X
ಹೋಮ್ ಚಲನಚಿತ್ರಗಳ ಒಳನೋಟ

ದೊರೈ ಮತ್ತು ಭಗವಾನ್ ನಿರ್ದೇಶನದ ನೀವು ಮಿಸ್ ಮಾಡದೆ ನೋಡಲೇಬೇಕಾದ ಚಿತ್ರಗಳಿವು!

Author Sowmya Bairappa | Published: Monday, February 20, 2023, 04:54 PM [IST]

ಕನ್ನಡ ಚಿತ್ರರಂಗದ ಸಾರ್ವಕಾಲಿಕ ದಿಗ್ಗಜ ನಿರ್ದೇಶಕರ ಪಟ್ಟಿಯಲ್ಲಿ ಶಾಶ್ವತ ಸ್ಥಾನ ಪಡೆದಿರುವ ನಿರ್ದೇಶಕರಲ್ಲಿ ಮುಂಚೂಣಿಯಲ್ಲಿ ನಿಲ್ಲುವ ಇಬ್ಬರು ನಿರ್ದೇಶಕರೆಂದರೆ ಅದು ನಿರ್ದೇಶಕ ಎಸ್ ಕೆ ಭಗವಾನ್ ಹಾಗೂ ನಿರ್ದೇಶಕ ದೊರೈ. ಇವರಿಬ್ಬರು ಸುಮಾರು ೨೭ಕ್ಕೂ ಹೆಚ್ಚಿನ ಸಿನಿಮಾಗಳನ್ನು ಒಟ್ಟಿಗೆ ನಿರ್ದೇಶಿಸಿ ಗೆದ್ದಿದ್ದಾರೆ. ಇದು ಸಾಧ್ಯವಾಗಿದ್ದು ಅವರಿಬ್ಬರ ನಡುವೆಯಿದ್ದ ಬೇರ್ಪಡಿಸಲಾಗದ ಸ್ನೇಹದಿಂದ. ಹಾಗೆಂದ ಮಾತ್ರಕ್ಕೆ ದೊರೈ ಮತ್ತು ಭಗವಾನ್ ಬಾಲ್ಯಸ್ನೇಹಿತರಲ್ಲ. ಚಿತ್ರರಂಗಕ್ಕೆ ಬಂದ ಬಳಿಕವೇ ಇವರಿಬ್ಬರ ಪರಿಚಯವಾಗಿದ್ದು. ಹಲವರು ದೊರೈ ಭಗವಾನ್ ಎಂದರೆ ಓರ್ವ ವ್ಯಕ್ತಿಯೇ ಎಂದು ತಿಳಿದುಕೊಳ್ಳುವ ಮಟ್ಟಿಗೆ ಸಾಲು ಸಾಲು ಚಿತ್ರಗಳನ್ನು ಒಟ್ಟಿಗೆ ನಿರ್ದೇಶಿಸಿ, ನಿರ್ಮಿಸಿದ್ದಾರೆ ಈ ದಿಗ್ಗಜರು. ದೊರೈ ಮತ್ತು ಭಗವಾನ್ ನಿರ್ದೇಶನದ ನೀವು ನೋಡಲೇಬೇಕಾದ ಸಿನಿಮಾಗಳ ಪಟ್ಟಿ ಇಲ್ಲಿದೆ.


cover image
1

'ಜೇಡರ ಬಲೆ' ಎಂದಾಕ್ಷಣ ಮೊದಲು ನೆನಪಾಗೋದೇ ಡಾ.ರಾಜ್‌ಕುಮಾರ್. ಇದು ಕನ್ನಡದ ಮೊದಲ ಬಾಂಡ್ ಸಿನಿಮಾ. 1968ರಲ್ಲಿ ತೆರೆಕಂಡಿದ್ದ ಈ ಚಿತ್ರ ಅಂದಿನ ಸಿನಿಪ್ರಿಯರಿಗೆ ಸಖತ್ ಕಿಕ್ ಕೊಟ್ಟಿತ್ತು. ಬಾಂಡ್ ಸಿನಿಮಾ ಅನ್ನೋದು ಕೇವಲ ಇಂಗ್ಲಿಷ್ ಚಿತ್ರಗಳನ್ನು ನೋಡೋರಿಗೆ ಅನ್ನೋ ಕಾಲದಲ್ಲಿ ಕನ್ನಡಿಗರಿಗೆ ಬಾಂಡ್ ಆಗಿದ್ದು ಅಣ್ಣಾವ್ರು. 'ಜೇಡರ ಬಲೆ' ಸಿನಿಮಾದಿಂದ ಸ್ಯಾಂಡಲ್‌ವುಡ್‌ನಲ್ಲೂ ಬಾಂಡ್ ಸಿನಿಮಾಗಳು ಬರೋಕೆ ಶುರುವಾದವು. ಕನ್ನಡದಲ್ಲಿ ಬಾಂಡ್ ಚಿತ್ರಗಗಳಿಗೆ ಅಡಿಪಾಯ ಹಾಕಿಕೊಟ್ಟಿದ್ದೆ ಎಸ್ ಕೆ ಭಗವಾನ್ ಹಾಗೂ ದೊರೈ. 1968ರ ವೇಳೆ ಸಾಮಾಜಿಕ ಹಾಗೂ ಭಕ್ತಿ ಸಿನಿಮಾಗಳನ್ನೇ ನೋಡುತ್ತಿದ್ದ ಜನರಿಗೆ ಬಾಂಡ್ ಸಿನಿಮಾ ಕೊಟ್ಟಿದ್ದು ಭಗವಾನ್-ದೊರೈ. 'ಜೇಡರ ಬಲೆ' ಅಂದಿನ ಕಾಲದಲ್ಲಿ ಸೂಪರ್ ಹಿಟ್ ಆಗಿತ್ತು. 

