ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಿರ್ದೇಶಕ, ನಟರಾಗಿರುವ ರಿಷಬ್, ರಕ್ಷಿತ್ ಮತ್ತು ರಾಜ್ ಬಿ ಶೆಟ್ಟಿ ಕರಾವಳಿಯ ಅಪ್ಪಟ ಪ್ರತಿಭೆಗಳು. ತಮ್ಮ ವಿಶಿಷ್ಟ ಸಿನಿಮಾ ಹಾಗೂ ನಟನೆಯಿಂದ ಗುರುತಿಸಿಕೊಂಡಿದ್ದಾರೆ. ಈ ಮೂವರಿಗೂ ಯಾವುದೇ ಸಿನಿಮಾ ಬ್ಯಾಗ್ರೌಂಡ್ ಇಲ್ಲ. ಆದರೂ ಕೂಡ ತಮ್ಮ ಪ್ರತಿಭೆಯಿಂದಲೇ ಇಂದು ಉನ್ನತ ಸ್ಥಾನಕ್ಕೆ ಬಂದಿದ್ದಾರೆ. ಇವರು ಕನ್ನಡ ಚಿತ್ರರಂಗದ ತ್ರಿಬಲ್ ಆರ್ ಸ್ಟಾರ್ಗಳಾಗಿ ಬೆಳೆದಿದ್ದಾರೆ. ನೈಜತೆ, ಸೃಜನಶೀಲತೆಯೊಂದಿಗೆ ನಮ್ಮ ಕಣ್ಣ ಮುಂದೆ ನಡೆಯುವ ದಿನ ನಿತ್ಯದ ಘಟನೆಗಳೇ ಇವರ ಸಿನಿಮಾ ಕಥೆಯ ಜೀವಾಳ. ನಮ್ಮ ನೆಲದ ಸಂಸ್ಕತಿ, ಆಚಾರ ವಿಚಾರಗಳನ್ನು ತೆಗೆದುಕೊಂಡು ಸಿನಿಮಾ ಮಾಡಿ ಯಶಸ್ವಿಯಾಗಿದ್ದಾರೆ. ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ ಮತ್ತು ರಾಜ್ ಬಿ ಶೆಟ್ಟಿ ಅವರ ಯಶಸ್ಸಿಗೆ ಅವರ ಅಭಿನಯ ಮತ್ತು ಚಿತ್ರದ ಮೇಕಿಂಗ್, ಚಿತ್ರಕಥೆಯೇ ಪ್ರಮುಖ ಕಾರಣ. 2022ರಲ್ಲಿ ತೆರೆಕಂಡ ಇವರ 777 ಚಾರ್ಲಿ, ಗರುಡ ಗಮನ ವೃಷಭ ವಾಹನ, ಕಾಂತಾರ ಸಿನಿಮಾಗಳು ಸಾಕಷ್ಟು ಹೆಸರು ಮಾಡುತ್ತಿವೆ. ಈ ಮೂವರು ನಟರ ಕುರಿತ ಇಂಟರೆಸ್ಟಿಂಗ್ ವಿಷಯಗಳು ಇಲ್ಲಿವೆ.