"ನನ್ನ ತಂದೆಗೆ ಗೊತ್ತು ನಾನ್ಯಾರು ಅಂತ, ಕನ್ನಡ ಭಾಷೆ ನನ್ನ ಮೊದಲ ಆಯ್ಕೆ"; ಕಮಲ್ ವಿವಾದಕ್ಕೆ ಶಿವಣ್ಣ ಪ್ರತಿಕ್ರಿಯೆ
ಕಳೆದ ಕೆಲವು ದಿನಗಳಿಂದ ಕಮಲ್ ಹಾಸನ್ ಕನ್ನಡ ಭಾಷೆಯ ಬಗ್ಗೆ ಮಾತಾಡಿ ವಿವಾದವನ್ನು ಸೃಷ್ಟಿಸಿದ್ದರು. ತಮಿಳು ಭಾಷೆಯಿಂದಲೇ ಕನ್ನಡ ಹುಟ್ಟಿದ್ದು ಎಂದು ಹೇಳಿದ್ದರು. ಅಲ್ಲಿಂದ ಕನ್ನಡಿಗರು ಕಮಲ್ ಹಾಸನ್ ವಿರುದ್ಧ ಕೆಂಡಕಾರಿದ್ದರು. ಈ ವಿವಾದ ತಾರಕ್ಕೇರುತ್ತಿದ್ದಂತೆ ಪ್ರತಿಕ್ರಿಯೆ ನೀಡದೇ ಇದ್ದಿದ್ದಕ್ಕೆ ಶಿವರಾಜ್ಕುಮಾರ್ ಅವರನ್ನೂ ಕೂಡ ಟೀಕೆ ಮಾಡಲಾಗಿತ್ತು.
ಕಮಲ್ ಹಾಸನ್ ನಟಿಸಿದ 'ಥಗ್ಸ್ ಲೈಫ್' ಸಿನಿಮಾದ ಇವೆಂಟ್ಗೆ ಶಿವರಾಜ್ಕುಮಾರ್ ಅತಿಥಿಯಾಗಿ ಹೋಗಿದ್ದರು. ಈ ವೇಳೆ ಕಮಲ್ ಹಾಸನ್ ತಮಿಳು ಭಾಷೆಯಿಂದಲೇ ಕನ್ನಡ ಭಾಷೆ ಹುಟ್ಟಿದ್ದು ಎಂದು ಹೇಳಿದ್ದರು. ಇದರಿಂದ ಶಿವಣ್ಣ ಕೂಡ ವಿವಾದದಲ್ಲಿ ಸಿಕ್ಕಿಕೊಂಡಿದ್ದರು. ಅದರಲ್ಲೂ ಕಮಲ್ ಹಾಸನ್ ವಿವಾದದ ಬಳಿಕ ಪ್ರತಿಕ್ರಿಯೆ ನೀಡಿದೇ ಇದ್ದಿದ್ದಕ್ಕೆ ಕರವೇ ಸೇರಿದಂತೆ ಜನರು ಆಕ್ರೋಶ ಹೊರಹಾಕಿದ್ದರು. ಕೊನೆಗೂ ಶಿವಣ್ಣ ಈ ವಿವಾದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಖಾಸಗಿ ಕಾರ್ಯಕ್ರಮವೊಂದಕ್ಕೆ ತೆರಳಿದ್ದ ಶಿವಣ್ಣ ಮಾಧ್ಯಮದವರೊಂದಿಗೆ ಕಮಲ್ ಹಾಸನ್ ವಿವಾದದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. "ಕನ್ನಡ ನನ್ನ ಮೊದಲ ಆಯ್ಕೆ. ಅದರ ಬಗ್ಗೆ ಯಾವುದೇ ಅನುಮಾನ ಬೇಡ. ಇದು ಮೊದಲ ಬಾರಿಯೇನಲ್ಲ. ಕನ್ನಡ ಎನ್ನುವ ವಿಷಯ ಬಂದಾಗ ನೀವು ಹಿಂದಿನದನ್ನು ನೋಡಿ. ಶಿವಣ್ಣ ಕನ್ನಡಕ್ಕೆ ಏನು ಮಾಡಿದ್ದಾರೆ ಅನ್ನೋದು ಗೊತ್ತಾಗುತ್ತೆ. ಅವತ್ತು ನಾನು ಒಂದು ಕಾರ್ಯಕ್ರಮಕ್ಕೆ ಹೋಗಿದ್ದೆ ಅಷ್ಟೇ." ಎಂದು ಶಿವಣ್ಣ ಪ್ರತಿಕ್ರಿಯಿಸಿದ್ದಾರೆ.