ಕಸ್ತೂರಿ ನಿವಾಸ
2

ಕಸ್ತೂರಿ ನಿವಾಸ ಸಿನಿಮಾದಲ್ಲಿ ಡಾ.ರಾಜ್‌ಕುಮಾರ್ ನಾಯಕನಾಗಿ ನಟಿಸಿದ್ದರು.  ಈ ಚಿತ್ರದಲ್ಲಿ ಅವರ ರವಿ ಅನ್ನೋ ಪಾತ್ರ ಬಹಳ ವಿಶೇಷವಾಗಿತ್ತು.  ಉದ್ಯಮಿಯಾಗಿ, ಗೆಳೆಯ, ಪತಿ, ಭಗ್ನಪ್ರೇಮಿ ಹೀಗೆ ವಿವಿಧ ಶೇಡ್ ಗಳಲ್ಲಿ ಅಣ್ಣಾವ್ರು ಮಿಂಚಿದ್ದರು. ಭಗವಾನ್-ದೊರೈ ನಿರ್ದೇಶನದಲ್ಲಿ ಮೂಡಿಬಂದಿದ್ದ ಈ ಸಿನಿಮಾದಲ್ಲಿ ಜಯಂತಿ ಹಾಗೂ ಆರತಿ ನಾಯಕಿರಾಗಿ ಮಿಂಚಿದ್ದರು. ಈ ಚಿತ್ರದ ಆಡಿಸಿ ನೋಡು, ಬೀಳಿಸಿ ನೋಡು, ಆಡಿಸಿದಾತ ಬೇಸರ ಮೂಡಿ, ನೀ ಬಂದು ನಿಂತಾಗ ಹಾಡುಗಳು ಸಖತ್ ಹಿಟ್ ಆಗಿದ್ದವು. ಕನ್ನಡ ಕಸ್ತೂರಿ ನಿವಾಸ ತಮಿಳಿಗೆ 'ಅವಾನ್ ಧಾನ್ ಮಣಿಧನ್' ಆಗಿ ರಿಮೇಕ್ ಆಯಿತು.  ಅದರಲ್ಲಿ ಶಿವಾಜಿ ಗಣೇಶನ್ ನಾಯಕನಾಗಿ ಕಾಣಿಸಿಕೊಂಡಿದ್ದರು. ಹಿಂದಿಗೆ ಸಂಜೀವ್ ಕುಮಾರ್ 'ಶಾಂದಾರ್' ಹೆಸರಿನಲ್ಲಿ ರಿಮೇಕ್ ಮಾಡಿದರು. ಇದು ಡಾ.ರಾಜ್‌ಕುಮಾರ್ ಅಭಿನಯದ ಎವರ್ ಗ್ರೀನ್ ಸಿನಿಮಾ.   

