ರಸ್ತೆ ಅಪಘಾತದಲ್ಲಿ ಕನ್ನಡ ನಟಿ ದುರ್ಮರಣ; ಸಮಯಕ್ಕೆ ಸರಿಯಾಗಿ ಆಂಬ್ಯುಲೆನ್ಸ್ ಸಿಕ್ಕಿದ್ದರೆ ಬದುಕುತ್ತಿದ್ರಾ?
ಮಂಡ್ಯ ಮೂಲದ ನಟಿ ಪವಿತ್ರಾ ಜಯರಾಂ ಇತ್ತೀಚೆಗೆ ರಸ್ತೆ ಅಘಫಾತದಲ್ಲಿ ಸಾವನ್ನಪ್ಪಿದ್ದಾರೆ. ಇಂದು (ಮೇ 13) ಮಂಡ್ಯದಲ್ಲಿ ನಟಿ ಪವಿತ್ರಾ ಜಯರಾಂ ಅವರ ಅಂತ್ಯಕ್ರಿಯೆ ನಡೆಯುತ್ತಿದ್ದೆ. ಒಬ್ಬ ಪುತ್ರ ಹಾಗೂ ಒಬ್ಬ ಪುತ್ರಿಯನ್ನು ಬಿಟ್ಟು ಪವಿತ್ರಾ ಜಯರಾಂ ಅಗಲಿದ್ದಾರೆ.
ಕನ್ನಡ ಹಾಗೂ ತೆಲುಗು ಕಿರುತೆರೆಯಲ್ಲಿ ನಟಿ ಪವಿತ್ರಾ ಜಯರಾಂ ಬ್ಯುಸಿಯಾಗಿದ್ದರು. ಹೀಗಾಗಿ ಹೈದರಾಬಾದ್ಗೆ ಹೆಚ್ಚು ಪ್ರಯಾಣ ಮಾಡುತ್ತಿದ್ದರು. ಕನ್ನಡದ 'ತ್ರಿನಯನಿ' ಧಾರಾವಾಹಿಯಲ್ಲಿ ನಟಿಸುತ್ತಿದ್ದ ನಟಿ ಪವಿತ್ರಾ ಜಯರಾಂ ಜನ ಮನ್ನಣೆಯನ್ನು ಗಳಿಸಿದ್ದರು. ಇನ್ನು ತೆಲುಗಿನ 'ನಿನ್ನೆ ಪೆಲ್ಲಡತಾ' ಅನ್ನೋ ಜನಪ್ರಿಯ ಧಾರಾವಾಹಿಯಲ್ಲೂ ನಟಿಸಿದ್ದರು.

ಹುಟ್ಟೂರು ಮಂಡ್ಯಗೆ ಬಂದು ಹೈದರಾಬಾದ್ಗೆ ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ಮೆಹಬೂಬ್ ನಗರದ ಸಮೀಪ ಈ ನಟಿ ಪ್ರಯಾಣಿಸುತ್ತಿದ್ದ ಕಾರು ಎದುರಿಗೆ ಬಂದ ಬಸ್ಗೆ ಡಿಕ್ಕಿಹೊಡೆದಿದೆ. ಈ ಭೀಕರ ಅಪಘಾತದಲ್ಲಿ ಪವಿತ್ರಾ ಜಯರಾಂ ಸಾವನ್ನಪ್ಪಿದ್ದಾರೆ. ಆದರೆ, ಅಪಘಾತವಾದ ಕೂಡಲೇ ಆಂಬ್ಯುಲೆನ್ಸ್ ಸರಿಯಾದ ಸಮಯಕ್ಕೆ ಬಾರದೆ ಇದ್ದಿದ್ದಕ್ಕೆ ಅಪಘಾತ ಸಂಭವಿಸಿದೆ ಎಂದು ಸಹನಟ ಚಂದ್ರಕಾಂತ್ ಆರೋಪ ಮಾಡಿದ್ದಾರೆ.
ಅಪಘಾತವಾದ ಕಾರಿನಲ್ಲಿ ನಟಿ ಪವಿತ್ರಾ ಜೊತೆ ಅವರ ಸಂಬಂಧಿ ಅಪೇಕ್ಷಾ, ಚಾಲಕ ಶ್ರೀಕಾಂತ್, ಸಹನಟ ಚಂದ್ರಕಾಂತ್ ಪ್ರಯಾಣ ಮಾಡುತ್ತಿದ್ದರು. ಇವರೆಲ್ಲರಿಗೂ ಗಂಭೀರ ಗಾಯಗಳಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ, ಸಹನಟ ಚಂದ್ರಕಾಂತ್ ಚಿಕಿತ್ಸೆ ಪಡೆದು ಪವಿತ್ರ ಜಯರಾಂ ಅಂತ್ಯಕ್ರಿಯೆ ಪಾಲ್ಗೊಂಡಿದ್ದರು. ಈ ವೇಳೆ ಆಂಬ್ಯುಲೆನ್ಸ್ ಸರಿಯಾದ ಸಮಯಕ್ಕೆ ಬಂದಿದ್ದರೆ, ನಟಿಯ ಪ್ರಾಣ ಉಳಿಯುತ್ತಿತ್ತು ಎಂದಿದ್ದಾರೆ.
"ಆಂಬ್ಯುಲೆನ್ಸ್ 20 ನಿಮಿಷ ಮುಂಚೆ ಬಂದಿದ್ದರೆ, ಬಹುಶ: ಅವರು ಬದುಕುತ್ತಿದ್ದರು. ಅಪಘಾತವಾದಾಗ ಅವರು ಉಸಿರಾಡುತ್ತಿದ್ದರು" ಎಂದು ಅವರೊಂದಿಗೆ ಪ್ರಯಾಣಿಸುತ್ತಿದ್ದ ಸಹ ನಟ ಚಂದ್ರಕಾಂತ್ ಭಾವುಕರಾಗಿ ಹೇಳಿಕೊಂಡಿದ್ದಾರೆ.

