"ಕನ್ನಡ ಸಿನಿಮಾಗಳಿಗೆ ಥಿಯೇಟರ್ ಇಲ್ಲ.. ಓಟಿಟಿಯಲ್ಲಿ ಸೇಲ್ ಆಗ್ತಿಲ್ಲ": ರಿಷಬ್ ಶೆಟ್ಟಿ ಹೇಳಿದ ಸಿನಿಮಾಗಳ ಕಥೆಯೇನು?
'ಕಾಂತಾರ' ಸಿನಿಮಾ ಮೂಲಕ ರಿಷಬ್ ಶೆಟ್ಟಿ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ. ದೇಶದ ಮೂಲೆ ಮೂಲೆಯಲ್ಲಿ ರಿಷಬ್ ಶೆಟ್ಟಿ ಪರಿಚಯವಿದೆ. ಒಂದೇ ಒಂದು ಸಿನಿಮಾದಿಂದ ದೇಶದ ಉದ್ದಗಲಕ್ಕೂ ಜನಪ್ರಿಯತೆಯನ್ನು ಗಿಟ್ಟಿಸಿಕೊಂಡಿದ್ದಾರೆ. ಭಾಷೆ ಭೇದ ಮರೆತು 'ಕಾಂತಾರ 2' ನೋಡುವುದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ.
ಕಳೆದ ಮೂರು ನಾಲ್ಕು ವರ್ಷಗಳಿಂದ ಬಾಕ್ಸಾಫೀಸ್ನಲ್ಲಿ ಕನ್ನಡ ಸಿನಿಮಾಗಳು ಸದ್ದು ಮಾಡುತ್ತಿವೆ. 'ಕೆಜಿಎಫ್', 'ಕಾಂತಾರ' ಬಳಿಕ ಕನ್ನಡ ಸಿನಿಮಾಗಳಿಗೆ ರಾಷ್ಟ್ರ ಮಟ್ಟದಲ್ಲಿ ಮಾರ್ಕೇಟ್ ಓಪನ್ ಆಗಿದೆ. ಆದರೂ, ಕನ್ನಡ ಸಿನಿಮಾಗಳ ವ್ಯವಹಾರದಲ್ಲಿ ಸುಧಾರಣೆ ಆಗಿಲ್ಲ ಅನ್ನೋದು ರಿಷಬ್ ಶೆಟ್ಟಿ ಮಾತುಗಳಿಂದ ಗೊತ್ತಾಗುತ್ತಿದೆ.

ಇನ್ನೊವೇಟಿವ್ ಅಂತರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ನಲ್ಲಿ ರಿಷಬ್ ಶೆಟ್ಟಿ ಭಾಗವಹಿಸಿದ್ದರು. ಈ ವೇಳೆ "ಕನ್ನಡ ಸಿನಿಮಾಗಳಿಗೆ ಥಿಯೇಟರ್ ಸಿಗುತ್ತಿಲ್ಲ. ಓಟಿಟಿ ಸಂಸ್ಥೆಗಳು ಕೂಡ ಕನ್ನಡ ಸಿನಿಮಾಗಳನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ" ಎಂದು ರಿಷಬ್ ಶೆಟ್ಟಿ ಬೇಸರ ವ್ಯಕ್ತಪಡಿಸಿದ್ದಾರೆ. ಅಷ್ಟಕ್ಕೂ ರಿಷಬ್ ಶೆಟ್ಟಿ ಕೊಟ್ಟ ಈ ಹೇಳಿಕೆ ಹಿನ್ನೆಲೆಯೇನು?
ಕನ್ನಡ ಸಿನಿಮಾಗಳನ್ನು ಕಡೆಗಣಿಸುತ್ತಿದ್ಯಾ ಓಟಿಟಿ?
'ಕೆಜಿಎಫ್', 'ಕಾಂತಾರ'ದಂತಹ ಸಿನಿಮಾಗಳು ಬಂದ್ಮೇಲೆ ಕನ್ನಡ ಚಿತ್ರರಂಗದ ಪರಿಸ್ಥಿತಿ ಬದಲಾಗುತ್ತೆ ಎಂದು ನಿರೀಕ್ಷೆ ಮಾಡಲಾಗುತ್ತು. ಆದರೆ, ಪರಿಸ್ಥಿತಿ ಅಂದುಕೊಂಡಷ್ಟು ಸುಧಾರಿಸಿಲ್ಲ. ಓಟಿಟಿ ಸಂಸ್ಥೆಗಳು ಕನ್ನಡ ಸಿನಿಮಾಗಳನ್ನು ಕೊನೆಯದಾಗಿ ಗಣನೆಗೆ ತೆಗೆದುಕೊಳ್ಳುತ್ತಿವೆ. ಸಿನಿಮಾವನ್ನು ಖರೀದಿ ಮಾಡುವುದಕ್ಕೆ ಮುಂದೆ ಬರುತ್ತಿಲ್ಲ ಅನ್ನೋ ಮಾತು ಸಿನಿಮಾ ಮಂದಿಯಿಂದಲೇ ಕೇಳುವುದಕ್ಕೆ ಸಿಗುತ್ತಿತ್ತು. ಆದ್ರೀಗ ರಿಷಬ್ ಶೆಟ್ಟಿ ಹೇಳಿದ ಮಾತಿನಿಂದ ಖಾತ್ರಿಯಾದಂತೆ ಆಗಿದೆ.

