X
ಹೋಮ್ ಚಲನಚಿತ್ರಗಳ ಒಳನೋಟ

ಪ್ರಶಾಂತ್‌ ನೀಲ್‌ಗೆ ಹುಟ್ಟುಹಬ್ಬದ ಸಂಭ್ರಮ: ಕನ್ನಡ ಚಿತ್ರರಂಗಕ್ಕೆ ಚಿನ್ನದ ಗಣಿಯನ್ನೇ ತಂದುಕೊಟ್ಟ ಸ್ಟಾರ್ ಡೈರೆಕ್ಟರ್ ಕುರಿತ ಇಂಟರೆಸ್ಟಿಂಗ್ ವಿಷಯಗಳಿವು!

Author Sowmya Bairappa | Published: Monday, June 3, 2024, 05:52 PM [IST]

ಕೆಜಿಎಫ್ ಸಿನಿಮಾದಲ್ಲಿ 'ನೀನು ಗೆದ್ದರೆ ಜನಗತ್ತಿಗೆ ನಿನ್ನ ಪರಿಚಯವಾಗುತ್ತೆ' ಎಂಬ ಡೈಲಾಗ್ ಇದೆ. ಅದರಂತೆಯೇ ತಮ್ಮ ಯಶಸ್ಸಿನ ಮೂಲಕವೇ ಜಗತ್ತಿಗೆ ಪರಿಚಯವಾದವರು ಪ್ರಶಾಂತ್ ನೀಲ್. ಕನ್ನಡ ಚಿತ್ರರಂಗ ಇಂತಹ ಓರ್ವ ನಿರ್ದೇಶಕನನ್ನು ಹೊಂದುತ್ತೆ, ಆತ ಪ್ಯಾನ್ ಇಂಡಿಯಾ ಚಿತ್ರ ಮಾಡಿ, ಎಲ್ಲೆಡೆ ಕನ್ನಡ ಚಿತ್ರರಂಗದ ಬಗ್ಗೆ ಮಾತನಾಡುವ ಹಾಗೆ ಮಾಡ್ತಾರೆ ಅಂತ ಯಾರೂ ಸಹ ಊಹಿಸಿರಲಿಲ್ಲ. ಹತ್ತಾರು ವರ್ಷಗಳಿಂದ ಚಿತ್ರರಂಗದಲ್ಲಿ ಅನೇಕ ಚಿತ್ರಗಳನ್ನು ಮಾಡಿದ ಬಳಿಕ ನಿರ್ದೇಶಕರು ಪಡೆದುಕೊಳ್ಳುವ ಯಶಸ್ಸು ಹಾಗೂ ಬೇಡಿಕೆಯನ್ನು ಅತಿವೇಗವಾಗಿ ಎರಡು ಚಿತ್ರಗಳನ್ನು ನಿರ್ದೇಶಿಸುವ ಮೂಲಕ ಪಡೆದುಕೊಂಡ ಹೆಗ್ಗಳಿಕೆ ಪ್ರಶಾಂತ್ ನೀಲ್ ಅವರಿಗೆ ಇದೆ. ಕೆಜಿಎಫ್ ಮೂಲಕ ಹವಾ ಸೃಷ್ಟಿದಿರುವ ಪ್ರಶಾಲ್ ನೀಲ್‌ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಇಲ್ಲಿ ಅವರ ಕುರಿತ ಇಂಟರೆಸ್ಟಿಂಗ್ ವಿಷಯಗಳನ್ನು ನೀಡಲಾಗಿದೆ.


