ಪತ್ನಿ ಜೊತೆ ಜಗಳ.. ಗುರುಪ್ರಸಾದ್ ಆಡಿಯೋ ವೈರಲ್: ಆರೋಪಕ್ಕೆ ಪತ್ನಿಯ ಪ್ರತಿಕ್ರಿಯೆ ಏನು?
ಗುರುಪ್ರಸಾದ್ ನಿರ್ದೇಶಿಸಿ, ನಟಿಸಿರುವ ಕೊನೆಯ ಸಿನಿಮಾ 'ಎದ್ದೇಳು ಮಂಜುನಾಥ 2' ನಾಳೆ (ಫೆಬ್ರವರಿ 21) ರಿಲೀಸ್ ಆಗಬೇಕಿತ್ತು. ಆದರೆ, ಗುರುಪ್ರಸಾದ್ ಅವರ ಪತ್ನಿ ಸುಮಿತ್ರಾ ಕೊನೆಯ ಕ್ಷಣದಲ್ಲಿ ನ್ಯಾಯಾಲಯದ ಮೊರೆ ಹೋಗಿ ಬಿಡುಗಡೆಗೆ ತಡೆಯಾಜ್ಞೆ ತಂದಿದ್ದಾರೆ. ಹೀಗಾಗಿ ನಾಳೆ (ಫೆಬ್ರವರಿ 21) ಈ ಸಿನಿಮಾ ರಿಲೀಸ್ ಆಗುತ್ತೋ ಇಲ್ಲವೋ ಸದ್ಯಕ್ಕೆ ಪ್ರಶ್ನೆಯಾಗಿಯೇ ಉಳಿದಿದೆ.
ಈ ಮಧ್ಯೆ ಗುರುಪ್ರಸಾದ್ ಹಾಗೂ ಪತ್ನಿ ಸುಮಿತ್ರಾ ನಡುವಿನ ಸಂಭಾಷಣೆಯ ಆಡಿಯೋ ಹೊರಬಿದ್ದಿತ್ತು. ಈ ಆಡಿಯೋ ಗುರುಪ್ರಸಾದ್ ತಮ್ಮ ಪತ್ನಿಯ ಬಳಿ ಕೋಪದಿಂದ ಮಾತಾಡಿದ್ದಾರೆ. ಸಾಯುವುದಕ್ಕೂ ಆಗದೆ, ಬದುಕುವುದಕ್ಕೂ ಆಗದೇ ಇರುವಂತಹ ಸ್ಥಿತಿಯಲ್ಲಿ ಇದ್ದೇನೆ ಎಂದು ಹೇಳಿದ್ದಾರೆ. ಈ ಆಡಿಯೋ ಚರ್ಚೆ ಹುಟ್ಟಾಕುತ್ತಿದ್ದಂತೆ ಪತ್ನಿ ಸುಮಿತ್ರಾ ಮಾಧ್ಯಮಗಳಿಗೆ ಪ್ರತಿಕ್ರಿಯೆಯನ್ನು ನೀಡಿದ್ದಾರೆ.

'ಎದ್ದೇಳು ಮಂಜುನಾಥ 2' ಸಿನಿಮಾವನ್ನು ಗುರುಪ್ರಸಾದ್ ತಮ್ಮದೇ ನಿರ್ಮಾಣ ಸಂಸ್ಥೆಯಡಿಯಲ್ಲಿ ಮಾಡಬೇಕು ಎಂದು ನಿರ್ಧರಿಸಿದ್ದರು. ಆದರೆ, ರಿಲೀಸ್ ಹೊಸ್ತಿಲಲ್ಲಿ ಗುರುಪ್ರಸಾದ್ ಹೆಸರು ಇಲ್ಲ ಎಂದು ಆರೋಪ ಮಾಡುತ್ತಿದ್ದಾರೆ. ಗುರುಪ್ರಸಾದ್ ಈ ಸಿನಿಮಾಗೆ ಮಾಡಿರುವ ಕೆಲಸಕ್ಕಾಗಿ ಅವರಿಗೆ ಸಂಭಾವನೆಯನ್ನು ನೀಡುಬೇಕು ಎಂದು ಒತ್ತಾಯ ಮಾಡಿದ್ದಾರೆ. ಅಲ್ಲದೆ ಈ ಆಡಿಯೋವನ್ನು ಬೇಕು ಅಂತಲೇ ಮಾಧ್ಯಮಗಳಿಗೆ ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ. ಗುರುಪ್ರಸಾದ್ ಪತ್ನಿ ಸುಮಿತ್ರಾ ಮಾಧ್ಯಮಗಳಿಗೆ ನೀಡಿದ ಪ್ರತಿಕ್ರಿಯೆ ಹೀಗಿದೆ.
