ತೆಲುಗು ರಾಜ್ಯಗಳಲ್ಲಿ 'ಕಾಂತಾರ' ಗೆಲ್ತು.. ಹಾಸ್ಟೆಲ್ ಹುಡುಗರು ಸೋಲ್ತು: ರಕ್ಷಿತ್ ಶೆಟ್ಟಿ ಸಪ್ತ ಸಾಗರದ ಕಥೆಯೇನು?
ಸಿಂಪಲ್ಸ್ಟಾರ್ ರಕ್ಷಿತ್ ಶೆಟ್ಟಿ 'ಸಪ್ತ ಸಾಗರದಾಚೆ ಎಲ್ಲೋ' ತೆಲುಗು ಡಬ್ ವರ್ಷನ್ ಅನ್ನು ರಿಲೀಸ್ ಮಾಡಿದ್ದಾರೆ. ಇಂದು (ಸೆಪ್ಟೆಂಬರ್ 22) 'ಸಪ್ತ ಸಾಗರಾಲು ದಾಟಿ' ಸಿನಿಮಾ ತೆಲುಗು ರಾಜ್ಯಗಳಲ್ಲಿ ರಿಲೀಸ್ ಆಗಿದೆ. ಇತ್ತೀಚೆಗೆ ಕನ್ನಡದ ಸಿನಿಮಾ ತೆಲುಗಿಗೆ ಹೆಚ್ಚಾಗಿ ಡಬ್ ಆಗಿ ರಿಲೀಸ್ ಆಗುತ್ತಿದೆ. ಅಲ್ಲಿ ಕೆಲವು ಸಿನಿಮಾಗಳಿಗೆ ಗೆಲುವು ಸಿಕ್ಕಿದರೆ, ಮತ್ತೆ ಕೆಲವು ಸಿನಿಮಾಗಳು ಸೋಲುಂಡಿವೆ.
ಈಗ 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾವನ್ನೂ ತೆಲುಗಿಗೆ ಡಬ್ ಮಾಡಿ ರಿಲೀಸ್ ಮಾಡಲಾಗಿದೆ. ಇದು ತೆಲುಗು ರಾಜ್ಯಗಳಲ್ಲಿ ಗೆಲ್ಲುತ್ತಾ? ಅನ್ನೋ ಪ್ರಶ್ನೆ ಎದ್ದಿದೆ. ರಕ್ಷಿತ್ ಶೆಟ್ಟಿಗೆ ಸಂದರ್ಶನವೊಂದರಲ್ಲಿ ಇದೇ ಸವಾಲು ಎದುರಾಗಿತ್ತು. 'ಕಾಂತಾರ' ಸಿನಿಮಾ ಸೂಪರ್ ಸಕ್ಸಸ್ ಆಗಿದೆ. ಆಗ ರಿಷಬ್ ಶೆಟ್ಟಿ ಕೂಡ ತೆಲುಗು ಮಂದಿಗೆ ಹೊಸಬರೇ ಆಗಿದ್ದರು. ಹಾಗೇ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ತೆಲುಗು ವರ್ಷನ್ (ಹಾಸ್ಟೆಲ್ ಬಾಯ್ಸ್) ಸೋತಿದೆ. ಎರಡು ವಿಭಿನ್ನ ಫಲಿತಾಂಶ ಯಾಕೆ ಬಂದಿರಬಹುದು ಎಂದು ಪ್ರಶ್ನೆ ಮಾಡಿದ್ದರು.

ಕರ್ನಾಟಕದಲ್ಲಿ ಎರಡೂ ಸಿನಿಮಾಗಳೂ ಹಿಟ್ ಆಗಿದ್ದವು. ಆದರೆ, ತೆಲುಗು ರಾಜ್ಯಗಳಲ್ಲಿ ಸೋತಿದ್ಯಾಕೆ? 'ಸಪ್ತ ಸಾಗರದಾಚೆ ಎಲ್ಲೋ' (ಸಪ್ತ ಸಾಗರಾಲು ದಾಟಿ) ಯಾವ ಲೆಕ್ಕಚಾರದ ಮೇಲೆ ರಕ್ಷಿತ್ ಶೆಟ್ಟಿ ರಿಲೀಸ್ ಮಾಡುತ್ತಿದ್ದಾರೆ? ಈ ಪ್ರಶ್ನೆಗೆ ರಕ್ಷಿತ್ ಶೆಟ್ಟಿ ಸಿಂಪಲ್ ಉತ್ತರ ಹೀಗಿದೆ.
