ಕನ್ನಡ ಹಲವಾರು ಕಲಾವಿದರು ನಟ, ನಿರ್ದೇಶಕರಾಗಿ ತಮ್ಮದೇ ಛಾಪು ಮೂಡಿಸಿದ್ದಾರೆ. ನಟನೆ ಜೊತೆಗೆ ತಮ್ಮದೇ ಶೈಲಿಯಲ್ಲಿ ನಿರ್ದೇಶನ ಮಾಡಿ, ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಜೊತೆಗೆ ಹಲವಾರು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ನಟನೆ ಮತ್ತು ನಿರ್ದೇಶನ ಎರಡರಲ್ಲೂ ಸೈ ಎನಿಸಿಕೊಂಡ ಕನ್ನಡದ 9 ಕಲಾವಿದರ ಪಟ್ಟಿ ಇಲ್ಲಿದೆ.
ಚಿತ್ರರಂಗದಲ್ಲಿನ ಮಡಿವಂತಿಕೆಗೆ ಮೊದಲ ಪೆಟ್ಟು ಕೊಟ್ಟ ನಿರ್ದೇಶಕ ಕಾಶಿನಾಥ್ ಎಂದರೆ ತಪ್ಪಾಗಲಾರದು. ಇವರು ಉಪೇಂದ್ರ, ಮನೋಹರ್, ಸುನೀಲ್ಕುಮಾರ್ ದೇಸಾಯಿ ಮುಂತಾದ ಹೆಸರಾಂತ ನಿರ್ದೇಶಕರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದರು. ಇವರ ನಟನೆ, ನಿರ್ದೇಶನ, ಸಂಗೀತ ನಿರ್ದೇಶನ ಹಾಗೂ ಚಿತ್ರ ನಿರ್ಮಾಣದಲ್ಲಿ ತಮ್ಮ ಪ್ರತಿಭೆ ತೋರಿ ಕನ್ನಡದ ವಿಶಿಷ್ಟ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದಾರೆ. ಇವರ ವಿಭಿನ್ನ ಶೈಲಿಯ ಚಿತ್ರಗಳು ಕನ್ನಡ ಚಿತ್ರರಂಗದಲ್ಲಿ ಯಶಸ್ಸು ಕಂಡಿವೆ. ಇವರ ಗರಡಿಯಲ್ಲಿ ಪಳಗಿದ ಅನೇಕ ಯುವಕರು ಇಂದು ಚಿತ್ರರಂಗದಲ್ಲಿ ಬಹಳ ಯಶಸ್ವಿಯಾಗಿದ್ದಾರೆ. 1976ರಲ್ಲಿ ಅಪರೂಪದ ಅತಿಥಿಗಳು ಸಿನಿಮಾ ಮೂಲಕ ನಿರ್ದೇಶನಕ್ಕಿಳಿದ ಇವರು,1984ರಲ್ಲಿ ಅನುಭವ ಸಿನಿಮಾದಲ್ಲಿ ತಾವೇ ನಾಯಕರಾಗಿ ಕಾಣಿಸಿಕೊಂಡರು. ಈ ಸಿನಿಮಾಗೆ ಯಶಸ್ಸು ಸಿಕ್ಕಿತು. ನಂತರ ಹಾಸ್ಯ ಸೇರಿದಂತೆ ವಿವಿಧ ಪಾತ್ರಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಛಾಪು ಮೂಡಿಸಿದ್ದರು.
