" ರಾಜಮಾರ್ತಾಂಡ ಚಿರು ಕೊನೆಯ ಸಿನಿಮಾ ಅಲ್ಲ": ಪತಿ ಸಿನಿಮಾ ನೆನೆದು ಭಾವುಕರಾದ ಮೇಘನಾ ರಾಜ್
ಚಿರಂಜೀವಿ ಸರ್ಜಾ ಇದ್ದಿದ್ದರೆ 'ರಾಜಮಾರ್ತಾಂಡ' ಸಿನಿಮಾ ಇಷ್ಟರೊಳಗೆ ರಿಲೀಸ್ ಆಗಿರುತ್ತಿತ್ತೋ ಏನೋ.. 2017ರಲ್ಲಿ ಆರಂಭಗೊಂಡಿದ್ದ ಈ ಸಿನಿಮಾ 2023ಕ್ಕೆ ರಿಲೀಸ್ ಆಗುತ್ತಿದೆ. ನೂರೆಂಟು ಅಡೆ ತಡೆಗಳನ್ನು ಎದುರಿಸಿ ಈ ಸಿನಿಮಾ ರಿಲೀಸ್ಗೆ ರೆಡಿಯಾಗಿದೆ. ಇದೇ ಅಕ್ಟೋಬರ್ 6 ರಂದು ಸಿನಿಮಾ ರಿಲೀಸ್ ಆಗುತ್ತಿದೆ.
ಚಿರಂಜೀವಿ ಸರ್ಜಾ ನಟನೆಯ ಕೊನೆಯ ಸಿನಿಮಾ 'ರಾಜಮಾರ್ತಾಂಡ' ಪ್ರಿ-ರಿಲೀಸ್ ಕಾರ್ಯಕ್ರಮವನ್ನು ಕಮ್ಮಿಕೊಳ್ಳಲಾಗಿತ್ತು. ಈ ವೇಳೆ ಚಿರು ಸಿನಿಮಾ ಬಗ್ಗೆ ಪತ್ನಿ ಮೇಘನಾ ರಾಜ್, ಮಾವ ಸುಂದರ್ ರಾಜ್ ಹಾಗೂ ತಮ್ಮ ಧ್ರುವ ಸರ್ಜಾ ಭಾವುಕರಾಗಿ ಮಾತಾಡಿದ್ದಾರೆ.

'ರಾಜಮಾರ್ತಾಂಡ' ಸಿನಿಮಾ ಚಿರಂಜೀವಿ ಸರ್ಜಾ ನಟನೆಯ ಕೊನೆಯ ಸಿನಿಮಾ ಅಲ್ಲ ಅಂತ ಮೇಘನಾ ರಾಜ್ ಹಾಗೂ ಸುಂದರ್ ರಾಜ್ ಭಾವುಕರಾಗಿ ಹೇಳಿದ್ದಾರೆ. ಅದ್ಯಾಕೆ ಹೀಗಂದ್ರು ಅಂತ ತಿಳಿಯುವುದಕ್ಕೆ ಮುಂದೆ ಓದಿ.
"ಚಿರುಗೋಸ್ಕರ ಈ ಸಿನಿಮಾ ನೋಡಬೇಕು"
"ರಾಜಮಾರ್ತಾಂಡ ಚಿತ್ರತಂಡಕ್ಕೆ ನನ್ನ ವಿಶ್ ಅನ್ನು ಹೇಳುವುದಕ್ಕೆ ಇಷ್ಟ ಪಡುತ್ತೇನೆ. ನಮಗೆ ಚಿರು ಈ ಸಿನಿಮಾದಲ್ಲಿ ಮಾಡಿರುವುದರಿಂದ ನಮಗೆ ಒಂದು ಒಲವಿದೆ. ಯಾಕಂದ್ರೆ, ಚಿರು ನಮ್ಮ ಫ್ಯಾಮಿಲಿ. ಆದರೆ, ರಾಮ್ ನಾರಾಯಣ್ ಸರ್ ಹಾಗೂ ಶಿವು ಸರ್ ಆಗಿರಬಹುದು ಅವರು ಸತತವಾಗಿ 2017ಯಿಂದ ಇವತ್ತಿನವರೆಗೂ ಈ ಸಿನಿಮಾದ ಮೇಲೆ, ಚಿರು ಮೇಲೆ ಅದೆಷ್ಟು ಅಭಿಮಾನ ಇಟ್ಟಿದ್ದಾರೆ ಅಂದರೆ, ಏನೇ ಆಗಲಿ ಈ ಸಿನಿಮಾವನ್ನು ದೊಡ್ಡ ಮಟ್ಟಕ್ಕೆ ರಿಲೀಸ್ ಮಾಡಲೇಬೇಕು ಅಂತಾನೇ ಇದ್ದರು. ಅದೇ ರೀತಿ ಮಾಡುತ್ತಿದ್ದಾರೆ. ಸ್ವಲ್ಪ ತಡವಾದರೂ ಪರ್ವಾಗಿಲ್ಲ. ಜನರು ಈ ಸಿನಿಮಾವನ್ನು ಚಿರುಗೋಸ್ಕರ ನೋಡಲೇಬೇಕು ಅನ್ನೋ ಒಳ್ಳೆಯ ಹಠದಲ್ಲಿ ಇದ್ದರು." ಎಂದು ಮೇಘನಾ ರಾಜ್ ಹೇಳಿದ್ದಾರೆ.
