ಕ್ರೇಜಿ ಸ್ಟಾರ್ ರವಿಚಂದ್ರನ್ ಮುಖ್ಯಪಾತ್ರದಲ್ಲಿ ನಟಿಸಿರುವ ಕ್ರೈಮ್ ಥ್ರಿಲ್ಲರ್ `ಆ ದೃಶ್ಯ' ಚಿತ್ರವನ್ನು ಕೆ.ಮಂಜು ನಿರ್ಮಾಣ ಮಾಡಿದ್ದಾರೆ. ಚಿತ್ರಕ್ಕೆ ಗೌತಮ್ ಶ್ರೀವತ್ಸ್ ಸಂಗೀತ ನೀಡಿದ್ದಾರೆ. ರವಿಚಂದ್ರನ್ ರವರ ಜೊತೆ ಅಚ್ಯುತ್ ಕುಮಾರ್, ರಮೇಶ್ ಭಟ್, ಯಶ್ ಶೆಟ್ಟಿ ಮುಂತಾದವರು ಚಿತ್ರದಲ್ಲಿ ನಟಿಸಿದ್ದಾರೆ.ತಮಿಳಿನ ಧುರುವಂಗಲ್ ಪಾತಿನಾರು ಚಿತ್ರದ ಅಧಿಕೃತ ರಿಮೇಕ್ ಆಗಿರುವ ಈ ಚಿತ್ರದಲ್ಲಿ ರವಿಚಂದ್ರನ್ ಪೋಲಿಸ್ ಪಾತ್ರದಲ್ಲಿ ನಟಿಸಿದ್ದಾರೆ. ತನ್ನ ಹತ್ತಿರ ವೃತ್ತಿಜೀವನದ ಸಲಹೆಗೆ ಬರುವ ಒಬ್ಬ ಯುವಕನಿಗೆ ರವಿಚಂದ್ರನ್ ನವರು ತನ್ನ ಸರ್ವೀಸ್ ನಲ್ಲಿ ನಡೆದ ಘಟನೆಯೊಂದರ ಕಥೆ ಹೇಳುವ ಮೂಲಕ ಚಿತ್ರ ಆರಂಭವಾಗುತ್ತದೆ.
ಒಂದು ಮಳೆಗಾಲದ ದಿನದಲ್ಲಿ ಮೂರು ಯುವಕರು ಕಾರಿನಲ್ಲಿ ಹೋಗುವಾಗ ಒಬ್ಬ ವ್ಯಕ್ತಿಗೆ ಗುದ್ದುತ್ತಾರೆ. ತಾವು ಪೋಲಿಸ್ ಕೈಯಲ್ಲಿ ಸಿಕ್ಕಿ ಬೀಳಬಹುದು ಎಂಬ ಭಯದಿಂದ ಆ ದೇಹವನ್ನು ಮನೆಗೆ ಹೊತ್ತಯ್ಯುತ್ತಾರೆ. ಇದೇ ಸಮಯದಲ್ಲಿ ಒಬ್ಬ ವ್ಯಕ್ತಿಯ ಆತ್ಮಹತ್ಯೆ ಕೇಸ್ ಪೋಲಿಸ್ ರಿಗೆ ಬರುತ್ತದೆ. ಪೋಲಿಸ್ ಇಲಾಖೆ ಇದನ್ನು ಬೆನ್ನತ್ತಿ ಹೋದಾಗ ತಿರುವುಗಳ ಮೇಲೆ ತಿರುವುಗಳು ಬರುತ್ತವೆ.