1978ರಲ್ಲಿ ತೆರೆಕಂಡ ಸರ್ವಕಾಶಿ ಎಂಬ ನಟನೆಗೆ ಕಾಲಿಟ್ಟ ಶಂಕರ್ ನಾಗ್, ಅದೇ ಸಮಯದಲ್ಲಿ ಬೆಂಗಳೂರಿಗೆ ಸ್ಥಳಾಂತರದವಾದರು. ಬಳಿಕ ಗಿರೀಶ್ ಕಾರ್ನಾಡ್ ಅವರ `ಒಂದಾನೊಂದು ಕಾಲದಲ್ಲಿ' ಚಿತ್ರದಲ್ಲಿ ನಟಿಸಿದರು. ಈ ಚಿತ್ರದ ನಟನೆಗಾಗಿ ರಾಷ್ಟ್ರ ಪ್ರಶಸ್ತಿ ಪಡೆದರು. 1978ರಿಂದ ಮುಂದಿನ ಹನ್ನೆರೆಡು ವರ್ಷದಲ್ಲಿ 90 ಚಿತ್ರಗಳಲ್ಲಿ ನಟಿಸಿದ ಶಂಕರ್, ಕೆಲವು ಚಿತ್ರಗಳನ್ನು ಅಣ್ಣನಾದ ಅನಂತ್ ನಾಗ್ ಜೊತೆ ಸೇರಿ ನಿರ್ಮಿಸಿದ್ದಾರೆ. ಕಂಚಿನ ಕಂಠ, ವಿಭಿನ್ನವಾಗಿ ನಡೆಯುವ ಶೈಲಿ, ಆಕರ್ಷಕ ನೋಟಗಳಿಂದ ಗಮನ ಸೆಳೆದಿದ್ದ ಶಂಕರ್ ನಾಗ್ ನಿರ್ದೇಶನದ ಮೊದಲ ಸಿನಿಮಾ ಮಿಂಚಿನ ಓಟ. ಈ ಸಿನಿಮಾದಲ್ಲಿ ಅನಂತನಾಗ್ ಹಾಗೂ ಶಂಕರ್ ನಾಗ್ ಇಬ್ಬರು ಮುಖ್ಯಭೂಮಿಕೆಯಲ್ಲಿ ನಟಿಸಿದ್ದರು. ಈ ಚಿತ್ರ ಹಲವಾರು ವಿಭಾಗದಲ್ಲಿ ಪ್ರಶಸ್ತಿ ಪಡೆಯಿತು. ನಂತರ ಜನುಮ ಜನುಮದ ಅನುಬಂಧ, ಗೀತಾ ಚಿತ್ರಗಳನ್ನು ನಿರ್ದೇಶಿಸಿದರು. ಹಿಂದಿಯಲ್ಲಿ ವಿನೋದ್ ಮೆಹ್ರಾ ಅಭಿನಯದ ಲಾಲಚ್ ಚಿತ್ರವನ್ನು ನಿರ್ದೇಶಿಸಿದರು. ಹೊಸ ತೀರ್ಪು, ನೋಡಿ ಸ್ವಾಮಿ ನಾವಿರೋದೆ ಹೀಗೆ ನಿರ್ದೇಶಿಸಿದ ಶಂಕರ್, 1984ರಲ್ಲಿ ರಾಷ್ಟ್ರಪ್ರಶಸ್ತಿ ವಿಜೇತ ಚಿತ್ರ ಆಕ್ಸಿಡೆಂಟ್ ನಿರ್ದೇಶಿಸಿದರು. ಇವರು ನಿರ್ದೇಶಿಸಿದ ಎಲ್ಲಾ ಚಿತ್ರಗಳು ವಾಣಿಜ್ಯವಾಗಿ ಅಷ್ಟು ಲಾಭ ತರದಿದ್ದರೂ ಸಾಮಾಜಿಕ ಕಳಕಳಿ ಮತ್ತು ಪ್ರಯೋಗಶೀಲತೆಯಿಂದ ಕೂಡಿರುತ್ತಿದ್ದವು.
