X
ಹೋಮ್ ಚಲನಚಿತ್ರಗಳ ಒಳನೋಟ

ಸ್ಯಾಂಡಲ್‌ವುಡ್‌ನಲ್ಲೀಗ ಹೊಸ ಟ್ರೆಂಡ್: ಹೀರೋಗಳಾಗಿ ಗಮನ ಸೆಳೆಯುತ್ತಿರುವ ಫೋಷಕ ನಟರಿವರು!

Author Sowmya Bairappa | Published: Tuesday, February 27, 2024, 01:07 PM [IST]

ಇತ್ತೀಚೆಗೆ ಕನ್ನಡ ಚಿತ್ರರಂಗದಲ್ಲಿ ಫೋಷಕ ನಟರ ಸಿನಿಮಾಗಳು ಸದ್ದು ಮಾಡುತ್ತಿವೆ. ಎಲ್ಲಾ ಕಥೆಗಳಿಗೂ ಸ್ಟಾರ್ ನಟರೇ ಇರಬೇಕೆಂಬುದಕ್ಕೆ ತದ್ವಿರುದ್ಧವಾಗಿ ಕೆಲ ವರ್ಷಗಳಿಂದ ಫೋಷಕ ನಟರನ್ನೇ ಪ್ರಮುಖ ಪಾತ್ರಧಾರಿಯನ್ನಾಗಿ ಆಯ್ಕೆ ಮಾಡುವ ಟ್ರೆಂಡ್ ಹೆಚ್ಚಾಗುತ್ತಿದೆ. ಇಂತಹ ಪ್ರಯೋಗಳನ್ನು ಮಾಡಿ ಹಲವು ನಿರ್ದೇಶಕರು ಗೆದ್ದಿದ್ದಾರೆ. ಮಲಯಾಳಂ ಹಾಗೂ ಮರಾಠಿ ಸಿನಿಮಾಗಳಲ್ಲಿ ಈ ಟ್ರೆಂಡ್ ಹೆಚ್ಚಾಗಿತ್ತು. ಇದೀಗ ಕನ್ನಡ ಚಿತ್ರರಂಗದಲ್ಲೂ ಫೋಷಕ ಕಲಾವಿದರೇ ನಾಯಕ ನಟರಾಗುತ್ತಿದ್ದಾರೆ. ಅಂತಹ ನಟರ ಮಾಹಿತಿ ಇಲ್ಲಿದೆ.


cover image
ರಂಗಾಯಣ ರಘು

ನಟ ರಂಗಾಯಣ ರಘು ಕಳೆದ ಎರಡು ದಶಕಗಳಿಂದ ತಮ್ಮ ಹಾಸ್ಯ ನಟನೆ ಮೂಲಕ ಕಚಗುಳಿ ಇಡುವುದರ ಜೊತೆಗೆ ಹಲವು ಭಾವಪೂರ್ಣ ಪಾತ್ರಗಳ ಮೂಲಕ ಪ್ರೇಕ್ಷಕರ ಹೃದಯ ಗೆದ್ದಿದ್ದಾರೆ. ಅವರು ಕಳೆದ ಎರಡು ವಾರಗಳ ಹಿಂದೆ ಬಿಡುಗಡೆಯಾದ 'ಶಾಖಾಹಾರಿ' ಸಿನಿಮಾದಲ್ಲಿ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದರು. ಈ ಚಿತ್ರದಲ್ಲಿ ಅವರ ಅಭಿನಯಕ್ಕೆ ಪದಗಳೇ ಇಲ್ಲ. ಸಿನಿಮಾದ ಆರಂಭದಿಂದ ಹಿಡಿದು ಕೊನೆಯವರೆಗೆ ಅದ್ಭುತವಾಗಿ ಅಭಿನಯಿಸುವ ಮೂಲಕ ತಮ್ಮ ವೃತ್ತಿಜೀವನದಲ್ಲಿ ಮತ್ತೊಂದು ಮೈಲಿಗಲ್ಲು ತಲುಪಿದ್ದಾರೆ. ರಂಗಾಯಣ ರಘು ಅವರು ನಟಿಸುವ ಪ್ರತಿಯೊಂದು ಪಾತ್ರಕ್ಕೂ ಅದರದ್ದೇ ಆದ ತೂಕವಿರುತ್ತೆ. ಟಗರು ಪಲ್ಯ ಸಿನಿಮಾದಲ್ಲೂ ಅದನ್ನು ಕಾಣಬಹುದು.  

