"ಮಿ. ತಮಿಳ್ ಹಾಸನ್.. ಕ್ಷಮೆ ಕೇಳಿದರೆ ಕ್ಷಮಾ ಹಾಸನ್ ಆಗ್ತೀರಾ? ಇಲ್ಲದಿದ್ದೆ ಆ ಹಾಸನ್ ಆಗ್ತೀರ"; ಹಂಸಲೇಖ ಬುದ್ದಿಮಾತು!
ಕಮಲ್ ಹಾಸನ್ ಕನ್ನಡದ ಬಗೆಗಿನ ವಿವಾದಾತ್ಮಕ ಹೇಳಿಕೆಗೆ ದಿನದಿಂದ ದಿನಕ್ಕೆ ಕರ್ನಾಟಕದಲ್ಲಿ ಆಕ್ರೋಶ ಹೆಚ್ಚಾಗಿದೆ. ಕನ್ನಡ ಚಿತ್ರರಂಗದ ಗಣ್ಯರು ಕಮಲ್ ಹಾಸನ್ ಆಡಿದ ಮಾತಿಗೆ ಕೆಂಡಕಾರಿದ್ದಾರೆ. ಬೇಡದೇ ಇರುವ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಕ್ಕೆ ಉಗಿದು ಉಪ್ಪಿನಕಾಯಿ ಹಾಕುತ್ತಿದ್ದಾರೆ. ಕರ್ನಾಟಕದಲ್ಲಿ ಕನ್ನಡಿಗರು ಕಮಲ್ ಹಾಸನ್ ಮೇಲೆ ಇಟ್ಟಿದ್ದ ಗೌರವವನ್ನು ಅವರೇ ಕಳೆದುಕೊಂಡಿದ್ದಾರೆ.
ತಮಿಳಿನಿಂದ ಕನ್ನಡ ಹುಟ್ಟಿದ್ದು ಎನ್ನುವ ವಿವಾದಾತ್ಮಕ ಹೇಳಿಕೆಯನ್ನು ಕೊಡುವ ಅಗತ್ಯವಿತ್ತೇ? ಎಂದು ಗಣ್ಯರು ಪ್ರಶ್ನೆ ಮಾಡುತ್ತಿದ್ದಾರೆ. ಈಗಾಗಲೇ ನಾಗತ್ತಿಹಳ್ಳಿ ಚಂದ್ರಶೇಖರ್, ನಾಗಾಭರಣ, ಮುಖ್ಯ ಮಂತ್ರಿ ಚಂದ್ರು ಅಂತ ಕನ್ನಡದ ದಿಗ್ಗಜರು ಕಮಲ್ ಹಾಸನ್ ಕನ್ನಡ ಹೇಳಿಕೆಯನ್ನು ವಿರೋಧಿಸಿದ್ದಾರೆ. ಈಗ ಅವರ ಸಾಲಿಗೆ ನಾದ ಬ್ರಹ್ಮ ಹಂಸಲೇಖ ಕೂಡ ಸೇರಿಕೊಂಡಿದ್ದಾರೆ.

