Darshan Case: ರೇಣುಕಾಸ್ವಾಮಿ ಪ್ರಕರಣದ ಸಾಕ್ಷಿಗೆ ಬೆದರಿಕೆ.. ಪ್ರಭಾವಿಗಳ ಕೈವಾಡ ಶಂಕೆ? ಕಾನ್ಫರೆನ್ಸ್ ಕಾಲ್ನಲ್ಲಿದ್ಯಾ ರಹಸ್ಯ?
ರೇಣುಕಾಸ್ವಾಮಿ-ದರ್ಶನ್ ಪ್ರಕರಣದ ಪ್ರತಿ ದಿನವೂ ಒಂದೊಂದು ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ದರ್ಶನ್ ಶತಾಯಗತಾಯ ಜಾಮೀನು ಪಡೆಯುವುದಕ್ಕೆ ಪಣ ತೊಟ್ಟು ನಿಂತಿದ್ದರೆ, ಇತ್ತ ಇನ್ನೊಂದು ಕಡೆ ಅವರ ಆಪ್ತರು, ಅಭಿಮಾನಿಗಳು ಒಂದೊಂದೆ ಎಡವಟ್ಟುಗಳನ್ನು ಮಾಡಿಕೊಳ್ಳುತ್ತಿದ್ದಾರೆ ಅಂತ ಅನಿಸುತ್ತಿದೆ. ಸದ್ಯ ಈ ಪ್ರಕರಣದ ಟ್ರಯಲ್ ಶುರುವಾಗಿದೆ. ಈ ವೇಳೆ ದರ್ಶನ್ ಅಭಿಮಾನಿಗಳು ಎಡವಟ್ಟು ಮಾಡಿದ್ದಾರೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೈಲು ಸೇರಿ ಹಲವು ತಿಂಗಳುಗಳಾಗಿದೆ. ಈಗಾಗಲೇ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿ ಅವರೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇನ್ನೊಂದು ವರ್ಷ ಜೈಲಿನಿಂದ ಅವರಿಗೆ ಮುಕ್ತಿ ಸಿಗದ ಹಾಗೇ ಆಗಿದೆ. ಈ ಮಧ್ಯೆ ಅಭಿಮಾನಿಗಳು 49ನೇ ಸಾಕ್ಷಿಗೆ ಬೆದರಿಕೆ ಹಾಕಿ ಮತ್ತೆ ಪೇಚಿಗೆ ಸಿಲುಕಿದ್ದಾರೆ. ಅವರನ್ನು ಬಂಧಿಸಿ ಪೊಲೀಸರು ವಿಚಾರಣೆ ಮಾಡುತ್ತಿದ್ದಾರೆ. ಈ ವೇಳೆ ಬೆದರಿಕೆ ಹಾಕಿದ್ದರ ಹಿಂದೆ ಪ್ರಭಾವಿಗಳ ಕೈವಾಡವಿರುವ ಶಂಕೆ ಇದೆ ಎಂದು ವರದಿಗಳಾಗುತ್ತಿವೆ.

ಸಾಕ್ಷಿ ಬೆದರಿಕೆ ತಂದ ಫಜೀತಿ
ದರ್ಶನ್ ಜಾಮೀನಿಗಾಗಿ ಪರದಾಡುತ್ತಿರೋದು ಗೊತ್ತೇ ಇದೆ. ಆದರೆ, ಸುಪ್ರೀಂ ಕೋರ್ಟ್ ಒಂದು ವರ್ಷದ ಒಳಗೆ ವಿಚಾರಣೆ ಮುಗಿಸಬೇಕು, ಅಲ್ಲದೆ ಒಂದು ವರ್ಷ ಜಾಮೀನಿಗಾಗಿ ಅರ್ಜಿ ಸಲ್ಲಿಸುವಂತಿಲ್ಲ ಎಂದು ಆದೇಶ ನೀಡಿತ್ತು. ಇದು ದರ್ಶನ್ರನ್ನು ಸಂಕಷ್ಟಕ್ಕೆ ಸಿಲುಕಿಸಿತ್ತು. ಈ ಬೆನ್ನಲ್ಲೇ ಟ್ರಯಲ್ ಟೈಟ್ ಮಾಡಿದ್ದರಿಂದ ದರ್ಶನ್ ಅಭಿಮಾನಿಗಳು 49ನೇ ಸಾಕ್ಷಿ ಸಂದೀಪ್ಗೆ ಸುಳ್ಳು ಸಾಕ್ಷಿ ನುಡಿಯುವಂತೆ ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ಈ ಸಂಬಂಧ, ಪುನೀತ್, ಸುಹಾಸ್ ಹಾಗೂ ವೇಣು ಎಂಬುವವರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಈ ವೇಳೆ ಪೊಲೀಸರಿಗೆ ಒಂದಿಷ್ಟು ಅನುಮಾನಗಳು ಮೂಡಿವೆ.
