X
ಹೋಮ್ ಚಲನಚಿತ್ರಗಳ ಒಳನೋಟ

ಗಂಧದ ಗುಡಿ to ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ: ಕರುನಾಡಿನ ಸಂಸ್ಕೃತಿ, ಭಾಷೆ, ಆಚರಣೆಗಳನ್ನ ಎತ್ತಿಹಿಡಿದ ಸಿನಿಮಾಗಳಿವು!

Author Sowmya Bairappa | Published: Wednesday, October 30, 2024, 06:06 AM [IST]

ಕನ್ನಡ ಚಿತ್ರರಂಗದ ಅನೇಕ ನಿರ್ದೇಶಕರು ನಮ್ಮ ನೆಲದ ಸಂಸ್ಕತಿ, ಆಚಾರ ವಿಚಾರಗಳನ್ನು ತೆಗೆದುಕೊಂಡು ಸಿನಿಮಾ ಮಾಡಿ ಯಶಸ್ವಿಯಾಗಿದ್ದಾರೆ. ಕನ್ನಡದಲ್ಲಿ ತೆರೆಕಂಡ ಅನೇಕ ಸಿನಿಮಾಗಳು ನಮ್ಮ ಭಾಷೆ ಮತ್ತು ಆಚರಣೆಗಳನ್ನು ತೋರಿಸುವ ಮೂಲಕ ಕನ್ನಡ ನಾಡಿನ ಸಂಸ್ಕೃತಿಯನ್ನು ಎತ್ತಿ ಹಿಡಿದಿವೆ. ಅಂತಹ ಸಿನಿಮಾಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ.


cover image
ಸರ್ಕಾರಿ ಹಿ ಪ್ರಾ ಶಾಲೆ ಕಾಸರಗೋಡು

ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ ಮತ್ತು ನಿರ್ದೇಶಕರಾಗಿರುವ ರಿಷಬ್ ಶೆಟ್ಟಿ ಪ್ಯಾನ್ ಇಂಡಿಯಾ ಸ್ಟಾರ್ ಆಗುವುದಕ್ಕೂ ಮುನ್ನ  `ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡು' ಎಂಬ ಸಿನಿಮಾವನ್ನು ಮಾಡಿದ್ದರು. ಕೇರಳದ ಕಾಸರಗೋಡುವಿನಲ್ಲಿ ಕನ್ನಡ ಶಾಲೆಗಳ ಪರಿಸ್ಥಿತಿ ಕುರಿತು ಮಾಡಲಾಗಿದ್ದ ಈ ಚಿತ್ರ ಪ್ರೇಕ್ಷಕ ಮತ್ತು ವಿಮರ್ಶಕರಿಂದ ವ್ಯಾಪಕ ಮನ್ನಣೆ ಪಡೆದಿತ್ತು. ಈ ಸಿನಿಮಾದಲ್ಲಿ ಅನಂತನಾಗ್ ಲಾಯರ್ ಪಾತ್ರದಲ್ಲಿ ಮಿಂಚಿದ್ದರೆ, ಕರಾವಳಿ ಮತ್ತು ಕಾಸರಗೋಡಿನ ಕೆಲ ಬಾಲ ಪ್ರತಿಭೆಗಳು ಅದ್ಭುತವಾಗಿ ನಟಿಸಿದ್ದರು. ಈ ಚಿತ್ರ ಅತ್ತ್ಯುತ್ತಮ ಮಕ್ಕಳ ಚಿತ್ರವಾಗಿ 66ನೇ ರಾಷ್ಟ್ರಪ್ರಶಸ್ತಿಯನ್ನು ಪಡೆದಿತ್ತು.  ಕನ್ನಡ ಭಾಷೆಯಲ್ಲಿ ವಿದ್ಯೆ ಕಲಿಯುವುದು ಕನ್ನಡ ಮಣ್ಣಿನ ಮಕ್ಕಳ ಹಕ್ಕು. ಕನ್ನಡ ಭಾಷೆಯ ಬಗ್ಗೆ ಕೀಳರಿಮೆ ಹೊಂದಿದರೆ, ಕನ್ನಡ ಅಸ್ಮಿತೆ ಉಳಿಸಿಕೊಳ್ಳುವುದು ಕಷ್ಟ ಎಂಬ ಸಂದೇಶವನ್ನು ಈ ಚಿತ್ರ ಸಾರಿತ್ತು.  


