X
ಹೋಮ್ ಚಲನಚಿತ್ರಗಳ ಒಳನೋಟ

ಪತ್ನಿ ಮೇಲೆ ಹಲ್ಲೆ to ಕೊಲೆ ಪ್ರಕರಣ: ಚಾಲೆಂಜಿಂಗ್ ಸ್ಟಾರ್ ದರ್ಶನ್ ಸುತ್ತ ಸುತ್ತಿಕೊಂಡ ಪ್ರಮುಖ ಕಾಂಟ್ರವರ್ಸಿಗಳಿವು!

Author Administrator | Updated: Tuesday, February 18, 2025, 09:53 AM [IST]

ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿವಾದಗಳ ಹಿಂದೆ ಹೋಗುತ್ತಾರೋ, ವಿವಾದಗಳೇ ದರ್ಶನ್ ಅವರನ್ನ ಬೊಡಲ್ವೋ ಗೊತ್ತಿಲ್ಲ. ಸದಾ ಒಂದಿಲ್ಲೊಂದು ವಿವಾದಗಳಿಂದ ದಾಸ ಸುದ್ದಿಯಾಗುತ್ತಲೇ ಇರುತ್ತಾರೆ. ಮಾಸ್ ಹೀರೊ ಆಗಿ ಸಿನಿರಸಿಕರ ಮನಗೆದ್ದ ನಟ ದರ್ಶನ್ ತಮ್ಮ ಮಾಸ್ ನಡೆ ನುಡಿಯಿಂದ ನಿಜ ಜೀವನದಲ್ಲಿ ಸಾಕಷ್ಟು ವಿವಾದಗಳನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಇಲ್ಲಿ ದರ್ಶನ್ ಸುತ್ತ ಸುತ್ತಿಕೊಂಡ ಪ್ರಮುಖ ಕಾಂಟ್ರವರ್ಸಿಗಳ ಪಟ್ಟಿಯನ್ನು ನೀಡಲಾಗಿದೆ.


cover image
 ಪತ್ನಿ ಮೇಲೆ ಹಲ್ಲೆ
1

ದರ್ಶನ್ 2011ರಲ್ಲಿ ಪತ್ನಿ ವಿಜಯಲಕ್ಷ್ಮಿ ಮೇಲೆ ಹಲ್ಲೆ ನಡೆಸಿದ್ದು ಭಾರೀ ಚರ್ಚೆ ಹುಟ್ಟುಹಾಕಿತ್ತು. ದರ್ಶನ್ 2011ರ ಸೆಪ್ಟೆಂಬರ್ 8, 2011ರಂದು ತಮ್ಮ ಪತ್ನಿಯ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದರು ಎನ್ನಲಾಗಿತ್ತು. ಈ ಕುರಿತಂತೆ ಸ್ವತಃ ದರ್ಶನ್ ಪತ್ನಿ ವಿಜಯಲಕ್ಷ್ಮೀ ವಿಜಯನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರು ದಾಖಲಾದ ಮರುದಿನವೇ ಪೊಲೀಸರು ದರ್ಶನ್ ಅವರನ್ನು ಬಂಧಿಸಿದ್ದರು. ಈ ಪ್ರಕರಣದಲ್ಲಿ ನಟಿ ನಿಖಿತಾ ತುಕ್ರಾಲ್ ಹೆಸರು ಕೂಡ ಕೇಳಿಬಂದಿತ್ತು. ಈ ಪ್ರಕರಣದಿಂದಾಗಿ ಚಾಲೆಂಜಿಂಗ್ ಸ್ಟಾರ್ 28 ದಿನಗಳ ಕಾಲ ಜೈಲಿನಲ್ಲಿದ್ದರು. ಇದೇ ಸಮಯದಲ್ಲಿ ಅವರ ನಟನೆಯ 'ಸಾರಥಿ' ಸಿನಿಮಾ ರಿಲೀಸ್ ಆಗಿ ಗೆದ್ದಿತ್ತು. ಆನಂತರದಲ್ಲಿ ರಾಜಿ ಸಂಧಾನ ನಡೆದು ಪ್ರಕರಣ ಸುಖಾಂತ್ಯ ಕಂಡಿತ್ತು.