ಕನ್ನಡದ ಹೆಸರಾಂತ ನಿರ್ದೇಶಕ ಕಾಶಿನಾಥ್ ಅವರ ಬಳಿ ಸಹಾಯ ನಿರ್ದೇಶಕರಾಗಿ ಕೆಲಸ ಮಾಡಿದ್ದ ನಟ ಉಪೇಂದ್ರ ಅವರು,1992ರಲ್ಲಿ ತೆರೆಗೆ ಬಂದ ತರ್ಲೆ ನನ್ಮಗ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾದರು. 1993ರಲ್ಲಿ 'ಶ್' ಎಂಬ ಹಾರರ್ ಚಿತ್ರ ನಿರ್ದೇಶಿಸಿದರು. 1995ರಲ್ಲಿ ಬಿಡುಗಡೆಯಾದ ಉಪ್ಪಿ ನಿರ್ದೇಶನದ 'ಓಂ' ಚಿತ್ರ ಇಡೀ ಭಾರತ ಚಿತ್ರರಂಗದಲ್ಲಿಯೇ ಹೊಸ ಸಂಚಲನ ಸೃಷ್ಟಿಸಿತು. ಈ ಚಿತ್ರದಲ್ಲಿ ನಿಜವಾದ ರೌಡಿಗಳು ತಮ್ಮ ಪಾತ್ರಗಳಲ್ಲಿ ಸ್ವತಃ ತಾವೇ ಅಭಿನಯಿಸಿರುವುದು ವಿಶೇಷ. ನಂತರ ಆಪರೇಷನ್ ಅಂತ, ಸ್ವಸ್ತಿಕ್ ಚಿತ್ರಗಳನ್ನು ನಿರ್ದೇಶಿಸಿದರು.1998ರಲ್ಲಿ ತೆರೆಗೆ ಬಂದ 'ಎ' ಚಿತ್ರವನ್ನು ನಿರ್ದೇಶಿಸಿ ಸ್ವತಃ ತಾವೇ ನಟಿಸಿ, ನಾಯಕನಾಗಿಯೂ ಕನ್ನಡ ಚಿತ್ರರಂಗದಲ್ಲಿ ಪರಿಚಿತರಾದರು. ಇದಾದ ಬಳಿಕ ಬಂದ ಉಪೇಂದ್ರ ಚಿತ್ರವು ಹಲವಾರು ದಾಖಲೆಗಳನ್ನು ಬರೆಯಿತು. ಇವೆರಡು ಚಿತ್ರಗಳು ಕನ್ನಡದಲ್ಲಿ ಮಾತ್ರವಲ್ಲದೇ, ತೆಲುಗು ಚಿತ್ರರಂಗದಲ್ಲಿಯೂ ಶತದಿನ ಪೂರೈಸಿದವು. ಇಲ್ಲಿಂದ ಮುಂದೆ 10 ವರ್ಷಗಳ ಕಾಲ ನಿರ್ದೇಶನವನ್ನು ಬದಿಗಿಟ್ಟ ಉಪ್ಪಿ, ಹಲವಾರು ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದರು. ಮುಂದೆ ಇವರು 2010ರಲ್ಲಿ ನಿರ್ದೇಶಿಸಿದ 'ಸೂಪರ್' ಮತ್ತು 2015ರಲ್ಲಿ ನಿರ್ದೇಶಿಸಿದ 'ಉಪ್ಪಿ 2' ಚಿತ್ರಗಳು ಶತದಿನ ಪೂರೈಸಿದವು.
ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಿರ್ದೇಶಕ, ನಟ ಮತ್ತು ನಿರ್ಮಾಪಕರಾಗಿ ಗುರುತಿಸಿಕೊಂಡಿರುವ ರಿಷಭ್ ಶೆಟ್ಟಿ, ರಿಕ್ಕಿ ಚಿತ್ರದಿಂದ ಸಿನಿಮಾ ನಿರ್ದೇಶನಕ್ಕೆ ಇಳಿದರು. ಆದರೆ, ಈ ಸಿನಿಮಾ ಅಷ್ಟೇನೂ ಯಶಸ್ಸು ಕಾಣಲಿಲ್ಲ. ಇದಾದ ಬಳಿಕ ಕಿರಿಕ್ ಪಾರ್ಟಿ ಸಿನಿಮಾವನ್ನು ನಿರ್ದೇಶನ ಮಾಡಿದರು. ಈ ಸಿನಿಮಾ ಸೂಪರ್ ಹಿಟ್ ಆಯಿತು. ಈ ಸಿನಿಮಾ ಸಾಕಷ್ಟು ಯಶಸ್ಸು ತಂದು ಕೊಟ್ಟಿತು. ಇದಾದ ಬಳಿಕ ಕೇರಳದ ಕಾಸರಗೋಡುವಿನಲ್ಲಿ ಕನ್ನಡ ಶಾಲೆಗಳ ಪರಿಸ್ಥಿತಿ ಕುರಿತು ಇವರು ನಿರ್ದೇಶಿಸಿದ ಚಿತ್ರ `ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು' ಚಿತ್ರ ಪ್ರೇಕ್ಷಕ ಮತ್ತು ವಿಮರ್ಶಕರಿಂದ ವ್ಯಾಪಕ ಮನ್ನಣೆ ಪಡೆಯಿತು. ಈ ಸಿನಿಮಾಗೆ ಅತ್ಯುತ್ತಮ ಮಕ್ಕಳ ವಿಭಾಗದಲ್ಲಿ ರಾಷ್ಟ್ರ ಪ್ರಶಸ್ತಿ ಲಭಿಸಿತ್ತು. ನಂತರ ಬೆಲ್ ಬಾಟಮ್ ಸಿನಿಮಾ ಮೂಲಕ ನಾಯಕನಾಗಿಯೂ ಯಶಸ್ಸು ಗಳಿಸಿದರು. ಇದೀಗ ಕಾಂತಾರಾ ಸಿನಿಮಾ ಮೂಲಕ ರಿಷಬ್ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದ್ದಾರೆ. ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆಯುತ್ತಿರುವ ಕಾಂತಾರದಲ್ಲಿ ಪ್ರಶಸ್ತಿಗೆ ಅರ್ಹರು ಎಂಬಷ್ಟು ಚೆನ್ನಾಗಿ ರಿಷಬ್ ಅಭಿನಯಿಸಿದ್ದಾರೆ.
ರಕ್ಷಿತ್ ಶೆಟ್ಟಿ 2010ರಲ್ಲಿ ತೆರೆಕಂಡ `ನಮ್ ಏರಿಯಾದಲ್ಲೊಂದು ದಿನ' ಚಿತ್ರದ ಮೂಲಕ ಸಿನಿಪ್ರವೇಶ ಮಾಡಿದರು. ಆದರೆ, ರಕ್ಷಿತ್ ಗೆ ಬ್ರೇಕ್ ನೀಡಿದ ಚಿತ್ರ ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ. ಕಡಿಮೆ ಬಜೆಟ್ಟಿನಲ್ಲಿ ಉತ್ತಮ ಕತೆಯೊಂದಿಗೆ ತಯಾರಾದ ಈ ಚಿತ್ರ ರಕ್ಷಿತ್ ಸಿನಿಜೀವನಕ್ಕೆ ಉತ್ತಮ ಅಡಿಪಾಯ ಹಾಕಿತು. ನಂತರ ಇವರು `ಉಳಿದವರು ಕಂಡಂತೆ ಚಿತ್ರದ ಮೂಲಕ ನಿರ್ದೇಶಕರಾದರು. ಅದುವರೆಗೆ ಕೇವಲ ಎಂಡು ಚಿತ್ರಗಳಲ್ಲಿ ನಟಿಸಿದ್ದರೂ ತಮ್ಮ ವಿಶಿಷ್ಟ ಚಿತ್ರಗಳ ಮೂಲಕ ರಕ್ಷಿತ್ ಕನ್ನಡದ ಭರವಸೆಯ ನಟ ಮತ್ತು ನಿರ್ದೇಶಕರಾಗಿ ಹೊರಹೊಮ್ಮಿದ್ದರು. ರಕ್ಷಿತ್ ಶೆಟ್ಟಿ ಕಿರಿಕ್ ಪಾರ್ಟಿ, `ಹಂಬಲ್ ಪೊಲಿಟಿಶನ್ ನೊಗರಾಜ್', 777 ಚಾರ್ಲಿ ಚಿತ್ರಗಳನ್ನು ನಿರ್ಮಿಸಿದ್ದಾರೆ. ಇತ್ತೀಚಿಗೆ ತೆರೆಕಂಡ ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ ಸಿನಿಮಾ ಉತ್ತಮ ಯಶಸ್ಸು ಗಳಿಸಿದೆ.
