ಆಪ್ತ ಗೆಳೆಯ ಸಂತೋಷ್ ನಾಯರ್ ನಿಧನ: ಸ್ನೇಹಿತನಿಗೆ ಕಣ್ಣೀರ ವಿದಾಯ ಹೇಳಿದ ಮೋಹನ್ಲಾಲ್
ಮಲಯಾಳಂ ಚಿತ್ರರಂಗಕ್ಕೆ ಇಂದು (ಮೇ 5) ಕರಾಳ ದಿನ. ಬೆಳ್ಳಂಬೆಳಗ್ಗೆ ಜನಪ್ರಿಯ ನಟ ಸಂತೋಷ್ ನಾಯರ್ ರಸ್ತೆ ಅಪಘಾತದಲ್ಲಿ ನಿಧನರಾಗಿದ್ದಾರೆ. ಕೇರಳದ ಪತ್ತನಂತಿಟ್ಟ ಎಂಬ ಪ್ರದೇಶದಲ್ಲಿ ಈ ರಸ್ತೆ ಅಪಘಾತ ಆಗಿದ್ದು, ಅವರ ಕಾರು ಮುಂದಿದ್ದ ವ್ಯಾನ್ಗೆ ಡಿಕ್ಕಿ ಹೊಡೆದಿತ್ತು. ತೀವ್ರವಾಗಿ ಗಾಯಗೊಂಡಿದ್ದ ಸಂತೋಷ್ ಕೆ ನಾಯರ್ ಅವರನ್ನು ಆಸ್ಪತ್ರೆ ಸಾಗಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ.
ಸಂತೋಷ್ ಕೆ ನಾಯರ್ ಜೊತೆ ಪತ್ನಿ ರಾಜಲಕ್ಷ್ಮಿ ಕೂಡ ಪ್ರಯಾಣ ಮಾಡುತ್ತಿದ್ದರು. ಅವರಿಗೂ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಂತೋಷ್ ಅವರ ನಿಧನದ ಸುದ್ದಿಯಿಂದ ಮಲಯಾಳಂ ಚಿತ್ರರಂಗದಲ್ಲಿ ಶೋಕದ ವಾತಾವರಣ ಮನೆ ಮಾಡಿದೆ. ಮಲಯಾಳಂ ಸೂಪರ್ಸ್ಟಾರ್ ಮೋಹನ್ಲಾಲ್ ಅವರಿಗೆ ಸಂತೋಷ್ ಕೆ ನಾಯರ್ ಆತ್ಮೀಯ ಗೆಳೆಯರಾಗಿದ್ದರು.

ಮಲಯಾಳಂ ಚಿತ್ರರಂಗದಲ್ಲಿ ಪೋಷಕ ಪಾತ್ರ ಹಾಗೂ ಖಳ ನಾಯಕನಾಗಿ ಗುರುತಿಸಿಕೊಂಡಿದ್ದರು. ಸುಮಾರು 100ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ಸಂತೋಷ್ ಕೆ ನಾಯರ್ ಮಲಯಾಳಂ ಚಿತ್ರರಂಗದ ಜನಪ್ರಿಯ ನಟರಲ್ಲಿ ಒಬ್ಬರಾಗಿದ್ದರು. ಇವರ ಹಠಾತ್ ಸಾವಿನ ಸುದ್ದಿಯನ್ನು ಕೇಳಿ ಇಡೀ ಚಿತ್ರರಂಗ ಹಾಗೂ ಕಲಾವಿದರು ದುಃಖ ವ್ಯಕ್ತಪಡಿಸುತ್ತಿದ್ದಾರೆ. ಅದರಲ್ಲೂ ಗೆಳೆಯನ ಅಗಲಿಕೆಗೆ ಮೋಹನ್ಲಾಲ್ ಭಾವುಕರಾಗಿ ಪತ್ರ ಬರೆದಿದ್ದಾರೆ.