ಎರಡು ಕನಸು
3

ದೊರೈ-ಭಗವಾನ್ ಕಾಂಬಿನೇಶನ್ ನಲ್ಲಿ ಮೂಡಿಬಂದ 'ಎರಡು ಕನಸು' ಚಿತ್ರದಲ್ಲಿ  ಡಾ.ರಾಜ್‌ಕುಮಾರ್ ನಾಯಕನಾಗಿ ನಟಿಸಿದ್ದರು. ಚಿತ್ರದಲ್ಲಿ ಅಣ್ಣಾವ್ರಿಗೆ ನಾಯಕಿಯರಾಗಿ ಕಲ್ಪನಾ ಮತ್ತು ಮಂಜುಳಾ ಕಾಣಿಸಿಕೊಂಡಿದ್ದರು. ಬಾಲ್ಯದಿಂದ ಬೆಳೆದು ಬಂದ ಪ್ರೀತಿ ಮುದುಡಿ, ಮತ್ತೋರ್ವ ಯುವತಿಯನ್ನು ಕೈಹಿಡಿಯುವ ಅಧ್ಯಾಪಕನೊಬ್ಬ ತನ್ನ ಹೊಸ ಜೀವನಕ್ಕೆ ಹೊಂದಿಕೊಳ್ಳುವ ಸನ್ನಿವೇಶವನ್ನು ಚಿತ್ರ ಮನೋಘ್ನವಾಗಿ ಚಿತ್ರಸಿತ್ತು. ಈ ಸಿನಿಮಾ ತೆಲುಗಿನಲ್ಲಿ 'ಪೂಜಾ' ಹೆಸರಿನಲ್ಲಿ ರಿಮೇಕ್ ಆಗಿದೆ. 

4

ದೊರೈ-ಭಗವಾನ್ ನಿರ್ದೇಶನದಲ್ಲಿ ಮೂಡಿಬಂದ  'ಬೆಂಕಿಯ ಬಲೆ' ಸಿನಿಮಾ ತರಾಸು ಅವರ ಕಾದಂಬರಿ ಆಧಾರಿತವಾಗಿತ್ತು. ಈ ಸಿನಿಮಾದಲ್ಲಿ  ಅನಂತ್ ನಾಗ್ ನಾಯಕನಾಗಿ ಹಾಗೂ ಲಕ್ಷ್ಮಿ ನಾಯಕಿಯಾಗಿ ನಟಿಸಿದ್ದು, ಚಿತ್ರ ಸೂಪರ್ ಹಿಟ್ ಆಗಿತ್ತು. ಬಾಲಕೃಷ್ಣ ಮತ್ತು ತೂಗುದೀಪ ಶ್ರೀನಿವಾಸ್ ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಬಡ ಶಿಕ್ಷಕನೊಬ್ಬನ ಬವಣೆಯನ್ನು ಚಿತ್ರ ಮನೋಘ್ನವಾಗಿ ಚಿತ್ರಿಸಿತ್ತು. ನರಸಿಂಹ ಎಂಬ ಶಾಲಾ ಶಿಕ್ಷಕ ರುಕ್ಮಿಣಿಯನ್ನು ಮೆಚ್ಚಿ ಮದುವೆಯಾಗುತ್ತಾನೆ. ಆದರೆ ಮುಂದೆ ನರಸಿಂಹನಿಗೆ ಕ್ಯಾನ್ಸರ್ ಬಂದಾಗ ರುಕ್ಮಿಣಿ ಅವನನ್ನು ಉಳಿಸಿಕೊಳ್ಳಲು ಹರಸಾಹಸ ಪಡುತ್ತಾಳೆ ಎಂಬುದು ಚಿತ್ರದ ಕಥೆ. 

ಜೀವನ ಚೈತ್ರ
5

ಡಾ.ರಾಜ್‌ಕುಮಾರ್, ಮಾಧವಿ ಮುಂತಾದವರು ನಟಿಸಿದ್ದ ದೊರೈ ಮತ್ತು ಭಗವಾನ್ ನಿರ್ದೇಶನದ 'ಜೀವನ ಚೈತ್ರ' ಸಿನಿಮಾ ಕನ್ನಡ ಚಿತ್ರರಂಗ ಕಂಡ ಅಪೂರ್ವ ಸಿನಿಮಾಗಳಲ್ಲಿ ಒಂದು.  'ಜೀವನ ಚೈತ್ರ' ಒಂದು ಸಿನಿಮಾವಾಗಿ ಗೆದ್ದಿದ್ದು ಒಂದೆಡೆಯಾದರೆ, ಅದು ಮೂಡಿಸಿದ ಸಾಮಾಜಿಕ ಪರಿಣಾಮ ಬಹಳ ದೊಡ್ಡದು. ಈ ಚಿತ್ರದಿಂದ ಪ್ರಭಾವಿತರಾಗಿ ಅನೇಕರು ಕುಡಿತ ತ್ಯಜಿಸಿದ್ದರು. ಸುಮಾರು 30 ಹಳ್ಳಿಗಳಲ್ಲಿ ಮಹಿಳೆಯರು ಒಂದಾಗಿ ಅಲ್ಲಿನ ಸಾರಾಯಿ ಅಂಗಡಿಗಳನ್ನು ಪುಡಿ ಮಾಡಿದ್ದರು. ಇದೊಂದು ಸೂಪರ್ ಹಿಟ್ ಸಿನಿಮಾವಾಗಿತ್ತು. 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+