cover image
ನೀಲ್ ಪದದ ಅರ್ಥ

ಮೂಲತಃ ಬೆಂಗಳೂರಿನವರಾದ ಪ್ರಶಾಂತ್ ನೀಲ್, 1980  ಜೂನ್ 4ರಂದು ಜನಿಸಿದರು. ನೀಲ್ ಎಂದರೆ ನೀಲಕಂಠಾಪುರಂ ಎಂದರ್ಥ. ಬೆಂಗಳೂರಿನ ಪ್ರತಿಷ್ಠಿತ ಮೋತಿ ಮಹಲ್ ಹೋಟೆಲ್ ಮಾಲೀಕ ಸುಭಾಷ್ ನೀಲಕಂಠಾಪುರಂ ಇವರ ತಂದೆ. ತಾಯಿಯ ಹೆಸರು ಭಾರತಿ. ಪ್ರಶಾಂತ್ ನೀಲ್ ಪೋಷಕರು ಆಂಧ್ರಪ್ರದೇಶದ ಮದಕಸಿರ ಬಳಿಯಿರುವ ನೀಲಕಂಠಪುರಂ ಗ್ರಾಮದಿಂದ ಬಂದವರಾದ ಕಾರಣ ಆ ಊರಿನ ಹೆಸರನ್ನು ಉಪನಾಮವನ್ನಾಗಿ ಬಳಸುತ್ತಿದ್ದಾರೆ. ನೀಲಕಂಠಾಪುರಂ ಅನ್ನು ಚಿಕ್ಕದಾಗಿ ಕರೆಯುವ ಕಾರಣ ಪ್ರಶಾಂತ್ ನೀಲಕಂಠಾಪುರಂ 'ಪ್ರಶಾಂತ್ ನೀಲ್' ಆಗಿದ್ದಾರೆ.


ವಿದ್ಯಾಭ್ಯಾಸವೇನು

ತಮ್ಮ ಚಿತ್ರಗಳ ಮೂಲಕ ಕನ್ನಡ ಚಿತ್ರರಂಗವನ್ನು ಉತ್ತುಂಗಕ್ಕೆ ಕೊಂಡೊಯ್ದಿರುವ ಪ್ರಶಾಂತ್ ನೀಲ್, ವಾಣಿಜ್ಯಶಾಸ್ತ್ರದಲ್ಲಿ ನೀಲ್ ಪದವಿ ಹೊಂದಿದ್ದಾರೆ. ಸಂದರ್ಶನವೊಂದರಲ್ಲಿ ಪ್ರಶಾಂತ್ ನೀಲ್, ಹಣದ ಅವಶ್ಯಕತೆಯಿದ್ದ ಕಾರಣ ಸಿನಿಮಾವನ್ನು ಆರಿಸಿಕೊಂಡೆ ಎಂದು ಸ್ವತಃ ಹೇಳಿಕೊಂಡಿದ್ದರು.


ನೀಲ್‌ ಹಾಗೂ ಶ್ರೀಮುರಳಿ ಸಂಬಂಧಿಕರು

ಪ್ರಶಾಂತ್ ನೀಲ್‌ ಹಾಗೂ ನಟ ಶ್ರೀಮುರಳಿ ಕೇವಲ ಕುಚುಕು ಗೆಳೆಯರು ಮಾತ್ರವಲ್ಲ, ಅವರಿಬ್ಬರು ಸಂಬಂಧಿಕರು ಕೂಡ. ಮುರಳಿ ಪತ್ನಿ ಶ್ರೀವಿದ್ಯಾ ಅವರಿಗೆ ಪ್ರಶಾಂತ್ ನೀಲ್ ಅಣ್ಣನಾಗಬೇಕು. ಇವರಿಬ್ಬರಿಗೂ ಭಾವಂದಿರ ಸಂಬಂಧ. ಪ್ರಶಾಂತ್ ನೀಲ್ 2010ರಲ್ಲಿ ನಿಖಿತಾ ರೆಡ್ಡಿ ಎಂಬುವವರನ್ನು ವಿವಾಹವಾಗಿದ್ದು, ಇಬ್ಬರು ಮಕ್ಕಳನ್ನು ಹೊಂದಿದ್ದಾರೆ.