ಥಿಯೇಟರ್ ಸಿಗೋದೂ ಕಷ್ಟ.. ಓಟಿಟಿನೂ ಕಷ್ಟ
ಇನ್ನೊವೇಟಿವ್ ಅಂತರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ನಲ್ಲಿ ಭಾಗವಹಿಸಿದ್ದ ರಿಷಬ್ ಶೆಟ್ಟಿ ಈ ಸಮಸ್ಯೆಯನ್ನು ಬೆಳಕಿಗೆ ತಂದಿದ್ದಾರೆ. ಅತಿಥಿಯಾಗಿ ಆಗಮಿಸಿದ್ದ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಅಪೂರ್ವ ಚಂದ್ರ ಎದುರೇ ಸಮಸ್ಯೆ ಹಂಚಿಕೊಂಡಿದ್ದಾರೆ. ಫಿಲ್ಮ್ ಫೆಸ್ಟಿವಲ್ನಲ್ಲಿ ಭಾಗವಹಿಸುವ ಕಂಟೆಂಟ್ ಸಿನಿಮಾಗಳಿಗೆ ಥಿಯೇಟರ್ ಸಿಗುತ್ತಿಲ್ಲ. ಜೊತೆಗೆ ಓಟಿಟಿಯವರೂ ಖರೀದಿಗೆ ಮುಂದೆ ಬರುತ್ತಿಲ್ಲ ಎಂದು ಅಪೂರ್ವ ಚಂದ್ರ ಬಳಿ ಸಮಸ್ಯೆ ಹೇಳಿಕೊಂಡಿದ್ದಾರೆ.
'ಪೆಡ್ರೋ', 'ಶಿವಮ್ಮ' ನಿರ್ಮಿಸಿರೋ ರಿಷಬ್ ಶೆಟ್ಟಿ
ಈಗಾಗಲೇ 'ಪೆಡ್ರೋ', 'ಶಿವಮ್ಮ' ಅಂತಹ ಕಂಟೆಂಡ್ ಸಿನಿಮಾಗಳನ್ನು ಸ್ವತ: ರಿಷಬ್ ಶೆಟ್ಟಿ ನಿರ್ಮಾಣ ಮಾಡಿದ್ದಾರೆ. ಆದರೆ, ಇವು ಫಿಲ್ಮ್ ಫೆಸ್ಟಿವಲ್ಗಳಲ್ಲಿ ಮೆಚ್ಚುಗೆ ಕಂಡಿವೆ ಹೊರತು ಥಿಯೇಟರ್ಗಳಿಗೆ, ಒಟಿಟಿಗೆ ಬಂದಿಲ್ಲ. "ಎನ್ಎಫ್ಡಿಸಿಯಲ್ಲಿ ನಮ್ಮದೂ ಪೆಡ್ರೋ ಹಾಗೂ ಶಿವಮ್ಮ ಸಿನಿಮಾ ಮಾಮಿಗೆ ಕೂಡ ಸೆಲೆಕ್ಟ್ ಆಗಿದೆ. ರಕ್ಷಿತ್ ಶೆಟ್ಟಿ ಕೂಡ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಕನ್ನಡದಲ್ಲಿ ಹಲವು ವರ್ಷಗಳಿಂದ ಫಿಲ್ಮ್ ಫೆಸ್ಟಿವಲ್ಗೆ ಅಂತಾನೇ ಕೆಲವು ಸಿನಿಮಾಗಳನ್ನು ನಿರ್ಮಾಣ ಮಾಡುತ್ತಾ ಬಂದಿದ್ದೇವೆ. ಇಂತಹ ಸಿನಿಮಾಗಳಿಗೆ ಥಿಯೇಟರ್ ಸಿಗೋದು ತುಂಬಾನೇ ಕಷ್ಟ. ಹಾಗೇ ಓಟಿಟಿಯಲ್ಲೂ ಕಷ್ಟ." ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ.
"ಓಟಿಟಿಯವರು ಗಣನೆಗೆ ತೆಗೆದುಕೊಂಡಿಲ್ಲ"
"ಓಟಿಟಿ ವೇದಿಕೆಯರು ಕನ್ನಡ ಭಾಷೆಯ ಸಿನಿಮಾಗಳನ್ನು ಗಣನೆಗೇ ತೆಗೆದುಕೊಳ್ಳುತ್ತಿಲ್ಲ. ತುಂಬಾ ಸಿನಿಮಾಗಳನ್ನು ನಾವು ನಿರ್ಮಾಣ ಮಾಡಿದ್ದೇವೆ. ಈ ಬಾರಿ ಕೂಡ ಹಲವು ಸಿನಿಮಾಗಳು ಫಿಲ್ಮ್ ಫೆಸ್ಟಿವಲ್ನಲ್ಲಿ ಸ್ಪರ್ಧೆ ಮಾಡುತ್ತಿವೆ. ಇಂತಹ ಸಿನಿಮಾಗಳನ್ನೂ ಓಟಿಟಿಯರು ಪರಿಗಣನೆಗೆ ತೆಗೆದುಕೊಳ್ಳಬೇಕು." ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಅಪೂರ್ವ ಚಂದ್ರ ಬಳಿ ರಿಷಬ್ ಶೆಟ್ಟಿ ಮನವಿ ಮಾಡಿಕೊಂಡಿದ್ದಾರೆ.


Click it and Unblock the Notifications