ಕಮಲ್ ಹಾಸನ್ಗೆ ತಮಿಳ್ ಹಾಸನ್ ಅಂತ ಕರೆದಿರುವ ಹಂಸಲೇಖ ಕೆಲವು ಬುದ್ದಿಮಾತುಗಳನ್ನು ಹೇಳಿದ್ದಾರೆ. ಅಲ್ಲದೆ ತಮಿಳಿಗೆ ಲಿಪಿಯನ್ನು ಕೊಟ್ಟಿದ್ದು ಕನ್ನಡ ಎಂದು ವಿದ್ವಾಂಸರು ಹೇಳಿದ ಮಾತುಗಳನ್ನು ಹೇಳಿ ತಿರುಗೇಟು ಕೊಟ್ಟಿದ್ದಾರೆ. ತಮಿಳುನಾಡು ಸಿಎಂ ಸ್ಟಾಲಿನ್ ಆಸೆಗಳನ್ನು ಮೆಲುಕು ಹಾಕಿದ್ದಾರೆ. ಕನ್ನಡಿಗರ ಸಾಂಸ್ಕೃತಿ ರಾಯಬಾರಿ ಬಸವಣ್ಣ ಎಂದು ಹೇಳುವ ಮೂಲಕ ಹಂಸಲೇಖ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ವಿಡಿಯೋವನ್ನು ಪೋಸ್ಟ್ ಮಾಡಿದ್ದು, ಅದರ ಝಲಕ್ ಇಲ್ಲಿದೆ.
ಮಿಸ್ಟರ್ ತಮಿಳ್ ಹಾಸನ್
ಹಂಸಲೇಖ ವಿಡಿಯೋವನ್ನು ಕಮಲ್ ಹಾಸನ್ ನಟಿಸಿದ 'ಬೆಂಕಿಯಲ್ಲಿ ಅರಳಿದ ಹೂವು' ಸಿನಿಮಾದ "ಮುಂದೆ ಬನ್ನಿ.." ಹಾಡನ್ನು ಹಾರ್ಮೋನಿಯಂನಲ್ಲಿ ನುಡಿಸುವ ಮೂಲಕ ಶುರು ಮಾಡಿದ್ದಾರೆ. ಆರಂಭದಲ್ಲಿಯೇ ಕಮಲ್ ಹಾಸನ್ಗೆ ಮಿಸ್ಟರ್ ತಮಿಳ್ ಹಾಸನ್ ಎಂದು ಹೇಳುವ ಮೂಲಕ ನಟನ ವಿವಾದಾತ್ಮಕ ಹೇಳಿಕೆಯನ್ನು ಖಂಡಿಸಿದ್ದಾರೆ.
"ಮಿಸ್ಟರ್ ತಮಿಳ್ ಹಾಸನ್ ನಮಸ್ಕಾರ. ನೀವು ಮಿಸ್ಟರ್ ತಮಿಳ್ ಹಾಸನ್ ಅಂತ ಹೆಸರು ಬದಲಾಯಿಸಿಕೊಳ್ಳಿ ಅಂತ ಹೇಳಿ ಸರ್ ಅಂತ ನನ್ನ ಸಂಗೀತ ಶಾಲೆಯ ವಿದ್ಯಾರ್ಥಿಗಳು ಮನವಿ ಮಾಡಿಕೊಂಡಿದ್ದಾರೆ. ಮಿಸ್ಟರ್ ತಮಿಳ್ ಹಾಸನ್ ನೋಡಿ ಮಾತು ಮನೆ ಕೆಡಿಸಿತು. ತೂತು ಒಲೆ ಕೆಡಿಸಿತು ಎನ್ನುವ ಒಂದು ಗಾದೆಯಿದೆ. ಮಾತು ಎಷ್ಟು ತೊಂದರೆ ಕೊಡುತ್ತೆ ನೋಡಿ. ಚೆನ್ನೈನ ಸಿಎಂ ಸ್ಟ್ಯಾಲಿನ್ ಅವರು ಇಡೀ ದಕ್ಷಿಣ ಭಾರತವನ್ನು ಒಂದುಗೂಡಿಸಬೇಕು ಎನ್ನುವ ಆಸೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಕನಸು ಕಟ್ಟುತ್ತಿದ್ದಾರೆ. ತೆಂಕಣವನ್ನು ಕಟ್ಟಬೇಕು ಅನ್ನೋದು ಅವರ ಕನಸು. ಅವರ ಕನಸಿಗೆ ನಿಮ್ಮ ಮಾತು ಸಹಾಯ ಮಾಡಬೇಕು. ನೀವು ಆ ಪಕ್ಷದ ಮಿತ್ರ ಪಕ್ಷ. ನೀವು ಒಳ್ಳೆಯ ಮಾತು ಆಡಬೇಕು. ಯೋಚಿಸಿ ಮಾತಾಡಬೇಕು." ಎಂದು ಹಂಸಲೇಖ ಹೇಳಿದ್ದಾರೆ.
ನಾವು ವಚನಗಳಿಗೆ ಯಜಮಾನರು
ಇದೇ ವಿಡಿಯೋದಲ್ಲಿ "ನಾವು ಕನ್ನಡಿಗರು. ಕನ್ನಡಿಗರು ಭಾಷಾ ಪ್ರಿಯರು. ಭಾಷಾಂಧತೆ ನಮಗೆ ಇಲ್ಲ. ನಮ್ಮ ಕನ್ನಡ ದೇಶದ ಸಾಂಸ್ಕೃತಿಕ ರಾಯಬಾರಿ ಬಸವಣ್ಣ. ಬಸವಣ್ಣ ನಮಗೆ ಕೊಟ್ಟಿದ್ದು ವಚನಗಳು. ನಾವು ವಚನಗಳಿಗೆ ಯಜಮಾನರು. ವಚನಗಳು ಎಂದರೆ ಮಾತು ಸ್ವಾಮಿ. ಮಾತುಗಳನ್ನು ಎಚ್ಚರಿಕೆಯಿಂದ ಆಡಬೇಕು." ಎಂದು ಹಂಸಲೇಖ ಎಚ್ಚರಿಕೆಯನ್ನು ಕೊಟ್ಟಿದ್ದಾರೆ.

ತಮಿಳಿಗೆ ಲಿಪಿಕೊಟ್ಟಿದ್ದು ಕನ್ನಡ
"ತಮಿಳಿಗೆ ಲಿಪಿಯನ್ನು ಕೊಟ್ಟಿದ್ದು ಕನ್ನಡ ಭಾಷೆ ಎಂದು ವಿದ್ವಾಂಸರು ಹೇಳುತ್ತಾರೆ. ಅದರ ಬಗ್ಗೆ ಸ್ವಲ್ಪ ವಿಚಾರಿಸಿ ನೋಡಿ. ನಾವು ಕಲಾವಿದರು. ತೆಂಕಣವನ್ನು ಕಟ್ಟುವ ಕನಸನ್ನು ಹೊತ್ತ ಕಲಾವಿದರು. ಎಲ್ಲರೂ ಒಟ್ಟಾಗಿ ಬದುಕಬೇಕು ಎಂದು ಆಸೆ ಪಡುವ ಭಾರತೀಯರು. ಆದ್ದರಿಂದ ದಯವಿಟ್ಟು ನೀವು ಕ್ಷಮೆ ಕೇಳಿ. ಏನೂ ತಪ್ಪಿಲ್ಲ. ನೀವು ಕ್ಷಮೆ ಕೇಳಿದರೆ ಕ್ಷಮಾ ಹಾಸನ್ ಆಗುತ್ತೀರಿ. ಇಲ್ಲದಿದ್ದರೆ ಆ ಹಾಸನ್ ಆಗುತ್ತೀರಿ. ಆ ಹಾಸನ್ನಲ್ಲಿ ಮತಾಂಧತೆ, ಭಾಷಾಂಧತೆ ಎನ್ನುವ ಕೊಳೆತ ಕೊಳಕು ಬೀಜಗಳಿರುವ ಅನುಮಾನವಿದೆ." ಎಂದು ಬುದ್ದಿಮಾತನ್ನು ಹೇಳಿದ್ದಾರೆ.


Click it and Unblock the Notifications











