ದ್ರಾವಿಡ ಭಾಷೆಯಿಂದ ಕನ್ನಡ ತಮಿಳು ಪ್ರತ್ಯೇಕವಾಗಿದ್ದು ಯಾವಾಗ? 'ಥಟ್ ಅಂತ ಹೇಳಿ' ಡಾ. ನಾ. ಸೋಮೇಶ್ವರ್ ಏನಂತಾರೆ?
ಕನ್ನಡ ಭಾಷೆಯ ಬಗ್ಗೆ ಕಮಲ್ ಹಾಸನ್ ವಿವಾದಾತ್ಮಕ ಹೇಳಿಕೆ ಬಗ್ಗೆ ಕರ್ನಾಟಕದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ತಮಿಳಿನಿಂದ ಕನ್ನಡ ಹುಟ್ಟಿದ್ದು ಎಂದಿರುವ ಕಮಲ್ ಹಾಸನ್ ವಿರುದ್ಧ ಚಿತ್ರರಂಗದ ಗಣ್ಯರು, ಕನ್ನಡ ಪರ ಹೋರಾಟಗಾರರು ಗರಂ ಆಗಿದ್ದಾರೆ. ಈ ಬೆನ್ನಲ್ಲೇ ಕಮಲ್ ಹಾಸನ್ ನಟಿಸಿದ 'ಥಗ್ ಲೈಫ್' ಸಿನಿಮಾ ಬಿಡುಗಡೆ ಮಾಡಬಾರದು ಎಂಬ ಒತ್ತಡ ಕೂಡ ಹೆಚ್ಚಾಗಿದೆ.
ಕನ್ನಡ ಪರ ಹೋರಾಟಗಾರರು ಕರ್ನಾಟಕ ಫಿಲ್ಮ್ ಚೇಂಬರ್ಗೆ 'ಥಗ್ ಲೈಫ್' ಬಿಡುಗಡೆ ಮಾಡದಂತೆ ಎಚ್ಚರಿಕೆಯನ್ನು ಕೊಟ್ಟಿದ್ದಾರೆ. ಕಮಲ್ ಹಾಸನ್ ಬಹಿರಂಗವಾಗಿ ಕ್ಷಮೆಯನ್ನು ಕೇಳದ ಹೊರತು ಸಿನಿಮಾ ಬಿಡುಗಡೆ ಮಾಡುವುದಕ್ಕೆ ಬಿಡುವುದಿಲ್ಲ ಎಂದು ಕನ್ನಡ ಪರ ಸಂಘಟನೆಗಳು ಖಡಕ್ ಸೂಚನೆಯನ್ನು ನೀಡಿವೆ. ಈ ಮಧ್ಯೆ ಕಮಲ್ ಹಾಸನ್ ಪರ ಶಿವರಾಜ್ಕುಮಾರ್ ಹಾಗೂ ರಮ್ಯಾ ನಿಂತಿರುವುದಕ್ಕೂ ಆಕ್ರೋಶ ವ್ಯಕ್ತವಾಗುತ್ತಿದೆ.
ತಮಿಳಿನಿಂದ ಕನ್ನಡ ಹುಟ್ಟಿದ್ದು ಎಂದಿರುವ ಕಮಲ್ ಹಾಸನ್ ಹೇಳಿಕೆ ಸರಿಯಾಗಿದೆಯೇ? ಈ ಬಗ್ಗೆ ಯಾರಿಗೂ ಸ್ಪಷ್ಟ ಮಾಹಿತಿ ಇಲ್ಲ. ಭಾಷಾ ತಜ್ಞರು ಮುಂದೆ ಬಂದು ಈ ಬಗ್ಗೆ ಸ್ಪಷ್ಟನೆ ಕೊಡಬೇಕಿದೆ. ಆದರೆ, ಈ ಮಧ್ಯೆ ಕನ್ನಡದ ಜನಪ್ರಿಯರ ಕ್ವಿಜ್ ಶೋ 'ಥಟ್ ಅಂತ ಹೇಳಿ' ಕಾರ್ಯಕ್ರಮದ ನಿರೂಪಕ ಡಾ.ನಾ. ಸೋಮೇಶ್ವರ ಅವರು ವಿನಾಯಕ್ ಜೋಷಿಯವರ ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಕನ್ನಡ ಹಾಗೂ ತಮಿಳು ಹೇಗೆ ಪ್ರತ್ಯೇಕವಾಯ್ತು? ಯಾವಾಗ ಆಯ್ತು? ಅನ್ನೋದನ್ನು ವಿವರಿಸಿದ್ದಾರೆ. ಅದರದ್ದೊಂದು ಝಲಕ್ ಇಲ್ಲಿದೆ.