ಗೋಪಾಲ್ ಕೃಷ್ಣ ದೇಶಪಾಂಡೆ

ರಂಗಭೂಮಿ ಕಲಾವಿದ ಗೋಪಾಲಕೃಷ್ಣ ದೇಶಪಾಂಡೆ ಅವರು ಕೂಡ ಸದ್ಯ ಕನ್ನಡದ ಚಿತ್ರರಂಗದಲ್ಲಿ ಬಹುಬೇಡಿಕೆಯ ನಟರಾಗಿ ಗುರುತಿಸಿಕೊಂಡಿದ್ದಾರೆ. ಗರುಡ ಗಮನ ವೃಷಭ ವಾಹನ, ಸಪ್ತ ಸಾಗರದಾಚೆ ಎಲ್ಲೋ ಸೈಡ್ ಎ ಮತ್ತು ಬಿ, ಟೋಬಿ ಹಾಗೂ ಶಾಖಾಹಾರಿ ಸಿನಿಮಾಗಳಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ಇವರು, ತಮ್ಮ ನಟನೆ ಮೂಲಕ ಜನರ ಮನಸ್ಸಿನಲ್ಲಿ ಗಟ್ಟಿ ಸ್ಥಾನ ಪಡೆದುಕೊಂಡಿದ್ದಾರೆ. ಕಂಟೆಂಟ್ ಇರುವ ಸಿನಿಮಗಳಿಗೆ ಇವರು ಇರಲೇಬೇಕು ಎಂಬ ಬೇಡಿಕೆಯೂ ಸೃಷ್ಟಿಯಾಗಿದೆ. ಗೋಪಾಲಕೃಷ್ಣ ಅವರು ನಟಿಸಿದ ಎಲ್ಲಾ ಪಾತ್ರಗಳು ಅಭಿಮಾನಿಗಳ ಜೊತೆಗೆ ಬೇಡಿಕೆಯನ್ನೂ ಹೆಚ್ಚಿಸಿವೆ.  

 

ಅಚ್ಯುತ್ ಕುಮಾರ್

ಯಾವುದೇ ಪಾತ್ರ ಕೊಟ್ಟರೂ ಅದಕ್ಕೆ ಜೀವ ತುಂಬುವ ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ ಅಚ್ಯುತ್ ಕುಮಾರ್. ಕನ್ನಡ ಚಿತ್ರರಂಗದಲ್ಲಿ ಅಪ್ಪ, ಅಣ್ಣ, ಊರಿನ ನಾಯಕ, ಪೊಲೀಸ್ ಅಧಿಕಾರಿ ಹೀಗೆ ಹಲವು ಪಾತ್ರಗಳ ಮೂಲಕ ಪ್ರೇಕ್ಷಕರ ಮನಗೆದ್ದಿರುವ ಇವರು, ತಮಿಳು, ತೆಲುಗು ಚಿತ್ರರಂಗದಲ್ಲೂ ಸ್ಟಾರ್ ನಟರ ಜೊತೆ ಅಭಿನಯಿಸುವ ಮೂಲಕ ಜನಪ್ರಿಯತೆ ಪಡೆದಿದ್ದಾರೆ. ಹಲವಾರು ಸಿನಿಮಾಗಳಲ್ಲಿ ಭಿನ್ನ-ಭಿನ್ನ ಪಾತ್ರಗಳಲ್ಲಿ ಅದ್ಭುತವಾಗಿ ನಟಿಸಿರುವ ಇವರು, ಯಾವ ನಾಯಕ ನಟರಿಗೂ ಕಡಿಮೆಯಿಲ್ಲ. ಅವರನ್ನು ಮುಖ್ಯ ಪಾತ್ರಧಾರಿನ್ನಾಗಿಸಿ ಈಗಾಗಲೇ ಹಲವು ಸಿನಿಮಾಗಳು ಬಂದಿವೆ.

 

ವೈಜನಾಥ್ ಬಿರಾದಾರ್

ಬಿರಾದರ್ ಅವರು ಹಲವು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ತೊಡಗಿಕೊಂಡಿದ್ದಾರೆ. ಬರಿ ಹೊಟ್ಟೆಯಲ್ಲಿ ಬಸ್ ಹಿಡಿದು ಕಲಾವಿದನಾಗಲು ಬೆಂಗಳೂರಿಗೆ ಬಂದ ಬಿರಾದಾರ್, ಆರಂಭದಲ್ಲಿ ಸಾಕಷ್ಟು ಕಷ್ಟಪಟ್ಟರು. ಕಾಶಿನಾಥ್ ಅವರ `ಅಜಗಜಾಂತರ' ಚಿತ್ರದ ಮೂಲಕ ಚಿತ್ರರಂಗದ ಸಿನಿಪಯಣ ಆರಂಭಿಸಿದ ಅವರಿಗೆ ತರ್ಲೆ ನನ್ಮಗ  ಚಿತ್ರದ ಭಿಕ್ಷುಕನ ಪಾತ್ರ ಕೈ ಹಿಡಿಯತು. ಮುಂದೆ ಹಲವು ಪಾತ್ರಗಳಿಗೆ ಜೀವ ತುಂಬಿರುವ ಇವರಿಗೆ ಇತ್ತೀಚೆಗೆ ನಾಯಕರಾಗಿ ನಟಿಸುವ ಅವಕಾಶಗಳು ಒದಗಿ ಬರುತ್ತಿವೆ. ಬಿರಾದಾರ್, ಖೊಟ್ಟಿ ಪೈಸೆ, 90 ಬಿಡಿ ಮನೀಗ್ ನಡಿ ಸೇರಿದಂತೆ ಕೆಲ ಸಿನಿಮಾಗಳಲ್ಲಿ ನಾಯಕನಾಗಿ ಅಬಿನಯಿಸಿದ್ದಾರೆ. 