ಹಾಸ್ಟೆಲ್ ಹುಡುಗರಿಗೆ ಪ್ರಚಾರದಲ್ಲಿ ಸೋಲು
ಕರ್ನಾಟಕದಲ್ಲಿ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾಗೆ ಅದ್ಭುತ ಪ್ರಚಾರ ಸಿಕ್ಕಿತ್ತು. ಇಡೀ ತಂಡ ಕ್ರಿಯೇಟಿವ್ ಆಗಿ ಪ್ರಚಾರ ಮಾಡಿ ಗಮನ ಸೆಳೆದಿತ್ತು. ಅದೇ ತೆಲುಗು ರಾಜ್ಯಗಳಲ್ಲಿ ಗೆಲ್ಲಲು ಸಾಧ್ಯವಾಗಿಲ್ಲ. ಇದ್ಯಾಕೆ ಅನ್ನೋದನ್ನು ರಕ್ಷಿತ್ ಹೀಗೆ ವಿವರಿಸಿದ್ದಾರೆ. "ನನಗೆ ಹಾಸ್ಟೆಲ್ ಹುಡುಗರು ಸಿನಿಮಾ ಪಕ್ಕಾ ಕನ್ನಡ ಸಿನಿಮಾ. ಹಾಸ್ಟೆಲ್ ಹುಡುಗರು ಸಿನಿಮಾದಲ್ಲಿ ನೀವೇನು ಎಂಜಾಯ್ ಮಾಡುತ್ತೀರಾ ಅದು ಕರ್ನಾಟಕದ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಕಥೆ. ನನಗೆ ಅವರ ಸಿನಿಮಾ ಛಾಯಾಗ್ರಹಣ ತುಂಬಾನೇ ಸುಂದರ ಅಂತ ಅನಿಸಿತ್ತು. ಈ ಸಿನಿಮಾ ಇನ್ನೊಂದು ರಾಜ್ಯಕ್ಕೆ ಯಾವುದೇ ಸ್ಟಾರ್ ವಾಲ್ಯೂ ಇಲ್ಲದೆ ಹೋದಾಗ, ಇಲ್ಲಿ ವಿಭಿನ್ನವಾಗಿ ಮಾರ್ಕೇಟಿಂಗ್ ಮಾಡಬೇಕಾಗುತ್ತೆ. ಯಾಕಂದ್ರೆ ಅವರ ಕರ್ನಾಟಕದಲ್ಲಿ ಮಾಡಿದ ಪ್ರಚಾರ ಅತ್ಯದ್ಭುತ." ಎಂದಿದ್ದಾರೆ ರಕ್ಷಿತ್ ಶೆಟ್ಟಿ.
"ಕ್ರಿಯೇಟಿವಿಗೆ ಸ್ಟಾರ್ಗಳೇ ಮುಂದೆ ಬಂದಿದ್ರು"
ಕರ್ನಾಟಕದಲ್ಲಿ ಹಾಸ್ಟೆಲ್ ಹುಡುಗರ ಬೆಂಬಲಕ್ಕೆ ಸ್ವತ: ರಕ್ಷಿತ್, ಪುನೀತ್ ರಾಜ್ಕುಮಾರ್, ಸುದೀಪ್, ರಮ್ಯಾ ಮುಂದೆ ಬಂದಿದ್ದರು. ಸಿನಿಮಾ ತಂಡ ಕೂಡ ವಿಭಿನ್ನವಾಗಿ ಪ್ರಚಾರ ಮಾಡುತ್ತಲೇ ಇತ್ತು. ಅದೂ ಒಂದು ಕಾರಣ ಅಂತಾರೆ ರಕ್ಷಿತ್. "ಅವರು ಅಂದಾಜು 10 ಟೀಸರ್ ಮಾಡಿದ್ದರು. ಪ್ರತಿ ತಿಂಗಳೂ ಅವರು ಟೀಸರ್ ರಿಲೀಸ್ ಮಾಡಿದ್ದರು. ಇದನ್ನು ಅವರು ಎರಡು ವರ್ಷಗಳ ಹಿಂದೇನೆ ಶುರು ಮಾಡಿದ್ದರು. ಅವರು ನನ್ನೊಂದಿಗೆ ಟೀಸರ್ ಮಾಡಿದ್ದರು. ಪುನೀತ್ ರಾಜ್ಕುಮಾರ್ ಸರ್ ಜೊತೆ ಮಾಡಿದ್ದರು. ಹಲವು ತಾರೆಯರೊಂದಿಗೆ ಟೀಸರ್ ಮಾಡಿದ್ದರು. ಅವರೆಷ್ಟು ಕ್ರಿಯೇಟಿವ್ ಆಗಿದ್ದರು ಅಂದರೆ, ಅವರ ಕೆಲಸ ನೋಡಿ ಸಹಾಯ ಮಾಡಲು ಮುಂದೆ ಬಂದಿದ್ದರು." ಅನ್ನೋ ರಕ್ಷಿತ್ ವಿಶ್ಲೇಷಣೆ.

