ಮತ್ತೆ ವರ್ಕೌಟ್ ಶುರು: ಸಹಜ ಜೀವನಕ್ಕೆ ಮರಳಿದ ನಟ ಧ್ರುವ ಸರ್ಜಾ
ಸತತ ಆಘಾತಗಳಿಂದ ಹೈರಾಣಾಗಿದ್ದ ನಟ ಧ್ರುವ ಸರ್ಜಾ ಸಹಜ ಬದುಕಿಗೆ ಮರಳುತ್ತಿದ್ದಾರೆ. ಒಂದು ತಿಂಗಳ ಹಿಂದೆ ಹಠತ್ತಾಗಿ ಎರಗಿದ ಅಣ್ಣ ಚಿರಂಜೀವಿ ಸರ್ಜಾ ಸಾವು, ಅದರ ಬೆನ್ನಲ್ಲೇ ಹೆಚ್ಚಿದ ಜವಾಬ್ದಾರಿಗಳಿಂದ ಸುಸ್ತಾಗಿದ್ದ ಧ್ರುವ ಸರ್ಜಾ ಹೊರಜಗತ್ತಿಗೆ ಕಾಣಿಸಿಕೊಂಡಿರಲಿಲ್ಲ. ಅತ್ತ ಗಾಬರಿಯಾಗಿದ್ದ ಅಭಿಮಾನಿಗಳು ಅವರ ಮನೆ ಮುಂದೆ ನಿಂತು ಹೊರಗೆ ಬನ್ನಿ ನಿಮ್ಮನ್ನು ನೋಡಬೇಕು ಎಂದು ಅಲವತ್ತುಕೊಳ್ಳುತ್ತಿದ್ದದ್ದು ಸುದ್ದಿಯಾಗಿತ್ತು.
Recommended Video
ಇದರ ನಂತರ ಧ್ರುವ ಸರ್ಜಾ ಮತ್ತೊಂದು ಆಘಾತಕಾರಿ ಸಂಗತಿ ಹಂಚಿಕೊಂಡಿದ್ದರು. ತಮಗೆ ಹಾಗೂ ಪತ್ನಿ ಪ್ರೇರಣಾ ಇಬ್ಬರಿಗೂ ಕೊರೊನಾ ವೈರಸ್ ಪಾಸಿಟಿವ್ ಬಂದಿದೆ ಎಂದು ಧ್ರುವ ತಿಳಿಸಿದ್ದರು. ಇದರಿಂದ ಅಭಿಮಾನಿಗಳ ಕಳವಳ ಹೆಚ್ಚಾಗಿತ್ತು. ಆದರೆ ಧ್ರುವ ಸರ್ಜಾ ಎರಡು ದಿನಗಳಲ್ಲಿಯೇ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು. ಅವರು ಮಾನಸಿಕ ಹಾಗೂ ದೈಹಿಕವಾಗಿ ಗಟ್ಟಿಯಾಗುತ್ತಿದ್ದಾರೆ ಎನ್ನುವುದಕ್ಕೆ ಅವರ ಹೊಸ ವಿಡಿಯೋ ಸಾಕ್ಷಿಯಾಗಿದೆ. ಮುಂದೆ ಓದಿ...

ದೈನಂದಿನ ಚಟುವಟಿಕೆಗೆ ಧ್ರುವ ವಾಪಸ್
ಆಸ್ಪತ್ರೆಯಿಂದ ಗುಣಮುಖರಾಗಿ ಬಂದ ಬಳಿಕ ವರ್ಕೌಟ್ ಮಾಡುತ್ತಾ ಇನ್ಸ್ಟಾಗ್ರಾಂನಲ್ಲಿ ಕೆಲವು ನಿಮಿಷ ಲೈವ್ ಬಂದಿದ್ದ ಧ್ರುವ ಅಭಿಮಾನಿಗಳ ಜತೆಗೆ ಮಾತನಾಡಿದ್ದರು. ಸೋಮವಾರ ಅವರ ಮತ್ತೊಂದು ವಿಡಿಯೋ ವೈರಲ್ ಆಗಿದ್ದು, ಅದರಲ್ಲಿ ಅವರು ದೈನಂದಿನ ಚಟುವಟಿಕೆಗಳಿಗೆ ಮರಳಿರುವುದು ಸಮಾಧಾನ ತಂದಿದೆ.

