ಕನ್ನಡ ಚಿತ್ರರಂಗದಲ್ಲಿ ಅತಿಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಒಬ್ಬರು. ತಂದೆ ಮೇರು ನಟರಾದರೂ ದರ್ಶನ್ ಮಾತ್ರ ಚಿತ್ರರಂಗಕ್ಕೆ ಪ್ರವೇಶ ಪಡೆಯಲು ಸಾಕಷ್ಟು ಕಷ್ಟಪಟ್ಟಿದ್ದಾರೆ. ನಟರಾಗುವ ಮೊದಲು ಲೈಟ್ ಬಾಯ್ ಆಗಿ, ಧಾರಾವಾಹಿಗಳಲ್ಲಿ ಸಣ್ಣ-ಪುಟ್ಟ ಪಾತ್ರಗಳನ್ನೂ ಮಾಡಿದ್ದಾರೆ. ಇಂದು ಸ್ಟಾರ್ ನಟನಾಗಿ ಗುರುತಿಸಿಕೊಂಡಿರುವ ದರ್ಶನ್ ಅನೇಕ ವಿವಾದಗಳಿಗೆ ಗುರಿಯಾಗಿದ್ದಾರೆ. ಆದರೆ, ಸಾಕಷ್ಟು ವಿವಾದಗಳಿದ್ದರೂ ಇಂದಿಗೂ ದರ್ಶನ್ ಸ್ಟಾರ್ಡಮ್ ಕಡಿಮೆಯಾಗಿಲ್ಲ. ಇದಕ್ಕೆ 10 ಪ್ರಮುಖ ಅಂಶಗಳು ಇಲ್ಲಿವೆ.
ನಟ ದರ್ಶನ್ ಯಾವುದೇ ಕಾಂಟ್ರವರ್ಸಿ ಇರಲಿ ಅದನ್ನು ತಮ್ಮ ವಿಶಿಷ್ಟ ಮ್ಯಾನರಿಸಂನಿಂದಲೇ ನಿರ್ವಹಿಸುತ್ತಾರೆ. ತಮಗೆ ಅನಿಸಿದ್ದನ್ನು ನೇರವಾಗಿ ಹೇಳಿಬಿಡುತ್ತಾರೆ. ದರ್ಶನ್ ಅಭಿಮಾನಿಗಳಿಗೆ ಇಷ್ಟವಾಗೋದೇ ತಮ್ಮ ಡೋಂಟ್ ಕೇರ್ ಆಟಿಟ್ಯೂಡ್ ಇಂದ. ನಟ ಅಂಬರೀಷ್ ನಂತರ ನಟ ದರ್ಶನ್ ನೇರವಂತಿಕೆಯಿಂದ ಜನರಿಗೆ ಇಷ್ಟವಾಗುತ್ತಾರೆ.
ಪವರ್ ಫುಲ್ ಡೈಲಾಗ್, ಮಾಸ್ ಸಿನಿಮಾಗಳಾಚೆಗೂ ದರ್ಶನ್ ಒಳಗೆ ಒಬ್ಬ ಅಪ್ಪಟ ಕಲಾವಿದನಿದ್ದಾನೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ನಮ್ಮ ಪ್ರೀತಿಯ ರಾಮು, ಸಂಗೊಳ್ಳಿ ರಾಯಣ್ಣ, ಆನಾಥರು ಸಿನಿಮಾಗಳಲ್ಲಿ ಮನೋಜ್ಞವಾಗಿ ನಟಿಸಿದ್ದಾರೆ. ಇದರ ಜೊತೆಗೆ ನವಗ್ರಹ ಹಾಗೂ ಕುರುಕ್ಷೇತ್ರ ಸಿನಿಮಾಗಳಲ್ಲಿ ನೆಗೆಟಿವ್ ಪಾತ್ರದಲ್ಲಿ ಅಧ್ಬುತವಾಗಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.
ಕೆಲ ವರ್ಷಗಳ ಹಿಂದೆ ನಟ ದರ್ಶನ್ ಮತ್ತು ಅವರ ಪತ್ನಿ ವಿಜಯಲಕ್ಷ್ಮೀ ಅವರೊಂದಿಗಿನ ಜಗಳ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಜೈಲು ವಾಸವನ್ನು ಅನುಭವಿಸಿದ್ದ ದರ್ಶನ್ ಅವರ ಬಗ್ಗೆ ಸಾಕಷ್ಟು ನೆಗೆಟಿವ್ ಅನಿಸಿಕೆಗಳು ಹುಟ್ಟಿಕೊಂಡಿದ್ದವು. ಆದರೆ, ಈ ಕಾಂಟ್ರವರ್ಸಿ ಬಳಿಕ ಬಿಡುಗಡೆಯಾದ ಸಾರಥಿ ಸಿನಿಮಾ ಸೂಪರ್ ಹಿಟ್ ಆಯಿತು. ವಿವಾದಗಳಿದ್ದರೂ ನಟ ದರ್ಶನ್ ಸಾರಥಿ ಮೂಲಕ ತಾವೊಬ್ಬ ಬಿಗ್ ಸ್ಟಾರ್ ಎಂಬುದನ್ನು ನಿರೂಪಿಸಿದ್ದರು.