ಚಿಂಗಾರಿ ನಿರ್ಮಾಪಕರ ಜೊತೆ ಕಿರಿಕ್
2

2012ರಲ್ಲಿ ದರ್ಶನ್ ನಟನೆಯ ಚಿಂಗಾರಿ ಸಿನಿಮಾ ಬಿಡುಗಡೆಯಾಗಿ ಯಶಸ್ಸು ಕಂಡಿತ್ತು. ಆದರೆ, ಈ ಸಿನಿಮಾ ಸಕ್ಸಸ್ ಬೆನ್ನಲ್ಲೇ, ದರ್ಶನ್ ಹಾಗೂ ನಿರ್ಮಾಪಕ ಮಹಾದೇವ್ ನಡುವೆ ಕಿರಿಕ್ ನಡೆದಿತ್ತು ಎನ್ನುವ ಸುದ್ದಿ ಹರಿದಾಡಿತ್ತು. ಚಾಲೆಂಜಿಂಗ್ ಸ್ಟಾರ್ ಸಿನಿಮಾ ನಿರ್ಮಾಪಕರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದರು ಎನ್ನುವ ಗುಸುಗುಸು ಕೇಳಿಬಂದಿತ್ತು.


ಸುದೀಪ್ ಮತ್ತು ದರ್ಶನ್ ದೂರ
3

ವಿಷ್ಣುವರ್ಧನ್ ಮತ್ತು ಅಂಬರೀಶ್ ನಂತರ ಕಿಚ್ಚ ಸುದೀಪ್ ಮತ್ತು ದರ್ಶನ್ ಕನ್ನಡ ಚಿತ್ರರಂಗದಲ್ಲಿ ದಿಗ್ಗಜರು ಎನಿಸಿಕೊಂಡಿದ್ದರು. ಆದರೆ, 2017ರಲ್ಲಿ ದರ್ಶನ್‌ಗೆ 'ಮೆಜೆಸ್ಟಿಕ್' ಸಿನಿಮಾ ಅವಕಾಶ ಕೊಡಿಸಿದ್ದು ನಾನೇ.. ಆ ಚಿತ್ರವನ್ನ ನಾನೇ ಮಾಡಬೇಕಿತ್ತು. ಆದರೆ ನನ್ನ ಡೇಟ್ಸ್ ಇಲ್ಲದ ಕಾರಣಕ್ಕೆ ಆ ಅವಕಾಶವನ್ನ ಅವರಿಗೆ ಕೊಡಿಸಿದೆ ಎಂದು ಸುದೀಪ್ ಹೇಳಿದ್ದರು. ಇದರಿಂದ ಬೇಸರಗೊಂಡ ದರ್ಶನ್, 2017ರ ಮಾರ್ಚ್ ೫ರಂದು ನಾನು ಹಾಗೂ ಸುದೀಪ್‌ ಸ್ನೇಹಿತರಲ್ಲ, ನಾವು ಕೇವಲ ಕನ್ನಡ ಚಿತ್ರರಂಗದ ನಟರಷ್ಟೆ. ಯಾವುದೇ ಉಹಾ-ಪೋಹಗಳು ಬೇಡ. ಎಲ್ಲಾ ಮುಗೀತು ಎಂದು ಟ್ವೀಟ್ ಮಾಡಿದ್ದರು. ಜೊತೆಗೆ ಸುದೀಪ್ ತಮ್ಮ ಹೇಳಿಕೆಗೆ ಕ್ಲಾರಿಟಿ ಕೊಡಲಿ ಎಂದು ಆಗ್ರಹಿಸಿದ್ದರು. ಆ ಬಳಿಕ ಎಂದೂ ಇಬ್ಬರು ಒಟ್ಟಿಗೆ ಕಾಣಿಸಿಕೊಳ್ಳಲಿಲ್ಲ. 

