ಅಣ್ಣ-ತಮ್ಮನ ಮಹಾಸಂಗಮದಲ್ಲಿ ಬರಲಿದೆ 'ಬಿಗ್' ಬಜೆಟ್ ಸಿನಿಮಾ.!
ಮೆಗಾಸ್ಟಾರ್ ಚಿರಂಜೀವಿ ಮತ್ತು ಪವರ್ ಸ್ಟಾರ್ ಪವನ್ ಕಲ್ಯಾಣ್ ಇಬ್ಬರನ್ನ ಒಂದೇ ಚಿತ್ರದಲ್ಲಿ ನೋಡಬೇಕು ಎನ್ನುವುದು ಮೆಗಾಫ್ಯಾಮಿಲಿ ಅಭಿಮಾನಿಗಳ ಬಹುದಿನಗಳ ಆಸೆ. ಆದ್ರೆ, ಚಿರು ಚಿತ್ರದಲ್ಲಿ ಪವನ್ ಕಲ್ಯಾಣ್ ವಿಶೇಷ ಪಾತ್ರ ಮಾಡಿದ್ದು ಬಿಟ್ಟರೇ ಇದುವರೆಗೂ ಇದು ಸಾಧ್ಯವಾಗಿಲ್ಲ. ಈಗ ಈ ಮಹಾದಾಸೆಗೆ ಮುಹೂರ್ತ ಕೂಡಿ ಬಂದಿದೆ.
ಅಂದ್ಹಾಗೆ, ಪವನ್ ಕಲ್ಯಾಣ್ ಮತ್ತು ಚಿರಂಜೀವಿ ಇಬ್ಬರ ಸಂಬಂಧ ಅಷ್ಟಕ್ಕಷ್ಟೇ ಎನ್ನುವ ಮಾತು ಟಾಲಿವುಡ್ ನಲ್ಲಿದೆ. ಇದಕ್ಕೆ ಪುಷ್ಠಿ ಕೊಡುವಂತೆ ಚಿರಂಜೀವಿ 'ಪ್ರಜಾರಾಜ್ಯಂ' ಪಕ್ಷ ಕಟ್ಟಿದ್ರೆ, ಪವನ್ ಕಲ್ಯಾಣ್ 'ಜನಸೇನಾ' ಪಕ್ಷ ಸ್ಥಾಪಿಸಿ ರಾಜಕೀಯವಾಗಿ ಬೇರೆ ಬೇರೆಯಾಗಿದ್ದರು. ಅಲ್ಲಿಗೆ ಮೆಗಾ ಫ್ಯಾಮಿಲಿಯ ಅಭಿಮಾನಿಗಳಿಗೆ ಆಸೆಗೆ ನೀರು ಬಿದ್ದಂತಾಗಿತ್ತು.['ಖೈದಿ ನಂ-150' ಟ್ವಿಟ್ಟರ್ ವಿಮರ್ಶೆ: ಬಾಸ್ ಈಸ್ ಬ್ಯಾಕ್ !]
ಆದ್ರೂ, ಇವರಿಬ್ಬರು ಒಟ್ಟಿಗೆ ಸಿನಿಮಾ ಮಾಡ್ತಾರೆ ಎನ್ನುವ ಭರವಸೆ ಅಭಿಮಾನಿಗಳಲ್ಲಿತ್ತು. ಇದೀಗ, ಆ ಟೈಮ್ ಬಂದಿದೆ. ಮುಂದೆ ಓದಿ.....

