ವಿಜಯ್ ಪಕ್ಷ ಟಿವಿಕೆಗೆ ವಿಕ್ಟರಿ; ಮೊದಲೇ ಹೇಳಿದ್ದ ಪೂಜಾ ಹೆಗ್ಡೆ.. ಜನನಾಯಗನ್ ನಾಚಿ ನೀರಾಗಿದ್ದೇಕೆ?
ದಳಪತಿ ವಿಜಯ್ ಕೇವಲ ಸಿನಿಮಾದಲ್ಲಷ್ಟೇ ಅಲ್ಲ. ರಾಜಕೀಯದಲ್ಲೂ ಸ್ಟಾರ್ ಆಗಿ ಹೊರ ಹೊಮ್ಮಿದ್ದಾರೆ. ರಾಜಕೀಯಕ್ಕೆ ಎಂಟ್ರಿ ಕೊಡುತ್ತಿದ್ದಂತೆ ಗೆಲುವಿನ ನಗೆ ಬೀರಿದ್ದಾರೆ. ತಮಿಳುನಾಡಿನ ಜನತೆ ದಳಪತಿ ವಿಜಯ್ ಕೈ ಬಿಡಲಿಲ್ಲ. ಸುಮಾರು 108 ಕ್ಷೇತ್ರದಲ್ಲಿ ಟಿವಿಕೆ ಪಕ್ಷವನ್ನು ಗೆಲ್ಲಿಸಿದ್ದಾರೆ. ಈ ಮೂಲಕ ಡಿಎಂಕೆ ಹಾಗೂ ಎಐಡಿಎಂಕೆ ಪಕ್ಷಕ್ಕೆ ಮುಜುಗರವನ್ನುಂಟು ಮಾಡಿದ್ದಾರೆ.
ವಿಜಯ್ ಇಷ್ಟೊಂದು ಸ್ಥಾನಗಳನ್ನು ಗೆಲ್ಲಬಹುದೆಂದು ರಾಜಕೀಯ ವಿಶ್ಲೇಷಕರೇ ಊಹೆ ಮಾಡಿರಲಿಲ್ಲ. ಅವರ ಎಲ್ಲಾ ಲೆಕ್ಕಾಚಾರಗಳು ತಲೆಕೆಳಗಾಗಿದೆ. ತಮಿಳುನಾಡಿನಲ್ಲಿ ಟಿವಿಕೆ ಅತೀ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದೆ. ಈ ಹಿನ್ನೆಲೆಯಲ್ಲಿ ತಮಿಳುನಾಡಿನಾದ್ಯಂತ ಸಂಭ್ರಮ ಮನೆ ಮಾಡಿದೆ. ವಿಜಯ್ ಗೆಲುವಿಗೆ ಜೈಕಾರ ಹಾಕುತ್ತಿದ್ದಾರೆ. ಇನ್ನೊಂದು ಕಡೆ ರಾಜಕೀಯ ಹಾಗೂ ಸಿನಿಮಾ ಕ್ಷೇತ್ರದಿಂದ ಶುಭಾಶಯಗಳ ಸುರಿಮಳೆಯೇ ಸುರಿಯುತ್ತಿದೆ.

ತಮಿಳುನಾಡಿನ ಚುನಾವಣಾ ಫಲಿತಾಂಶ ಬರುವವರೆಗೂ ಯಾರಿಗೂ ವಿಜಯ್ ಪಕ್ಷದ ಮೇಲೆ ನಂಬಿಕೆ ಇರಲಿಲ್ಲ. ರಾಜಕೀಯ ಪಂಡಿತರೇ ವಿಜಯ್ ಪಕ್ಷ ಕೆಲವೇ ಕೆಲವು ಸ್ಥಾನಗಳಲ್ಲಿ ಗೆಲ್ಲಬಹುದೆಂದು ಊಹೆ ಮಾಡಿದ್ದರು. ಆದರೆ, ನಟಿ ಪೂಜಾ ಹೆಗ್ಡೆ ಮಾತ್ರ ವಿಜಯ್ ಪಕ್ಷ ಭಾರೀ ಬಹುಮತದಿಂದ ಗೆಲ್ಲುತ್ತೆ ಎಂದು ಈ ಮೊದಲೇ ಹೇಳಿದ್ದರು. ಆ ವಿಡಿಯೋವನ್ನು ಪೂಜಾ ಹಂಚಿಕೊಂಡಿದ್ದಾರೆ. ಅದು ವೈರಲ್ ಆಗುತ್ತಿದೆ.
ನಟಿ ಪೂಜಾ ಹೆಗ್ಡೆ ಹಾಗೂ ದಳಪತಿ ವಿಜಯ್ ಇಬ್ಬರೂ 'ಜನನಾಯಗನ್' ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದಾರೆ. ಕರ್ನಾಟಕದ ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ ನಿರ್ಮಿಸಿರುವ ಈ ಸಿನಿಮಾ ಅಂದುಕೊಂಡಂತೆ ಆಗಿದ್ದರೆ, ಈ ವರ್ಷ ಸಂಕ್ರಾಂತಿಗೆ ರಿಲೀಸ್ ಆಗಬೇಕಿತ್ತು. ಆದರೆ, ಸೆನ್ಸಾರ್ ಸಮಸ್ಯೆ ಎದುರಾಗಿದ್ದರಿಂದ ಇನ್ನೂ ಈ ಸಿನಿಮಾ ಬಿಡುಗಡೆಗೆ ಎದುರು ನೋಡುತ್ತಿದೆ.