ಸಹ ಕಲಾವಿದರ ಮೇಲೆ ಹಲ್ಲೆ
4

'ಯಜಮಾನ' ಸಿನಿಮಾದ ಸಾಂಗ್ ಶೂಟಿಂಗ್ ವೇಳೆ ನಟ ದರ್ಶನ್‌ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆಂದು ಸಹ ಕಲಾವಿದ ಶಿವಶಂಕರ್‌ ಆರೋಪಿಸಿದ್ದರು. ಹಾಡಿನ ಚಿತ್ರೀಕರಣದ ಸಂದರ್ಭ ಮೊಬೈಲ್‌ನಲ್ಲಿ ಚಿತ್ರೀಕರಣ ನಡೆಸುತ್ತಿದ್ದರು ಎನ್ನುವ ಕಾರಣಕ್ಕೆ ದರ್ಶನ್ ಗರಂ ಆಗಿದ್ದರು ಎನ್ನುವ ಗುಸುಗುಸು ಕೇಳಿಬಂದಿತ್ತು. ಕೋಟ್ಯಂತರ ರೂಪಾಯಿ ಹಾಕಿ ಸಿನಿಮಾ ನಿರ್ಮಿಸಲಾಗುತ್ತೆ. ಚಿತ್ರೀಕರಣದ ವೇಳೆಗೆ ಈ ರೀತಿ ದೃಶ್ಯಗಳನ್ನು ಸೆರೆ ಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಹರಿ ಬಿಡುವುದು ತಪ್ಪು ಎನ್ನುವ ಕಾರಣಕ್ಕೆ ದರ್ಶನ್ ಅಸಮಾಧನಗೊಂಡಿದ್ದರು ಎನ್ನಲಾಗಿತ್ತು.  

ಜಗ್ಗೇಶ್-ದರ್ಶನ್ ಫ್ಯಾನ್ಸ್ ವಿವಾದ
5

ಸೋಶಿಯಲ್ ಮೀಡಿಯಾದಲ್ಲಿ ದರ್ಶನ್ ಹುಡುಗರ ಬಗ್ಗೆ ನಟ ಜಗ್ಗೇಶ್ ಹಗುರವಾಗಿ ಮಾತನಾಡಿದ್ದಾರೆ ಎನ್ನಲಾಗಿದ್ದ ಆಡಿಯೋ ಕ್ಲಿಪ್ ವೈರಲ್ ಆಗಿತ್ತು. ಹೀಗಾಗಿ, 'ತೋತಾಪುರಿ' ಸಿನಿಮಾ ಶೂಟಿಂಗ್ ಸೆಟ್‌ಗೆ ದರ್ಶನ್ ಅಭಿಮಾನಿಗಳು ಮುತ್ತಿಗೆ ಹಾಕಿ, ಜಗ್ಗೇಶ್ ವಿರುದ್ಧ ಧಿಕ್ಕಾರ ಕೂಗಿದ್ದರು. ಇದು ವಿವಾದ ಸೃಷ್ಟಿಸಿತ್ತು. ಇದರ ಬೆನ್ನಲ್ಲೇ ದರ್ಶನ್ ಅಭಿಮಾನಿಗಳು ಕ್ಷಮೆ ಕೇಳುವಂತೆ ಜಗ್ಗೇಶ್ ಅವರಲ್ಲಿ ಪಟ್ಟು ಹಿಡಿದಿದ್ದರು. ಸಂದರ್ಶನವೊಂದರಲ್ಲಿ ಈ ಘಟನೆ ಬಗ್ಗೆ ಸ್ವತಃ ದರ್ಶನ್ ಅವರೇ ಜಗ್ಗೇಶ್‌ಗೆ ಕ್ಷಮೆ ಕೇಳಿದ್ದರು. 


 ದರ್ಶನ್-ಉಮಾಪತಿ ನಡುವೆ ಜಗಳ
6

ದರ್ಶನ್ ಅಭಿನಯದ 'ರಾಬರ್ಟ್' ಸಿನಿಮಾ ಸೂಪರ್ ಹಿಟ್ ಆಗಿತ್ತು. ಈ ಚಿತ್ರವನ್ನು ಉಮಾಪತಿ ಶ್ರೀನಿವಾಸ್ ನಿರ್ದೇಶಿಸಿದ್ದರು. ಆದರೆ, ಈ ಸಿನಿಮಾ ಬಳಿಕ ಇಬ್ಬರ ನಡುವೆ ಕಿರಿಕ್ ಉಂಟಾಗಿತ್ತು. ದರ್ಶನ್ ಹೆಸರು ಬಳಸಿಕೊಂಡು ನಿರ್ಮಾಪಕ ಉಮಾಪತಿ ಶ್ರೀನಿವಾಸ್ 25 ಕೋಟಿ ರೂಪಾಯಿ ವಂಚನೆಗೆ ಯತ್ನಿಸಿದ್ದರು ಎನ್ನುವ ವಿಚಾರ ಭಾರೀ ಸದ್ದು ಮಾಡಿತ್ತು. ಫೇಕ್ ಲೋನ್ ಕೇಸ್ ದೊಡ್ಡಮಟ್ಟದಲ್ಲಿ ಚರ್ಚೆಯಾಗಿತ್ತು. ಇದೇ ವಿಚಾರವಾಗಿ ಒಬ್ಬರ ನಡುವೆ ಆರೋಪ-ಪ್ರತ್ಯಾರೋಪಗಳು ನಡೆದಿದ್ದವು.


