"ಇದೆಲ್ಲದಕ್ಕೂ ಪೂರ್ಣ ವಿರಾಮ ಹಾಕುವ ಟೈಂ ಬಂದಿದೆ"; ಕಮಲ್ ಹಾಸನ್ ಹೇಳಿಕೆಗೆ ಸುಮಲತಾ ತಿರುಗೇಟು
ದಕ್ಷಿಣ ಭಾರತದ ಜನಪ್ರಿಯ ನಟ ಕಮಲ್ ಹಾಸನ್ ಕನ್ನಡದ ಬಗ್ಗೆ ವಿವಾದಾತ್ಮಕ ಹೇಳಿಕೆ ಕೊಟ್ಟು ಪೇಚಿಗೆ ಸಿಲುಕಿದ್ದಾರೆ. ತಮಿಳು ಭಾಷೆಯಿಂದ ಕನ್ನಡ ಹುಟ್ಟಿದ್ದು ಎಂಬ ಹೇಳಿಕೆ ಕನ್ನಡಿಗರನ್ನು ಕೆರಳಿಸಿದೆ. ಸಿನಿಮಾ ತಾರೆಯರು, ಸಾಹಿತಿಗಳು, ರಾಜಕೀಯ ಮುಖಂಡರು ಸೇರಿದಂತೆ ಕಮಲ್ ಹಾಸನ್ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ. ಕನ್ನಡಿಗರಿಗೆ ಕಮಲ್ ಹಾಸನ್ ಕ್ಷಮೆ ಕೇಳಬೇಕು ಎಂದು ಪಟ್ಟು ಹಿಡಿದು ಕೂತಿದ್ದಾರೆ.
ಆದರೆ, ಕಮಲ್ ಹಾಸನ್ ಬೇಡದೇ ಇರುವ ವಿವಾದದಲ್ಲಿ ಸಿಕ್ಕಿಕೊಂಡಿದ್ದರೂ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಪ್ರೀತಿಯಿಂದ ಹೇಳಿದ್ದಕ್ಕೆ ಕ್ಷಮೆ ಕೇಳುವುದಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಇದು ಕನ್ನಡಿಗರನ್ನು ಹಾಗೂ ಕನ್ನಡ ಪರ ಹೋರಾಟಗಾರರನ್ನು ಮತ್ತಷ್ಟು ಕೆರಳಿಸಿದೆ. ಕಮಲ್ ಹಾಸನ್ ಅವರ ಈ ವಿವಾದಕ್ಕೆ ಕರ್ನಾಟಕ ಸರ್ಕಾರ ಕೂಡ ಎಂಟ್ರಿ ಕೊಟ್ಟಿದೆ.

ಕರ್ನಾಟಕದಲ್ಲಿ ಕಮಲ್ ಹಾಸನ್ ಬಗ್ಗೆ ತೀವ್ರ ವಿರೋಧ ವ್ಯಕ್ತವಾಗಿದ್ದು, ಗಣ್ಯರು ಆಕ್ರೋಶ ಹೊರ ಹಾಕುತ್ತಿದ್ದಾರೆ. ಇದೇ ವೇಳೆ ಸುಮಲತಾ ಅಂಬರೀಶ್ ಕೂಡ ಕಮಲ್ ಹಾಸನ್ ಹೇಳಿಕೆಗೆ ತಿರುಗೇಟು ಕೊಟ್ಟಿದ್ದಾರೆ. ಇಲ್ಲಿ ಯಾರೂ ಭಾಷಾ ಪಂಡಿತರಲ್ಲ. ಸೂಕ್ಷ್ಮ ವಿಷಯವನ್ನು ಮಾತಾಡುವಾಗ ಕಮಲ್ ಹಾಸನ್ ಅಂತಹ ನಟರು ಯೋಚನೆ ಮಾಡಿ ಮಾತಾಡಬೇಕಿತ್ತು ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಕನ್ನಡಿಗರಿಗೆ ನೋವು ಕೊಡುವ ವಿಷಯ
ಕಮಲ್ ಹಾಸನ್ ಕನ್ನಡ ಭಾಷೆಯ ಬಗ್ಗೆ ಕೊಟ್ಟ ಹೇಳಿಕೆ ಸುಮಲತಾ ಪ್ರತಿಕ್ರಿಯಿಸಿದ್ದಾರೆ. "ಕನ್ನಡಿಗರಿಗೆ ಭಾಷೆ ಅನ್ನೋದು ಹೆಮ್ಮೆಯ ವಿಷಯ. ಅಷ್ಟೇ ಸೂಕ್ಷ್ಮ ವಿಷಯ ಕೂಡ ಹೌದು. ಏನೇ ಇರಲಿ ಅವರ ಅಭಿಪ್ರಾಯ ತಿಳಿಸಿದ್ದಾರೆ. ಅವರು ಸೀನಿಯರ್ ಆರ್ಟಿಸ್ಟ್. ಆ ಬಗ್ಗೆ ಎಲ್ಲರಿಗೂ ಗೌರವವಿದೆ. ಆದರೆ, ಈ ಹೇಳಿಕೆ ಕನ್ನಡಿಗರಿಗೆ ನೋವು ಕೊಡುವ ವಿಷಯನೇ. ನಾವ್ಯಾರು ಭಾಷಾ ಪಂಡಿತರಲ್ಲ. ಸಾವಿರಾರು ವರ್ಷಗಳ ಹಿಂದೆ ಹೋಗಿ ಯಾವ ಭಾಷೆಯಿಂದ ಯಾವ ಭಾಷೆ ಹುಟ್ಟಿದೆ ಅನ್ನೋದನ್ನು ಖಂಡಿತಾ ಯಾರಿಗೂ ಹೇಳುವುದಕ್ಕೆ ಬರುವುದಿಲ್ಲ. ಅಂತಹ ಗೊತ್ತಿಲ್ಲದ ವಿಷಯದ ಬಗ್ಗೆ ನಾವು ಸ್ವಲ್ಪ ಯೋಚನೆ ಮಾಡಿ ಮಾತಾಡಿದರೆ ಚೆನ್ನಾಗಿ ಇರುತಿತ್ತು." ಎಂದು ಸುಮಲತಾ ಅಭಿಪ್ರಾಯ ಪಟ್ಟಿದ್ದಾರೆ.

