"ಸುದೀಪ್ ಸರ್ಯಿಂದ ಹಿಡಿದು ಶಿವಣ್ಣ ಎಲ್ಲರೂ ಬೇಜಾರು ಮಾಡಿಕೊಂಡವರೇ?" ದರ್ಶನ್ ಬಗ್ಗೆ 'ಡಾಲಿ' ಸ್ಟ್ರೈಟ್ ಹಿಟ್!
ಸ್ಯಾಂಡಲ್ವುಡ್ನ ನಟರಾಕ್ಷಸ ಧನಂಜಯ್ ನಟಿಸಿ, ನಿರ್ಮಿಸಿರುವ ಸಿನಿಮ 'ಮದರ್ ಪ್ರಾಮಿಸ್' ರಿಲೀಸ್ ಆಗಿದೆ. ಸಿನಿಮಾಗೆ ಒಳ್ಳೆಯ ಪ್ರತಿಕ್ರಿಯೆ ಕೂಡ ವ್ಯಕ್ತವಾಗುತ್ತಿದೆ. ಈ ಗ್ಯಾಪ್ನಲ್ಲಿ ಕೆಲವರು ಸಿನಿಮಾ ಬಗ್ಗೆ ನೆಗೆಟಿವ್ ಕಮೆಂಟ್ಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಕುತ್ತಿದ್ದಾರೆ. ಅಲ್ಲದೇ ಖಾಲಿ ಥಿಯೇಟರ್ಗಳನ್ನು ತೋರಿಸಿ ಸಿನಿಮಾ ಧಕ್ಕೆ ತರುತ್ತಿದ್ದಾರೆಂದು ಆರೋಪ ಮಾಡಲಾಗುತ್ತಿದೆ.
ಸೋಶಿಯಲ್ ಮೀಡಿಯಾದಲ್ಲಿ ಸಿನಿಮಾ ಬಗ್ಗೆ ನೆಗೆಟಿವ್ ಕಮೆಂಟ್ಗಳನ್ನು ಮಾಡುತ್ತಿರುವವರು ಯಾರು? ಈ ವೇಳೆ ದರ್ಶನ್ ಅಭಿಮಾನಿಗಳು ಬಂದಿದ್ದು ಯಾಕೆ? ದರ್ಶನ್ ಹಾಗೂ ರೇಣುಕಾಸ್ವಾಮಿ ಕೇಸ್ ಅನ್ನು ಡಾಲಿ ಧನಂಜಯ್ ಮತ್ತೆ ರಿಕಾಲ್ ಮಾಡಿಕೊಂಡಿದ್ದು ಯಾಕೆ? ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.

ಧನಂಜಯ್ ನಿರ್ಮಿಸಿರುವ 'ಮದರ್ ಪ್ರಾಮಿಸ್' ಸಿನಿಮಾ ರಿಲೀಸ್ ಆಗುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಕಿಡಿಗೇಡಿಗಳು ಆಕ್ಟಿವ್ ಆಗಿದ್ದಾರೆ. ಸಿನಿಮಾ ಬಗ್ಗೆ ನೆಗೆಟಿವ್ ಪ್ರಚಾರ ಮಾಡಲಾಗುತ್ತಿದ್ದು, ಈ ಬಗ್ಗೆ ಡಾಲಿ ಧನಂಜಯ್ ಬೇಸರ ಹೊರ ಹಾಕಿದ್ದಾರೆ. ಇದೇ ವೇಳೆ ದರ್ಶನ್ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ವಿಡಿಯೋವನ್ನೇ ಹಂಚಿಕೊಂಡು ನೆಗೆಟಿವ್ ಸುದ್ದಿಗಳನ್ನು ಹಬ್ಬಿಸುತ್ತಿರುವ ದರ್ಶನ್ ಅಭಿಮಾನಿಗಳ ಕುರಿತು ಧನಂಜಯ್ ಹೇಳಿಕೆ ನೀಡಿದ್ದಾರೆ. ಅದರ ಝಲಕ್ ಹೀಗಿದೆ.
"ಸುದೀಪ್ ಸರ್-ಶಿವಣ್ಣಗೂ ಹೀಗೆ ಅನಿಸಿತ್ತೆ"
ದರ್ಶನ್ ಪ್ರಕರಣದಲ್ಲಿ ಮಾಧ್ಯಮದವರು ಸಡನ್ ಆಗಿ ಪ್ರತಿಕ್ರಿಯೆ ಕೇಳಿದಾಗ ಕಲಾವಿದರು ತಬ್ಬಿಬ್ಬಾಗುತ್ತಾರೆ. ಅದೇ ವಿಡಿಯೋವನ್ನು ಬೇರೆ ರೀತಿಯಲ್ಲಿ ಎಡಿ ಮಾಡಿ ಬಿಂಬಿಸಲಾಗುತ್ತೆ. ಆ ಕ್ಷಣದಲ್ಲಿ ಏನು ಪ್ರತಿಕ್ರಿಯೆ ನೀಡಿರುತ್ತೇವೋ ಅದನ್ನು ತಪ್ಪಾಗಿ ಅರ್ಥೈಸಲಾಗುತ್ತೆ ಎಂದಿದ್ದಾರೆ. ಈ ಬಗ್ಗೆ ಸುದೀಪ್ ಹಾಗೂ ಶಿವಣ್ಣ ಕೂಡ ಬೇಸರ ವ್ಯಕ್ತ ಪಡಿಸಿದ್ದರು ಎಂದು ಧನಂಜಯ್ ಹೇಳಿದ್ದಾರೆ.