ಹೊಟೇಲ್ ಸಿಬ್ಬಂದಿ ಮೇಲೆ ಹಲ್ಲೆ ಆರೋಪ
7

ಮೈಸೂರಿನ ಸಂದೇಶ್ ಪ್ರಿನ್ಸ್ ಹೊಟೇಲ್ ಸಿಬ್ಬಂದಿ ಮೇಲೆ ದರ್ಶನ್ ಹಲ್ಲೆ ಮಾಡಿದ್ದರು ಎಂಬ ಆರೋಪ ಕೇಳಿಬಂದಿತ್ತು. ಈ ವಿಚಾರದಲ್ಲಿ ನಿರ್ದೇಶಕ ಇಂದ್ರಜಿತ್ ಲಂಕೇಶ್ ಹೆಚ್ಚು ಆರೋಪ ಮಾಡಿದ್ರು. ಹೊಟೇಲ್‌ನಲ್ಲಿ ದರ್ಶನ್ ಮತ್ತು ಸ್ನೇಹಿತರು ಪಾರ್ಟಿ ಮಾಡಿದ್ದರು. ಈ ಸಂದರ್ಭ ಸಪ್ಲೈಯರ್ ಗಂಗಾಧರ್ ಎಂಬುವವರ ಮೇಲೆ ಹಲ್ಲೆ ನಡೆಸಿದ್ದಾರೆ ಅಂತ ಇಂದ್ರಜಿತ್ ಸುದ್ದಿಗೋಷ್ಠಿ ನಡೆಸಿ ಆರೋಪ ಮಾಡಿದ್ದರು. ದರ್ಶನ್ ಇದಕ್ಕೆ ತಿರುಗೇಟು ಸಹ ನೀಡಿದ್ರು. 

ಪ್ರೇಮ್ ದೊಡ್ಡ 'ಪುಡುಂಗಾ' ಎಂದಿದ್ದ ದರ್ಶನ್
8

ಹೊಟೇಲ್ ಸಿಬ್ಬಂದಿ ಮೇಲೆ ಹಲ್ಲೆ ವಿಚಾರಗಳಿಗೆ ಸಂಬಂಧಿಸಿದಂತೆ ಇಂದ್ರಜಿತ್ ಲಂಕೇಶ್ ಆರೋಪಗಳಿಗೆ ಪ್ರತಿಕ್ರಿಯೆ ನೀಡಲು ನಟ ದರ್ಶನ್ ಮೈಸೂರಿನ ತಮ್ಮ ತೋಟದ ಮನೆಯಲ್ಲಿ ಸುದ್ದಿಗೋಷ್ಠಿ ನಡೆಸಿದ್ದರು. ಈ ಸಂದರ್ಭ ನಿರ್ದೇಶಕ ಜೋಗಿ ಪ್ರೇಮ್ ಹೆಸರು ಪ್ರಸ್ತಾಪಿಸಿ, ಪ್ರೇಮ್ ಏನ್ ಪುಡಂಗಾ, ಎರಡು ಕೊಂಬೈತಾ? ಕರಿಯಾದಲ್ಲೂ ನಾವು ನೋಡಿದ್ದೇವೆ ಪ್ರೇಮ್‌ದು ಏನು ಅಂತ ಎಂದು ಬಿಟ್ಟಿದ್ದರು. ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ ಪ್ರೇಮ್, ಸುದ್ದಿಗೋಷ್ಠಿಯಲ್ಲಿ ನೋವು ತೋಡಿಕೊಂಡಿದ್ದರು. ಜೊತೆಗೆ ಇನ್ಮುಂದೆ ದರ್ಶನ್ ಜೊತೆ ಸಿನಿಮಾ ಮಾಡುವ ಮಾತೇ ಇಲ್ಲ ಎಂದಿದ್ರು.  


