"1 ರೂ. ಇದ್ದಾಗ ಯಾಕಪ್ಪ 50 ರೂ. ಕೇಳ್ತಿರಾ?" ಕಾವೇರಿ ಹೋರಾಟದಲ್ಲಿ ಗುಡುಗಿದ್ದ ಅಂಬಿ: ಹಳೇ ವಿಡಿಯೋ ವೈರಲ್!
ಕರ್ನಾಟಕದಲ್ಲಿ ಮತ್ತೆ ಕಾವೇರಿ ವಿವಾದ ತೀವ್ರಗೊಂಡಿದೆ. ಮಳೆಯೇ ಇಲ್ಲದೆ ಕಾವೇರಿ ನದಿ ತುಂಬಿ ಹರಿಯುತ್ತಿಲ್ಲ. ಕಾವೇರಿ ನದಿ ಪಾತ್ರದ ರೈತರು ನೀರಿಲ್ಲದೆ ಕಂಗಾಲಾಗಿದ್ದಾರೆ. ಇತ್ತ ಬೆಂಗಳೂರಿಗೂ ಕುಡಿಯಲು ಕಾವೇರಿ ನೀರಿನ ಅಗತ್ಯವಿದೆ. ಹೀಗಿದ್ದರೂ ತಮಿಳುನಾಡಿಗೆ ನೀರು ಬಿಡಬೇಕಾದ ಸ್ಥಿತಿಗೆ ರೈತರು ಆಕ್ರೋಶ ಹೊರಹಾಕುತ್ತಿದ್ದಾರೆ.
ಇದೇ ಸಂಬಂಧ ಇಂದು (ಸೆಪ್ಟೆಂಬರ್ 26) ರೈತ ಸಂಘಟನೆಗಳು ಬೆಂಗಳೂರು ಬಂದ್ಗೆ ಕರೆ ನೀಡಿ ಹೋರಾಟ ಮುಂದುವರೆಸಿದ್ದಾರೆ. ಇನ್ನು ಸೆಪ್ಟೆಂಬರ್ 29 ರಂದು ಕರ್ನಾಟಕ ಬಂದ್ಗೆ ಕರೆ ನೀಡಲಾಗಿದೆ. ಹೀಗಾಗಿ ಕಾವೇರಿ ಸಮಸ್ಯೆ ಬಗೆಹರಿಯದೇ ಹೋದರೆ ಕರ್ನಾಟಕದಲ್ಲಿ ಹೋರಾಟ ತೀವ್ರಗೊಳ್ಳುವ ಸಾಧ್ಯತೆಯಿದೆ.

ಈ ಮಧ್ಯೆ ನೂರಾರು ಸಂಘಟನೆಗಳು ಸಿಡಿದೆದ್ದಿರೋದೇನೋ ನಿಜ. ಹೋರಾಟಕ್ಕೆ ಧುಮುಕಿರೋದೇನೋ ನಿಜ. ಆದರೆ, ಈ ಸಂದರ್ಭದಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ರನ್ನು ಖಂಡಿತಾ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ಸೋಶಿಯಲ್ ಮೀಡಿಯಾದಲ್ಲಿ ಅಂಬರೀಶ್ ಕಾವೇರಿ ಬಗ್ಗೆ ಆಡಿದ ಹಳೇ ವಿಡಿಯೋ ವೈರಲ್ ಆಗುತ್ತಿದೆ. ಆ ವಿಡಿಯೋದಲ್ಲಿ ಏನು ಅಂಬಿ ಏನು ಹೇಳಿದ್ದಾರೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.
ಕಾವೇರಿ ಹೋರಾಟದಲ್ಲಿ ಅಂಬರೀಶ್
ರೆಬೆಲ್ ಸ್ಟಾರ್ ಅಂಬರೀಶ್ ಮಂಡ್ಯದವರು. ಮಂಡ್ಯ, ಮೈಸೂರು, ಬೆಂಗಳೂರಿನ ಜನರೊಂದಿಗೆ ಉತ್ತಮ ಒಡನಾಟವಿತ್ತು. ಅದಕ್ಕೆ ಕಾವೇರಿ ಹೋರಾಟ ಅಂತ ಬಂದಾಗಿ ಅಂಬರೀಶ್ ಹೋರಾಟಗಾರರ ಪರ ನಿಂತು ಬಿಡುತ್ತಿದ್ದರು. ಕಾವೇರಿ ಹೋರಾಟದಲ್ಲಿ ಅಂಬಿ ಭಾಗವಹಿಸಿದರೆ, ಇದೇ ಚಿತ್ರರಂಗವೇ ಜೊತೆಯಾಗಿ ನಿಲ್ಲುತ್ತಿತ್ತು. ಅಂಬಿ ಮಾತಿನ ಖದರೇ ಬೇರೆ ಇರುತ್ತಿತ್ತು. 2012ರಲ್ಲೂ ಹೀಗೆ ಕಾವೇರಿ ಹೋರಾಟ ಶುರುವಾಗಿದ್ದಾಗ ಅಂಬಿ ಭಾಗವಹಿಸಿದ್ದರು. ಈ ವೇಳೆ ಅಂಬಿ ಆಡಿದ ಮಾತು ಇಂದು ವೈರಲ್ ಆಗುತ್ತಿದೆ.
1 ರೂ. ಇದ್ದಾಗ 50 ರೂ. ಕೊಡೋದೇಗೆ?