ಪೂರ್ಣ ವಿರಾಮ ಹಾಕಬೇಕಿದೆ
ಇನ್ನು ನಮ್ಮ ನಾಡಿಗೆ ಬಂದು ನಮಗೆ ದಬ್ಬಾಳಿಕೆ ಮಾಡುವ ಬಗ್ಗೆ ಪೂರ್ಣ ವಿರಾಮ ಹಾಕಬೇಕಿದ ಎಂದೂ ಅಭಿಪ್ರಾಯ ಪಟ್ಟಿದ್ದಾರೆ. "ನಮ್ಮ ನಾಡಿಗೆ ಬಂದು ನಮ್ಮ ಮೇಲೆ ದಬ್ಬಾಳಿಕೆ ಮಾಡುವುದು ಒಪ್ಪುವಂತಹ ವಿಷಯವೇ ಅಲ್ಲ. ಇದಕ್ಕೆ ಎಲ್ಲೋ ಒಂದು ಪೂರ್ಣ ವಿರಾಮ ಹಾಕಬೇಕಿರುವ ಟೈಂ ಬಂದಿದೆ. ಆದರೆ, ಹಿಂಸೆಯ ರೂಪದಲ್ಲಿ ಆಗಬಾರದು ಅನ್ನೋದು ನನ್ನ ಅನಿಸಿಕೆ. ಯಾಕಂದ್ರೆ, ಹಿಂಸಾತ್ಮಕವಾಗಿ ಏನನ್ನೂ ಬಗೆಹರಿಸುವುದಕ್ಕೆ ಆಗುವುದಿಲ್ಲ. ಹಾಗಾಗಿ ತಾಳ್ಮೆಯಿಂದ ಬಗೆಹರಿಸಬೇಕಿರುವ ವಿಷಯವಿದು." ಎಂದಿದ್ದಾರೆ.
ತೀರಾ ಸೂಕ್ಷ್ಮ ವಿಷಯ
"ಯಾವುದೇ ವಿಷಯವನ್ನು ತುಂಬಾನೇ ವಿಪರೀತಕ್ಕೆ ತೆಗೆದುಕೊಂಡು ಹೋಗಬಾರದು. ಇದು ತೀರಾ ಸೂಕ್ಷ್ಮ ವಿಷಯ ಇರುವುದರಿಂದ ಅವರವರ ಹೇಳಿಕೆಗಳನ್ನು ಎಷ್ಟು ತೆಗೆದುಕೊಳ್ಳಬೇಕೋ ಅಷ್ಟೇ ತೆಗೆದುಕೊಂಡು ಬಿಟ್ಟು ಬಿಡಬೇಕು ಅನ್ನೋದನ್ನು ನನ್ನ ಅನಿಸಿಕೆ." ಎಂದು ಕಮಲ್ ಹಾಸನ್ ಕನ್ನಡ ವಿರೋಧಿ ಹೇಳಿಕೆಯನ್ನು ಖಂಡಿಸಿ ಆಕ್ರೋಶ ಹೊರ ಹಾಕುತ್ತಿರುವ ಕನ್ನಡಿಗರಿಗೆ ಕನ್ನಡ ಪರ ಸಂಘಟನೆಗಳಿಗೆ ಸುಮಲತಾ ಮನವಿ ಮಾಡಿಕೊಂಡಿದ್ದಾರೆ.
ಶಿವರಾಜ್ ತಂಗಡಗಿ ಪತ್ರ
ಇನ್ನು ಕಮಲ್ ಹಾಸನ್ ಸಿನಿಮಾಗಳನ್ನು ಕರ್ನಾಟಕದಲ್ಲಿ ನಿಷೇಧ ಮಾಡಿ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಪತ್ರ ಬರೆದಿದ್ದಾರೆ. ಕಮಲ್ ಹಾಸನ್ ಕನ್ನಡ ಭಾಷೆಯ ಬಗ್ಗೆ ಮಾತಾಡಿರುವುದು ನೋವಾಗಿದೆ. ಸಮಸ್ತ ಕನ್ನಡಿಗರಿಗೆ ಕನ್ನಡಿಗರ ಭಾವನೆಗಳಿಗೆ ನೋವಾಗಿದ್ದು, ಈ ರೀತಿ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದು ಶೋಭೆ ತರುವಂತಹದ್ದಲ್ಲ. ಅವರಿಂದ ಇಂತಹ ಹೇಳಿಕೆಗಳನ್ನು ಸಹಿಸಲು ಸಾಧ್ಯವಿಲ್ಲ. ಹೀಗಾಗಿ ಕಮಲ್ ಹಾಸನ್ ಚಿತ್ರಗಳಿಗೆ ನಿರ್ಬಂಧ ವಿಧಿಸುವಂತೆ ಪತ್ರವನ್ನು ಬರೆದಿದ್ದಾರೆ.


Click it and Unblock the Notifications