ಒಂದು ಕಾಲದಲ್ಲಿ ಉತ್ತಮ ಗೆಳೆಯರಾಗಿದ್ದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹಾಗೂ ದರ್ಶನ್ ನಂತರದ ದಿನಗಳಲ್ಲಿ ದೂರವಾಗಿದ್ದರು. ಈ ಇಬ್ಬರು ಮೇರು ನಟರ ಅಭಿಮಾನಿಗಳ ನಡುವೆ ಆಗಾಗ ಫೈಟ್ ನಡೆಯುತ್ತಲೇ ಇರುತ್ತದೆ. ಈ ಸ್ಟಾರ್ ವಾರ್ ಚಿತ್ರರಂಗದಲ್ಲಿ ಭಾರೀ ಸದ್ದು ಮಾಡಿತ್ತು. ಆದರೆ ದರ್ಶನ್ ಈ ಎಲ್ಲಾ ಕ್ಯಾಂಟ್ರವರ್ಸಿಗಳಿಂದ ಅಂತರ ಕಾಯ್ದುಕೊಂಡು ಬಂದಿದ್ದಾರೆ.
ನಟ ದರ್ಶನ್ ತಾವೊಬ್ಬರೇ ಎತ್ತರಕ್ಕೆ ಬೆಳೆದಿಲ್ಲ. ಅವರ ಜೊತೆ ತಮ್ಮೊಂದಿಗಿದ್ದವರಿಗೂ ಬೆನ್ನೆಲುಬಾಗಿದ್ದಾರೆ. ಸ್ನೇಹಕ್ಕಾಗಿಯೇ ಸೃಜನ್ ಲೋಕೇಶ್, ಆದಿತ್ಯ, ಸೌರವ್ ಜೊತೆ ನಟಿಸಿದ್ದಾರೆ. ಜೊತೆಗೆ ಸಂಗೀತ ನಿರ್ದೇಶಕ ಹರಿಕೃಷ್ಣ ಅವರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ್ದಾರೆ. ತಮ್ಮ ಹೋಮ್ ಪ್ರೊಡಕ್ಷನ್ ಮೂಲಕ ನೆನಪಿರಲಿ ಪ್ರೇಮ್ ಹಾಗೂ ಸೂರಜ್ ಗೌಡ ಅವರಿಗೆ ಸಿನಿಮಾ ಮಾಡಿದ್ದಾರೆ.
ದರ್ಶನ್ ಇಷ್ಟು ಎತ್ತರಕ್ಕೆ ಬೆಳೆದು ನಿಂತರೂ ಕೂಡ ತಮ್ಮ ಆರಂಭಿಕ ಹಾಗೂ ಕಷ್ಟದ ದಿನಗಳನ್ನು ಮರೆತಿಲ್ಲ. ಕಷ್ಟ ಅಂತ ಮನೆ ಬಾಗಿಲಿಗೆ ಬಂದವರನ್ನು ದರ್ಶನ್ ಎಂದಿಗೂ ಹಾಗೆಯೇ ಕಲಿಸುವುದಿಲ್ಲ. ಚಿತ್ರರಂಗದವರೇ ಆಗಿರಲಿ, ಅಭಿಮಾನಿಗಳೇ ಆಗಿರಲಿ ಅಥವಾ ಸಾಮಾನ್ಯ ಜನರೇ ಆಗಿರಲಿ ದರ್ಶನ್ ಎಲ್ಲರಿಗೂ ಆರ್ಥಿಕ ಸಹಾಯ ಮಾಡಿದ್ದಾರೆ. ದರ್ಶನ್ ಈ ಗುಣವನ್ನು ಮೆಚ್ಚಿಕೊಂಡವರು ಅನೇಕ ಜನರಿದ್ದಾರೆ.
ನಟ ದರ್ಶನ್ ಅವರಿಗೆ ಮೊದಲ ಸಿನಿಮಾ ಮೆಜೆಸ್ಟಿಕ್ ಬಳಿಕ ಸಾಲು-ಸಾಲು ಸೋಲುಗಳು ಎದುರಾಗಿದ್ದು, ಇಂತಹ ಸಮಯದಲ್ಲಿ ದರ್ಶನ್ ಕೆರಿಯರ್ ಫಿನಿಷ್ ಎಂದವರಿದ್ದಾರೆ. ಆದರೆ, ದರ್ಶನ್ ಈ ಸೋಲುಗಳಿಂದ ಜಗ್ಗಲಿಲ್ಲ. ಸಾಲು-ಸಾಲು ಸೋಲುಗಳಿಗೆ ಸವಾಲು ಹಾಕಿ ಮತ್ತೆ ಬಿಗ್ ಬ್ರೇಕ್ ಪಡೆದರು. ಕರಿಯ, ದಾಸ ಸಿನಿಮಾಗಳು ದರ್ಶನ ಕೈ ಹಿಡಿದವು. ಅಂದಿನಿಂದ ದರ್ಶನ ಹಿಂದೆ ತಿರುಗಿ ನೋಡಲೇ ಇಲ್ಲ. ಚಾಲೆಂಜಿಂಗ್ ಸ್ಟಾರ್ ಎಂಬ ಬಿರುದು ದರ್ಶನ್ ಪರಿಶ್ರಮದಿಂದ ಬಂದಿರುವುದು.
