X
ಹೋಮ್ ಚಲನಚಿತ್ರಗಳ ಒಳನೋಟ

ಸತತ ಸೋಲಿನ ಬಳಿಕ ಸ್ಯಾಂಡಲ್‌ವುಡ್‌ಗೆ ಕಂಬ್ಯಾಕ್ ಮಾಡಲು ಕಾಯುತ್ತಿರುವ 8 ನಟರಿವರು!

Author Sowmya Bairappa | Published: Monday, July 10, 2023, 03:02 PM [IST]

ಚಿತ್ರರಂಗದಲ್ಲಿ ಎಷ್ಟೇ ದೊಡ್ಡ ಸ್ಟಾರ್ ನಟರಾದರೂ ಕೂಡ ಏರುಪೇರುಗಳನ್ನು ಎದುರಿಸಲೇಬೇಕಾಗುತ್ತದೆ. ಹಲವು ಬಾರಿ ಬ್ಯಾಕ್‌ ಟು ಬ್ಯಾಕ್ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ ನಟರು ಕೂಡ ಸಾಲು-ಸಾಲು ಸೋಲು ಅನುಭವಿಸುವ ಸಂದರ್ಬ ಬಂದೊದಗುತ್ತದೆ. ಅವರ ಸಿನಿಮಾ ಸೋಲು ಅಥವಾ ಗೆಲವು ಸಾಧಿಸಲು ಅವರೊಬ್ಬರೇ ಕಾರಣರಾಗಿರುವುದಿಲ್ಲ. ಬದಲಾಗಿ ಒಂದು ಸಿನಿಮಾಗೆ ಕಥೆ ಬಹಳ ಮುಖ್ಯವಾಗಿರುತ್ತದೆ. ಕಥೆ ಚೆನ್ನಾಗಿದ್ದರೆ ಪ್ರೇಕ್ಷಕರು ಕೈ ಹಿಡಿಯುತ್ತಾರೆ. ಕೆಲವೊಮ್ಮೆ ನಟರು ಉತ್ತಮ ಕಥೆ ಆಯ್ದುಕೊಳ್ಳುವಲ್ಲಿ ಎಡವಿ ಸೋಲನ್ನು ಅನುಭವಿಸುತ್ತಾರೆ. ಇಲ್ಲಿ ಹಿಂದಿನ ಸಿನಿಮಾಗಳಲ್ಲಿ ಸೋಲನ್ನ ಅನುಭವಿಸಿ, ಇದೀಗ ಉತ್ತಮ ಕಥೆಯೊಂದಿಗೆ ಸ್ಯಾಂಡಲ್‌ವುಡ್‌ಗೆ ಕಮ್‌ಬ್ಯಾಕ್ ಮಾಡಲು ಕಾಯುತ್ತಿರುವ ನಟರ ಪಟ್ಟಿಯನ್ನು ನೀಡಲಾಗಿದೆ.


cover image
ದಿಗಂತ್

ಕನ್ನಡ ಚಿತ್ರರಂಗದಲ್ಲಿ ದೂದ್ ಪೇಡ ಎಂದೇ ಖ್ಯಾತಿಗಳಿಸಿರುವ ದಿಗಂತ್, 2006ರಲ್ಲಿ  ಯೋಗರಾಜ್ ಭಟ್ ನಿರ್ದೇಶನದ ಮುಂಗಾರು ಮಳೆ ಸಿನಿಮಾದಲ್ಲಿ ಗೌತಮ್ ಎಂಬ ಪಾತ್ರ ನಿರ್ವಹಿಸುವ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿಕೊಟ್ಟರು. ಬಳಿಕ 2009ರಲ್ಲಿ ಮನಸಾರೆ ಸಿನಿಮಾ ಮೂಲಕ ನಾಯಕನಾಗಿ ಪದಾರ್ಪಣೆ ಮಾಡಿದ ಅವರು, ಮೊದಲ ಸಿನಿಮಾದಲ್ಲೇ ಯಶಸ್ಸು ಗಳಿಸಿದರು. ಬಳಿಕ  ಲೈಫು ಇಷ್ಟೇನೆ, ಪಾರಿಜಾತ, ಗಾಳಿಪಟ ಹೀಗೆ ಹಲವು ಹಿಟ್‌ ಸಿನಿಮಾಗಳನ್ನು ನೀಡಿದರು. ಆದರೆ, ಆನಂತರದಲ್ಲಿ ಬಂದ ದಿಗಂತ್ ಸಿನಿಮಾಗಳನ್ನು ಸಿನಿರಸಿಕರ ಮನಗೆಲ್ಲುವಲ್ಲಿ ಸೋತಿವೆ. ಈ ವರ್ಷ ದಿಗಂತ್ ಅಭಿನಯದ ಯದಾ ಯದಾ ಹಿ ಚಿತ್ರ ತೆರೆಕಂಡಿದ್ದು, ಅದು ಕೂಡ ಯಶಸ್ಸು ಗಳಿಸಿಲ್ಲ. ಸದ್ಯ ದಿಗಂತ್, ಎಡಗೈ ಅಪಘಾತಕ್ಕೆ ಕಾರಣ ಹಾಗೂ ಬ್ಯಾಚುಲರ್ ಪಾರ್ಟಿ ಚಿತ್ರದಲ್ಲಿ ನಟಿಸಿದ್ದು, ಉತ್ತಮ ಕಮ್‌ಬ್ಯಾಕ್‌ಗೆ ಕಾಯುತ್ತಿದ್ದಾರೆ. 