ಪತ್ನಿ ಜೊತೆ ಜಗಳ, ಸತ್ತರೆ ಸಾಕಾಗಿದೆ ನನಗೆ ಎಂದು ಬಿಕ್ಕಿದ್ದರು ಗುರುಪ್ರಸಾದ್- ಆಡಿಯೋ ವೈರಲ್...!
"ಗಂಡ ಹೆಂಡ್ತಿ ಅಂದ್ರೆ ಜಗಳ ಇದ್ದೇ ಇರುತ್ತೆ. ಇದು ನಡೆದಿರೋದು ಜೂನ್ 10ನೇ ತಾರೀಕು. ಈ ಆಡಿಯೋ ಹೊರ ಹಾಕಿದ್ದಾರಲ್ಲ ಅವರು ನಮ್ಮ ಯಜಮಾನರ ಚಿಕ್ಕಪ್ಪ. ಅವರನ್ನು ಕಂಡರೆ ಆಗುತ್ತಿರಲಿಲ್ಲ. ನಮ್ಮ ಯಜಮಾನರು ಆತನನ್ನು ದೂರವಿಟ್ಟಿದ್ದರು. ಆದರೆ, ಕೊನೆಯ ದಿನಗಳಲ್ಲಿ ಮತ್ತೆ ಒಂದಾಗುತ್ತಾರೆ. ನಮ್ಮ ಮನೆಯವರಿಗೆ ಚಿಕ್ಕಪ್ಪ ಅಂದರೆ, ನನಗೆ ಮಾವ ಆಗಬೇಕು. ಮಗುಗೆ ಹುಷಾರಿರಲಿಲ್ಲ. ಅಡ್ಮಿಟ್ ಮಾಡಿದ್ದೆವು. ಅದಕ್ಕೆ ಫೋನ್ ಮಾಡಿದ್ದೆ. ಅದು ತಪ್ಪಾ? ಸಿನಿಮಾದ ಒತ್ತಡದಿಂದ ಹಾಗೆಲ್ಲ ಮಾತಾಡಿದ್ದರು. ಅದಕ್ಕೆ ನಾನು ನೋಡಿ ದೀಕ್ಷಿತರೇ. ನೀವೆ ಸ್ವಲ್ಪ ಹೇಳಿ ಅಂತ ಪರ್ಸನಲ್ ಆಗಿ ರಿಕ್ವೆಸ್ಟ್ ಮಾಡಿಕೊಂಡು ಈ ಆಡಿಯೋವನ್ನು ಕಳುಹಿಸಿದ್ದೆ." ಎಂದು ಗುರುಪ್ರಸಾದ್ ಪತ್ನಿ ಸುಮಿತ್ರಾ ಮಾಧ್ಯಮಗಳಿಗೆ ಹೇಳಿದ್ದಾರೆ.
ಇದೇ ವೇಳೆ ಪತಿ ಗುರುಪ್ರಸಾದ್ ಬಳಿಕ ಹಣಕ್ಕೆ ಬೇಡಿಕೆ ಇಟ್ಟಿರಲಿಲ್ಲ. ಆ ಆಡಿಯೋದಲ್ಲಿ ಎಲ್ಲಾದರೂ ಹಣವನ್ನು ಕೇಳಿದ್ದು ಇದೆಯೇ ಎಂದು ಪ್ರಶ್ನೆ ಮಾಡಿದ್ದಾರೆ. "ನಾನು ಆ ಆಡಿಯೋದಲ್ಲಿ ದುಡ್ಡನ್ನೂ ಕೇಳಿಲ್ಲ. ನನ್ನ ಅವರ ನಡುವಿನ ಎಲ್ಲಾ ಮೆಸೇಜ್ಗಳನ್ನು ತೆಗೆದು ನೋಡಲಿ. ನಾನು ಪೋನ್ ಮಾಡಿದ್ದು, ಮಗು ನಿಮ್ಮನ್ನು ನೆನಪಿಸಿಕೊಂಡು ಕೊರಗುತ್ತಿದೆ. ಅವಳನ್ನು ನೋಡಿ ಅಂತ ಹೇಳಿದ್ದು ತಪ್ಪಾ?" ಎಂದಿದ್ದಾರೆ.