ಮಾಧ್ಯಮಗಳೊಂದಿಗಿನ ಕಿರಿಕ್
9

ನಟ ದರ್ಶನ್ ಮಾಧ್ಯಮದವರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದರು ಎನ್ನುವ ವಿಚಾರ ಸಿಕ್ಕಾಪಟ್ಟೆ ರಾದ್ಧಾಂತಕ್ಕೆ ಕಾರಾಣವಾಗಿತ್ತು. ಇದೇ ಕಾರಣದಿಂದಾಗಿ ಮಾಧ್ಯಮಗಳು ಎರಡು ವರ್ಷ ದರ್ಶನ್ ಮೇಲೆ ಅಘೋಷಿತ ನಿರ್ಬಂಧ ಹೇರಿದ್ದವು. ದರ್ಶನ್ ಕುರಿತಾದ ಯಾವುದೇ ಸುದ್ದಿ ಪ್ರಸಾರ ಮಾಡದಂತೆ ಮಾಧ್ಯಮ ಸಂಸ್ಥೆಗಳು ನಿರ್ಧರಿಸಿದ್ದವು. ಆದರೆ, ಕಳೆದ ವರ್ಷ ದರ್ಶನ್ ಮಾಧ್ಯಮಗಳ ಕ್ಷಮೆ ಕೇಳಿದ್ದು, ಪ್ರಕರಣ ಸುಖಾಂತ್ಯ ಕಂಡಿತ್ತು. 

 ಫಾರ್ಮ್‌ಹೌಸ್‌ ಮೇಲೆ ದಾಳಿ
10

ಮೈಸೂರಿನಲ್ಲಿರುವ ತಮ್ಮ ಫಾರ್ಮ್‌ ಹಾಸ್‌ನಲ್ಲಿ ದರ್ಶನ್ ಸಾಕಷ್ಟು ಪ್ರಾಣಿ-ಪಕ್ಷಿಗಳನ್ನು ಸಾಕುತ್ತಿದ್ದಾರೆ. ಆದರೆ, ಬಾರ್‌ ಹೆಡೆಡ್‌ ಗೂಸ್‌ ಎಂಬ ವಿಶಿಷ್ಟ ಪ್ರಭೇದದ ಬಾತುಕೋಳಿಗಳನ್ನು ಸಾಕಲು ಅನುಮತಿಯಿಲ್ಲ. ಆದರೆ, ಈ ಪಕ್ಷಿಗಳು ದರ್ಶನ್ ಫಾರ್ಮ್‌ಹೌಸ್‌ನಲ್ಲಿದ್ದವು. ಈ ಸಂಬಂಧ ಮೈಸೂರು ಅರಣ್ಯ ಸಂಚಾರಿದಳದ ಅಧಿಕಾರಿಗಳು ದಾಳಿ ನಡೆಸಿ, ಆ ಪಕ್ಷಿಗಳನ್ನು ವಶಕ್ಕೆ ಪಡೆದಿದ್ದರು. ಈ ಪಕ್ಷಿಗಳನ್ನು ಸಾಕುವುದು ವನ್ಯಜೀವಿ ಸಂರಕ್ಷಣೆಯ ಕಾಯ್ದೆಯಡಿ ಅಪರಾಧ. ಹಾಗಾಗಿ, ಸಾಕಣೆ ನಿಷೇಧಿತ ವನ್ಯ ಪಕ್ಷಿಗಳ ಸಾಕಣೆಗಾಗಿ ಪ್ರಕರಣ ದಾಖಲಾಗಿತ್ತು. 


