"ಶಿವರಾಜ್ಕುಮಾರ್, ರಮ್ಯಾಗಿಂತ ಆ ದರ್ಶನ್ ಪರ್ವಾಗಿಲ್ಲ"; ಕಮಲ್ ಹಾಸನ್ ಪರ ನಿಂತಿದ್ದಕ್ಕೆ ರವಿ ಗಣಿಗ ಕಿಡಿ
ಕನ್ನಡ ಭಾಷೆಯ ಬಗ್ಗೆ ಕಮಲ್ ಹಾಸನ್ ಹೇಳಿಕೆ ಕನ್ನಡಿಗರು ಒಕ್ಕೊರಲಿನಿಂದ ಆಕ್ರೋಶ ಹೊರ ಹಾಕುತ್ತಿದ್ದಾರೆ. ಸಿನಿಮಾ ತಾರೆಯರು, ರಾಜಕೀಯ ಮುಖಂಡರು ಕಮಲ್ ಹಾಸನ್ ವಿರುದ್ಧ ತಿರುಗಿಬಿದ್ದಿದ್ದಾರೆ. ವಿವಾದ ಭುಗಿಲೆದ್ದ ಬಳಿಕ ಕಮಲ್ ಹಾಸನ್ ಪರ ಬ್ಯಾಟ್ ಬೀಸಿದ್ದಕ್ಕೆ ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ಹಾಗೂ ಮೋಹಕತಾರೆ ರಮ್ಯಾ ವಿರುದ್ಧವೂ ಆಕ್ರೋಶ ವ್ಯಕ್ತವಾಗುತ್ತಿದೆ.
ಕನ್ನಡ ಪರ ಸಂಘಟನೆಗಳು ಶಿವರಾಜ್ಕುಮಾರ್ ಹಾಗೂ ರಮ್ಯಾ ವಿರುದ್ಧ ಆಕ್ರೋಶ ಹೊರ ಹಾಕಿತ್ತು. ಈಗ ಕಾಂಗ್ರೆಸ್ ಶಾಸಕ ರವಿ ಗಣಿಗ ಕಮಲ್ ಹಾಸನ್ ಹೇಳಿಕೆಯನ್ನು ಖಂಡಿಸಿದ್ದಾರೆ. ಕ್ಷಮೆ ಕೇಳಬೇಕು ಇಲ್ಲದೆ ಹೋದಲ್ಲಿ 'ಥಗ್ ಲೈಫ್' ಬ್ಯಾನ್ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಇದೇ ಸಂದರ್ಭದಲ್ಲಿ ಶಿವರಾಜ್ಕುಮಾರ್ ಹಾಗೂ ರಮ್ಯಾ ವಿರುದ್ಧವೂ ಅಸಮಧಾನ ಹೊರ ಹಾಕಿದ್ದು, ಇವರಿಬ್ಬರಿಗಿಂತ ದರ್ಶನ್ ಪರ್ವಾಗಿಲ್ಲ ಎಂದಿದ್ದಾರೆ.

ಕಮಲ್ ಹಾಸನ್ ಅಲ್ಲ 'ತೇವರ ಹಾಸನ್'
"ಕಮಲ್ ಹಾಸನ್ ದುರಹಂಕಾರದಿಂದ ಈ ಹೇಳಿಕೆ ಕೊಟ್ಟಿದ್ದಾರೆ. ಕನ್ನಡದ ಬಗ್ಗೆ ಹೇಳಿಕೆ ಕೊಡಬೇಕಾದರೆ, ನಾಲಿಗೆ ಬಿಗಿ ಹಿಡಿದು ಮಾತಾಡಬೇಕು. ತಮಿಳಿನಲ್ಲಿ ಕಮಲ ಅಂದರೆ, ತೇವರ ಅಂತ. ತೇವರ ಹಾಸನ್ ಅಂತ ಇಟ್ಟುಕೊ, ಕಮಲ್ ಹಾಸನ್ ಅಂತ ಯಾಕೆ ಇಟ್ಟುಕೊಂಡಿದ್ದೀಯ. ಕನ್ನಡದ ಲಿಪಿಯನ್ನು ಇಟ್ಟುಕೊಂಡು, ಸಂಸ್ಕೃತದ ಲಿಪಿಯನ್ನು ಇಟ್ಟುಕೊಂಡಿದ್ದೇಕೆ. ತೇವರ ಹಾಸನ್ ಅಂತ ಇಟ್ಟುಕೊಂಡರೆ ತುಂಬಾನೇ ಸಂತೋಷ ಆಗುತ್ತೆ." ಎಂದು ಕಾಂಗ್ರೆಸ್ ಶಾಸಕ ರವಿ ಗಣಿಗ ಗುಡುಗಿದ್ದಾರೆ.