ಒಂದೇ ಚಿತ್ರದಲ್ಲಿ ಮೆಗಾ ಬ್ರದರ್ಸ್
ತೆಲುಗು ಚಿತ್ರರಂಗದಲ್ಲೊಂದು ಅಪೂರ್ವ ಸಂಗಮವಾಗಲಿದೆ. ಮೆಗಾಸ್ಟಾರ್ ಚಿರಂಜೀವಿ ಮತ್ತು ಪವರ್ ಸ್ಟಾರ್ ಪವನ್ ಕಲ್ಯಾಣ್ ಇಬ್ಬರು ಒಂದೇ ಚಿತ್ರದಲ್ಲಿ ಅಭಿನಯಿಸಲಿದ್ದಾರೆ. ಈ ಸುದ್ದಿಯನ್ನ ಸ್ವತಃ ಚಿತ್ರದ ನಿರ್ಮಾಪಕರೇ ಬಹಿರಂಗಪಡಿಸಿದ್ದಾರೆ.[ಪವನ್ ಕಲ್ಯಾಣ್-ಎಚ್.ಡಿ.ಕುಮಾರಸ್ವಾಮಿ ಭೇಟಿ: ಅಸಲಿ ಉದ್ದೇಶ ಏನು?]

ಯಾರು ಆ ನಿರ್ಮಾಪಕ
ಚಿರಂಜೀವಿ ಮತ್ತು ಪವನ್ ಕಲ್ಯಾಣ್ ಕುರಿತ ಚಿತ್ರದ ಬ್ರೇಕಿಂಗ್ ನ್ಯೂಸ್ ಕೊಟ್ಟಿದ್ದು ನಿರ್ಮಾಪಕ ಹಾಗೂ ರಾಜಕಾರಣಿ ಟಿ.ಸುಬ್ಬರಾಮಿ ರೆಡ್ಡಿ. ಈ ಚಿತ್ರವನ್ನ ಇವರೇ ನಿರ್ಮಾಣ ಮಾಡಲಿದ್ದಾರಂತೆ. ಈಗಾಗಲೇ, ನಿರ್ದೇಶಕರು ಈ ಮೆಗಾ ಚಿತ್ರಕ್ಕೆ ಸ್ಕ್ರಿಪ್ಟ್ ಸಿದ್ದ ಮಾಡುತ್ತಿದ್ದಾರಂತೆ.['ಖೈದಿ ನಂ.150' ಬಿಡುಗಡೆ: ಮೈಸೂರಿನ ಚಿತ್ರಮಂದಿರದಲ್ಲಿ ಹಬ್ಬ]

ಮೆಗಾ ಚಿತ್ರಕ್ಕೆ ನಿರ್ದೇಶಕ ಯಾರು?
ಮೆಗಾ ಬ್ರದರ್ಸ್ ಒಂದಾಗುತ್ತಿರುವ ಚಿತ್ರವನ್ನ ಡೈರೆಕ್ಟ್ ಮಾಡಲಿರುವುದು ಯಶಸ್ವಿ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ. 'ಜೈ ಚಿರಂಜೀವ', 'ಜಲ್ಸಾ', 'ತೀನ್ ಮಾರ್', 'ಅತ್ತಾರಿಂಟಿಕಿ ದಾರೇದಿ', 'ಸನ್ ಆಫ್ ಸತ್ಯಮೂರ್ತಿ', 'ಜುಲಾಯ್', ಅಂತಹ ಬ್ಲ್ಯಾಕ್ ಬಸ್ಟರ್ ಸಿನಿಮಾ ಮಾಡಿರುವ ತ್ರಿವಿಕ್ರಮ್ ಶ್ರೀನಿವಾಸ್, ಮೆಗಾ ಬ್ರದರ್ಸ್ ಸಿನಿಮಾಗೆ ಸ್ಕ್ರಿಪ್ಟ್ ಸಿದ್ದ ಮಾಡುತ್ತಿದ್ದಾರಂತೆ.

ಮೊಟ್ಟ ಮೊದಲ ಸಲ
ಇದುವರೆಗೂ ಚಿರಂಜೀವಿ ಮತ್ತು ಪವನ್ ಕಲ್ಯಾಣ್ ಒಟ್ಟಾಗಿ ನಾಯಕನಟರಾಗಿ ಸಿನಿಮಾ ಮಾಡಿಲ್ಲ. ಆದ್ರೆ, ಚಿರಂಜೀವಿ ಅಭಿನಯದ 'ಶಂಕರ್ ದಾದಾ ಎಂ.ಬಿ.ಬಿ.ಎಸ್' ಹಾಗೂ 'ಶಂಕರ್ ದಾದಾ ಜಿಂದಾಬಾದ್' ಚಿತ್ರಗಳಲ್ಲಿ ಪವನ್ ಕಲ್ಯಾಣ್ ವಿಶೇಷ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು ಅಷ್ಟೆ.