ಬೆದರಿಕೆ ಹಿಂದೆ ಪ್ರಭಾವಿ ಪ್ರಭಾವ
49ನೇ ಸಂದೀಪ್ ನ್ಯಾಯಾಧೀಶರ ಮುಂದೆ ಬೆದರಿಕೆ ಹಾಕುತ್ತಿರುವ ಬಗ್ಗೆ ಹೇಳಿಕೆ ನೀಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಧೀಶರು ಕಠಿಣ ತನಿಖೆ ನಡೆಸುವಂತೆ ಆದೇಶ ನೀಡಿದ್ದರು. ಹೀಗಾಗಿ ಕಾಮಾಕ್ಷಿಪಾಳ್ಯ ಪೊಲೀಸರು ವಿಚಾರಣೆ ಶುರು ಮಾಡಿದ್ದಾರೆ. ಈ ವೇಳೆ ದರ್ಶನ್ ಅಭಿಮಾನಿ ಸಂಘದ ಅಧ್ಯಕ್ಷ ಪುನೀತ್ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದು, ಈ ವೇಳೆ ಪ್ರಭಾವಿಗಳ ಸೂಚನೆ ಆಧರಿಸಿ ಈ ಕೃತ್ಯಕ್ಕೆ ಮುಂದಾಗಿದ್ದರು ಎನ್ನಲಾಗಿದೆ.
ಕಾನ್ಫರೆನ್ಸ್ ಕಾಲ್ ಸಂಕಷ್ಟ
ಪೊಲೀಸರು ಈಗಾಗಲೇ ಮೂವರು ಆರೋಪಿಗಳ ಮೊಬೈಲ್ಗಳನ್ನು ವಶಪಡೆದಿದ್ದಾರೆ. ಈಗಾಗಲೇ ಡಿಲೀಟ್ ಮಾಡಿರುವ ಕಾಲ್ ಡಿಟೈಲ್ಸ್, ವಾಟ್ಸಾಪ್ ಚಾಟ್ಗಳು ಸೇರಿದಂತೆ ಪ್ರತಿಯೊಂದು ಮಾಹಿತಿಯನ್ನು ರಿಟ್ರೈವ್ ಮಾಡುವುದಕ್ಕೆ ಇವರ ಮೊಬೈಲ್ಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ. ಈ ವರದಿ ಬಂದ ಕೂಡಲೇ ಆರೋಪಿಗಳು ಕಾನ್ಫರೆನ್ಸ್ ಕಾಲ್ನಲ್ಲಿ ಯಾರೊಂದಿಗೆ ಸಂಪರ್ಕದಲ್ಲಿ ಇದ್ದರು? ಪ್ರಭಾವಿಗಳ ಕೈವಾಡವಿದೆಯೇ? ಎಂಬುವುದು ಬೆಳಕಿಗೆ ಬರಲಿದೆ.
ಪ್ರಭಾವಿಗಳ ಎದೆಯಲ್ಲಿ ಢವ ಢವ
ಈಗಾಗಲೇ ಮಾಧ್ಯಮಗಳು ವರದಿ ಮಾಡಿರುವ ಪ್ರಕಾರ ವಿಧಿವಿಜ್ಞಾನ ಪ್ರಯೋಗಾಲಯದಿಂದ ಇನ್ನೆರಡು ದಿನಗಳಲ್ಲಿ ವರದಿಗಳು ಪೊಲೀಸರ ಕೈ ಸೇರಲಿವೆ. ಇದರಲ್ಲಿ ದರ್ಶನ್ ಅಭಿಮಾನಿಗಳನ್ನು ಮುಂದೆ ಬಿಟ್ಟು ಸಾಕ್ಷಿಗೆ ಬೆದರಿಕೆ ಹಾಕಿದವರ ಹೆಸರು ಹೊರಬೀಳಲಿದೆ. ಆದರೆ, ಈ ಪ್ರಭಾವಿ ಸಿನಿಮಾರಂಗಕ್ಕೆ ಸೇರಿದವರೇ, ಇಲ್ಲ ರಾಜಕೀಯ ರಂಗಕ್ಕೆ ಸೇರಿದವರೇ ಎಂಬುವುದು ಕುತೂಹಲ ಮೂಡಿಸಿದೆ. ಹೀಗಾಗಿ ಪ್ರಭಾವಿಗಳ ಎದೆಯಲ್ಲಿ ಈಗಾಗಲೇ ಢವ ಢವ ಶುರುವಾಗಿದೆ ಎನ್ನಲಾಗಿದೆ. ಒಂದು ವೇಳೆ ಆ ಪ್ರಭಾವಿಯ ಹೆಸರು ಇದ್ದರೆ, ಅವರ ಬಂಧನ ಆಗೋದು ಗ್ಯಾರಂಟಿ ಅನ್ನೋ ಮಾತು ಕೇಳಿ ಬರುತ್ತಿದೆ.


Click it and Unblock the Notifications