"ಇದು ಚಿರು ಕೊನೆಯ ಸಿನಿಮಾ ಅಲ್ಲ"
"ಇದನ್ನು ಕೊನೆಯ ಚಿತ್ರ ಅಂತ ನಾವ್ಯಾರು ಫ್ಯಾಮಿಲಿಯಲ್ಲಿ ಅನಿಸುತ್ತಿಲ್ಲ. ಅವರ ಮೊದಲನೇ ಚಿತ್ರ ಅಂತಾನೇ ನಾವು ಭಾವಿಸುತ್ತಿರೋದು. ಇದನ್ನು ಅವರ ಮೊದಲ ಸಿನಿಮಾ ಅಂತಾನೇ ನೋಡೋಣ. ಯಾಕಂದ್ರೆ, ಇದು ಹೊಸ ಅಧ್ಯಾಯ ಆಗಿರಲಿ ಅಂತಾನೇ ನಾವು ಭಾವಿಸುತ್ತೇವೆ. ಸಿನಿಮಾ ತಂಡಕ್ಕೆ. ಅದರಲ್ಲಿ ಆಕ್ಟ್ ಮಾಡಿರೋ ಎಲ್ಲರಿಗೂ ಒಳ್ಳೆಯದಾಗಲಿ." ಎಂದು ಮೇಘನಾ ಅಭಿಪ್ರಾಯ ಪಟ್ಟಿದ್ದಾರೆ.
"ಡೈಲಾಗ್ ಪ್ರಾಕ್ಟೀಸ್ ಮಾಡಿ ಶೂಟಿಂಗ್ ಹೋಗ್ತಿದ್ರು"
"ಇದು ಚಿರು ಅವರ ಕನಸಿನ ಸಿನಿಮಾ ಆಗಿತ್ತು. ಈ ಸಿನಿಮಾ ಬಗ್ಗೆ ಅವರಿಗೆ ಪಾಸಿಟಿವ್ ವೈಬ್ ಇತ್ತು. ಪ್ರತಿದಿನ ಶೂಟಿಂಗ್ ಮುಗಿಸಿ ಮನೆಗೆ ಬಂದಾಗ ಹೇಳೋರು. ಇವತ್ತು ಈ ರೀತಿ ಡೈಲಾಗ್ ಇತ್ತು. ಆ ರೀತಿ ಡೈಲಾಗ್ ಇತ್ತು. ಸಾಮಾನ್ಯವಾಗಿ ನಾವು ಸಿನಿಮಾದಲ್ಲಿ ಮಾತಾಡೋ ರೀತಿ ಇರಲಿಲ್ಲ. ಯಾವ ಸಿನಿಮಾಗೂ ಹೀಗೆ ಡೈಲಾಗ್ ಕಲಿತು ಪ್ರಿಪೇರ್ ಹೋಗುತ್ತಿದ್ದದ್ದೂ ನೋಡಿರಲಿಲ್ಲ. ಧ್ರುವ ಡೈಲಾಗ್ ಪ್ರಾಕ್ಟೀಸ್ ಮಾಡಿ ಶೂಟಿಂಗ್ಗೆ ಹೋಗಿದ್ದು ನೋಡಿದ್ದೇವೆ. ಆದರೆ, ಚಿರು ಆ ರೀತಿ ಮಾಡಿದ ಮೊದಲ ಸಿನಿಮಾವಿದು." ಎಂದು ಮೇಘನಾ ರಾಜ್ ಹೇಳಿದ್ದಾರೆ.
"ರಾಜಮಾರ್ತಾಂಡ ಕಡೆಯ ಸಿನಿಮಾ ಅಂತ ಕರೀಬೇಡಿ"
"ರಾಜ ಮಾರ್ತಾಂಡನಾ ಕಡೇ ಸಿನಿಮಾ ಅಂತ ಕರೀಬೇಡಿ. ಇದು ಚಿರಂಜೀವಿ ಕೊಟ್ಟ ಕೊಡುಗೆಗೆ ಥ್ಯಾಂಕ್ಸ್ ಹೇಳುವ ಸಿನಿಮಾ ಅಂತ ಹೇಳಿ. ಈ ಸಿನಿಮಾ ಯಶಸ್ಸನ್ನು ಕೊಡಬೇಕಾಗಿರೋ ಕನ್ನಡ ಚಿತ್ರರಂಗದ ಪ್ರತಿಯೊಬ್ಬ ಕಲಾವಿದನಿಂದ ಹಿಡಿದು, ತಂತ್ರಜ್ಞರಿಂದ ಹಿಡಿದು, ನಿರ್ಮಾಪಕರಿಂದ ಹಿಡಿದು, ನಿರ್ದೇಶಕರಿಂದ ಹಿಡಿದು ಒಂದು ಗೌರವವನ್ನು ಕೊಡಬೇಕು." ಎಂದು ಸುಂದರ್ ರಾಜ್ ಅಭಿಪ್ರಾಯ ಪಟ್ಟಿದ್ದಾರೆ.


Click it and Unblock the Notifications