ಮೋಹನ್ಲಾಲ್ ಹಾಗೂ ಸಂತೋಷ್ ಕೆ ನಾಯರ್ ಇಬ್ಬರೂ ಒಂದೇ ಕಾಲೇಜಿನಲ್ಲಿ ಶಿಕ್ಷಣವನ್ನು ಪಡೆದಿದ್ದರು. ಹೀಗಾಗಿ ಸಂತೋಷ್ ಸಿನಿಮಾಗೆ ಎಂಟ್ರಿ ಕೊಡುವುದಕ್ಕಿಂತಲೂ ಮುನ್ನವೇ ಮೋಹನ್ಲಾಲ್ಗೆ ಪರಿಚಯವಿತ್ತು. ಈ ಹಿಂದೆ ಸಂದರ್ಶನವೊಂದರಲ್ಲಿ ಕಾಲೇಜು ದಿನಗಳಲ್ಲಿ ಇಬ್ಬರ ಮಾಡುತ್ತಿದ್ದ ತಮಾಷೆಗಳನ್ನು ನೆನಪಿಸಿಕೊಂಡಿದ್ದರು.
ದಿಢೀರನೇ ಗೆಳೆಯ ಸಂತೋಷ್ ಕೆ ನಾಯರ್ ಅವರ ನಿಧನದ ಸುದ್ದಿಯನ್ನು ಮೋಹನ್ಲಾಲ್ಗೆ ಅರಗಿಸಿಕೊಳ್ಳಲಾಗಿಲ್ಲ. ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಮೋಹನ್ಲಾಲ್ ಗೆಳೆಯ ಅಗಲಿಕೆ ಬಗ್ಗೆ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ. " ಈ ದಿನ ಬೆಳ್ಳಂಬೆಳಗ್ಗೆ ನಾನು ಅತ್ಯಂತ ನೋವಿನ ಸುದ್ದಿಯನ್ನು ಕೇಳಿದ್ದೇನೆ. ವೈಯಕ್ತಿಕವಾಗಿ ಬಹಳ ಆತ್ಮೀಯರಾಗಿದ್ದ ಸಂತೋಷ್ ರಸ್ತೆ ಅಪಘಾತದಲ್ಲಿ ನಮ್ಮನ್ನು ಅಗಲಿದ್ದಾರೆ. ಕಾಲೇಜಿನಲ್ಲಿ ಅವರು ನನಗೆ ಜೂನಿಯರ್ ಆಗಿದ್ದರು. ಅಂದಿನಿಂದ ಅವರು ನನ್ನ ಉತ್ತಮ ಸ್ನೇಹಿತ. ಅಷ್ಟೇ ಅಲ್ಲ ಸಹೋದರನಾಗಿದ್ದರು. ನಾವಿಬ್ಬರೂ ಒಟ್ಟಿಗೆ ಹಲವು ಸಿನಿಮಾಗಳಲ್ಲಿ ಕೆಲಸ ಮಾಡಿದ್ದೇವೆ. ಅವರದ್ದು ಪ್ರಭಾವಶಾಲಿ ವ್ಯಕ್ತಿತ್ವ. ಎಲ್ಲರ ಪ್ರೀತಿಯನ್ನು ಗೆದ್ದಿದ್ದ ಮನಸ್ಸು ಅದು. ಸಂತೋಷ್ರ ಅಕಾಲಿಕ ನಿಧನಕ್ಕೆ ನೋವಿನಿಂದ ಶ್ರದ್ಧಾಂಜಲಿಯನ್ನು ಅರ್ಪಿಸುತ್ತೇನೆ" ಎಂದು ಮೋಹನ್ಲಾಲ್ ಬರೆದು ಪೋಸ್ಟ್ ಮಾಡಿದ್ದಾರೆ.