ಸಿನಿಮಾರಂಗ ಪ್ರವೇಶ

ನಟ ಶ್ರೀಮುರಳಿ ಹಾಗೂ ಪ್ರಶಾಂತ್ ನೀಲ್ ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನ ವಿದ್ಯಾರ್ಥಿಗಳು. ಕಾಲೇಜು ದಿನಗಳಲ್ಲಿ ಹೆಚ್ಚಾಗಿ ಸಿನಿಮಾ ನೋಡ್ತಿದ್ರು. ಪ್ರಶಾಂತ್ ನೀಲ್ ನಿರ್ದೇಶಕರಾಗುವುದಕ್ಕೂ ಮುನ್ನ ಶ್ರೀಮರಳಿ ನಟನೆಯ ಸಿನಿಮಾಗಳ ಶೂಟಿಂಗ್ ಸೆಟ್‌ಗೆ ಹೋಗಿಬಂದಿದ್ದರು. ಆನಂತರ ಶ್ರೀಮುರುಳಿಗಾಗಿ 'ನಂದೇ' ಎಂಬ ಟೈಟಲ್ ಇಟ್ಟುಕೊಂಡು ಸಿನಿಮಾ ನಿರ್ದೇಶನಕ್ಕೆ ಇಳಿದರು. ಸಿನಿಮಾ ಅರ್ಧಕ್ಕಿಂತ ಹೆಚ್ಚು ಚಿತ್ರೀಕರಣ ಮುಗಿಸಿದ ಬಳಿಕ 'ಉಗ್ರಂ' ಅಂತ ಶೀರ್ಷಕೆ ಬದಲಾಯಿಸಿದ್ರು. ನಾಲ್ಕು ವರ್ಷ ಸಮಯ ತೆಗೆದುಕೊಂಡು 'ಉಗ್ರಂ' ಸಿನಿಮಾ ಮಾಡಿದರು. ಲವ್, ಸೆಂಟಿಮೆಂಟ್, ಸಾಹಸ ಎಲ್ಲಾ ದೃಶ್ಯಗಳನ್ನು ಬೆರೆಸಿ ಸುಂದರವಾಗಿ ತೆರೆಮೇಲೆ ಬಂದಿದ್ದ ಈ ಸಿನಿಮಾ ಅದ್ಭುತ ಯಶಸ್ಸು ಕಂಡಿತ್ತು. ಇಲ್ಲಿಂದ ನೀಲ್ ನಿರ್ದೇಶನದ ಬದುಕು ಆರಂಭವಾಯಿತು. 

ಕೆಲಸ ಮಾಡುತ್ತಲೇ ಕಲಿಕೆ

ಪ್ರಶಾಂತ್ ನೀಲ್ ನಿರ್ದೇಶಕರಾಗುವುದಕ್ಕೂ ಮುನ್ನ ಬೇರೆ ಡೈರೆಕ್ಟರ್ಸ್ ಸಿನಿಮಾಗಳಿಗೆ ಸಹಾಯಕ ನಿರ್ದೇಶಕ. ಅಸೋಸಿಯೆಟ್ ಡೈರೆಕ್ಟರ್, ಕ್ಲಾಪ್ ಬಾಯ್ ಕೆಲಸ ಮಾಡಿದವರಲ್ಲ. ಯಾವ ಸಂಸ್ಥೆಯಲ್ಲೂ ತರಬೇತಿ ಪಡೆದಿರಲಿಲ್ಲ. ಉಗ್ರಂ ನಿರ್ದೇಶನ ಮಾಡುವಾಗ ನೀಲ್‌ಗೆ ಸಿನಿಮಾ ವ್ಯಾಕರಣ ಸಹ ಗೊತ್ತಿರಲಿಲ್ಲ. ಆದರೆ, ಉಗ್ರಂ ಸಿನಿಮಾ ಮುಗಿಯುವಷ್ಟರಲ್ಲಿ ಎಲ್ಲಾ ವಿಭಾಗದಲ್ಲೂ ಪರಿಣಿತರಾದರು. 