ಆಂಧ್ರದಲ್ಲಿ ಬೇರೆ ತರದ ಪ್ರಚಾರ ಬೇಕಿತ್ತು
'ಹಾಸ್ಟೆಲ್ ಹುಡುಗರು' ತೆಲುಗಿನಲ್ಲಿ ರಿಲೀಸ್ ಮಾಡುವಾಗ ಬೇರೆ ತರಹದ್ದೇ ಪ್ರಚಾರ ಬೇಕಿತ್ತು ಎನ್ನುತ್ತಾರೆ ರಕ್ಷಿತ್. "ಕರ್ನಾಟಕದಲ್ಲೂ ಅವರು ಸ್ಟಾರ್ಗಳಲ್ಲ. ಎಲ್ಲರೂ ಹೊಸ ಪ್ರತಿಭೆಗಳೇ. ಆದರೆ, ಅವರ ಪ್ರಚಾರ ತಂತ್ರ ಕರ್ನಾಟಕದಲ್ಲಿ ಕೆಲಸ ಮಾಡಿತ್ತು. ಆದರೆ, ಆಂಧ್ರದಲ್ಲಿ ಕೆಲಸ ಮಾಡಲಿಲ್ಲ. ಜೊತೆಗೆ ಕರ್ನಾಟಕದಲ್ಲಿ ಜನರು ಪ್ರಿಪೇರ್ ಆಗಿದ್ದರು. ಇದು ಇಂತಹದ್ದೇ ಸಿನಿಮಾ ಅಂತ. ಆದರೆ, ಆಂಧ್ರದಲ್ಲಿ ಇದು ಕಾಲೇಜ್ ಸ್ಟೋರಿ ಅಂತ ಅಂದ್ಕೊಂಡ್ರು." ಅನ್ನೋ ರಕ್ಷಿತ್ ವಾದ.
'ಕಾಂತಾರ' ಗೆದ್ದಿದ್ದು ಯಾಕೆ?
ಹಾಸ್ಟೆಲ್ ಹುಡುಗರು ತೆಲುಗು ರಾಜ್ಯಗಳಲ್ಲಿ ಸೋತಿದ್ದ ಹೇಗೆ ಕಾರಣ ಕೊಟ್ಟರೋ ಹಾಗೇ 'ಕಾಂತಾರ' ಗೆಲುವಿಗೂ ಕಾರಣ ಕೊಟ್ಟಿದ್ದಾರೆ. "ಅದೇ ಕಾಂತಾರದಲ್ಲಿ ದೈವಿಕ ವಿಷಯಗಳು ಇದ್ದವು. ಅದು ಎಲ್ಲರನ್ನೂ ಟಚ್ ಮಾಡುತ್ತೆ. ಯಾರೆಲ್ಲ ದೈವವವನ್ನು ನಂಬುತ್ತಾರೋ ಅವರಿಗೆ ಆ ಸಬ್ಜೆಕ್ಟ್ ಟಚ್ ಮಾಡೇ ಮಾಡುತ್ತೆ. ಕೊನೆಯ 20 ನಿಮಿಷಗಳು ಮೈ ರೋಮಾಂಚನಗೊಳ್ಳುತ್ತೆ." ಎಂದು ರಕ್ಷಿತ್ ಶೆಟ್ಟಿ ಹೇಳಿದ್ದಾರೆ.


Click it and Unblock the Notifications