ತಮಿಳುನಾಡಿನಲ್ಲಿ ವಿಜಯ್ಗೆ ಗೆಲುವು; ಕರ್ನಾಟಕದಲ್ಲೂ ಹೊಸ ರಾಜಕೀಯ ಪಕ್ಷ ಘೋಷಣೆ!
'ಜನನಾಯಗನ್' ಶುರುವಾಗುವುದಕ್ಕೂ ಮುನ್ನವೇ ದಳಪತಿ ವಿಜಯ್ ರಾಜಕೀಯಕ್ಕೆ ಧುಮುಕಿದ್ದರು. ತಮ್ಮ ರಾಜಕೀಯ ಪಕ್ಷವನ್ನು ಘೋಷಣೆ ಮಾಡಿದ್ದರು. ಹೀಗಾಗಿ ಈ ಸಿನಿಮಾ ಶೂಟಿಂಗ್ ವೇಳೆ ವಿಜಯ್ 2026ರ ಚುನಾವಣೆಯಲ್ಲಿ ಭಾಗವಹಿಸುತ್ತಿರೋದು ಗೊತ್ತಾಗಿ ಹೋಗಿತ್ತು. ಹೀಗಾಗಿ ಶೂಟಿಂಗ್ ಬಿಡುವಿನ ವೇಳೆ ವಿಜಯ್ ಜೊತೆ ಪೂಜಾ ಹೆಗ್ಡೆ ಒಂದು ವಿಡಿಯೋ ಮಾಡಿದ್ದರು. ಅದೇ ವಿಡಿಯೋ ಈಗ ವೈರಲ್ ಆಗುತ್ತಿದೆ.
ಈ ವಿಡಿಯೋದಲ್ಲಿ ಬಿಳಿ ಬೋರ್ಡ್ ಒಂದರ ಮೇಲೆ "ಈ ಚುನಾವಣೆಯಲ್ಲಿ ಯಾರು ಗೆಲ್ಲುತ್ತಾರೆ?" ಎಂದು ಬರೆಯಲಾಗಿದೆ. ಆ ವೇಳೆ ಪೂಜಾ ಹೆಗ್ಡೆ ತಮ್ಮ ರಾಜಕೀಯ ಜ್ಞಾನ ಬಳಸಿ, ತಮ್ಮ ಹಿಂದೆ ನಿಂತಿದ್ದ ವಿಜಯ್ ಅವರ ಕಡೆಗೆ ಬೆರಳು ಮಾಡಿ ತೋರಿಸುತ್ತಾರೆ. ತಮಾಷೆಯಾಗಿ ಅಂದು ಮಾಡಿದ ವಿಡಿಯೋ ಇಂದು ನಿಜವಾಗಿದೆ. ಪೂಜಾ ಹೆಗ್ಡೆ ತಮಾಷೆ ಮಾಡಿದ ಬಳಿಕ ದಳಪತಿ ವಿಜಯ್ ಮುಖಕ್ಕೆ ಕೈ ಅಡ್ಡ ಹಿಡಿದು ನಗಾಡಿದ್ದು ಕೂಡ ವೈರಲ್ ಆಗುತ್ತಿದೆ.
ಯಾರೇ ಏನೇ ಅಂದರೂ ವಿಜಯ್ ಚುನಾವಣೆಯನ್ನು ಗೆದ್ದಾಗಿದೆ. ತಮಿಳುನಾಡು ರಾಜಕೀಯದಲ್ಲಿ ಹೊಸ ಪರ್ವವನ್ನು ಶುರು ಮಾಡಿದ್ದಾಗಿದೆ. ಸದ್ಯಕ್ಕೆ ಸಿಕ್ಕಿರೋ ಮಾಹಿತಿ ಪ್ರಕಾರ ವಿಜಯ್ ಇದೇ ಮೇ 7 ರಂದು ಚೆನ್ನೈನ ನೆಹರು ಇನ್ಡೋರ್ ಸ್ಟೇಡಿಯಂನಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಅಂದು ಇಡೀ ತಮಿಳುನಾಡಿನಲ್ಲಿ ವಿಜಯ್ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿರುತ್ತೆ. ವಿಜಯ್ ಅಧಿಕಾರ ನಡೆಸುವುದಕ್ಕೆ ಮೈತ್ರಿ ಮಾಡಿಕೊಳ್ಳಲೇ ಬೇಕಿದೆ. ಯಾರೊಂದಿಗೆ ಮೈತ್ರಿ ಮಾಡಿಕೊಳ್ಳುತ್ತಾರೆ ಅನ್ನೋದು ಸದ್ಯಕ್ಕೆ ಕುತೂಹಲ ಮೂಡಿಸಿದೆ.


Click it and Unblock the Notifications