ಯೋಗೇಶ್

ನಟ ಯೋಗೇಶ್ 'ದುನಿಯಾ' ಸಿನಿಮಾದಲ್ಲಿ ಲೂಸ್ ಮಾದ ಪಾತ್ರದಲ್ಲಿ ನಟಿಸುವ ಮೂಲಕ ಚಂದನವನ ಪ್ರವೇಶಿಸಿದರು. ಇವರು ಮೊದಲ ನಾಯಕನಾಗಿ ನಟಿಸಿದ್ದು ನಂದ ಲವ್ಸ್ ನಂದಿತಾ ಚಿತ್ರದಲ್ಲಿ. ಈ ಸಿನಿಮಾ ಸೂಪರ್ ಹಿಟ್ ಆಗಿದ್ದು, ನಂತರದಲ್ಲಿ ಅಂಬಾರಿ, ಸಿದ್ಲಿಂಗು, ಹುಡುಗರು, ಯಾರೇ ಕೂಗಾಡಲಿ ಹೀಗೆ ಕೆಲ ಹಿಟ್ ಚಿತ್ರಗಳನ್ನು ನೀಡಿದರು. ಯಾರೇ ಕೂಗಾಡಲಿ ಸಿನಿಮಾ ಬಳಿಕ ತೆರೆಕಂಡ ಯೋಗೇಶ್ ಸಿನಿಮಾಗಳು ಅಷ್ಟೊಂದು ಸದ್ದು ಮಾಡಿಲ್ಲ. ಇದೀಗ ಯೋಗೇಶ್ ಒಳ್ಳೆಯ ಕಥೆಯೊಂದಿಗೆ ಕಮ್‌ಬ್ಯಾಕ್ ಮಾಡಲು ಸಾಕಷ್ಟು ತಯಾರಿ ತಡೆಸುತ್ತಿದ್ದಾರೆ. ಸದ್ಯ ಅವರು ರೋಜಿ ನಾಯಕನಾಗಿ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.  

 