ಮೋಹನ್ಲಾಲ್ ಅಷ್ಟೇ ಅಲ್ಲ, ಸಂತೋಷ್ ಅವರು ಮಲಯಾಳಂ ಚಿತ್ರರಂಗದಲ್ಲಿ ಉತ್ತಮ ಬಾಂಧವ್ಯವನ್ನು ಹೊಂದಿದ್ದರು. ಹೀಗಾಗಿ ಇಡೀ ಚಿತ್ರರಂಗ ಇವರ ಅಗಲಿಕೆಗೆ ಕಂಬನಿ ಮಿಡಿಯುತ್ತಿದ್ದಾರೆ. ನಟ ಸುರೇಶ್ ಗೋಪಿ ಕೂಡ ಸಂತೋಷ್ ಕೆ. ನಾಯರ್ ನಿಧನಕ್ಕೆ ಶ್ರದ್ಧಾಂಜಲಿಯನ್ನು ಸಲ್ಲಿಸಿದ್ದಾರೆ. "ಸಾಗರ್ ಎಲಿಯಾಸ್ ಜಾಕಿ ಸಿನಿಮಾದಲ್ಲಿ ಲಾರೆನ್ಸ್ ಪಾತ್ರದಲ್ಲಿ ನಟಿಸಿದ್ದರು. ಅಲ್ಲಿಂದ ಅನೇಕ ಸಿನಿಮಾಗಳಲ್ಲಿ ಭಾಗಿಯಾಗಿದ್ದ ಸಂತೋಷ್ ಅವರನ್ನು 'ಮೋಹಿನಿಯಾಟ್ಟಂ' ಸಿನಿಮಾದಲ್ಲಿ ಕಂಡೆ. ಅವರು ಕೇವಲ ಸಂಬಂಧಿ ಅಥವಾ ಸ್ನೇಹಿತನ ಅಷ್ಟೇ ಅಲ್ಲದೆ, ನನ್ನ ಜೀವನ ಪಯಣದಲ್ಲಿ ಸದಾ ಜತೆಗಿದ್ದ ಸಹೋದರನಂತೆ ಇದ್ದರು" ಎಂದು ನಟ ಸುರೇಶ್ ಗೋಪಿ ಹೇಳಿದ್ದಾರೆ.
ಇನ್ನು ಮಲಯಾಳಂನ ಮೆಗಾಸ್ಟಾರ್ ಮಮ್ಮುಟ್ಟಿ ಕೂಡ ಕಂಬನಿ ಮಿಡಿದಿದ್ದಾರೆ. ಸಂತೋಷ್ರ ಹಠಾತ್ ಅಗಲಿಕೆಗೆ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. "ಈ ಸಮಯದಲ್ಲಿ ನಾವಿಬ್ಬರೂ ಒಟ್ಟಾಗಿ ನಟಿಸಿದ ಕ್ಷಣಗಳನ್ನು ಸ್ಮರಿಸುತ್ತೇನೆ. ಈ ಕಷ್ಟದ ಸಮಯದಲ್ಲಿ ಸಂತಾಪಗಳು ಅವರ ಕುಟುಂಬ ಮತ್ತು ಸ್ನೇಹಿತರೊಂದಿಗೆ ಇವೆ" ಎಂದು ಮಮ್ಮುಟ್ಟಿ ಕೂಡ ಭಾವುಕರಾಗಿದ್ದಾರೆ.
ಸಂತೋಷ್ ಕೆ ನಾಯರ್ ಮಲಯಾಳಂ ಚಿತ್ರರಂಗದಲ್ಲಿ ಸುಮಾರು 150ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ವಿಭಿನ್ನ ಪಾತ್ರಗಳ ಮೂಲಕ ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿದ್ದಾರೆ. 1982ರಲ್ಲಿ ತೆರೆಕಂಡಿದ್ದ 'ಇದು ನಂಗಳ ಕದ' ಸಿನಿಮಾದ ಮೂಲಕ ನಟನೆಗೆ ಎಂಟ್ರಿ ಕೊಟ್ಟಿದ್ದರು. ಅಲ್ಲಿಂದ 'ಇರುಪತ್ತಾಂ ನೂಟ್ಟಂಡು', 'ಮಾಯಾ ಮೋಹಿನಿ', 'ಮಾಯಾವಿ'ಯಂತಹ ಸಿನಿಮಾಗಳಲ್ಲಿ ಖಳನಾಯಕನಾಗಿ ತಮ್ಮ ಛಾಪು ಮೂಡಿಸಿದ್ದರು. 'ಮೋಹಿನಿಯಾಟ್ಟಂ' ಅವರ ನಟಿಸಿದ ಕೊನೆಯ ಸಿನಿಮಾ.


Click it and Unblock the Notifications
