66ರ ವಯಸ್ಸಿನಲ್ಲೂ 40ರಂತೆ ಕಾಣುವ ನಾಗಾರ್ಜುನ.. 7 ಗಂಟೆಯ ಡಿನ್ನರ್ ರಹಸ್ಯವೇನು?
ಕಿಂಗ್ ನಾಗಾರ್ಜುನ ಫಿಟ್ನೆಸ್ ಬಹುತೇಕ ಮಂದಿಗೆ ಕುತೂಹಲ. ಟಾಲಿವುಡ್ ಮನ್ಮಥನಿಗೆ ಈಗ 66 ವರ್ಷ. ಆದರೂ 40 ವರ್ಷದ ಯುವಕರಿಗಿಂತಲೂ ಹೆಚ್ಚು ಫಿಟ್ ಅಂಡ್ ಫೈನ್ ಆಗಿ ಕಾಣುತ್ತಾರೆ. ಹಾಗಂತ ನಾಗಾರ್ಜುನ ಯಾವುದೇ ರೀತಿಯ ಆಹಾರ ಪದ್ಧತಿಯನ್ನು ಪಾಲಿಸುವುದಿಲ್ಲ. ಎಲ್ಲರಂತೆ ಸಾಮಾನ್ಯ ಆಹಾರವನ್ನು ಸೇವಿಸುತ್ತಾರೆ. ಅವರ ಈ ಅದ್ಭುತ ಚೈತನ್ಯದ ಹಿಂದಿನ ರಹಸ್ಯವನ್ನು ಗಟ್ ಸ್ಪೆಷಲಿಸ್ಟ್ ಡಾ.ಪಾಲ್ ಮಾಣಿಕಮ್ ರಿವೀಲ್ ಮಾಡಿದ್ದಾರೆ.
ನಾಗಾರ್ಜನ ಇಂದಿಗೂ ಯುವ ನಟರನ್ನೂ ನಾಚಿಸುವಂತೆ ಕಾಣುತ್ತಾರೆ. ಇಂದಿನ ಯಂಗ್ ಸ್ಟಾರ್ಗಳು ಕೂಡ ನಾಚುವಂತಹ ಎನರ್ಜಿಯಿದೆ. ಇತ್ತೀಚೆಗಷ್ಟೇ ರಜನಿಕಾಂತ್ ನಟನೆಯ 'ಕೂಲಿ' ಸಿನಿಮಾದಲ್ಲಿ ಖಳನಾಯಕನಾಗಿ ನಟಿಸಿ ಸೈ ಎನಿಸಿಕೊಂಡಿದ್ದರು. ಈ ಸಿನಿಮಾದಲ್ಲೂ ಅವರ ಲುಕ್ ಅಂಡ್ ಮ್ಯಾನರಿಸಂಗೆ ಪ್ರೇಕ್ಷಕರು ಫಿದಾ ಆಗಿದ್ದರು. 66ರ ವಯಸ್ಸಿನಲ್ಲಿಯೂ ನಾಗಾರ್ಜುನ ಇಷ್ಟೊಂದು ಫಿಟ್ ಇರೋದು ಹೇಗೆ?

ನಾಗಾರ್ಜುನ ಫಿಟ್ನೆಸ್ ಸೀಕ್ರೆಟ್ ಅನ್ನು ಡಾ.ಪಾಲ್ ಮಾಣಿಕಮ್ ಬಹಿರಂಗ ಪಡಿಸಿದ್ದಾರೆ. ಟಾಲಿವುಡ್ ಕಿಂಗ್ ಫಿಟ್ನೆಸ್ನ ರಹಸ್ಯ ಅವರು ಸೇವಿಸುವ ರಾತ್ರಿ ಊಟದ ಮೇಲೆ ನಿಂತಿದೆ. ಅಷ್ಟಕ್ಕೂ ನಾಗಾರ್ಜುನ ಕಂಡುಕೊಂಡಿರುವ 7 ಗಂಟೆಯ ಡಿನ್ನರ್ ಸೀಕ್ರೆಟ್ ಏನು? ತಿಳಿಯುವುದಕ್ಕೆ ಮುಂದೆ ಓದಿ.
ನಾಗರ್ಜುನ ಪ್ರತಿ ದಿನ ರಾತ್ರಿ ಊಟವನ್ನು ಸಂಜೆ 7 ಗಂಟೆಯೊಳಗೆ ಮುಗಿಸುತ್ತಾರೆ. ಇದು ಇಂದು ನಿನ್ನೆಯಿಂದ ರೂಡಿಸಿಕೊಂಡು ಬಂದಿರುವ ಅಭ್ಯಾಸ ಅಲ್ಲ. ಹಲವು ವರ್ಷಗಳಿಂದ ಈ ಅಭ್ಯಾಸವನ್ನು ರೂಢಿ ಮಾಡಿಕೊಂಡು ಬಂದಿದ್ದಾರೆ. ಇದು ಅವರ ದೇಹಕ್ಕೆ ಮತ್ತು ಜೀರ್ಣಾಂಗ ವ್ಯವಸ್ಥೆಗೆ ಸರಿಯಾದ ಲಯವನ್ನು ನೀಡುತ್ತದೆ. ಬೇಗನೆ ಊಟ ಮಾಡುವುದರಿಂದ, ದೇಹಕ್ಕೆ ಆಹಾರವನ್ನು ಜೀರ್ಣಿಸಿಕೊಳ್ಳಲು ಸಾಕಷ್ಟು ಸಮಯ ಸಿಗುತ್ತದೆ. ಇದು ಚಯಾಪಚಯ ಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ಹಾಗೇ ದೇಹದ ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ. ಹೀಗಾಗಿ ದೀರ್ಘಕಾಲದವರೆಗೆ ಯುವಕರಂತೆ ಚುರುಕಾಗಿರಲು ಸಾಧ್ಯವಾಗಿದೆ ಎಂದು ಡಾ.ಪಾಲ್ ಹಂಚಿಕೊಂಡ ವಿಡಿಯೋದಲ್ಲಿ ಹೇಳಿದ್ದಾರೆ.