ಸ್ನೇಹವಿದ್ದರೆ ಮನೆಗೆ ಕರೆದು ಊಟ ಹಾಕಿ
ಕಮಲ್ ಹಾಸನ್ ಪರ ಬ್ಯಾಟ್ ಬೀಸಿದ ಶಿವರಾಜ್ಕುಮಾರ್ ವಿರುದ್ಧ ಅಸಮಧಾನ ಹೊರ ಹಾಕಿದ್ದಾರೆ. ಸ್ನೇಹವಿದ್ದರೆ, ಮನೆಗೆ ಕರೆದು ಊಟ ಹಾಕಿ ಎಂದು ಗುಡುಗಿದ್ದಾರೆ. "ಇನ್ನೊಂದು ಬೇಜಾರದ ಸಂಗತಿ ಅಂದರೆ, ಶಿವರಾಜ್ಕುಮಾರ್ ಆ ವೇದಿಕೆ ಮೇಲೆ ಇದ್ದು, ಇನ್ನೂ ಅವರನ್ನು ರಕ್ಷಣೆ ಮಾಡಿಕೊಳ್ಳುತ್ತಿದ್ದಾರೆ. ಇನ್ನೂ ನಿಮ್ಮ ಸ್ನೇಹವಿದ್ದರೆ, ಮನೆಗೆ ಕರೆದು ಊಟ ಹಾಕಿ. ಕನ್ನಡದ ಅನ್ನ ತಿನ್ನುತ್ತಿರುವ ನಟ ನೀವು. ಕನ್ನಡದ ಬಗ್ಗೆ ಅವರು ಅಷ್ಟು ದುರಹಂಕಾರದಿಂದ ಮಾತಾಡಿದಾಗ ಅವರನ್ನು ಅಪ್ಪಿಕೊಳ್ಳುತ್ತಿರುವುದು ಕನ್ನಡಿಗರಿಗೆ ಶಿವರಾಜ್ಕುಮಾರ್ ಮಾಡುತ್ತಿರುವ ಅವಮಾನ. ನಾನು ಕನ್ನಡಕ್ಕಾಗಿ ಸಾಯ್ತೀನಿ. ಕನ್ನಡನ ಪ್ರೀತಿ ಮಾಡುತ್ತೀನಿ ಎನ್ನುವ ಹೇಳಿಕೆಗಳನ್ನೆಲ್ಲ ನೋಡಿದೆ. ಆದರೆ, ಕನ್ನಡದ ತಾಯಿಗೆ ತಮಿಳುನಾಡಿನಲ್ಲಿ ಅವಮಾನ ಆಗಬೇಕಾದರೆ, ನೀವು ಸುಮ್ಮನೆ ಕೂತು ಇನ್ನೂ ಅವರನ್ನು ರಕ್ಷಣೆ ಮಾಡುತ್ತಿರುವುದು ಒಪ್ಪುವುದಕ್ಕೆ ಆಗುವುದಿಲ್ಲ." ಎಂದಿದ್ದಾರೆ.
ಹೊಸೂರು ಕರ್ನಾಟಕಕ್ಕೆ ಬಿಟ್ಟುಕೊಡಲಿ
"ಈಗ ಒಂದು ಹೇಳುತ್ತೇನೆ. 1799ರವರೆಗೂ ಹೊಸೂರು ಮೈಸೂರಿನ ಒಂದು ಭಾಗ. ಈಗ ಕರ್ನಾಟಕಕ್ಕೆ ಕೊಟ್ಟು ಬಿಡಲಿ. ಕರ್ನಾಟಕದಿಂದ 40 ಕಿ.ಮೀ ದೂರ ಇರುವ ಹೊಸೂರು 1799ರವರೆಗೂ ಮೂರನೇ ಆಂಗ್ಲೋ ಮೈಸೂರು ಯುದ್ಧದವರೆಗೂ ಮೈಸೂರಿನ ಭಾಗ ಆಗಿತ್ತು. ಈಗ ಕರ್ನಾಟಕಕ್ಕೆ ಕೊಡಲಿ ಹಾಗಿದ್ದರೆ. ಅದಕ್ಕೆ ಈ ಕೂಡಲೇ ಕಮಲ್ ಹಾಸನ್ ಅವರು ಕ್ಷಮೆ ಕೇಳಬೇಕು. ಇಲ್ಲದೇ ಹೋದರೆ, ಥಗ್ ಲೈಫ್ ಅನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡುವುದಕ್ಕೆ ಬಿಡಲ್ಲ." ಎಂದು ಪ್ರತಿಕ್ರಿಯಿಸಿದ್ದಾರೆ.