ಕನ್ನಡ ಚಿತ್ರರಂಗಕ್ಕೆ ರವಿಂಚಂದ್ರನ್ ಅವರ ಕೊಡುಗೆ ಅಪಾರವಾಗಿದೆ. ರವಿಚಂದ್ರನ್ ಅವರದು ಬಹುಮುಖ ಪ್ರತಿಭೆ. ನಟನೆ, ನಿರ್ಮಾಣ, ನಿರ್ದೇಶನ, ಸಾಹಿತ್ಯ, ಸಂಗೀತ, ಸಂಕಲನ ಮುಂತಾದ ಚಿತ್ರರಂಗದ ವಿವಿಧ ಪ್ರಕಾರಗಳಲ್ಲಿ ಕೆಲಸ ಮಾಡಿದ್ದಾರೆ. ರವಿಚಂದ್ರನ್ ನಾಯಕನಾಗಿ ನಟಿಸಿದ ಮೊದಲ ಸಿನಿಮಾ ಖದೀಮ ಕಳ್ಳರು. ನಂತರ ಹಲವಾರು ಸಿನಿಮಾಗಳಲ್ಲಿ ನಟಿಸಿದ ರವಿಚಂದ್ರನ್, 1987ರಲ್ಲಿ ಮೊದಲ ಬಾರಿಗೆ ಪ್ರೇಮಲೋಕ ಸಿನಿಮಾವನ್ನು ನಿರ್ದೇಶಿಸಿದರು. ಈ ಸಿನಿಮಾ ಸೂಪರ್ ಹಿಟ್ ಆಯಿತು. ನಂತರ ರಣಧೀರ, ಕಿಂದರಜೋಗಿ, ಶಾಂತಿ ಕ್ರಾಂತಿ, ಹಳ್ಳಿ ಮೇಷ್ಟ್ರು, ಮನೆ ದೇವ್ರು, ಗೋಪಿ ಕೃಷ್ಣ, ಪುಟ್ನಂಜ ಸೇರಿದಂತೆ ಹಲವು ಸಿನಿಮಾಗಳನ್ನು ನಿರ್ದೇಶಿಸಿದರು. ಕನ್ನಡ ಇಂಡಸ್ಟ್ರಿಯಲ್ಲಿ ಇದುವರೆಗೆ ನಿರ್ಮಾಣವಾದ ಅತ್ಯಂತ ದುಬಾರಿ ಚಿತ್ರದಲ್ಲಿ ಶಾಂತಿ ಕ್ರಾಂತಿ ಕೂಡ ಒಂದು. ತಾಂತ್ರಿಕತೆಯ ಪರಿಪೂರ್ಣ ಜ್ಞಾನ ಹೊಂದಿರುವ ಹಾಗೂ ತಂತ್ರಜ್ಞಾನದ ವಿನೂತನ ರೀತಿಯ ಪ್ರಯೋಗಗಳನ್ನು ರವಿಚಂದ್ರನ್ ನಿರ್ದೇಶನದ ಚಿತ್ರಗಳಲ್ಲಿ ಕಾಣಬಹುದು. ಇನ್ನೊಂದು ಇವರ ಚಿತ್ರಗಳಲ್ಲಿ ಕಂಡುಬರುವ ಪ್ರಮುಖ ಅಂಶವೆಂದರೆ ಪ್ರತಿಯೊಂದು ಚಿತ್ರದಲ್ಲಿ ಸಂಗೀತ ಹೊಸತು. ಇವರು ನಟಿಸಿ, ನಿರ್ದೇಶಿಸಿರುವ ಎಲ್ಲ ಸಿನಿಮಾಗಳ ಹಾಡು ಕೂಡ ಸೂಪರ್ ಹಿಟ್ ಆಗಿವೆ. ರವಿಚಂದ್ರನ್ ನಟಿಸಿದ ಈಶ್ವರ, ಅಭಿಮಾನಿ, ಕನಸುಗಾರ, ಏಕಾಂಗಿ,ಮಲ್ಲ, ಮನೆದೇವ್ರು,ರಾಮಾಚಾರಿ,ಸ್ವಾಭಿಮಾನಿ, ಯುಗಪುರುಷ, ಯುದ್ದಕಾಂಡ, ಸ್ವಾಭಿಮಾನ, ಶಾಂತಿಕ್ರಾಂತಿ, ರಣಧೀರ, ಅಂಜದ ಗಂಡು ಪ್ರೇಮಲೋಕ ಮುಂತಾದ ಚಿತ್ರಗಳು ಅಪಾರ ಯಶಸ್ಸು ಕಂಡಿವೆ.
