ನಷ್ಟದಲ್ಲಿ ಕೋಟಿ ರಾಮು: ಚಿತ್ರ ನಿರ್ಮಾಣ ಬಂದ್
ಕರ್ನಾಟಕದಲ್ಲಿ ಹಲವಾರು ಚಿತ್ರಮಂದಿರಗಳು ಬಾಗಿಲು ಮುಚ್ಚುತ್ತಿವೆ. ಕನ್ನಡದ ಚಿತ್ರಗಳಿಗೆ ಥಿಯೇಟರ್ ಗಳು ಸಿಗುತ್ತಿಲ್ಲ, ಪರಭಾಷಾ ಚಿತ್ರಗಳ ಹಾವಳಿ ವಿಪರೀತವಾಗಿದೆ. ಹಲವಾರು ನಿರ್ಮಾಪಕರು ನಷ್ಟ ಅನುಭವಿಸುತ್ತಿದ್ದಾರೆ ಎಂದು ರಾಜೇಂದ್ರ ಸಿಂಗ್ ಬಾಬು ಹೇಳಿದ್ದಾರೆ.
ಅದ್ದೂರಿ ಚಿತ್ರ ನಿರ್ಮಾಣಕ್ಕೆ ಹೆಸರಾದ ನಿರ್ಮಾಪಕ ರಾಮು ಕೂಡಾ ತುಂಬಾ ನಷ್ಟ ಅನುಭವಿಸುತ್ತಿದ್ದಾರೆ. ಇದೇ ರೀತಿ ಪರಿಸ್ಥಿತಿ ಮುಂದುವರಿದರೆ ಚಿತ್ರ ನಿರ್ಮಾಣ ಇನ್ನೆರಡು ತಿಂಗಳಲ್ಲಿ ನಿಲ್ಲಿಸಲಿದ್ದೇನೆಂದು ರಾಮು ಅವರೇ ನನಗೆ ತಿಳಿಸಿದ್ದಾರೆಂದು ಬಾಬು ಕಾರ್ಯಕ್ರಮದಲ್ಲಿ ನೋವಿನ ಮಾತನ್ನಾಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಸ್ಯಾಂಡಲ್ ವುಡ್ ನಲ್ಲಿ ಕಥೆ ಕದಿಯುವುದು ಹೆಚ್ಚಾಗಿದೆ ಎನ್ನುವ ಮಾತನ್ನು ಒಪ್ಪಿಕೊಂಡ ಬಾಬು, ಇದಕ್ಕೆ ಸದ್ಯದಲ್ಲೇ ಸೂಕ್ತ ಗೈಡ್ ಲೈನ್ ತರುತ್ತೇವೆ. ನಮಗೆ ಮೊದಲು ಉದ್ಯಮ ಮುಖ್ಯ ಎಂದು ಕಾರ್ಯಕ್ರಮದ ಮೂಲಕ ಬಾಬು ಭರವಸೆ ನೀಡಿದ್ದಾರೆ.

ರಿಮೇಕ್ ಚಿತ್ರಗಳು ಹೆಚ್ಚುತ್ತಿರುವುದರಿಂದ ಚಿತ್ರ ನೋಡಲು ಕನ್ನಡದ ಪ್ರೇಕ್ಷಕರು ಬರುತ್ತಿರುವುದು ಕಮ್ಮಿಯಾಗಿರುವುದಕ್ಕೆ ಒಂದು ಕಾರಣ. ನಾನು ಎಷ್ಟೋ ಸಿನಿಮಾವನ್ನು ನಿರ್ಮಿಸಿದ್ದೇನೆ. ಕಥೆಗೆ ನಾವು ಪ್ರಾಮುಖ್ಯತೆ ಕೊಡುತ್ತಿದ್ದೆವು, ಆದರೆ ಈಗ ಹಾಗಲ್ಲ ಎಂದು ಬಾಬು ಬೇಸರ ವ್ಯಕ್ತ ಪಡಿಸಿದ್ದಾರೆ.
ನಮ್ಮ ಕುಟುಂಬದವರಿಗೆ ಚಿತ್ರರಂಗದಲ್ಲಿ ಸೂಕ್ತ ಸ್ಥಾನಮಾನ ಸಿಗುತ್ತಿಲ್ಲ ಎನ್ನುವ ಮಾತನ್ನು ಒಪ್ಪದ ಬಾಬು, ಎಲ್ಲದಕ್ಕೂ ಕಾಲ ಕೂಡಿ ಬರಬೇಕು. ಆದಿತ್ಯ ಇಂದಲ್ಲಾ, ನಾಳೆ ಚಿತ್ರರಂಗದಲ್ಲಿ ಭದ್ರವಾಗಿ ತಳವೂರುತ್ತಾನೆ.
ಇನ್ನು ಖುಷಿಕಾಗೆ ಚಿತ್ರ ನಿರ್ದೇಶನ ಮಾಡಲು ಮುಂದಾಗುವುಂತೆ ಸಲಹೆ ನೀಡಿದ್ದೇನೆ. ಆಯ್ಕೆ ಅವರಿಗೆ ಬಿಟ್ಟಿದ್ದು ಎಂದು ಕನ್ನಡ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರಾಗಿ ನೂತನವಾಗಿ ರಾಜೇಂದ್ರ ಸಿಂಗ್ ಬಾಬು 'ಸ್ಟ್ರೇಟ್ ಹಿಟ್' ಕಾರ್ಯಕ್ರಮದಲ್ಲಿ ಹೇಳಿದ್ದಾರೆ.


Click it and Unblock the Notifications