ನಾಗಾರ್ಜನ ರೂಢಿಸಿಕೊಂಡಿರುವ ಈ ಆರೋಗ್ಯಕರ ಅಭ್ಯಾಸ ಕೇವಲ ಫಿಟ್ನೆಸ್ಗಷ್ಟೇ ಅಲ್ಲ. ವಯಸ್ಸಾದಂತೆ ಕಾಣುವುದನ್ನು ತಡೆಯುತ್ತದೆ. ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ನಾಗಾರ್ಜುನ ಈ ಶಿಸ್ತುಬದ್ಧ ಜೀವನಶೈಲಿಯನ್ನು ಯಶಸ್ವಿಯಾಗಿ ಪಾಲನೆ ಮಾಡುತ್ತಾ ಬಂದಿರುವುದೇ ಅವರ ಆರೋಗ್ಯದ ಹಿಂದಿನ ದೊಡ್ಡ ರಹಸ್ಯ ಎನ್ನುತ್ತಾರೆ ವೈದ್ಯರು. ಸೂರ್ಯ ಮುಳುಗಿದ ನಂತರ ನಮ್ಮ ಜೀರ್ಣಾಂಗ ವ್ಯವಸ್ಥೆಯು ನಿಧಾನವಾಗುವುದರಿಂದ ಈ ಅಭ್ಯಾಸವು ಅತ್ಯಂತ ಸಹಕಾರಿ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ನಾಗಾರ್ಜುನ ಫಿಟ್ನೆಸ್ಗೆ ಮುಖ್ಯ ಕಾರಣ ಅವರ ಶಿಸ್ತುಬದ್ಧ ಜೀವನಶೈಲಿ ಹಾಗೂ ರಾತ್ರಿ ಊಟದ ಸಮಯ ಪಾಲನೆ. ತಡವಾಗಿ ಊಟ ಮಾಡಿದಾಗ ದೇಹವು ಮಲಗುವ ಸಮಯದಲ್ಲೂ ಜೀರ್ಣಕ್ರಿಯೆಗಾಗಿ ಶ್ರಮಿಸಬೇಕಾಗುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಮತ್ತು ಇನ್ಸುಲಿನ್ ಮಟ್ಟವನ್ನು ಹೆಚ್ಚು ಮಾಡುತ್ತದೆ. ಚಯಾಪಚಯ ಕ್ರಿಯೆಯ ದಕ್ಷತೆಯನ್ನು ಕಡಿಮೆ ಮಾಡಿ, ಕೊಬ್ಬಿನ ಶೇಖರಣೆ ಹೆಚ್ಚಲು ಕಾರಣವಾಗುತ್ತದೆ. ಇದರಿಂದ ತೂಕ ಹೆಚ್ಚಳ, ಜೀರ್ಣಾಂಗ ಸಮಸ್ಯೆಗಳು ಮತ್ತು ಆಯಾಸದಂತಹ ತೊಂದರೆಗಳು ಎದುರಾಗುತ್ತವೆ.
ಸಂಜೆ 7 ಗಂಟೆಯೊಳಗೆ ಊಟ ಮುಗಿಸಿ, ಮರುದಿನ ಬೆಳಿಗ್ಗೆ 11 ಗಂಟೆಯವರೆಗೂ ಉಪವಾಸ ಇರುವುದು ದೇಹಕ್ಕೆ ಸುಮಾರು 16 ಗಂಟೆಗಳ ಕಾಲ ವಿಶ್ರಾಂತಿ ನೀಡುತ್ತದೆ. ಹೀಗೆ ದೀರ್ಘ ವಿರಾಮ ನೀಡುವುದು ಕರುಳಿಗೆ ಸಂಪೂರ್ಣ ವಿಶ್ರಾಂತಿ ನೀಡುತ್ತದೆ. ಇದರಿಂದ ಜೀರ್ಣಕ್ರಿಯೆ ಸುಧಾರಣೆಯಾಗುತ್ತೆ. ಹಾಗೇ ವಿಷಕಾರಿ ಅಂಶಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ ಎನ್ನುತ್ತಾರೆ ಡಾ.ಪೌಲ್. ಇನ್ನು ನಾಗಾರ್ಜುನ ಅವರ ಜೀವನಶೈಲಿಯು ಪ್ರತಿಯೊಬ್ಬರಿಗೂ ಒಂದು ಪ್ರೇರಣೆ. ಆರೋಗ್ಯ ಕಾಪಾಡಿಕೊಳ್ಳುವುದಕ್ಕೆ ಹಾಗೂ ವಯಸ್ಸಾಗುವುದನ್ನು ತಡೆಗಟ್ಟುವುದಕ್ಕೆ ಸರಳ ಆಹಾರದಿಂದ ಸಾಧ್ಯ ಅನ್ನೋದಕ್ಕೆ ನಾಗಾರ್ಜುನ ಅವರೇ ಉದಾಹರಣೆ.


Click it and Unblock the Notifications