ದಾಖಲೆ ಬರೆದ ಕೆಜಿಎಫ್

ಉಗ್ರಂ ಬಳಿಕ ಇಡೀ ಜಗತ್ತೇ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತಹ ಸಿನಿಮಾಗೆ ಕೈ ಹಾಕಿದರು. ಕೆಜಿಎಫ್ ಚಾಪ್ಟರ್ 1 ಹಾಗೂ ಕೆಜಿಎಫ್ ಚಾಪ್ಟರ್ 2 ಸಿನಿಮಾಗಳ ಮೂಲಕ ಪ್ರಶಾಂತ್ ನೀಲ್ ಭಾರತೀಯ ಚಿತ್ರರಂಗ ಮಾತ್ರವಲ್ಲದೇ, ವಿಶ್ವದೆಲ್ಲಡೆ ದಾಖಲೆ ಬರೆದು ಇಡೀ ಜಗತ್ತಿಗೆ ಪರಚಯವಾದರು. ಪ್ರಶಾಂತ್ ನೀಲ್ ನಿರ್ದೇಶನದ ಈ ಆಕ್ಷನ್ ಎಂಟರ್‌ಟೈನರ್ ಬರೆದ ದಾಖಲೆಗಳು ಒಂದೆರಡಲ್ಲ. ಕನ್ನಡ ಚಿತ್ರರಂಗವನ್ನು ಎತ್ತರಕ್ಕೆ ಕೊಂಡೊಯ್ದ ಕೀರ್ತಿ ನೀಲ್‌ಗೆ ಸಲ್ಲುತ್ತದೆ.

ಪ್ರಶಸ್ತಿಗಳು & ಮುಂಬರುವ ಸಿನಿಮಾಗಳು

ಮಾಡಿದ ಬೆರಣಿಕೆ ಸಿನಿಮಾಗಳಿಂದಲೇ ಪ್ರಶಾಂತ್ ನೀಲ್‌ ಅವರಿಗೆ ಸಿಕ್ಕಾಪಟ್ಟೆ ಖ್ಯಾತಿ ಸಿಕ್ಕಿದೆ. ಜೊತೆಗೆ ಅತ್ಯುತ್ತಮ ನಿರ್ದೇಶಕ ಫಿಲ್ಮಫೇರ್, ಅತ್ಯುತ್ತಮ ಡೆಬ್ಯೂಟಂಟ್ ಡೈರೆಕ್ಟರ್ ಸೈಮಾ ಅವಾರ್ಡ್ ಸೇರಿದಂತೆ ಹಲವು ಪ್ರಶಸ್ತಿ ಬಾಚಿಕೊಂಡಿದ್ದಾರೆ. ಸದ್ಯ ಅವರು ಜೂನಿಯರ್ ಎನ್‌ಟಿಆರ್‌ಗೆ ಸಿನಿಮಾ ಮಾಡುತ್ತಿದ್ದಾರೆ. ಇದರ ಜೊತೆಗೆ ಶ್ರೀಮುರಳಿ ನಟನೆಯ 'ಬಘೀರ' ಸಿನಿಮಾಗೆ ಕಥೆ ಬರೆದಿದ್ದಾರೆ. ಪ್ರಶಾಂತ್ ನೀಲ್ ಸಂದರ್ಶನವೊಂದರಲ್ಲಿ ಕನ್ನಡದ ನಟ ಶಂಕರ್ ನಾಗ್ ಹಾಗೂ ತೆಲುಗು ನಟ ಚಿರಂಜೀವಿ ತಮ್ಮ ನೆಚ್ಚಿನ ನಟರೆಂದು ಹೇಳಿಕೊಂಡಿದ್ದರು. ಬಾಲಿವುಡ್ ನಟಿ ಶ್ರೀದೇವಿ ನೆಚ್ಚಿನ ನಟಿ ಎಂದಿದ್ದರು.


Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+