"ತಮಿಳಿನಿಂದ ಕನ್ನಡ ಹುಟ್ಟಿದ್ದು" ಈ ವಿವಾದಕ್ಕೆ ಕ್ಷಮೆ ಕೇಳಲ್ಲ ಎಂದ ಕಮಲ್ ಹಾಸನ್.. ಮುಂದೇನು?
ತಮಿಳು ನಟ ಕಮಲ್ ಹಾಸನ್ 'ಥಗ್ ಲೈಫ್' ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ನಡೆದ ಇದೇ ಸಿನಿಮಾದ ಇವೆಂಟ್ನಲ್ಲಿ ಕಮಲ್ ಹಾಸನ್ ಕನ್ನಡ ಭಾಷೆಯ ಬಗ್ಗೆ ಮಾತಾಡಿ ವಿವಾದಕ್ಕೆ ಸಿಲುಕಿದ್ದಾರೆ. ತಮಿಳಿನಿಂದ ಕನ್ನಡ ಹುಟ್ಟಿದ್ದು ಎಂಬ ಹೇಳಿಕೆ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಕನ್ನಡ ಭಾಷೆಗೆ ಕಮಲ್ ಹಾಸನ್ ಅವಮಾನ ಮಾಡಿದ್ದಾರೆಂದು ಕನ್ನಡ ಪರ ಹೋರಾಟ ಸಂಘಟನೆಗಳು ಅಖಾಡಕ್ಕೆ ಇಳಿದಿವೆ.
ಇಂದು ಕರ್ನಾಟಕ ಫಿಲ್ಮ್ ಚೇಂಬರ್ ಮುಂದೆ ಕಮಲ್ ಹಾಸನ್ಗೆ ಎಚ್ಚರಿಕೆಯನ್ನು ಕರವೇ ಅಧ್ಯಕ್ಷ ಪ್ರವೀಣ್ ಶೆಟ್ಟಿ ಕೊಟ್ಟಿದ್ದರು. ಕಮಲ್ ಹಾಸನ್ ಕನ್ನಡಿಗರಿಗೆ ಕ್ಷಮೆ ಕೇಳಬೇಕು. ಒಂದು ವೇಳೆ ಕೇಳದೇ ಇದ್ದಲ್ಲಿ ಕರ್ನಾಟಕದಲ್ಲಿ ಅವರ ಸಿನಿಮಾ ಪ್ರದರ್ಶನ ಆಗುವುದಕ್ಕೆ ಬಿಡುವುದಿಲ್ಲ ಎಚ್ಚರಿಕೆ ಕೊಟ್ಟಿದ್ದರು. ಅಷ್ಟೆ ಅಲ್ಲದೆ, ಮಾಲ್, ಥಿಯೇಟರ್ಗೆ ನುಗ್ಗಿ ಸಿನಿಮಾ ಪ್ರದರ್ಶನಗಳನ್ನು ನಿಲ್ಲಿಸುತ್ತೇವೆ ಎಂದಿದ್ದರು.

ಈ ಬೆನ್ನಲ್ಲೇ ಕಮಲ್ ಹಾಸನ್ ದೆಹಲಿಯಲ್ಲಿ ನಡೆದ ಇವೆಂಟ್ನಲ್ಲಿ "ಕ್ಷಮೆ ಕೇಳುವುದಿಲ್ಲ" ಎಂದು ಹೇಳಿದ್ದಾರೆ. ಕನ್ನಡ ಭಾಷೆ ಹಾಗೂ ಸಂಸ್ಕೃತಿಯನ್ನು ಅವಮಾನಿಸಿದ್ದಾರೆಂಬ ಆರೋಪದ ಬೆನ್ನಲ್ಲೇ ಕಮಲ್ ಹಾಸನ್ ಖಡಾಖಂಡಿತವಾಗಿ ಕ್ಷಮೆ ಕೇಳುವುದಿಲ್ಲ ಎಂದು ಹೇಳಿಕೆ ಕೊಟ್ಟಿದ್ದಾರೆ. ಈ ವಿವಾದ ಮುಂದೆ ಯಾವ ಸ್ವರೂಪ ಪಡೆಯುತ್ತೋ? ಕನ್ನಡ ಪರ ಸಂಘಟನೆಗಳು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೋ ಎನ್ನುವ ಪ್ರಶ್ನೆ ಎದ್ದಿದೆ.
ಕ್ಷಮೆ ಕೇಳುವುದಿಲ್ಲ
ತಮಿಳಿನಿಂದ ಕನ್ನಡ ಹುಟ್ಟಿದ್ದು ಎಂದು ವಿವಾದ ಸೃಷ್ಟಿಸಿರುವ ಕಮಲ್ ಹಾಸನ್ ಕ್ಷಮೆ ಕೇಳಲ್ಲ ಎಂದಿದ್ದಾರೆ. " ಪ್ರೀತಿಯಿಂದ ಹೇಳಿದ್ದಕ್ಕೆ ನಾನು ಕ್ಷಮೆ ಕೇಳುವುದಿಲ್ಲ. ರಾಜಕೀಯ ಮುಖಂಡರು ಭಾಷೆಯ ಬಗ್ಗೆ ಮಾತಾಡುವುದಕ್ಕೆ ಯೋಗ್ಯರಲ್ಲ. ಅದರಲ್ಲಿ ನಾನೂ ಕೂಡ ಸೇರಿಕೊಂಡಿದ್ದೇನೆ" ಎಂದು ಹೇಳುವ ಮೂಲಕ ಉರಿಯುತ್ತಿರುವ ಬೆಂಕಿಗೆ ತುಪ್ಪ ಸುರಿದಿದ್ದಾರೆ. ಹೀಗಾಗಿ ಕರ್ನಾಟಕದಲ್ಲಿ ಕಮಲ್ ಹಾಸನ್ ವಿರುದ್ಧ ದೊಡ್ಡ ಮಟ್ಟದಲ್ಲಿ ಪ್ರತಿಭಟನೆಗಳು ಆಗುವ ಸಾಧ್ಯತೆಯಿದೆ.