"ಸುದೀಪ್ ಸರ್ ಒಮ್ಮೆ ಹೇಳಿದ್ದರು. ಒಬ್ಬ ಕಲಾವಿದನ ಹತ್ತಿರ ಹೋಗಿ ನಿಮಗೆ ಹೀಗೆ ಆಯ್ತಲ್ಲ ಅಂತ ಕೇಳಿದರೆ ಯಾವ ಕಲಾವಿದನೂ ಸಡನ್ ಆಗಿ ಉತ್ತರ ಕೊಡುವುದಕ್ಕೆ ಗೊತ್ತಾಗುವುದಿಲ್ಲ. "ಸುದೀಪ್ ಸರ್ಯಿಂದ ಹಿಡಿದು, ಶಿವಣ್ಣ ಸೇರಿದಂತೆ ಇಂಡಸ್ಟ್ರಿಯಲ್ಲಿ ಎಲ್ಲರೂ ಹೀಗೆ ಆಗಬಾರದಿತ್ತು ಅಂತ ಬೇಜಾರೇ ಮಾಡಿಕೊಂಡಿರೋದು. ಅದನ್ನು ಯಾರೂ ಸೆಲೆಬ್ರೆಟ್ ಮಾಡುತ್ತಿಲ್ಲ. ಹಾಗಂತ ಅಂತಹ ಸನ್ನಿವೇಶದಲ್ಲಿ ಯಾರೂ ಸಪೋರ್ಟ್ ಮಾಡುವುದಕ್ಕೆ ಆಗುವುದಿಲ್ಲ. ಅದಕ್ಕೆ ಕಾನೂನು ಇದೆ. ಅದನ್ನೇ ಮಾತಾಡಿರುತ್ತೇವೆ. ಅದನ್ನು ಬೇರೆ ಬೇರೆ ರೀತಿ ತಿಳಿಸಿ ಹೇಳಿರುತ್ತಾರೆ. ಈಗಲೂ ಅದೇ ಹೇಳುವುದು ಕಾನೂನಾತ್ಮಕವಾಗಿ ಏನಾಗಬೇಕೋ ಅದೆಲ್ಲ ಆಗಿ, ಚೆನ್ನಾಗಿ ಹೊರ ಬಂದರೆ ಅದೂ ಖುಷಿನೇ. ಅದಕ್ಕೆ ಅಂತ ಒಂದು ಸಿಸ್ಟಮ್ ಇದೆಯಲ್ಲ. ಅದನ್ನು ದಾಟಿಕೊಂಡೇ ಬರಬೇಕು. ಹಾಗಂತ ಅವರ ಮೇಲೆ ಪ್ರೀತಿ ಇಲ್ಲ ಅಂತಲ್ಲ" - ನಟ, ಡಾಲಿ ಧನಂಜಯ್.
ನಮ್ನಮ್ಮಲ್ಲಿ ಕನೆಕ್ಷನ್ ಇರುತ್ತೆ
ಇದೇ ವೇಳೆ ಕಲಾವಿದರ ನಡುವೆ ಉತ್ತಮ ಬಾಂಧವ್ಯವಿರುತ್ತೆ. ಒಂದೊಳ್ಳೆ ಆತ್ಮೀಯತೆ ಇರುತ್ತೆ ಎಂದು ಡಾಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. "ಒಬ್ಬ ಅಭಿಮಾನಿಗೂ ಕಲಾವಿದನೂ ಸಂಬಂಧ ಇರುತ್ತಲ್ಲ. ಹಾಗೇ ಒಬ್ಬ ಕಲಾವಿದನಿಗೂ ಇನ್ನೊಬ್ಬ ಕಲಾವಿದನಿಗೂ ಸಂಬಂಧ ಇರುತ್ತೆ. ಅದೇ ತರಹದ್ದ ಕನೆಕ್ಷನ್ ಇರುತ್ತೆ. ನಾವು ಕೂಡ ಅಭಿಮಾನಿಗಳನ್ನಾಗಿ ನೋಡಿಕೊಂಡು ಬಂದಿರುತ್ತೇವೆ. ಈತರ ಮಾಡಿಕೊಳ್ಳಬಾರದು ಅಂತ ಅಭಿಮಾನಿಗಳಿಗೆ ಅನಿಸಿರಲ್ವ? ಹಾಗೇ ನಮಗೂ ಅನಿಸಿರುತ್ತೆ. ಅದು ಪರ್ಸನಲ್ ಕನೆಕ್ಷನ್ ಇದ್ದಾಗ ಮಾತ್ರ ಅನಿಸೋದು. ಎಲ್ಲದನ್ನೂ ಬೇರೆ ತರ ಬಿಂಬಿಸಿ ಇಡೀ ಇಂಡಸ್ಟ್ರಿ ನೆಗೆಟಿವ್ ರೀತಿ ಆಗಿಬಿಟ್ಟಿದೆ." ಎನ್ನುತ್ತಾರೆ ಡಾಲಿ.