ತಂದೆ ಮೇರು ನಟರಾದರೂ ದರ್ಶನ್ ಮಾತ್ರ ಚಿತ್ರರಂಗಕ್ಕೆ ಪ್ರವೇಶ ಪಡೆಯಲು ಸಾಕಷ್ಟು ಕಷ್ಟಪಟ್ಟಿದ್ದಾರೆ. ನಟರಾಗುವ ಮೊದಲು ಲೈಟ್ ಬಾಯ್ ಆಗಿ, ಧಾರಾವಾಹಿಗಳಲ್ಲಿ ಸಣ್ಣ-ಪುಟ್ಟ ಪಾತ್ರಗಳನ್ನೂ ಮಾಡಿದ್ದಾರೆ. ದರ್ಶನ್ ಅವರ ಕಷ್ಟದ ದಿನಗಳಲ್ಲಿ ಕೈ ಹಿಡಿದವರು ನಟ ಅಂಬರೀಶ್. ತಮ್ಮ ಮಗನಂತೆಯೇ ಅಂಬರೀಶ್ ಅವರು ದರ್ಶನ್ ಅವರನ್ನು ಬೆಳೆಸಿದ್ದಾರೆ. ಅಂಬರೀಶ್ ಉತ್ತಾರಾಧಿಕಾರಿಯೇ ದರ್ಶನ ಎಂಬಂತೆ ಮಂಡ್ಯ, ಬುಲ್ ಬುಲ್, ಅಂಬರೀಶ ಸಿನಿಮಾಗಳು ಬಿಡುಗಡೆಯಾಗಿದ್ದವು. ಸುಮಲತಾ ಕೂಡ ದರ್ಶನ್ ತಮ್ಮ ಮೊದಲ ಮಗ ಅಂತ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಅಂಬಿ ಅಭಿಮಾನಿಗಳಿಗೂ ಕೂಡ ದರ್ಶನ್ ಕಂಡರೆ ಇಷ್ಟ.
ಮೊದಲ ಸಿನಿಮಾ ಮೆಜಿಸ್ಟಕ್ ನಲ್ಲಿ ದರ್ಶನ ತಮ್ಮ ಎತ್ತರದಿಂದಲೇ ಗಮನ ಸೆಳೆದಿದ್ದರು. ಮಾಸ್ ಡೈಲಾಗ್ ಇರಲಿ, ಫೈಟಿಂಗ್ ಇರಲಿ ಹೈಟ್ ದರ್ಶನ್ ಅವರ ಪ್ಲಸ್ ಪಾಯಿಂಟ್. ಆರಡಿ ಕಟೌಟ್ ದರ್ಶನ್ ಅವರನ್ನು ತೆರೆಮೇಲೆ ನೋಡೋದೇ ಅಭಿಮಾನಿಗಳಿಗೆ ದೊಡ್ಡ ಹಬ್ಬ.
ಅಂಬರೀಶ್ ನಿಧನದ ಬಳಿಕ ಸುಮಲತಾ ಮಂಡ್ಯದಲ್ಲಿ ಲೋಕಸಭಾ ಚುನಾವಣೆಗೆ ನಿಂತಿದ್ದರು. ಆಗ ಅವರ ಬೆಂಬಲಕ್ಕೆ ನಿಂತವರು ದರ್ಶನ್. ಸುಮಲತಾ ಪರ ಪ್ರಚಾರದ ವೇಳೆ ದರ್ಶನ್ ಸಾಕಷ್ಟು ವಿವಾದಗಳನ್ನು ಎದುರಿಸಬೇಕಾಯಿತು. ಆದರೆ, ಅದಕ್ಕೆಲ್ಲ ತಲೆಕೆಡಿಸಿಕೊಳ್ಳದೆ ಭರ್ಜರಿ ಪ್ರಚಾರ ನಡೆಸಿದರು. ನಟ ಯಶ್ ಕೂಡ ಸುಮಲತಾ ಅವರ ಬೆಂಬಲಕ್ಕೆ ನಿಂತರು. ಯಶ್ ಹಾಗೂ ದರ್ಶನ ಭರ್ಜರಿ ಪ್ರಚಾರ ನಡೆಸಿದರು. ಈ ಮೂಲಕ ಇವರಿಬ್ಬರ ಸ್ಟಾರ್ ವಾರ ಊಹಾಪೋಹಕ್ಕೆ ತೆರೆ ಎಳೆದರು.