ಒಂದು ಗಂಟೆ ಓಡಿ ವರ್ಕೌಟ್ ಮಾಡುತ್ತಿದ್ದೇವೆ
'ಹಾಯ್ ಗುಡ್ಮಾರ್ನಿಂಗ್. ಈಗ ಬೆಳಿಗ್ಗೆ ಐದು ಗಂಟೆ. ಈಗಷ್ಟೇ ಒಂದು ಗಂಟೆ ಓಡಿ, ಈಗ ವರ್ಕೌಟ್ ಶುರುಮಾಡುತ್ತಿದ್ದೇವೆ' ಎಂದು ಧ್ರುವ ಸರ್ಜಾ ಹೇಳಿದ್ದಾರೆ. ಫಿಟ್ನೆಸ್ ವಿಚಾರದಲ್ಲಿ ಯಾವಾಗಲೂ ಕಟ್ಟುನಿಟ್ಟಾಗಿದ್ದ ಧ್ರುವ ಸರ್ಜಾ, ಈಗ ಎಂದಿನಂತೆ ವರ್ಕೌಟ್ ಶುರುಮಾಡಿದ್ದಾರೆ. ಅವರ ಧ್ವನಿಯಲ್ಲಿಯೂ ಹಿಂದೆ ಇದ್ದ ಆಯಾಸವಿಲ್ಲ. ಹೀಗಾಗಿ ಧ್ರುವ ಅವರು ತಮ್ಮ ಹಿಂದಿನ ಚಟುವಟಿಕೆಗಳಿಗೆ ಮರಳಿರುವುದು ಅಭಿಮಾನಿಗಳಿಗೆ ಖುಷಿ ನೀಡಿದೆ.

ಆರೋಗ್ಯವಾಗಿದ್ದೇವೆ
ಕೊರೊನಾ ವೈರಸ್ ಪಾಸಿಟಿವ್ ಬಂದಿರುವುದಾಗಿ ತಿಳಿಸಿದ್ದ ಧ್ರುವ ಸರ್ಜಾ ಅವರಲ್ಲಿ ಸಣ್ಣಪುಟ್ಟ ಲಕ್ಷಣಗಳಷ್ಟೇ ಕಾಣಿಸಿದ್ದವು. ಆಸ್ಪತ್ರೆಗೆ ದಾಖಲಾಗಿ ಸೂಕ್ತ ಚಿಕಿತ್ಸೆ ಪಡೆದಿದ್ದ ಅವರು ಎರಡೇ ದಿನಕ್ಕೆ ಮನೆಗೆ ಮರಳಿದ್ದರು. ಬಳಿಕ ಇನ್ಸ್ಟಾಗ್ರಾಂನಲ್ಲಿ ಲೈವ್ ವಿಡಿಯೋ ಮಾಡಿ ತಾವು ಮತ್ತು ಪ್ರೇರಣಾ ಇಬ್ಬರೂ ಆರೋಗ್ಯವಾಗಿರುವುದಾಗಿ ತಿಳಿಸಿದ್ದರು.

ಬಿಸಿ ನೀರು ಕುಡಿಯಿರಿ, ವರ್ಕೌಟ್ ಮಾಡಿ
ದಿನವೂ ಬಿಸಿನೀರು ತಪ್ಪದೆ ಕುಡಿಯಿರಿ. ಆಗಾಗ ಗಾರ್ಗಲ್ ಮಾಡುತ್ತಿರಿ. ಸಾಧ್ಯವಾದಷ್ಟು ವರ್ಕೌಟ್ ಮಾಡಿ. ಮನೆಯಲ್ಲಿಯೇ ಸುರಕ್ಷಿತವಾಗಿರಿ. ನಾವು ಖುಷಿಯಿಂದ ಇರಬೇಕು ಅಷ್ಟೇ. ಈ ಕೊರೊನಾ ಅನ್ನು ಓಡಿಸೋಣ ಎಂದು ಧ್ರುವ ಹೇಳಿದ್ದರು.


Click it and Unblock the Notifications











