಷಯ ನೋಡಿ ಅಣ್ಣಾವ್ರು ಕೂಡ ಅಚ್ಚರಿಗೊಂಡಿದ್ದರು. ಆಗ ಅಣ್ಣಾವ್ರು ಪತ್ರಕರ್ತರ ಜೊತೆ ಚರ್ಚೆ ಮಾಡಿದ್ದಾರೆ. ನಮ್ಮ ಸಿನಿಮಾದಲ್ಲಿ ಮಾಡಿದವರಿಗೆ ಹೀಗೆ ಆಗಿದೆಯಾ? ನಿನ್ನೆ ಉಪೇಂದ್ರ ಅವರ ಜೊತೆ ಬಂದಿದ್ರಲ್ಲ. ಆಗ ಪತ್ರಕರ್ತರು ಹೌದು, ಅಲ್ಲಿ ಯಾರೋ ಅವರ ಹೆಸರನ್ನು ಸೇರಿಸಿದ್ದಾರೆ. ಅಲ್ಲಿ ಅವರ ಹಿಂದೆ ಅಂಡರ್ವರ್ಲ್ಡ್ ಕೈವಾಡವಿದೆ ಎಂದಿದ್ದರು. ಆಗ ಅಣ್ಣಾವ್ರು ಪೊಲೀಸರು ಅಲ್ಲಿದ್ದರು ಅಂತ ಅದ್ಹೇಗೆ ಹೇಳಿಕೆ ಕೊಟ್ಟರು? ನಾನು ಬೇಕಾದರೆ ಸಾಕ್ಷಿ ಹೇಳುತ್ತೇನೆ ಅಂತ ಪತ್ರಕರ್ತರ ಎದುರು ರಾಜ್ಕುಮಾರ್ ಹೇಳಿದ್ದರು." ಎಂದು ಆ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.
"ಕಲಾವಿದರ ಭವಿಷ್ಯ ಹಾಳಾಗುತ್ತಲ್ಲ ಎಂದು ಅಣ್ಣಾವ್ರು ಹೇಳಿದ್ದರು. ಒಂದು ಸಿನಿಮಾ ಮಾಡಿದ್ದಕ್ಕೆ ಕಲಾವಿದರು ಅಂತ ಅಣ್ಣಾವ್ರು ಹೇಳಿದ್ದರು. ಉಪ್ಪಿ ಕೂಡ ಒಪ್ಪಿರಲಿಲ್ಲ. ಆದರೆ ಅಣ್ಣಾವ್ರು ಸಾಕ್ಷಿ ಹೇಳುತ್ತೇನೆ ಎಂದಿದ್ದರು. ಯಾರು ತನಿಖೆ ಮಾಡುತ್ತಿರೋದು? ಕೆಂಪಯ್ಯ ಅವರಾ? ನಾನು ಅವರಿಗೆ ಹೇಳುತ್ತೇನೆ ಎಂದಿದ್ದರು. ಪತ್ರಕರ್ತರೊಬ್ಬರು ಈ ವಿಷಯವನ್ನು ನನಗೆ ತಿಳಿಸಿದರು. ಆ ವಿಷಯ ಕೆಂಪಯ್ಯ ಅವರಿಗೆ ತಲುಪಿತ್ತು. ನಾನು ಪತ್ರಕರ್ತರೊಂದಿಗೆ ಅಲ್ಲಿಗೆ ತಲುಪಿದಾಗ ಕೆಂಪಯ್ಯ ಕೇಳಿದ್ದು ಒಂದೇ ಪ್ರಶ್ನೆ. ನಿಮಗೂ ಮುತ್ತಪ್ಪ ರೈಗೂ ಏನು ಸಂಬಂಧ ಅಂತ. ಆಗ ಗೊತ್ತಾಯ್ತು ಮುತ್ತಪ್ಪ ರೈಗೂ ಇವರಿಗೂ ಆಗುತ್ತಿಲ್ಲ ಅಂತ." ಎಂದು ಆ ಕೇಸ್ನಲ್ಲಿ ತಮ್ಮ ಹೆಸರು ಹೇಗೆ ಬಂತು ಅನ್ನೋದನ್ನು ಪರೋಕ್ಷವಾಗಿ ಹೇಳಿದ್ದಾರೆ.


Click it and Unblock the Notifications