'ಥಟ್ ಅಂತ ಹೇಳಿ' ಕನ್ನಡ ಜನಪ್ರಿಯ ಕ್ವಿಜ್ ಕಾರ್ಯಕ್ರಮ. ಚಂದನದಲ್ಲಿ ಸುಮಾರು ನಾಲ್ಕು ಸಾವಿರಕ್ಕೂ ಅಧಿಕ ಕಂತುಗಳು ಪ್ರಸಾರ ಆಗುತ್ತಿದ್ದ ಈ ಜನಪ್ರಿಯ ಶೋವನ್ನು ಡಾ.ನಾ. ಸೋಮೇಶ್ವರ ಅವರು ನಡೆಸಿಕೊಡುತ್ತಿದ್ದರು. ಕನ್ನಡ ಸಾಹಿತ್ಯವನ್ನೇ ಪ್ರಧಾನವಾಗಿಟ್ಟುಕೊಂಡು ನಡೆಸಿಕೊಟ್ಟ ಈ ಕಾರ್ಯಕ್ರಮ ಒಂದು ದಾಖಲೆ. ಇವರು ಕನ್ನಡ ಹಾಗೂ ತಮಿಳು ಭಾಷೆಯ ಬಗ್ಗೆ ಪ್ರಮುಖವಾದ ಅಂಶವನ್ನು ವಿನಾಯಕ್ ಜೋಷಿಯವರ ಯೂಟ್ಯೂಬ್ ಚಾನೆಲ್ನಲ್ಲಿ ವಿವರಿಸಿದ್ದಾರೆ.
ಕನ್ನಡ-ತಮಿಳು ಪ್ರತ್ಯೇಕ ಆಗಿದ್ಯಾವಾಗ?
'ಥಟ್ ಅಂತ ಹೇಳಿ' ಡಾ.ನಾ.ಸೋಮೇಶ್ವರ ಅವರ ಪ್ರಕಾರ, ಕ್ರಿಸ್ತಪೂರ್ವ ಆರನೇ ಶತಮಾನದಲ್ಲಿ ಕನ್ನಡ ಹಾಗೂ ತಮಿಳು ಎರಡೂ ಭಾಷೆಗಳು ಪ್ರತ್ಯೇಕವಾಯ್ತು ಎಂದು ಹೇಳುತ್ತಾರೆ. "ಇದು ಕ್ರಿಸ್ತ ಪೂರ್ವ ಆರನೇ ಶತಮಾನದಲ್ಲಿ ಕಂದಮಿಳ್ ಎಂಬ ಮೂಲ ದ್ರಾವಿಡ ಭಾಷೆ ಏನಿತ್ತೋ ಅಲ್ಲಿಂದ ಕನ್ನಡ ಮತ್ತು ತಮಿಳು ಭಾಷೆ ಪ್ರತ್ಯೇಕವಾಗುತ್ತೆ. ಪ್ರತ್ಯೇಕವಾಗಿ ಎರಡು ಸ್ವತಂತ್ರ ಭಾಷೆಗಳಾಗುತ್ತೆ. ಕ್ರಿಸ್ತ ಪೂರ್ವ ಮೂರನೇ ಶತಮಾನದ ಹೊತ್ತಿಗೆ ಕನ್ನಡ ಸಂಪೂರ್ಣ ಆಡು ಭಾಷೆ ಹಾಗೂ ಸ್ವತಂತ್ರ ಭಾಷೆಯಾಗಿರುತ್ತೆ. ಆದರೂ ಕನ್ನಡ ಹಾಗೂ ತಮಿಳು ನಡುವೆ ಕೊಡುಕೊಳ್ಳುವಿಕೆ ಇರುತ್ತೆ." ಎಂದು ಈ ಸಂದರ್ಶನದಲ್ಲಿ ಡಾ.ನಾ.ಸೋಮೇಶ್ವರ ಅವರು ವಿವರಿಸಿದ್ದಾರೆ.

ಐರಾವತಂ ಮಹಾದೇವನ್ ಏನಂತಾರೆ?
