ಪಿ. ಶೇಷಾದ್ರಿ ಅವರ 'ವಿದಾಯ' ತಪ್ಪದೇ ನೋಡಿ
ಸತತ ಎಂಟು ಬಾರಿ ರಾಷ್ಟ್ರಪ್ರಶಸ್ತಿ ಪಡೆದ ಭಾರತದ ಏಕೈಕ ನಿರ್ದೇಶಕ ಎಂಬ ಅಪರೂಪದ ಸಾಧನೆ ಮಾಡಿರುವ ಪಿ. ಶೇಷಾದ್ರಿ ಅವರ ಹೊಚ್ಚ ಹೊಸ ಸಿನಿಮಾ 'ವಿದಾಯ' ಶುಕ್ರವಾರ (ಜೂ.5) ಬಿಡುಗಡೆ ಭಾಗ್ಯ ಪಡೆಯಲಿದೆ.
ಬೆಂಗಳೂರಿನ ರಾಜಾಜಿನಗರದ ಓರಿಯನ್ ಮಾಲ್ ನಲ್ಲಿ (ಮಧ್ಯಾಹ್ನ 1.00), ಕೋರಮಂಗಲ (ಮಧ್ಯಾಹ್ನ 2.45 ), ಮಲ್ಲೇಶ್ವರ ಮಂತ್ರಿ ಇನಾಕ್ಸ್ ಚಿತ್ರಮಂದಿರದಲ್ಲಿ ಸಂಜೆ 6.55ಕ್ಕೆ ವಿದಾಯ ಚಿತ್ರವನ್ನು ನೋಡಬಹುದು.
ಬಸಂತ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಶೇಷಾದ್ರಿ ಅವರು ಇದುವರೆಗೂ ಮೂರು ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಇವರಿಬ್ಬರ ಕಾಂಬಿನೇಷನ್ ನಲ್ಲಿ ಬರುತ್ತಿರುವ ವಿದಾಯ ಚಿತ್ರ ನಾಲ್ಕನೆಯದು. [ಖ್ಯಾತ ನಿರ್ದೇಶಕ ಪಿ.ಶೇಷಾದ್ರಿ ವಿಶೇಷ ಸಂದರ್ಶನ]

ಒಂದಕ್ಕಿಂತ ಒಂದು ಭಿನ್ನವಾದಂಥ ಚಿತ್ರಗಳನ್ನು ಈ ಜೋಡಿ ನೀಡಿದೆ. ಬೆಟ್ಟದ ಜೀವ, ಭಾರತ್ ಸ್ಟೋರ್ಸ್ ಹಾಗೂ ಡಿಸೆಂಬರ್ 1 ಚಿತ್ರಗಳು ಇವರಿಬ್ಬರ ಕಾಂಬಿನೇಷನ್ ನಲ್ಲಿ ಮೂಡಿಬಂದು ಪ್ರೇಕ್ಷಕರ ಮೆಚ್ಚುಗೆ ಪಡೆದುಕೊಂಡಿದೆ. [ಕಥೆ : ದಯಾಮರಣ]
ದಯಾ ಮರಣ, ಇಚ್ಛಾ ಮರಣ ವಿಷಯವನ್ನು ಆಯ್ಕೆ ಮಾಡಿಕೊಂಡಿರುವ ಶೇಷಾದ್ರಿ ಅವರು 'ಒಳ್ಳೆಯ ಸಾವು' ಬಯಸುವುದು ತಪ್ಪೇ ಸರಿಯೇ? ಅತ್ಮಹತ್ಯೆ ಕಾನೂನಿನ ಪ್ರಕಾರ ಅಪರಾಧ.
ಆದರೆ, ದಯಾ ಮರಣಕ್ಕೂ ಇದು ಅನ್ವಯವಾಗಬೇಕೆ ಎಂಬ ವಿವರಗಳನ್ನು ಸೂಕ್ಷ್ಮವಾಗಿ ನಿಮ್ಮ ಮುಂದಿಡುತ್ತಿದ್ದಾರೆ. ಓರ್ವ ಶ್ರೀಮಂತ ಮಧ್ಯವಯಸ್ಕನಿಗೆ ಅಪಘಾತವಾಗಿ ಮರಣಶಯ್ಯೆಯಲ್ಲಿರುತ್ತಾನೆ. ದಯಾ ಮರಣ ಬಯಸುವ ಈತನನ್ನು ಉಳಿಸಿಕೊಳ್ಳಲು ಪತ್ನಿ ಸತತ ಪ್ರಯತ್ನ ಮಾಡಿ ವಿಫಲವಾಗಿರುತ್ತಾಳೆ. ['ಡಿಸೆಂಬರ್ 1'ಕ್ಕೆ ರಾಷ್ಟ್ರಪ್ರಶಸ್ತಿ ಗರಿ]
ಅಂತರ್ಜಾತಿ ವಿವಾಹ, ದಾಂಪತ್ಯ ಸಂಘರ್ಷ, ಭಾವನೆಗಳ ಕಲಸುಮೇಲೋಗರ ನಡುವೆ ಚಿತ್ರಕ್ಕೆ ತಾರ್ಕಿಕ ಅಂತ್ಯ ನೀಡಿರುವ ಪಿ. ಶೇಷಾದ್ರಿ ಅವರ ಪ್ರಯತ್ನಕ್ಕೆ ಬೆಂಬಲ ನೀಡಬಯಸುವ ಕನ್ನಡ ಪ್ರೇಕ್ಷಕರು ಶುಕ್ರವಾರ ಸಿನಿಮಾ ಮಂದಿರಗಳಿಗೆ ಭೇಟಿ ನೀಡಬಹುದು. ಕರ್ನಾಟಕ ಮೂಲದ ಅರುಣಾ ಶಾನ್ ಬಾಗ್ ಅವರ ಅಗಲಿಕೆಯ ನೆನಪು ಮಾಸುವ ಮುನ್ನವೇ ಈ ರೀತಿಯ ಚಿತ್ರವೊಂದು ಬರುತ್ತಿರುವುದು ಕಾಕತಾಳೀಯ.


Click it and Unblock the Notifications