ಹಾಗೇ "ಕಮಲ್ ಹಾಸನ್ ಸರ್ ಇಲ್ಲಿಗೆ ಬಂದಾಗ ಅವತ್ತೇ ಅವರೊಂದಿಗೆ ಕ್ಲಾರಿಟಿ ತೆಗೆದುಕೊಳ್ಳಬಹುದಿತ್ತು. ಅವರನು ಹೇಳಿಕೆ ಬಗ್ಗೆ ಅವರನ್ನೇ ಕೇಳಬೇಕು. ನನ್ನದೇನು ಇಲ್ಲ. ತಾಯಿ ಭಾಷೆ ಅಂತ ಬಂದಾಗ ಕನ್ನಡ ಮೊದಲ ಆಯ್ಕೆ. ಅದರಲ್ಲಿ ಯಾವುದೇ ಅನುಮಾನ ಬೇಡ. ಪ್ರಶಸ್ತಿ ಸಮಾರಂಭಕ್ಕೆ ಹೋಗಿದ್ದಾಗ ನಾನು ಜೀವವನ್ನೇ ಕೊಡುತ್ತೇನೆಂದು ಹೇಳಿದ್ದೆ. ಕರ್ನಾಟಕದಲ್ಲಿ ಏನೇ ಸಮಸ್ಯೆ ಬಂದರೂ ಮೊದಲು ಅಲ್ಲಿರುವ ವ್ಯಕ್ತಿ ನಾನೇ." ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಇದೇ ವೇಳೆ ಕಮಲ್ ಹಾಸನ್ ಅವರಿಗೆ ನಾನು ಹೇಳುವುದಿಲ್ಲ. ಅವರು ಹಿರಿಯರು. ಏನು ಹೇಳಬೇಕು ಅನ್ನೋದು ಅವರಿಗೆ ಬಿಟ್ಟಿದ್ದು ಎಂದು ಶಿವಣ್ಣ ಪ್ರತಿಕ್ರಿಯಿಸಿದ್ದಾರೆ. "ನಾನು ಅವರಿಗೆ ಏನೂ ಹೇಳುವುದಕ್ಕೆ ಆಗುವುದಿಲ್ಲ. ಅವರು ಸೀನಿಯರ್ ಆಕ್ಟರ್ ಇದ್ದಾರೆ. ನಾನು ಅವರಿಗೆ ಮಗನಿದ್ದಂತೆ. ಏನು ಹೇಳಬೇಕು? ಏನು ಹೇಳಬಾರದು? ಅನ್ನೋದು ಅದು ಅವರಿಗೆ ಬಿಟ್ಟಿದ್ದು. ಅವರಿಂದ ಏನು ತೆಗೆದುಕೊಳ್ಳಬೇಕು ಅನ್ನೋದು ಮಾಧ್ಯಮಕ್ಕೆ ಬಿಟ್ಟಿದ್ದು." ಎಂದಿದ್ದಾರೆ.
ಇದೇ ವೇಳೆ ಥಗ್ಸ್ ಲೈಫ್ ಕಾರ್ಯಕ್ರಮದಲ್ಲ ಕಮಲ್ ಹಾಸನ್ ವಿವಾದಾತ್ಮಕ ಹೇಳಿಕೆಗೆ ಶಿವಣ್ಣ ಚಪ್ಪಾಳೆ ತಟ್ಟುತ್ತಿರುವ ದೃಶ್ಯವನ್ನು ಸೇರಿಸಲಾಗಿತ್ತು. ಅಂತಹ ಟ್ರಿಕ್ಸ್ ಎಲ್ಲಾ ಮಾಡಬೇಡಿ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. "ನಾನು ಕಾರ್ಯಕ್ರಮಕ್ಕೆ ಹೋಗಿದ್ದ ವೇಳೆ ಅಲ್ಲಿ ಕೂತಿದ್ದಾಗ ಅವರು ಆಡಿದ ಮಾತಿಗೆ ನಾನು ಚಪ್ಪಾಳೆ ತಟ್ಟುವ ಕ್ಲಿಕ್ ಹಾಕಿದ್ದಾರೆ. ಅಂತ ಟ್ರಿಕ್ಗಳನ್ನು ನನ್ನೊಂದಿಗೆ ತೋರಿಸಬೇಡಿ. ನಾನೊಬ್ಬ ನಟ. ನನಗೆ ಎಲ್ಲವೂ ಗೊತ್ತಿದೆ. ನಾನು ಚಪ್ಪಾಳೆ ತಟ್ಟಿದ್ದು ಯಾಕೆ ಅಂದರೆ, ಅವರು ನನ್ನ ಚಿಕ್ಕಪ್ಪ ಎಂದು ಹೇಳಿದರು." ಎಂದು ಗರಂ ಆಗಿದ್ದಾರೆ
ಇನ್ನು ಈ ವಿವಾದದಲ್ಲಿ ಶಿವಣ್ಣ ಅವರನ್ನು ಟೀಕೆ ಮಾಡಲಾಗಿತ್ತು. ಆ ಬಗ್ಗೆನೂ ಪ್ರತಿಕ್ರಿಯೆ ನೀಡಿದ್ದಾರೆ. "ನನ್ನ ತಂದೆಗೆ ಗೊತ್ತು ನಾನು ಯಾರು ಅಂತ. ಆತ್ಮ ಅನ್ನೋದು ಇದ್ದೇ ಇದೆ. ಕರ್ನಾಟಕ ಜನತೆಗೆ ಗೊತ್ತು. ಸಾಮಾನ್ಯ ಜನರಿಗೆ ಗೊತ್ತು ನಾನು ಏನು ಅಂತ. ಅವರೇ ಉತ್ತರ ಕೊಡುತ್ತಾರೆ." ಎಂದು ಶಿವಣ್ಣ ಹೇಳಿದ್ದಾರೆ.


Click it and Unblock the Notifications