11 ವರ್ಷಗಳ ಹಿಂದೆ ಹೆಚ್ಚು ಕಡಿಮೆ ಇದೇ ಸಮಯ. 2012, ಅಕ್ಟೋಬರ್ 6ರಂದು ರೆಬೆಲ್ ಸ್ಟಾರ್ ಅಂಬರೀಶ್ ಕಾವೇರಿ ಹೋರಾಟದಲ್ಲಿ ಭಾಗಿಯಾಗಿದ್ದರು. ಆ ವೇಳೆ ಕರ್ನಾಟಕ ಬಂದ್ಗೆ ಕರೆ ನೀಡಲಾಗಿತ್ತು. ಅಂದು ತಮ್ಮೊಂದಿಗೆ ಜೊತೆಯಾಗಿದ್ದ ಕಲಾವಿದರು ಹಾಗೂ ನೆರೆದಿದ್ದ ಅಸಂಖ್ಯಾತ ಜನರನ್ನು ಉದ್ದೇಶಿಸಿ ಅಂಬಿ ಮಾತಾಡಿದ್ದರು. "ನಾವು ಏನೂ ಕೇಳುತ್ತಿಲ್ಲ. ನೀರು ಬಿಡುವುದಿಲ್ಲ ಅಂತಾನೂ ಹೇಳುತ್ತಿಲ್ಲ. ನೀರು ಬಿಡುತ್ತೇವೆ. ನಮ್ಮ ಬಳಿ 100 ರೂಪಾಯಿ ಇದ್ದಾಗ 50 ರೂಪಾಯಿ ಕೇಳಿ. ಒಂದು ರೂಪಾಯಿ ಇದ್ದಾಗ ಯಾಕಪ್ಪ 50 ರೂಪಾಯಿ ಕೇಳುತ್ತೀರಾ.. ಇದು ಅನ್ಯಾಯ?" ಎಂದು ಹೇಳಿದ್ದರು. ಅದೇ ವಿಡಿಯೋ ಈ ವೈರಲ್ ಆಗಿದೆ.
ರಾಜೀನಾಮೆ ನೀಡಿದ್ದ ಅಂಬರೀಶ್
ಕಾವೇರಿ ವಿಷಯ ಬಂದಾಗ ರೆಬೆಲ್ ಸ್ಟಾರ್ ಅಂಬರೀಶ್ ಸದಾ ಹೋರಾಟಕ್ಕೆ ನಿಂತಿದ್ದರು. 2006 ರಿಂದ 2008ರವರೆಗೆ ಕೇಂದ್ರ ರಾಜ್ಯ ಸಚಿವರಾಗಿದ್ದಾಗ ಕಾವೇರಿ ವಿವಾದ ಎದ್ದಿತ್ತು. ಈ ವೇಳೆ ಟ್ರಿಬ್ಯುನಲ್ನಿಂದ ಕರ್ನಾಟಕಕ್ಕೆ ಅನ್ಯಾಯ ಆಗಿದೆ ಎಂದು ಅಂಬರೀಶ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈ ನಡೆಗೆ ಬಾರಿ ಮೆಚ್ಚುಗೆ ವ್ಯಕ್ತವಾಗಿತ್ತು. ಅದೇ 2016ರಲ್ಲಿ ಕಾವೇರಿ ಹೋರಾಟದಲ್ಲಿ ಭಾಗಿಯಾಗಿರಲಿಲ್ಲ. ಆ ವೇಳೆ ಅಂಬರೀಶ್ ಅಮೆರಿಕಾ ಪ್ರವಾಸದಲ್ಲಿದ್ದರು. ಆಗ ವಿವಾದಕ್ಕೆ ಸಿಲುಕಿದ್ದರು.
ಕಿಚ್ಚ ಸುದೀಪ್ ವಿಡಿಯೋ ಕೂಡ ವೈರಲ್
'ಹೆಬ್ಬುಲಿ' ಸಿನಿಮಾದ ಚಿತ್ರೀಕರಣದ ವೇಳೆ ಕಿಚ್ಚ ಸುದೀಪ್ ಬೆಂಬಲ ನೀಡಿದ್ದ ವಿಡಿಯೋ ವೈರಲ್ ಆಗಿತ್ತು. "ಕರ್ನಾಟಕದ ಸಮಸ್ತ ಜನತೆಗೆ ನಾವು ಇಲ್ಲಿಂದ ನಮಸ್ಕಾರ ಹೇಳುತ್ತಾ? ಕಾವೇರಿ ಹೋರಾಟ ಏನು ನಡೆಯುತ್ತಿದೆ. ಇದಕ್ಕೆ ಸಂಪೂರ್ಣ ಬೆಂಬಲವನ್ನು ನಾವು ನೀಡುತ್ತಿದ್ದೇವೆ. ನಮ್ಮ ನೆಲಕ್ಕೆ, ನಮ್ಮ ನೀರಿಗೆ ಸಂಪೂರ್ಣ ಸಹಕಾರ ಯಾವಾಗಲೂ ಇದ್ದೇ ಇರುತ್ತೆ ಅಂತ ಹೇಳಲು ಇಷ್ಟ ಪಡುತ್ತೇನೆ. ನಾವು ಅಲ್ಲಿ ಇಲ್ಲದೇ ಇರಬಹುದು. ಆದರೆ, ನಮ್ಮ ಸಪೋರ್ಟ್ ಹಾಗೂ ಸಹಕಾರ ಇದ್ದೇ ಇದೆ. ನಮ್ದು ಯಾವತ್ತಿದ್ದರೂ ನಮ್ದೇ.. ನಮ್ದು ಅನ್ನೋದಕ್ಕೆ ಹೋರಾಡೋಣ" ಎಂದು ಕಿಚ್ಚ ಸುದೀಪ್ ಹೇಳಿದ್ದರು.


Click it and Unblock the Notifications