"ಯಾರೇ ಆದರೂ ತನ್ನ ಕೆಲಸ ಸರಿ ಹೋಗುತ್ತಿಲ್ಲ. ಹಣ ಕಾಸು ಸರಿ ಹೋಗುತ್ತಿಲ್ಲ ಅಂದಾಗ ಹೆಂಡತಿಯ ಮೇಲೆ ರೇಗಾಡುವುದನ್ನು ಸಾಮಾನ್ಯ. ಕಂಡವರ ಹೆಂಡ್ತಿಯ ಮೇಲೆ ರೇಗಾಡುವುದಕ್ಕೆ ಆಗುತ್ತಾ? ಬೇರೆಯವರ ಹೆಂಡತಿ ಮೇಲೆ ರೇಗಾಡಿದರೆ ಸುಮ್ಮನಿರುತ್ತಾರಾ? ಅವರು ಯಾವುದೇ ರೀತಿಯ ಸಾಲಗಳನ್ನು ಮಾಡಿರಲಿಲ್ಲ. ಅವರ ಜೀವನಕ್ಕೆ ಆಗುವಷ್ಟು ಇತ್ತು. ಅವರ ಜೀವನಕ್ಕೆ ಏನು ಬೇಕೋ ಅದನ್ನು ಅದ್ಭುತವಾಗಿ ದುಡಿದುಕೊಳ್ಳುವ ವ್ಯಕ್ತಿ." ಗಂಡ ಹೆಂಡತಿ ನಡುವೆ ಇಂತಹ ಮಾತುಕತೆ ಆಗುತ್ತಲೇ ಇರುತ್ತೆ. ಇದು ಎಲ್ಲರ ಮನೆಯಲ್ಲಿ ಇರುತ್ತೆ. ಸುಮ್ಮನೆ ಇಂತಹ ಆಡಿಯೋವನ್ನು ಬಿಟ್ಟು ದಾರಿ ತಪ್ಪಿಸುತ್ತಿದ್ದಾರೆ ಎಂದು ಗುರುಪ್ರಸಾದ್ ಅವರ ಪತ್ನಿ ಸುಮಿತ್ರಾ ಮಾಧ್ಯಮಗಳ ಬಳಿ ಹೇಳಿಕೊಂಡಿದ್ದಾರೆ.
ಗುರು ಪ್ರಸಾದ್ ಈ ಸಿನಿಮಾವನ್ನು ಅವರದ್ದೇ ಗುರುಪ್ರಸಾದ್ ಇಂಕ್ ಅನ್ನುವ ನಿರ್ಮಾಣ ಸಂಸ್ಥೆಯ ಮೂಲಕ ರಿಲೀಸ್ ಮಾಡಬೇಕು ಅಂತ ಬಯಸಿದ್ದರು. ಆದರೆ, ಅವರ ನಿಧನದ ಬಳಿಕ ಸಿನಿಮಾ ಫುಟೇಜ್ ಅನ್ನು ಕೊಡುವಂತೆ ಬೆನ್ನುಬಿದ್ದರು. ಆಡಿಯೋ ರಿಲೀಸ್ ವೇಳೆ ನಿರ್ಮಾಣ ಸಂಸ್ಥೆಯ ಹೆಸರು ಬದಲಾಗಿತ್ತು. ಅದನ್ನು ನೋಡಿ ಸುಮಿತ್ರಾ ಅವರಿಗೆ ಶಾಕ್ ಆಗಿದೆ. ತಮ್ಮ ಹೆಸರಿಗೆ ಪೋರ್ಜರಿ ಮಾಡಿಕೊಂಡಿದ್ದೀರ. ಬನ್ನಿ ಕೂತು ಮಾತಾಡೋಣ ಅಂದಾಗ ಅವರು ಸ್ಪಂದಿಸುವುದಿಲ್ಲ. ಹಾಗಾಗಿ ನ್ಯಾಯಾಲಯಕ್ಕೆ ಹೋಗಲೇಬೇಕಾಯ್ತು ಎಂದು ಹೇಳಿದ್ದಾರೆ.


Click it and Unblock the Notifications