ಶ್ರೀನಗರ ಕಿಟ್ಟಿ

ಬಾಲನಟನಾಗಿ ಚಿತ್ರರಂಗಕ್ಕೆ ಕಾಲಿಟ್ಟ ಶ್ರೀನಗರ ಕಿಟ್ಟಿ, 2003ರಲ್ಲಿ ತೆರೆಕಂಡ ಚಂದ್ರ ಚಕೋರಿ ಚಿತ್ರದಲ್ಲಿ ಖಳನಾಯಕನಾಗಿ ಅಭಿನಯ ಆರಂಭಿಸಿದರು. ನಂತರ ಮತ್ತೆರೆಡು ವರ್ಷ ಗೌಡ್ರು, ಲವ್ ಸ್ಟೋರಿ, ಆದಿ, ಅಯ್ಯ ಮುಂತಾದ ಚಿತ್ರಗಳಲ್ಲಿ ನೆಗೆಟಿವ್ ಪಾತ್ರಗಳಲ್ಲಿ ನಟಿಸಿದರು. 2005ರಲ್ಲಿ ತೆರೆಕಂಡ ಗಿರಿ ಚಿತ್ರದಿಂದ ನಾಯಕನಾಗಿ ಹೊಸ ಇನ್ನಿಂಗ್ಸ್ ಆರಂಭಿಸಿದ ಕಿಟ್ಟಿ, ಆನಂತರ ಕೆಲ ಸಿನಿಮಾಗಳಲ್ಲಿ ನಟಿಸಿದರಾದರೂ ಯಾವ ಚಿತ್ರವೂ ಯಶಸ್ವಿಯಾಗಲಿಲ್ಲ. ನಾಯಕನಾಗಿ ಇವರಿಗೆ ಕೀರ್ತಿ ತಂದು ಕೊಟ್ಟ ಚಿತ್ರ ದುನಿಯಾ ಸೂರಿ ನಿರ್ದೇಶನದ `ಇಂತಿ ನಿನ್ನ ಪ್ರೀತಿಯ'.  ಬಳಿಕ ಕೆಲ ಹುಡುಗರು, ಸಂಜು ವೆಡ್ಸ್ ಗೀತಾ ಸೇರಿದಂತೆ ಕೆಲ ಹಿಟ್ ಸಿನಿಮಾ ನೀಡಿದ್ದರು.  ಇದಾದ ಬಳಿಕ ಯಾವುದೇ ಹಿಟ್ ಸಿನಿಮಾ ನೀಡಲಿಲ್ಲ. ಸತತ ಸೋಲಿನ ಬಳಿಕ ಶ್ರೀನಗರ ಕಿಟ್ಟಿ 2023ರಲ್ಲಿ  ಗೌಳಿ ಸಿನಿಮಾ ಮೂಲಕ ಚಂದನವನಕ್ಕೆ ಮರಳಿದ್ದಾರೆ. ಈ ಸಿನಿಮಾ ಸೂಪರ್ ಹಿಟ್ ಆಗದಿದ್ದರೂ ಸ್ವಲ್ಪಮಟ್ಟಿಗೆ ಪ್ರೇಕ್ಷಕರಿಗೆ ಇಷ್ಟವಾಗಿತ್ತು. ಸದ್ಯ ಅವರು ಸಂಜು ವೆಡ್ಸ್ ಗೀತಾ ೨, ಪಾಪು, ಬುದ್ದಿವಂತ ೨ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. 

ಸತೀಶ್ ನೀನಾಸಂ

ಅಭಿನಯ ಚತುರ ಎಂದೇ ಖ್ಯಾತಿಗಳಿಸಿರುವ ಸತೀಶ್ ನೀನಾಸಂ, ಲೈಫ್ ಇಷ್ಟೇನೇ, ಪಂಚರಂಗಿ, ಅಣ್ಣಾಬಾಂಡ್, ಎನೋ ಒಂಥರಾ ಸೇರಿದಂತೆ ಕೆಲ ಸಿನಿಮಾಗಳಲ್ಲಿ ಸಣ್ಣಪಾತ್ರಗಳಲ್ಲಿ ಅಭಿನಯಿಸಿದರು. ೨೦೧೩ರಲ್ಲಿ ಲೂಸಿಯಾ ಸಿನಿಮಾ ಮೂಲಕ ನಾಯಕನಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಅವರು, ಮೊದಲ ಸಿನಿಮಾದಲ್ಲೇ ಸೂಪರ್ ಸಕ್ಸಸ್ ಕಂಡರು. ಬಳಿಕ ಬ್ಯೂಟಿಫುಲ್ ಮನಸುಗಳು, ಚಂಬಲ್, ಅಯೋಗ್ಯ ಸೇರಿದಂತೆ ಕೆಲ ಹಿಟ್ ಸಿನಿಮಾಗಳನ್ನು ನೀಡದ ಅವರು, ನಂತರ ಬಂದ ತೆರೆಕಂಡ ಚಿತ್ರಗಳಲ್ಲಿ ಸೋಲನುಭವಿಸಿದರು. ಸದ್ಯ ಅವರು ಕಮ್‌ಬ್ಯಾಕ್ ಮಾಡಲು ತಯಾರಿ ನಡೆಸುತ್ತಿದ್ದು, ಅಶೋಕ ಬ್ಲೇಡ್, ದಸರಾ, ಮ್ಯಾಟ್ನಿ ಸೇರಿದಂತೆ ಸಾಲು-ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ಪೈಕಿ ಅಶೋಕ ಬ್ಲೇಡ್ ಪ್ಯಾನ್ ಇಂಡಿಯಾ ಸಿನಿಮಾವಾಗಿದೆ. 

