'ಗಾಳಿಪಟ'ಯಶಸ್ಸು ಡೈಸಿಯನ್ನು ತವರಿಗೆ ಕರೆತಂದಿತೆ?
ಮುಂಬಯಿಗೆ ಹೋಗಿ ಬಾಲಿವುಡ್ ನಲ್ಲಿ ತನ್ನ ಬೇಳೆಕಾಳು ಬೇಯಿಸುವುದಾಗಿ ಹೇಳಿ ಹೊರಟ್ಟಿದ್ದ ಕೊಡಗಿನ ಬೆಡಗಿ, ಬೆಂಗಳೂರು ಹುಡುಗಿ ಡೈಸಿ ಬೋಪಣ್ಣ ಮತ್ತೆ ಸ್ಯಾಂಡಲ್ ವುಡ್ ನಲ್ಲಿ ನಿಲ್ಲುವ ಸೂಚನೆಗಳು ದಟ್ಟವಾಗಿವೆ. ಇದೆಲ್ಲಾ ಗಾಳಿಪಟ ಚಿತ್ರದ ಮಹಿಮೆ ಎನ್ನಲಾಗಿದೆ.
ಒಂದು ಚಿತ್ರದ ಸೋಲು ಗೆಲವು ಹಲವರ ವೃತ್ತಿ ಬದುಕಿನ ನಕ್ಷೆಯನ್ನು ಬದಲಿಸಬಲ್ಲದು ಎಂಬುದಕ್ಕೆ ಇದು ಸಾಕ್ಷಿಯಂಬಂತಾಗಿದೆ. ಗಾಳಿಪಟ ಚಿತ್ರದಲ್ಲಿ ಹೆಚ್ಚು ಮಾತಿಲ್ಲದೆ ಮೌನದಲ್ಲೇ ಎಲ್ಲರನ್ನು ಸೆಳೆದ ಡೈಸಿಯ ಅಭಿನಯದ ಬಗ್ಗೆ ಪ್ರಶಂಸೆಯ ಮಾತುಗಳು ಕೇಳಿಬಂದ ಬೆನ್ನಲ್ಲೇ, ಡೈಸಿ ಕನ್ನಡ ಚಿತ್ರರಂಗದಲ್ಲಿ ಉಳಿಯುವ ಸಾಧ್ಯತೆಗಳು ಕಂಡುಬಂದಿರುವುದು ಉತ್ತಮ ಬೆಳವಣಿಗೆ ಎನ್ನಬಹುದು.
'ಬೀದಿ ಬಸವಣ್ಣ' ಎಂದು ಹೆಸರಿಡಲಾಗಿರುವ ಚಿತ್ರದಲ್ಲಿ ನವರಸನಾಯಕ ಜಗ್ಗೇಶ್ ಜೋಡಿಯಾಗಿ ಮೊದಲ ಬಾರಿಗೆ ಡೈಸಿ ಅಭಿನಯಿಸುತ್ತಿರುವುದು ವಿಶೇಷ. ಚಿತ್ರದ ಟೈಟಲ್ ಬಗ್ಗೆ ಸ್ವಲ್ಪಮಟ್ಟಿನ ವಿವಾದ ಎದ್ದು ತಣ್ಣಗಾಗಿದೆ. ಫೆ. 21ರಿಂದ ಚಿತ್ರೀಕರಣ ಪ್ರಾರಂಭಗೊಳ್ಳಲಿದೆ. ಈ ಚಿತ್ರದನಿರ್ಮಾಣವನ್ನು ಭಕ್ತವತ್ಸಲ ಅಲಿಯಾಸ್ ಭಕ್ತ ಮಾಡುತ್ತಿದ್ದಾರೆ.
ಹೆಂಡ್ತಿಗೇ ಹೇಳ್ಬೇಡಿ ಸೇರಿದಂತೆ ಹಲವಾರು ಉತ್ತಮ ಹಾಸ್ಯ ಚಿತ್ರಗಳನ್ನು ನೀಡಿದ ಹಿರಿಯ ನಿರ್ದೇಶಕ ಕೋಡ್ಲು ರಾಮಕೃಷ್ಣ ಅವರು ನಿರ್ದೇಶನ ಮಾಡಲಿದ್ದಾರೆ.ನಟ ಮೋಹನ್ ಚಿತ್ರಕಥೆ ಮತ್ತು ಸಂಭಾಷಣೆ ನೀಡುತ್ತಿರುವುದು ಇನ್ನೊಂದು ವಿಶೇಷ. ಈ ಚಿತ್ರಕ್ಕೆ ಜೊತೆ ಜೊತೆಯಲಿ, ಗಜ ಮುಂತಾದ ಚಿತ್ರಕ್ಕೆ ಸಂಗೀತ ನೀಡಿ, ಇತ್ತೀಚೆಗೆ ಗಾಳಿಪಟ ಚಿತ್ರಕ್ಕೆ ಸಂಯೋಜನೆ ಮಾಡಿದ ಹರಿಕೃಷ್ಣ ಅವರು ಸಂಗೀತ ನೀಡುತ್ತಿದ್ದಾರೆ. ಉಳಿದಂತೆ ತಾರಾಗಣದಲ್ಲಿ ಶ್ರೀನಿವಾಸಮೂರ್ತಿ,ಗಿರೀಶ್ ಕಾರ್ನಾಡ್ ಮುಂತಾದವರಿದ್ದಾರೆ.
(ದಟ್ಸ್ ಸಿನಿವಾರ್ತೆ)


Click it and Unblock the Notifications