ದರ್ಶನ್ ಮೇಲೆ ಚಪ್ಪಲಿ ಎಸೆತ
11

ಹೊಸಪೇಟೆಯಲ್ಲಿ 'ಕ್ರಾಂತಿ' ಸಿನಿಮಾ ಸಾಂಗ್ ರಿಲೀಸ್ ವೇಳೆ ಕಿಡಿಗೇಡಿಯೊಬ್ಬ ನಟ ದರ್ಶನ್ ಮೇಲೆ ಚಪ್ಪಲಿ ಎಸೆದಿದ್ದ ಪ್ರಕರಣ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಕ್ರಾಂತಿ ಚಿತ್ರದ  'ಗೊಂಬೆ ಗೊಂಬೆ' ಹಾಡು ಅಭಿಮಾನಿಗಳ ಮಧ್ಯೆ ರಿಲೀಸ್ ಮಾಡೋದಕ್ಕೆ ಇಡೀ ಚಿತ್ರತಂಡ ಹೊಸಪೇಟೆಗೆ ತೆರಳಿದ್ದು, ದೊಡ್ಡ ಬಸ್ ಮೇಲೆ ಚಿತ್ರತಂಡ ನಿಂತಿತ್ತು. ಈ ಸಂದರ್ಭ ಕೆಳಗಿದ್ದ ಅಭಿಮಾನಿಗಳ ಗುಂಪಿನಿಂದ ಚಪ್ಪಲಿಯೊಂದನ್ನು ದರ್ಶನ್ ಮೇಲೆ ತೂರಲಾಗಿತ್ತು. ಈ ವಿಚಾರವಾಗಿ ಸ್ಯಾಂಡಲ್‌ವುಡ್‌ ದಿಗ್ಗಜ ನಟರಾದ ಶಿವರಾಜ್‌ಕುಮಾರ್, ಜಗ್ಗೇಶ್, ಸುದೀಪ್ ಸೇರಿದಂತೆ ಬಹುತೇಕ ಎಲ್ಲಾ ಕಲಾವಿದರು ದರ್ಶನ್ ಅವರಿಗೆ ಬೆಂಬಲ ಸೂಚಿಸಿದ್ದಾರೆ.  

ಹುಲಿ ಉಗುರು ಪ್ರಕರಣ
12

ಕಳೆದ ಕೆಲ ತಿಂಗಳ ಹಿಂದೆ ಹುಲಿ ಉಗುರು ವಿಚಾರ ಭಾರೀ ಸದ್ದು ಮಾಡಿತ್ತು. ಹುಲಿ ಉಗುರಿನ ಪೆಂಡೆಂಟ್ ಹೊಂದಿದ್ದ ಆರೋಪದಲ್ಲಿ ಬಿಗ್‌ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಅವರನ್ನು ಬಂಧಿಸಲಾಗಿತ್ತು. ಇದರ ಬೆನ್ನಲ್ಲೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಲಿ ಉಗುರಿನ ಪೆಂಡೆಂಟ್ ಧರಿಸಿದ್ದ ಫೋಟೊ ವೈರಲ್ ಆಗಿತ್ತು. ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳು ನಟ ದರ್ಶನ್ ನಿವಾಸದಲ್ಲಿ ಶೋಧ ನಡೆಸಿದ್ದರು. ಅವರ ಮನೆಯಲ್ಲಿ 8 ಹುಲಿ ಉಗುರಿನ ಪೆಂಡೆಂಟ್ ಸಿಕ್ಕಿದ್ದವು. ಆದರೆ, ಅದೆಲ್ಲ ಅಸಲಿ ಹುಲಿ ಉಗುರು ಅಲ್ಲ ಎನ್ನುವ ಮಾಹಿತಿ ಸಿಕ್ಕಿತ್ತು. 

 

ರೇಣುಕಾಸ್ವಾಮಿ ಹತ್ಯೆ ಪ್ರಕರಣ
13

2024ರ  ಜೂನ್ 11ರಂದು ಬೆಂಗಳೂರಿನ ಕಾಮಾಕ್ಷಿಪಾಳ್ಯದಲ್ಲಿ ನಡೆದ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಬಂಧಿಸಿದ್ದಾರೆ. ದರ್ಶನ್ ಸ್ನೇಹಿತೆ ಪವಿತ್ರಾ ಗೌಡಗೆ ರೇಣುಕಾಸ್ವಾಮಿ ಅಶ್ಲೀಲ ಮೆಸೇಜ್ ಕಳುಹಿಸಿದ್ದ. ಇದೇ ಕಾರಣಕ್ಕೆ ದರ್ಶನ್ ತಮ್ಮ ಆಪ್ತರ ಮೂಲಕ ರೇಣುಕಾ ಸ್ವಾಮಿಯನ್ನ ಬೆಂಗಳೂರಿಗೆ ಕರೆಸಿ ಶೆಡ್‌ವೊಂದರಲ್ಲಿ ಕೂಡಿ ಹಾಕಿ, ಥಳಿಸಿ ಹತ್ಯೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. 


Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+