ವಾಣಿಜ್ಯ ಮಂಡಳಿ ಬೆಣ್ಣೆ ಹಚ್ಚೋದಲ್ಲ
"ವಾಣಿಜ್ಯ ಮಂಡಳಿಯವರು ಕೊಡು ತಗೋ. ಫೋನ್ ಮಾಡುತ್ತಿದ್ದೇವೆ. ಇನ್ನೂ ಕಮಲ್ ಹಾಸನ್ ಸಿಕ್ಕಿಲ್ಲ ಅನ್ನೋ ಬೆಣ್ಣೆ ಮಾತನ್ನು ಬಿಟ್ಟು ಕೂಡಲೇ ಕಮಲ್ ಹಾಸನ್ ಅವರನ್ನು ಕರ್ನಾಟಕದಲ್ಲಿ ಬ್ಯಾನ್ ಮಾಡುತ್ತೇನೆ ಎಂದು ಆರ್ಡರ್ ಹೊರಡಿಸಲಿ. ಸುಮ್ಮನೆ ಬೆಣ್ಣೆ ಹಚ್ಚಿಕೊಂಡು ಟೈಮ್ ಪಾಸ್ ಮಾಡಿಕೊಂಡು ಇರುವುದಕ್ಕಲ್ಲ ಕನ್ನಡ ವಾಣಿಜ್ಯ ಮಂಡಳಿ ಇರೋದು. ಕಠಿಣ ನಿರ್ಧಾರವನ್ನು ತೆಗೆದುಕೊಳ್ಳಲಿ. ಕಠಿಣ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ನೋಡುತ್ತಿದ್ದೇವೆ. ಇಲ್ಲಾ ಅಂದರೆ, ಸರ್ಕಾರದಿಂದಲೇ ಫಿಲ್ಮ್ ಅನ್ನು ಬ್ಯಾನ್ ಮಾಡುತ್ತೇವೆ." ಎಂದು ಎಚ್ಚರಿಕೆ ಕೊಟ್ಟಿದ್ದಾರೆ.
ಶಿವರಾಜ್ಕುಮಾರ್, ರಮ್ಯಾಗಿಂತ ದರ್ಶನ್ ಪರ್ವಾಗಿಲ್ಲ
ಇದೇ ವೇಳೆ ಶಿವರಾಜ್ಕುಮಾರ್, ರಮ್ಯಾಗಿಂತ ದರ್ಶನ್ ಪರ್ವಾಗಿಲ್ಲ ಎಂದು ರವಿ ಗಣಿಗ ಹೇಳಿದ್ದು ಅಚ್ಚರಿ ಮೂಡಿಸಿದೆ. "ಶಿವರಾಜ್ಕುಮಾರ್ ಹಾಗೂ ರಮ್ಯಾ ಅವರ ಮನಸ್ಸಿನಲ್ಲಿ ಏನಿದೆಯೋ ನನಗೆ ಗೊತ್ತಿಲ್ಲ. ಕನ್ನಡದ ಅನ್ನ ತಿನ್ನೋರು, ಕನ್ನಡ ಚಿತ್ರರಂಗದ ಬಗ್ಗೆ, ಕರ್ನಾಟಕದ ಬಗ್ಗೆ, ಕನ್ನಡ ಭಾಷೆಗೆ ಅನ್ಯಾಯ ಆದಾಗ ಮಾತಾಡಬೇಕು. ಆ ದರ್ಶನ್ ಪರವಾಗಿಲ್ಲ. ಕನ್ನಡಿಗರು ಎಲ್ಲರೂ ಒಂದಾಗಬೇಕು ಅಂತ ಹೇಳಿಕೆ ಕೊಟ್ಟಿದ್ದಾರೆ. ಅದನ್ನೂ ನೋಡಿದೆ. ನಟರು ಬೆಣ್ಣೆ ಹಚ್ಚೋದನ್ನು ಬಿಡಬೇಕು" ಎಂದು ಶಾಸಕ ರವಿ ಗಣಿಗ ಗುಡುಗಿದ್ದಾರೆ.


Click it and Unblock the Notifications











