ಕಿರುತೆರೆ ನಟಿ ಸುನೇತ್ರ ಪಂಡಿತ್ ಸ್ಟೂಟರ್ ಅಪಘಾತ: ಆಸ್ಪತ್ರೆಗೆ ದಾಖಲು
ಬೆಂಗಳೂರಿನಲ್ಲಿ ಅವೈಜ್ಞಾನಿಕ್ ಹಂಪ್ನಿಂದ ಮತ್ತೊಂದು ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಕನ್ನಡದ ಕಿರುತೆರೆ ನಟಿ ಸುನೇತ್ರ ಪಂಡಿತ್ ಶೂಟಿಂಗ್ ಮುಗಿಸಿಕೊಂಡು ಮನೆ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದ್ದು, ಸಣ್ಣ ಪುಟ್ಟ ಗಾಯಗಳಿಂದ ಬಚಾವ್ ಆಗಿದ್ದಾರೆ. ಆದರೆ, ಈ ಅಪಘಾತಕ್ಕೆ ಅವೈಜ್ಞಾನಿಕ ಸ್ಪೀಡ್ ಬ್ರೇಕರ್ಗಳೇ ಕಾರಣವೆಂದು ಹೇಳಲಾಗುತ್ತಿದೆ.
ಕಿರುತೆರೆ ನಟಿ ಸುನೇತ್ರ ಪಂಡಿತ್ ಶೂಟಿಂಗ್ ಮುಗಿಸಿ ಮನೆಗೆ ತೆರಳುತ್ತಿದ್ದರು. ಈ ವೇಳೆ ಎನ್ಆರ್ ಕಾಲೋನಿ ಮುಖ್ಯ ರಸ್ತೆಯಲ್ಲಿ ಹೋಗುವಾಗ ಸುನೇತ್ರ ಅವರಿಗೆ ರಸ್ತೆಯಲ್ಲಿರುವ ಹಂಪ್ ಕಂಡಿರಲಿಲ್ಲ. ಹೀಗಾಗಿ ಸುನೇತ್ರ ಚಲಾಯಿಸುತ್ತಿದ್ದ ದ್ವಿಚಕ್ರವಾಹನ ಹಂಪ್ ಅನ್ನು ಜಂಪ್ ಮಾಡಿ ಮಣ್ಣು ಮುಚ್ಚಿದ ರಸ್ತೆ ಗುಂಡಿಗೆ ಬಿದ್ದಿದೆ. ದ್ವಿಚಕ್ರ ವಾಹನದ ಜೊತೆಗೆ ಹಾಸ್ಯ ನಟಿ ಸುನೇತ್ರ ಕೂಡ ಗುಂಡಿಗೆ ಬಿದ್ದಿದ್ದರು.
ಹೆಲ್ಮೆಟ್ ಧರಿಸಿದ್ದರಿಂದ ಸುನೇತ್ರ ಬಚಾವ್
ಕಿರುತೆರೆ ನಟಿ ಸುನೇತ್ರ ಪಂಡಿತ್ ದ್ವಿಚಕ್ರ ವಾಹನ ಅಪಘಾತದಲ್ಲಿ ಸಣ್ಣ ಪುಟ್ಟ ಗಾಯಗಳಿಂದ ಬಚಾವ್ ಆಗಿದ್ದಾರೆ. ವಾಹನ ಚಲಾಯಿಸುತ್ತಿದ್ದ ವೇಳೆ ಹೆಲ್ಮೆಟ್ ಧರಿಸಿದ್ದರಿಂದ ಗಂಭೀರ ಗಾಯ ಗಾಯಗಳಾಗದೆ, ಅದೃಷ್ಟವಶಾತ್ ಬಚಾವ್ ಆಗಿದ್ದಾರೆ. ಬಸವನಗುಡಿ ಸಂಚಾರಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ದ್ವಿಚಕ್ರ ವಾಹನ ಅಪಘಾತದ ಬಳಿಕ ಸ್ಥಳೀಯರು ಕೂಡ ಸಹಾಯಕ್ಕೆ ಧಾವಿಸಿದ್ದರು. ಬಳಿಕ ನಟಿ ಸುನೇತ್ರ ಪಂಡಿತ್ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಣ್ಣ ಪುಟ್ಟ ಗಾಯಗಳಾಗಿದ್ದು, ತಲೆಗೆ ಸ್ವಲ್ಪ ಪೆಟ್ಟಾಗಿದೆ. ಹೀಗಾಗಿ ಸುನೇತ್ರವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಕಿರುತೆರೆ ಹಾಗೂ ಸಿನಿಮಾಗಳಲ್ಲಿ ಬ್ಯುಸಿ
'ಸಿಲ್ಲಿ ಲಲ್ಲಿ' ಧಾರಾವಾಹಿಯ ವಿಶಾಲು ಪಾತ್ರವನ್ನು ಕಿರುತೆರೆ ವೀಕ್ಷಕರು ಇನ್ನೂ ಮರೆತಿಲ್ಲ. ಕಿರುತೆರೆಯಲ್ಲಿಯೇ ಹೆಚ್ಚಾಗಿ ಕಾಣಿಸಿಕೊಳ್ಳುವ ಸುನೇತ್ರ ಪಂಡಿತ್ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಸದ್ಯ ಸ್ಟಾರ್ ಸುವರ್ಣದಲ್ಲಿ ಪ್ರಸಾರ ಆಗುವ 'ಬೆಟ್ಟದ ಹೂ' ಧಾರಾವಾಹಿಯಲ್ಲೂ ನಟಿಸುತ್ತಿದ್ದಾರೆ. ಅಲ್ಲದೆ ಸಿನಿಮಾಗಳಲ್ಲಿಯೂ ಸುನೇತ್ರ ಅಭಿನಯಿಸಿದ್ದಾರೆ.

ಡಬ್ಬಿಂಗ್ ಆರ್ಟಿಸ್ಟ್ ಕೂಡ ಆಗಿರುವ ಸುನೇತ್ರ ಪಂಡಿತ್, ಹಲವು ನಟಿಯರಿಗೆ ಧ್ವನಿ ನೀಡಿದ್ದಾರೆ. 'ಓಂ' ಸಿನಿಮಾದಲ್ಲಿ ಪ್ರೇಮ ಅವರಿಗೆ ಸುನೇತ್ರ ಪಂಡಿತ್ ಅವರೇ ಧ್ವನಿ ನೀಡಿದ್ದರು. ಇನ್ನು ಕಿರಿತೆರೆ ಹಾಗೂ ಸಿನಿಮಾ ಕಲಾವಿದ ರಮೇಶ್ ಪಂಡಿತ್ ಇವರ ಪತಿ.


Click it and Unblock the Notifications