ಸಾಧು ಕೋಕಿಲ ಅವರು ಕನ್ನಡ ಚಿತ್ರರಂಗದ ಜನಪ್ರಿಯ ಹಾಸ್ಯನಟ, ಸಂಗೀತಗಾರ ಮತ್ತು ನಿರ್ದೇಶಕ. ಇವರು ಕನ್ನಡ ಚಿತ್ರರಂಗದಲ್ಲಿ ಲೆಜೆಂಡರಿ ಕಾಮಿಡಿಯನ್ ಆಗಿದ್ದಲ್ಲದೆ, ಕನ್ನಡ ಇಂಡಸ್ಟ್ರಿಗೆ ಎರಡು ಬ್ಲಾಕ್ಬಸ್ಟರ್ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಸಾಧು ಕೋಕಿಲ ನಿರ್ದೇಶನದ ಮೊದಲ ಸಿನಿಮಾ ಉಪೇಂದ್ರ ನಟನೆಯ ರಕ್ತ ಕಣ್ಣೀರು. ಈ ಸಿನಿಮಾ ಸೂಪರ್ ಹಿಟ್ ಆಯಿತು. ನಂತರ ರಾಕ್ಷಸ, ಸುಂಟರಗಾಳಿ, ಅನಾಥರು, ಶೌರ್ಯ, ಮಿಸ್ಟರ್ ತೀರ್ಥ ಸೇರಿದಂತೆ ಅನೇಕ ಸಿನಿಮಾಗಳಿಗೆ ನಿರ್ದೇಶನ ಮಾಡಿದ್ದಾರೆ.
ರಾಜ್ ಬಿ ಶೆಟ್ಟಿ 2017ರಲ್ಲಿ ತೆರೆಕಂಡ `ಒಂದು ಮೊಟ್ಟೆಯ ಕಥೆ' ಚಿತ್ರದ ಮೂಲಕ ನಟ, ನಿರ್ದೇಶಕರಾಗಿ ಸ್ಯಾಂಡಲ್ವುಡ್ ಗೆ ಎಂಟ್ರಿ ಕೊಟ್ಟರು. ಇದಾದ ಬಳಿಕ ಕಥಾಸಂಗಮ, ಮಾಯಾಬಜಾರ್ ಸಿನಿಮಾಗಳನ್ನು ಮಾಡಿದರು. ಆದರೆ, 2022ರಲ್ಲಿ ತೆರೆಕಂಡ ಗರುಡ ಗಮನ ವೃಷಭ ವಾಹನ ಸಿನಿಮಾ ಅವರಿಗೆ ಸಾಕಷ್ಟು ಯಶಸ್ಸು ತಂದು ಕೊಟ್ಟಿತು. ಹೀಗೂ ರೌಡಿಸಂ ಸಿನಿಮಾ ಮಾಡಬಹುದು ಎಂಬುದನ್ನು ಗರುಡ ಗಮನ ವೃಷಭ ವಾಹನ ಸಿನಿಮಾ ಮೂಲಕ ರಾಜ್ ಬಿ ಶೆಟ್ಟಿ ತೋರಿಸಿಕೊಟ್ಟಿದ್ದರು.