ಕನ್ನಡ ಭಾಷೆಯ ಅಸ್ತಿತ್ವದ ಬಗ್ಗೆ ತಮಿಳಿನವರೇ ಆದ ಶಿಲಾಶಾಸನಶಾಸ್ತ್ರಜ್ಞ ಐರಾವತಂ ಮಹಾದೇವನ್ ಅವರ ಉಲ್ಲೇಖವನ್ನು ತಿಳಿಸಿದ್ದಾರೆ. "ಕನ್ನಡಕ್ಕೆ ಸಂಬಂಧಪಟ್ಟ ದಾಖಲೆಗಳು ಸಿಕ್ಕಿಲ್ಲ. ಆದರೆ, ತಮಿಳಿಗೆ ಸಂಬಂಧಪಟ್ಟ ಅನೇಕ ಶಾಸನಗಳು ಸಿಕ್ಕಿವೆ. ಆ ಶಾಸನಗಳಲ್ಲಿ ಕನ್ನಡಕ್ಕೆ ಸಂಬಂಧಪಟ್ಟ ಸಾಕಷ್ಟು ಶಬ್ಧಗಳು ಇವೆ. ಐರಾವತಂ ಮಹಾದೇವನ್ ಎಂಬ ಬಹುದೊಡ್ಡ ವಿದ್ವಾಂಸರು, ತಮಿಳು ಭಾಷೆಯವರು, ಅವರೇ ಹೇಳಿದ್ದಾರೆ. ಅವರೇ ಹುಡುಕಿ ಕೊಟ್ಟಿದ್ದಾರೆ. ಇವೆಲ್ಲ ಕನ್ನಡದ್ದು ನೋಡಿ ತಮಿಳಿನಲ್ಲಿ ಇದೆ ಎಂದಿದ್ದಾರೆ." ಎನ್ನುತ್ತಾರೆ 'ಥಟ್ ಅಂತ ಹೇಳಿ' ಡಾ.ನಾ.ಸೋಮೇಶ್ವರ.
ಎರಡೂವರೆ ಸಾವಿರ ವರ್ಷಗಳ ಇತಿಹಾಸ
"ಯಾಕಂದ್ರೆ ಕೆಲವು ಗಡಿ ಪ್ರದೇಶಗಳು ಬರುತ್ತೆ. ಗಡಿ ಪ್ರದೇಶದಲ್ಲಿ ಎರಡೂ ಭಾಷೆಗಳನ್ನು ಮಾತಾಡುವ ಜನರು ಇರುತ್ತಾರೆ. ಅವರು ತಮಿಳನ್ನೇ ಮಾತಾಡಲಿ ಕನ್ನಡ ಶಬ್ಧಗಳು ಬಳಕೆಯಾಗುತ್ತೆ. ಕನ್ನಡವನ್ನೇ ಮಾತಾಡಲಿ ತಮಿಳು ಶಬ್ಧಗಳು ಬಳಕೆಯಾಗುತ್ತೆ. ಹೀಗೆ ಈ ಕನ್ನಡ ಭಾಷೆ ಸುಮಾರು ಎರಡೂವರೆ ಸಾವಿರ ವರ್ಷಗಳಿಂದ ಇವತ್ತಿನವರೆಗೂ ಉಳಿದುಕೊಂಡು ಬಂದಿದೆ ಅಂದರೆ, ಅದರಲ್ಲಿ ಒಂದು ಸತ್ವ ಇರಲೇಬೇಕಲ್ವಾ? ಇದಲ್ಲದಿದ್ದರೆ ಇಷ್ಟು ದಿವಸ ಎಂಥೆಂತಾ ಭಾಷೆಗಳು ನಾಮಾವಶೇಷಗಳಾಗಿ ಹೋಗಿವೆ. ಅಕಾಡಿಯನ್, ಬ್ಯಾಬಿಲೋನಿಯನ್, ಈಜಿಪ್ಷಿಯನ್, ಯಾವ ಭಾಷೆನೂ ಇಲ್ಲ ಇವತ್ತು." ಎಂದಿದ್ದಾರೆ 'ಥಟ್ ಅಂತ ಹೇಳಿ' ಡಾ.ನಾ.ಸೋಮೇಶ್ವರ.


Click it and Unblock the Notifications