ರಮೇಶ್ ಇಂದಿರಾ

ಕನ್ನಡ ಕಿರುತೆರೆಯಲ್ಲಿ ಜನಪ್ರಿಯ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದ ರಮೇಶ್ ಇಂದಿರಾ ಅವರು ಕೆಜಿಎಫ್ ಚಾಪ್ಟರ್ 1 ಸಿನಿಮಾದಲ್ಲಿ ಸೂರ್ಯನಾರಾಯಣ ಎಂಬ ಪಾತ್ರದ ಮೂಲಕ ಗಮನ ಸೆಳೆದಿದ್ದರು. ಸಿನಿಮಾದಲ್ಲಿ ಮಲಗಿಕೊಂಡೇ ಭಯ ಹುಟ್ಟಿಸಿದ್ದ ಇವರು ಗರುಡ ಹಾಗೂ ವಿರಾಟ್ ತಂದೆಯಾಗಿ ಕಾಣಿಸಿಕೊಂಡಿದ್ದರು. ನಂತರ ರಕ್ಷಿತ್ ಶೆಟ್ಟಿ ಅಭಿನಯದ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದಲ್ಲೂ ವಿಲನ್ ಪಾತ್ರದಲ್ಲಿ ಗಮನ ಸೆಳೆದರು. ಸೋಮ ಎಂಬ ಪಾತ್ರದಲ್ಲಿ ಅಭಿನಯಿಸಿದ್ದ ಅವರು, ತಮ್ಮ ಡೈಲಾಗ್ ಮೂಲಕವೇ ಪ್ರೇಕ್ಷಕರ ಮನಗೆದ್ದಿದ್ದರು. ಸದ್ಯ ಅವರಿಗೂ ಕೂಡ ಒಳ್ಳೊಳ್ಳೆಯ ಪಾತ್ರಗಳು ಒದಗಿ ಬರುತ್ತಿವೆ. 

 

ರವಿಶಂಕರ್ ಪಿ

2011ರಲ್ಲಿ ಕೋಟೆ ಸಿನಿಮಾದ ಮೂಲಕ ಕನ್ನಡಕ್ಕೆ ಕಾಲಿಟ್ಟ ರವಿಶಂಕರ್,  ಸುದೀಪ್ ಅಭಿನಯದ 'ಕೆಂಪೇಗೌಡ' ಚಿತ್ರದಲ್ಲಿ ಆರ್ಮುಗಂ ಪಾತ್ರದಲ್ಲಿ ನಟಿಸುವ ಮೂಲಕ ಅಪಾರ ಜನಪ್ರಿಯತೆ ಪಡೆದರು. ಆದಾದ ಬಳಿಕ ಇಂದಿನವರೆಗೆ ರವಿಶಂಕರ್ ಹಿಂದೆ ತಿರುಗಿ ನೋಡೆ ಇಲ್ಲ. ಕನ್ನಡ ಚಿತ್ರರಂಗದಲ್ಲಿ ಸಕಲಕಲಾವಲ್ಲಭ ಎಂದೇ ಗುರುತಿಸಿಕೊಂಡಿದ್ದಾರೆ. ರವಿಶಂಕರ್ ಅವರ ನಟನೆಗೆ ಕನ್ನಡಿಗರು ಮನಸೋತಿದ್ದಾರೆ. ಖಡಕ್ ವಾಯ್ಸ್, ಬೆಚ್ಚಿಬೀಳಿಸುವ ನಟನೆಯಿಂದ ಬೇಡಿಕೆ ಹೊಂದಿರುವ ರವಿಶಂಕರ್, ಎಂತಹ ಪಾತ್ರಕ್ಕೂ ಜೀವ ತುಂಬುತ್ತಾರೆ. ಪುನೀತ್ ರಾಜ್​​ಕುಮಾರ್, ಯಶ್, ದರ್ಶನ್, ಶರಣ್ ಹೀಗೆ ಬಹುತೇಕ ಕನ್ನಡ ನಟರ ಚಿತ್ರಗಳಲ್ಲಿ ಆಲ್‌ಟೈಮ್ ವಿಲನ್ ಆಗಿ ಅಬ್ಬರಿಸಿರುವ ಇವರು, ಅದ್ಭುತ ಕಲಾವಿದೆ. ಇವರು ನಟಿಸುವ ಪ್ರತಿಯೊಂದು ಪಾತ್ರ ಪ್ರೇಕ್ಷಕರ ಮನಸ್ಸನಲ್ಲಿ ಉಳಿಯುತ್ತದೆ.  

 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+