ತಮಿಳುನಾಡಿನಲ್ಲಿ ಮೂರು ರಾಜ್ಯದವರು ಸಿ ಎಂ
ಇದೇ ಇವೆಂಟ್ನಲ್ಲಿ ತಮಿಳುನಾಡಿನಲ್ಲಿ ಮೂರು ರಾಜ್ಯದವರು ಸಿಎಂ ಆಗಿದ್ದಾರೆ. ಹೀಗಾಗಿ ತಮಿಳುನಾಡು ಅಪರೂಪದ ರಾಜ್ಯ ಎಂದು ಹೇಳಿಕೊಂಡಿದ್ದಾರೆ. " ತಮಿಳುನಾಡು ತುಂಬಾನೇ ಅಪರೂಪದ ರಾಜ್ಯ. ಇಲ್ಲಿ ಮೆನನ್ ಮುಖ್ಯಮಂತ್ರಿಯಾಗಿದ್ದಾರೆ, ರೆಡ್ಡಿ ಸಿಎಂ ಆಗಿದ್ದಾರೆ. ಕನ್ನಡಿಗ ಕೂಡ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ." ಎಂದು ಕಮಲ್ ಹಾಸನ್ ಹೇಳಿದ್ದಾರೆ.
ಕರ್ನಾಟಕ ನೆನಪಿಸಿಕೊಂಡ ಕಮಲ್
ಇದೇ ಇವೆಂಟ್ನಲ್ಲಿ ಕಮಲ್ ಹಾಸನ್ ತಮ್ಮ ಕಷ್ಟದ ದಿನಗಳಲ್ಲಿ ಕರ್ನಾಟಕ ನೀಡಿದ ನೆರವನ್ನು ನೆನಪಿಸಿಕೊಂಡಿದ್ದಾರೆ. " ಚೆನ್ನೈನಲ್ಲಿ ನಾನು ಸಮಸ್ಯೆಗೆ ಸಿಕ್ಕಿಕೊಂಡಾಗ ಕರ್ನಾಟಕ ನನ್ನ ಪರವಾಗಿ ನಿಂತಿತ್ತು" ಎಂದು ಹೇಳಿಕೊಂಡಿದ್ದಾರೆ. 2013ರಲ್ಲಿ ಕಮಲ್ ಹಾಸನ್ ನಟಿಸಿದ 'ವಿಶ್ವರೂಪಂ' ಸಿನಿಮಾ ವಿವಾದಕ್ಕೀಡಾಗಿತ್ತು. ಮುಸ್ಲಿಂ ಸಮುದಾಯವನ್ನು ಕೀಳಾಗಿ ತೋರಿಸಿದ್ದಾರೆಂದು ಕಮಲ್ ವಿರುದ್ಧ ತಿರುಗಿಬಿದ್ದಿದ್ದರು. ಈ ವೇಳೆ ತಮಿಳುನಾಡಿನಲ್ಲಿ ಬ್ಯಾನ್ ಮಾಡುವಂತೆ ಪ್ರತಿಭಟನೆಗಳು ನಡೆದಿದ್ದವು. ಆ ವೇಳೆ ಕಮಲ್ ಹಾಸನ್ಗೆ ಕರ್ನಾಟಕದಿಂದ ಸಿನಿಮಾ ರಿಲೀಸ್ಗೆ ಬೆಂಬಲ ಸಿಕ್ಕಿತ್ತು.
ಕನ್ನಡ ಪರ ಸಂಘಟನೆ ಆಕ್ರೋಶ
ಕನ್ನಡ ಪರ ಸಂಘಟನೆಗಳು ಕಮಲ್ ಹಾಸನ್ ವಿರುದ್ಧ ತಿರುಗಿಬಿದ್ದಿದ್ದಾರೆ. ಪ್ರವೀಣ್ ಶೆಟ್ಟಿ ಬಳಗ ಕನ್ನಡಿಗರ ಭಾವನೆಗಳಿಗೆ ಧಕ್ಕೆ ತಂದಿದ್ದಾರೆಂದು ಈಗಾಗಲೇ ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದಾರೆ. ಕ್ಷಮೆ ಕೇಳಬೇಕು ಎಂದು ಪಟ್ಟು ಹಿಡಿದಿದ್ದರಿಂದ ಮುಂದಿನ ದಿನಗಳಲ್ಲಿ ಈ ಹೋರಾಟ ಯಾವ ರೂಪ ಪಡೆದುಕೊಳ್ಳುತ್ತೆ ಎನ್ನುವುದನ್ನು ನೋಡಬೇಕಿದೆ. ಬೆಳಗಾವಿ, ಮೈಸೂರು ಮತ್ತು ಬೆಂಗಳೂರಿನಲ್ಲಿ ಕಮಲ್ ಹಾಸನ್ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ.


Click it and Unblock the Notifications