"ಕಾನೂನಾತ್ಮಕವಾಗಿ ಏನಾಗ್ಬೇಕೋ ಆಗುತ್ತೆ"
"ನಾನು ಒಬ್ಬ ಅಭಿಮಾನಿ ಅಲ್ಲವೇ. ನಮ್ಮ ಜಾಗದಲ್ಲಿ ಅವರ ಅಣ್ಣ-ತಮ್ಮ ಇದ್ದರೂ ಹೀಗೆ ಪ್ರತಿಕ್ರಿಯೆ ನೀಡುತ್ತಿದ್ದರು. ಕಾನೂನಾತ್ಮಕವಾಗಿ ಏನು ಆಗಬೇಕೋ ಅದು ಆಗೋದು. ಅದನ್ನು ಬದಲಾಯಿಸುವುದಕ್ಕೆ ಆಗುವುದಿಲ್ಲ. ಅಂತಹದ್ದೊಂದು ಘಟನೆ ಆಗಬಾರದು ಅಂತ ಬಯಸುತ್ತಾರೆ ವಿನ: ಬೇರೆಯದ್ದನ್ನು ಬಯಸುವುದಿಲ್ಲ. ನಿಮಗೆ ಹೇಗೆ ಅನಿಸಿರುತ್ತೋ ಹಾಗೇ ನನಗೂ ಅನಿಸಿರುತ್ತೆ. ಅದನ್ನು ಬೇರೆ ಬೇರೆ ರೀತಿ ಎಡಿಟ್ ಮಾಡಿ ಕೊಟ್ಟಿರುತ್ತಾರೆ." ಎಂದು ಡಾಲಿ ಧನಂಜಯ್ ಹೇಳಿದ್ದಾರೆ.
"ಸ್ಟ್ರೈಟ್ ಆಗಿ ಫೈಟ್ ಮಾಡಿ"
ಇನ್ನು ಚಿತ್ರರಂಗದಲ್ಲಿ ಗ್ಯಾಂಗ್ ಕಟ್ಟಿಕೊಂಡು ಧನಂಜಯ್ ಅವರನ್ನು ತುಳಿಯುವ ಪ್ರಯತ್ನ ನಡೆಯುತ್ತಿದೆ ಅನ್ನೋ ಮಾತಿಗೆ ಖಡಕ್ ಉತ್ತರ ಕೊಟ್ಟಿದ್ದಾರೆ. ಹಿಂದಿನಿಂದ ಪಿತೂರಿ ಮಾಡುವವರಿಗೂ ಸ್ಟ್ರೈಟ್ ಆಗಿ ಫೈಟ್ ಮಾಡಿ ಎಂದಿದ್ದಾರೆ. "ಆತರ ಏನಾದರೂ ಇದ್ದರೆ ಸ್ಟ್ರೈಟ್ ಆಗಿ ಬಂದು ಫೈಟ್ ಮಾಡಿ. ನನಗೂ ಜೀವನ ಮಜಾ ಕೊಡುತ್ತೆ. ಅಟ್ಲೀಸ್ಟ್ ನನಗೆ ಯಾರ ಜೊತೆ ಹೊಡೆದಾಡುತ್ತಿದ್ದೇನೆ ಅಂತ ಗೊತ್ತಾಗುತ್ತೆ ಅಲ್ವಾ? ಇಲ್ಲ ಅಂದರೆ, ನಿಮಗೂ ಮಜಾ ಕೊಡಲ್ಲ. ನನಗೂ ಮಜಾ ಕೊಡಲ್ಲ. ಬಚ್ಚಿಟ್ಟುಕೊಂಡು ಆಟ ಆಡುವುದರಲ್ಲಿ ಏನಿದೆ?" ಎಂದು ಡಾಲಿ ಧನಂಜಯ್ ಪ್ರಶ್ನೆ ಮಾಡಿದ್ದಾರೆ.


Click it and Unblock the Notifications