ವಿನಯ್ ರಾಜ್ ಕುಮಾರ್

ಡಾ.ರಾಜ್‌ಕುಮಾರ್ ಅಭಿನಯದ ಒಡ ಹುಟ್ಟಿದವರು, ಆಕಸ್ಮಿಕ, ಅನುರಾಗದ ಅಲೆಗಳು ಚಿತ್ರಗಳಲ್ಲಿ ಬಾಲನಟರಾಗಿ ನಟಿಸಿದ್ದ ವಿನಯ್ ರಾಜ್‌ಕುಮಾರ್, ೨೦೧೫ರಲ್ಲಿ ಸಿದ್ಧಾರ್ಥ ಚಿತ್ರದ ಮೂಲಕ ಮೊದಲ ನಾಯಕನಾಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿಕೊಟ್ಟರು. ಬಳಿಕ ಕೆಲ ಸಿನಿಮಾಗಳಲ್ಲಿ ನಟಿಸಿದರಾದರೂ ಕೂಡ ಯಾವ ಸಿನಿಮಾವೂ ನಿರೀಕ್ಷಿಸಿದಷ್ಟು ಯಶಸ್ಸು ನೀಡಲಿಲ್ಲ. ಸದ್ಯ ಅವರು ಗ್ರಾಮಾಯಣ, ಪೆಪೆ, ಅಂದೊಂದಿತ್ತು ಕಾಲ, ಒಂದು ಸರಳ ಪ್ರೇಮಕಥೆ ಚಿತ್ರಗಳ ಮೂಲಕ ಭರ್ಜರಿ ಕಮ್‌ಬ್ಯಾಕ್‌ ಮಾಡಲು ತಯಾರಿ ನಡೆಸುತ್ತಿದ್ದಾರೆ. ಈ ಪೈಕಿ ಗ್ರಾಮಾಯಣ ಹಾಗೂ ಪೆಪೆ ಸಿನಿಮಾಗಳು ನಿರೀಕ್ಷೆ ಮೂಡಿಸಿವೆ. 

ಆದಿತ್ಯ

ಖ್ಯಾತ ಚಿತ್ರ ನಿರ್ದೇಶಕ ಮತ್ತು ನಿರ್ಮಾಪಕ ರಾಜೇಂದ್ರ ಸಿಂಗ್ ಬಾಬು ಅವರ ಪುತ್ರನಾಗಿರುವ ನಟ ಆದಿತ್ಯ,  2004ರಲ್ಲಿ ತೆರೆಕಂಡ ಲವ್ ಸಿನಿಮಾ ಮೂಲಕ ಚಂದನವನ ಪ್ರವೇಶಿಸಿದರು. ಆದರೆ, ಅವರು ಬ್ರೇಕ್ ಪಡೆದಿದ್ದು 2005ರಲ್ಲಿ ತೆರೆಕಂಡ ಡೆಡ್ಲಿ ಸೋಮ ಚಿತ್ರದಿಂದ. ಇದಕ್ಕೂ ಮೊದಲು ಕನ್ನಡದ ಎ.ಕೆ.47 ಹಿಂದಿ ರಿಮೇಕ್‌ನಲ್ಲಿ ನಾಯಕನಾಗಿ ನಟಿಸಿದ್ದರು. ಬಳಿಕ ಎದೆಗಾರಿಕೆ, ಮೋಹಿನಿ 9886788888, ಸ್ನೇಹನಾ ಪ್ರೀತಿನಾ ಸೇರಿದಂತೆ ಕೆಲ ಹಿಟ್ ಸಿನಿಮಾಗಳನ್ನು ನೀಡಿದರು. ಇದೀಗ ಟೆರರ್ ಚಿತ್ರದ ಮೂಲಕ ಕಮ್‌ಬ್ಯಾಕ್ ಮಾಡಲು ತಯಾರಿ ನಡೆಸುತ್ತಿದ್ದಾರೆ. 