ಗಂಧದ ಗುಡಿ (1973)

ಡಾ.ರಾಜ್‌ಕುಮಾರ್ ಯಾವುದೇ ಸಿನಿಮಾ ಮಾಡಿದರೂ ಅದರಲ್ಲಿ ಕನ್ನಡ ಭಾಷೆಯ ಹೆಮ್ಮೆಯನ್ನು ಪಸರಿಸುತ್ತಿದ್ದರು. ಅದರಲ್ಲೂ 1973ರಲ್ಲಿ ತೆರೆಕಂಡ 'ಗಂಧದ ಗುಡಿ' ಸಿನಿಮಾ ಕನ್ನಡ ಚಿತ್ರರಂಗಕ್ಕೆ ಹೊಸ ಆಯಾಮ ನೀಡಿತ್ತು. ಈ ಸಿನಿಮಾದಲ್ಲಿ ಅಣ್ಣಾವ್ರು ಅರಣ್ಯ ಅಧಿಕಾರಿಯಾಗಿ ಮಿಂಚಿದ್ರೆ, ಸಾಹಸಸಿಂಹ ವಿಷ್ಣುವರ್ಧನ್ ಖಳನಾಯಕನಾಗಿ ಅಭಿನಯಿಸಿದ್ದರು. ಚಿತ್ರದಲ್ಲಿ ಕರ್ನಾಟಕದ ಕಾಡಿನಲ್ಲಿರುವ ನೈಸರ್ಗಿಕ ಸಂಪನ್ಮೂಲಗಳನ್ನು ರಕ್ಷಿಸುವ ಮತ್ತು ಅಕ್ರಮಗಳ ವಿರುದ್ಧ ಹೋರಾಡುವ ಅಧಿಕಾರಿ ಪಾತ್ರವನ್ನು ಡಾ.ರಾಜ್‌ಕುಮಾರ್ ನಿರ್ವಹಿಸಿದ್ದರು. ಕರ್ನಾಟಕದ ಜೀವವೈವಿಧ್ಯದ ಕುರಿತಾಗಿದ್ದ ಈ ಸಿನಿಮಾ ಬಾಕ್ಸಾಫೀಸಿನಲ್ಲೂ ಧೂಳೆಬ್ಬಿಸಿತ್ತು. 

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಸಿನಿಮಾದಲ್ಲಿ ರಾಯಣ್ಣ ಯಾರು, ಏನು, ಎತ್ತ ಎಂಬುದನ್ನು ತೋರಿಸಲಾಗಿತ್ತು. ಸಿನಿಮಾದಲ್ಲಿ ಉತ್ತರ ಕನ್ನಡ ಭಾಷೆಯನ್ನು ಬಳಸಿಕೊಳ್ಳಲಾಗಿತ್ತು. ಇದು ಚಿತ್ರದ ಪ್ರಮುಖ ಹೈಲೈಟ್ ಆಗಿತ್ತು. 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಸಿನಿಮಾದಲ್ಲಿ ರಾಯಣ್ಣನ ಹಾವಭಾವಗಳು, ಬ್ರಿಟೀಷರ ದರ್ಪ, ದೌರ್ಜನ್ಯ, ಅರಮನೆ, ಕೋಟೆ ಕೊತ್ತಲಗಳನ್ನು ಬಹಳ ಸೊಗಸಾಗಿ ತೋರಿಸಲಾಗಿತ್ತು.  


ಗೀತಾ

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಗೀತಾ ಸಿನಿಮಾ ಗೋಕಾಕ್ ಚಳುವಳಿ ಹಿನ್ನಲೆಯಲ್ಲಿ ಮೂಡಿಬಂದಿತ್ತು. 1981ರ ಸಮಯದಲ್ಲಿ ಕರ್ನಾಟಕದಲ್ಲಿ ಭಾಷೆಗೆ ಸಂಬಂಧಿಸಿದಂತೆ ಗೋಕಾಕ್ ಚಳುವಳಿ ಎಂಬ ಕ್ರಾಂತಿ ನಡೆಯುತ್ತೆ. ಈ ಹೋರಾಟದಲ್ಲಿ ಕನ್ನಡ ಭಾಷೆಗಾಗಿ ಹೋರಾಡುವ ಸ್ವಾಭಿಮಾನಿ ಕನ್ನಡಿಗನ ಪಾತ್ರದಲ್ಲಿ ಗಣೇಶ್ ನಟಿಸಿದ್ದರು. ಸ್ವಾಭಿಮಾನಿ ಕನ್ನಡಿಗನ ಕೆಚ್ಚೆದೆಯ ಹೋರಾಟ ಮತ್ತು ನಿಷ್ಕಲ್ಮಶ ಪ್ರೀತಿ, ಕರ್ನಾಟಕದಲ್ಲಿ ಕನ್ನಡಿಗನೇ ಯಜಮಾನ, ಕನ್ನಡಿಗನೇ ಸಾರ್ವಭೌಮ. ಸ್ವಾಭಿಮಾನಿ ಕನ್ನಡಿಗನ ಹೋರಾಟದ ಕಥೆಯ ಜೊತೆ ಸುಂದರವಾದ ಪ್ರೇಮಕಥೆಯಯನ್ನು ಈ ಸಿನಿಮಾ ಹೊಂದಿತ್ತು.  