ಪವಿತ್ರಾ ಜಯರಾಂ ಅವರೊಂದಿಗೆ ಧಾರಾವಾಹಿಗಳಲ್ಲಿ ನಟಿಸಿರುವ ಕಿರುತೆರೆ ನಟ ಚಂದು ಮಂಡ್ಯಗೆ ತೆರಳಿ ಅಂತಿಮ ದರ್ಶನ ಪಡೆದಿದ್ದಾರೆ. ಈ ವೇಳೆ ನಟಿಯರ ಬಗ್ಗೆ ಭಾವುಕರಾಗಿ ಮಾತಾಡಿದ್ದಾರೆ. "ಈ ಸಮಯದಲ್ಲಿ ಏನು ಹೇಳುವುದಕ್ಕೆ ಆಗುತ್ತೆ. ನಾವೆಲ್ಲರೂ ಐದು ವರ್ಷ ಒಟ್ಟಿಗೆ ಕೆಲಸ ಮಾಡಿದ್ದೇವೆ. ಮನೆಗಿಂತ ಹೆಚ್ಚಾಗಿ ನಾವು ಸೆಟ್ಟಿನಲ್ಲಿ ಜೀವನ ಮಾಡಿದ್ದೇವೆ. ತಿಂಗಳಿಗೆ 15 ದಿನ ನಾವು ಹೈದರಾಬಾದ್ನಲ್ಲಿ ಕೆಲಸ ಮಾಡುತ್ತಿದ್ದೇವು. ಅವರೇನು ಬೇರೆಯಲ್ಲ. ಮನೆಯವರು ಬೇರೆಯಲ್ಲ ಅಲ್ಲ ಹಾಗೇ ಇದ್ದರು. ಯಾರು ಹೋದ್ರು ನೋವು ನೋವೇ. ಇಷ್ಟು ಹತ್ತಿರದಲ್ಲಿ ಇದ್ದವರು ತೀರಿಕೊಂಡರೆ, ಅದು ಬೇರೆ ತರನೇ ನೋವು. ಹೇಳಿಕೊಳ್ಳುವುದಕ್ಕೆ ಆಗುವುದಿಲ್ಲ." ಎಂದಿದ್ದಾರೆ.
ಇದೇ ವೇಳೆ ಆಂಬ್ಯುಲೆನ್ಸ್ ತಡವಾಗಿ ಬಂದಿದ್ದಕ್ಕೂ ಪ್ರತಿಕ್ರಿಯೆ ನೀಡಿದ್ದಾರೆ. ಅವರೇ ಇಲ್ಲದ ಈ ಸಮಯದಲ್ಲಿ ಏನು ಮಾತಾಡುವುದು? ಎಂದು ಭಾವುಕರಾಗಿದ್ದಾರೆ. "ಇಲ್ಲಿ ಯಾರನ್ನೂ ದೂಷಿಸುವಂತಹ ಪರಿಸ್ಥಿತಿಯಿಲ್ಲ. ಅವರೇ ಇಲ್ಲ ಅಂದಾಗ ಏನಾಗುತ್ತೆ ಈಗ. ಆ ಸಮಯದಲ್ಲಿ ಅಪಘಾತ ಆಗಿದ್ದು ತಪ್ಪಾ? ಆಂಬ್ಯುಲೆನ್ಸ್ ಬಂದಿದ್ದು ತಪ್ಪಾ? ಯಾರನ್ನು ದೂರಿದರೆ ಏನಾಗುತ್ತೆ ಈಗ. ಅವರ ಅಗಲಿಕೆ ತುಂಬಾ ನೋವಾಗುತ್ತೆ. ಎಲ್ಲೇ ಇದ್ದರೂ ಅವರ ಆತ್ಮಕ್ಕೆ ಶಾಂತಿ ಸಿಗಲಿ" ಎಂದು ನಟ ಚಂದು ಗೌಡ ಹೇಳಿದ್ದಾರೆ.


Click it and Unblock the Notifications