ನಿಖಿಲ್ ಕುಮಾರಸ್ವಾಮಿ

ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಪುತ್ರ ಹಾಗೂ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರ ಮೊಮ್ಮಗನಾಗಿರುವ ನಿಖಿಲ್ ಗೌಡ ಅವರು, ತಮ್ಮ ಹೋಮ್ ಬ್ಯಾನರ್ ನಲ್ಲಿ ನಿರ್ಮಾಣಗೊಂಡ `ಜಾಗ್ವಾರ್' ಚಿತ್ರದ ಮೂಲಕ ಕನ್ನಡ ಮತ್ತು ತೆಲುಗು ಚಿತ್ರರಂಗಕ್ಕೆ ಅದ್ಧೂರಿಯಾಗಿ ಪದಾರ್ಪಣೆ ಮಾಡಿದರು. ನಂತರ ಹರ್ಷ ನಿರ್ದೇಶನದಲ್ಲಿ ಮೂಡಿಬಂದ ಕೌಟುಂಬಿಕ ಚಿತ್ರ 'ಸೀತಾರಾಮ ಕಲ್ಯಾಣ'ದಲ್ಲಿ ನಟಿಸಿದರು. ಬಳಿಕ ಮುನಿರತ್ನರವರ ನಿರ್ಮಾಣದಲ್ಲಿ ಮೂಡಿಬಂದ ಅದ್ಧೂರಿ ಪೌರಾಣಿಕ ಚಿತ್ರ `ಕುರುಕ್ಷೇತ್ರ'ದಲ್ಲಿ ಅಭಿಮನ್ಯುವಿನ ಪಾತ್ರದಲ್ಲಿ ನಟಿಸಿದ್ದರು. ಆ ಬಳಿಕ ರೈಡರ್ ಸಿನಿಮಾದಲ್ಲಿ ನಟಿಸಿದ್ದರು. ಆದರೆ, ಯಾವ ಸಿನಿಮಾಗಳು ಅಷ್ಟು ಯಶಸ್ಸು ನೀಡಲಿಲ್ಲ. ಹೀಗಾಗಿ, ಮತ್ತೆ ರಾಜಕೀಯದತ್ತ ಮುಖ ಮಾಡಿದ್ದರು. ಇದೀಗ ಮತ್ತೆ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿರುವ ನಿಖಿಲ್, ಧನುಷ್ ಮತ್ತು ಯದುವೀರ ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ಇವುಗಳ ಜೊತೆಗೆ ದಕ್ಷಿಣ ಭಾರತದ ಹೆಸರಾಂತ ನಿರ್ಮಾಣ ಸಂಸ್ಥೆ ಲೈಕಾ ನಿಖಿಲ್ ಸಿನಿಮಾವೊಂದನ್ನು ನಿರ್ಮಾಣ ಮಾಡಲು ಮುಂದಾಗಿದೆ. ಈ ಮೂಲಕ ದೊಡ್ಡಮಟ್ಟದಲ್ಲಿ ಕಂಬ್ಯಾಕ್ ಮಾಡಲು ನಿಖಿಲ್ ಮುಂದಾಗಿದ್ದಾರೆ.  

 

ಧರ್ಮ ಕೀರ್ತಿರಾಜ್

ಕನ್ನಡ ಚಿತ್ರರಂಗದ ಪ್ರಸಿದ್ಧ ಖಳನಟ ಕೀರ್ತಿರಾಜ್ ಮಗನಾದ ಧರ್ಮ ಕೀರ್ತಿರಾಜ್ ನವಗ್ರಹ ಸಿನಿಮಾ ಮೂಲಕ ಗಮನ ಸೆಳೆದರು. ಈ ಸಿನಿಮಾದ ಕಣ್ ಕಣ್ಣ ಸಲುಗೆ ಹಾಡಿನ ಮೂಲಕ ಹುಡುಗಿಯ ಮನಗೆದ್ದಿದ್ದರು. ನಂತರ ಒಲವೇ ವಿಸ್ಮಯ ಸಿನಿಮಾ ಮೂಲಕ ಪೂರ್ಣ ಪ್ರಮಾಣದ ನಾಯಕನಾಗಿ ಹೊರಹೊಮ್ಮಿದರು. ಬಳಿಕ ಹಲವಾರು ಸಿನಿಮಾಗಳಲ್ಲಿ ನಟಿಸಿದರೂ ಕೂಡ ಅವು ಹಿಟ್ ಆಗಲಿಲ್ಲ. ಬಳಿಕ ಚಿತ್ರರಂಗದಿಂದ ದೂರ ಉಳಿದಿದ್ದ ಅವರು, ಇದೀಗ ರೋನಿ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಕಂಬ್ಯಾಕ್ ಮಾಡುತ್ತಿದ್ದಾರೆ. 

 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+