ರಂಗಿತರಂಗ

ದಕ್ಷಿಣ ಕನ್ನಡ ಸೊಗಡಿನಲ್ಲಿ ಮೂಡಿಬಂದ  'ರಂಗಿತರಂಗ' ಸಿನಿಮಾದಲ್ಲಿ ನಿರುಪ್ ಭಂಡಾರಿ ನಾಯಕನಾಗಿ ಮತ್ತು ರಾಧಿಕ ಚೇತನ್ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಈ ಚಿತ್ರದಲ್ಲಿ ಅವಂತಿಕಾ ಶೆಟ್ಟಿ, ಸಾಯಿ ಕುಮಾರ್, ಅರವಿಂದ್ ರಾವ್, ಶಿಲ್ಪಾ ಸಿಂಗ್, ಚೇತನ್ ರಾಜ್, ಅನುಪ್ ಭಂಡಾರಿ, ಶಂಕರ್ ಮತ್ತು ಪ್ರಮೋದ್ ಶೆಟ್ಟಿ ಈ ಸಿನಿಮಾದಲ್ಲಿ ವಿಭಿನ್ನ ಪಾತ್ರಗಳಲ್ಲಿ ಅಭಿನಯಿಸಿದ್ದರು. ಈ ಚಿತ್ರದಲ್ಲಿ ದಕ್ಷಿಣ ಕನ್ನಡದಲ್ಲಿ ನಡೆಯುವ ಭೂತಾರಾಧನೆ, ಅಲ್ಲಿನ ಆಚರಣೆ ಬಗ್ಗೆ ತೋರಿಸಲಾಗಿತ್ತು. ಅನುಪ್ ಭಂಡಾರಿ ನಿರ್ದೇಶನದ ಈ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಸಿತ್ತು. ಈ ಚಿತ್ರ ಯಾರೂ ಊಹಿಸಲಾಗದ ಯಶಸ್ಸು ಕಂಡಿತ್ತು. 


ಕಾಂತಾರ

ರಿಷಬ್ ಶೆಟ್ಟಿ ನಿರ್ದೇಶಿಸಿದ್ದ ಕಾಂತಾರ ಸಿನಿಮಾ ವಿಶ್ವದಾದ್ಯಂತ ಸಂಚಲನ ಸೃಷ್ಟಿಸಿತ್ತು. ಕಾಂತಾರ ಸಿನಿಮಾ ದೈವ, ನಾಡು, ನುಡಿ ಆಚರಣೆಗಳನ್ನು ಒಳಗೊಂಡಿತ್ತು. ಇದರಲ್ಲಿ ಬಹಳಷ್ಟು ಗ್ರಾಮೀಣ ಸೊಗಡು, ಸಂಸ್ಕೃತಿಯ ಅಂಶಗಳು ಇದ್ದವು. ರಿಷಬ್ ಶೆಟ್ಟಿ ಕರಾವಳಿ ಕಡೆಯವರು. ಅಲ್ಲಿನ ಭಾಷೆ, ಸೊಗಡು, ಆಚರಣೆಗಳು, ನಂಬಿಕೆ ಎಲ್ಲದರ ಬಗ್ಗೆಯೂ ತಿಳಿದುಕೊಂಡವರು. ಅದು ಅವರ ಸಿನಿಮಾಗಳಲ್ಲಿಯೂ ಪ್ರತಿಬಿಂಬಿತವಾಗುತ್ತಲೇ ಇರುತ್ತದೆ.  ಕರಾವಳಿ ಸಂಸ್ಕೃತಿಯ ಅನಾವರಣ ಈ ಸಿನಿಮಾದ ಪ್ರಮುಖ ಅಂಶ. ದೈವ, ಭೂತಾರಾಧನೆ, ಭೂತ ಕೋಲವನ್ನು ತೆರೆಮೇಲೆ ಅಮೋಘವಾಗಿ ತೋರಿಸುತ್ತ ಕರಾವಳಿ ಜನರ ಧಾರ್ಮಿಕ ನಂಬಿಕೆಗಳು, ಅಲ್ಲಿನ ಜನರ ಭಾವನೆಗಳನ್ನು ಅತ್ಯುತ್ತಮವಾಗಿ ತೋರಿಸುವ ಯತ್ನವನ್ನು ರಿಷಬ್ ಶೆಟ್ಟಿ ಮಾಡಿದ್ದರು. ಈ ಸಿನಿಮಾ ಬ್ಲಾಕ್ ಬಸ್ಟರ್ ಆಗುವುದರ ಜೊತೆಗೆ ರಿಷಬ್ ಶೆಟ್ಟಿಯನ್ನು ಪ್ಯಾನ್ ಇಂಡಿಯಾ ಸ್ಟಾರ್ ಆಗುವಂತೆ ಮಾಡಿತ್ತು.  


Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+