ಬಿಗ್ ಬಜೆಟ್ ಸಿನಿಮಾ
ಅಂದ್ಹಾಗೆ, ಚಿರಂಜೀವಿ ಮತ್ತು ಪವನ್ ಕಲ್ಯಾಣ್ ಅಭಿನಯಿಸಲಿರುವ ಈ ಚಿತ್ರ ತೆಲುಗು ಲೋಕದಲ್ಲಿ ಅತಿ ದೊಡ್ಡ ಸಿನಿಮಾವಾಗಲಿದೆಯಂತೆ. ಅದೇ ತರ ಬಜೆಟ್ ನಲ್ಲೂ ಈ ಸಿನಿಮಾ ಬಿಗ್ ಸಿನಿಮಾ ಎನಿಸಿಕೊಳ್ಳಲಿದೆಯಂತೆ. ಉಳಿದಂತೆ ಬೇರೆ ಯಾವ ಮಾಹಿತಿಯೂ ಬಿಟ್ಟು ಕೊಡದ ನಿರ್ಮಾಪಕ ಸದ್ಯಕ್ಕೆ ಇವರಿಬ್ಬರು ಒಂದಾಗುತ್ತಿರುವ ಸುದ್ದಿ ಹೇಳುವ ಮೂಲಕ ಸಿನಿ ಪ್ರಪಂಚಕ್ಕೆ ಅಚ್ಚರಿ ಮೂಡಿಸಿದ್ದಾರೆ.

ಚಿರಂಜೀವಿ ಮುಂದಿನ ಚಿತ್ರ?
ಸದ್ಯ, ಕಿರುತೆರೆಯಲ್ಲಿ ಪ್ರಸಾರವಾಗಲಿರುವ 'ಕನ್ನಡದ ಕೋಟ್ಯಾಧಿಪತಿ' ತೆಲುಗು ಕಾರ್ಯಕ್ರಮವನ್ನ ಮೆಗಾಸ್ಟಾರ್ ನಿರೂಪಣೆ ಮಾಡುತ್ತಿದ್ದಾರೆ. ಅದಾದ ನಂತರ ಸುರೇಂದ್ರ ರೆಡ್ಡಿ ನಿರ್ದೇಶನದಲ್ಲಿ ಮೂಡಿ ಬರ್ತಿರುವ ಸ್ವತಂತ್ರ ಹೋರಾಟಗಾರ 'ಉಯ್ಯಲವಾಡ ನರಸಿಂಹ ರೆಡ್ಡಿ' ಅವರ ಜೀವನ ಆಧಾರಿತ ಚಿತ್ರದಲ್ಲಿ ಚಿರು ಬಣ್ಣ ಹಚ್ಚಲಿದ್ದಾರೆ. ಇದಾದ ನಂತರ ಪವನ್ ಜೊತೆ ಸಿನಿಮಾ ಮಾಡಲಿದ್ದಾರಂತೆ.

ಪವನ್ ಕಲ್ಯಾಣ್ ಮುಂದಿನ ಚಿತ್ರ?
ಮತ್ತೊಂದೆಡೆ ಪವರ್ ಸ್ಟಾರ್ ಕಲ್ಯಾಣ್ ಕೂಡ ತ್ರಿವಿಕ್ರಮ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಇನ್ನು ಹೆಸರಿಡದ ಚಿತ್ರದಲ್ಲಿ ಅಭಿನಯಿಸಲಿದ್ದಾರೆ. ಈ ಚಿತ್ರದ ನಂತರ ಚಿರು ಜೊತೆ ಸಿನಿಮಾ ಮಾಡಲಿದ್ದಾರಂತೆ.


Click it and Unblock the Notifications











