X
ಹೋಮ್ ಚಲನಚಿತ್ರಗಳ ಒಳನೋಟ

ಕನ್ನಡ ಚಿತ್ರರಂಗದಲ್ಲಿ ಉತ್ತುಂಗಕ್ಕೆ ಏರುತ್ತಿದ್ದಂತೆ ನಿಧನರಾದ ನಟರಿವರು

Author Sowmya Bairappa | Published: Monday, November 14, 2022, 04:53 PM [IST]

ಸದ್ಯ ಕನ್ನಡಲ್ಲಿ ತೆರೆ ಕಾಣುತ್ತಿರುವ ಕನ್ನಡ ಸಿನಿಮಾಗಳು ಒಳ್ಳೆಯ ಕಂಟೆಂಟ್, ಅದ್ಧೂರಿ ಮೇಕಿಂಗ್​​​​ನೊಂದಿಗೆ 100 ಕ್ಲಬ್ ಸೇರುವಲ್ಲಿ ಇತಿಹಾಸ ಬರೆದಿಡುತ್ತಿವೆ. ಕನ್ನಡ ಚಿತ್ರರಂಗ ಇಂದು ಜಾಗತಿಕವಾಗಿ ಗುರುತಿಸಿಕೊಂಡಿದೆಯೆಂದರೆ ಅದಕ್ಕೆ ಹಲವಾರು ಕಲಾವಿದರ ಅವಿಸ್ಮರಣೀಯ ಕೊಡುಗೆ ಕಾರಣ. ಕನ್ನಡದ ಹಲವಾರು ನಟರು ಅಭೂತಪೂರ್ವ ಸಾಧನೆ ಮಾಡಿ, ತಮ್ಮ ಜೀವನದ ಉತ್ತುಂಗದಲ್ಲಿದ್ದಾಗಲೇ ಚಿತ್ರರಂಗವನ್ನು ಅಗಲಿದ್ದಾರೆ. ಆದರೆ, ಕಲಾವಿದನಿಗೆ ಎಂದು ಸಾವಿಲ್ಲ ಎಂಬಂತೆ ಸಿನಿಮಾಗಳ ಮೂಲಕ ಅವರು ಕನ್ನಡಿಗರ ಹೃದಯದಲ್ಲಿ ನೆಲೆಸಿದ್ದಾರೆ. ಚಿತ್ರರಂಗದಲ್ಲಿ ಉತ್ತುಂಗಕ್ಕೆ ಏರುತ್ತಿದ್ದಂತೆ ನಿಧನರಾದ ಕನ್ನಡದ ನಟರ ಮಾಹಿತಿ ಇಲ್ಲಿದೆ.


cover image
ಪುನೀತ್ ರಾಜ್ ಕುಮಾರ್
1

ನಟ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ೨೦೨೧ರ ಅಕ್ಟೋಬರ್ ೨೯ರಂದು ಹೃದಯಾಘಾತದಿಂದ ನಿಧನರಾದರು. ಅವರ ಹಠಾತ್ ಅಗಲಿಕೆಯಿಂದ ಕರುನಾಡಿಗೆ ಬರಸಿಡಿಲು ಬಂಡಿದಂತಾಗಿತ್ತು. ಪುನೀತ್ ಕೋಟ್ಯಂತರ ಜನರ ಆರಾಧ್ಯ ದೈವವಾಗಿದ್ದರು. ಅವರು ಎಲೆಮರೆ ಕಾಯಿಯಂತೆ ಅನಾಥಾಶ್ರಮ, ಗೋ ಶಾಲೆ, ಮಕ್ಕಳ ಶಿಕ್ಷಣಕ್ಕಾಗಿ ನೆರವು, ವೃದ್ಧಾಶ್ರಮ ಹೀಗೆ ಸಾಕಷ್ಟು ಸಾಮಾಜಿಕ ಕಾರ್ಯಗಳನ್ನು ಮಾಡಿದ್ದರು. ಯಾವುದೇ ಪ್ರಚಾರ ಬಯಸದೇ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡು ಎಲ್ಲರಿಗೂ ಮಾದರಿಯಾಗಿದ್ದರು. ಅಪ್ಪು ಸಿನಿಮಾ ಕ್ಷೇತ್ರದಲ್ಲೂ ಎಲ್ಲರಿಗೂ ಮಾದರಿಯಾಗಿದ್ದರು. ಬಾಲ ಕಲಾವಿದರಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದ ಅವರು, ಅಪ್ಪು ಸಿನಿಮಾದ ಮೂಲಕ ನಾಯಕನಾಗಿ ಎಂಟ್ರಿ ಕೊಟ್ಟರು. ಅಪ್ಪು ಸಮಾಜಕ್ಕೆ ಮಾದರಿಯಾಗುವಂತಹ ಸಿನಿಮಾಗಳನ್ನೇ ಮಾಡಿದ್ದರು. ಇವರ ಸಿನಿಮಾಗಳನ್ನು ಚಿಕ್ಕವರಿಂದ ಹಿಡಿದು ವಯಸ್ಸಾದವರ ವರೆಗೆ ಪ್ರೀತಿಯಿಂದ ನೋಡುತ್ತಿದ್ದರು. ಇಷ್ಟೆಲ್ಲಾ ಸಾಧನೆ ಮಾಡಿದ್ದ ಪುನೀತ್ ಅವರ ಅಗಲಿಕೆ ಕರುನಾಡಿಗೆ ತುಂಬಲಾರದ ನಷ್ಟ. 

ಶಂಕರ್ ನಾಗ್
2

ಶಂಕರನಾಗ್ ಕನ್ನಡ ಚಿತ್ರರಂಗದ ದಂತಕಥೆ. ಕನ್ನಡ ಚಿತ್ರ ಪ್ರೇಮಿಗಳ ಮನಃಪಟಲದಲ್ಲಿ ಅಚ್ಚಳಿಯದ ಮುದ್ರೆಯನ್ನೊತ್ತಿರುವ ಶಂಕರ ನಾಗ್ ಕನ್ನಡಿಗರ ತಾದ್ಯಾತ್ಮದಲ್ಲಿ ಬೆರೆತು ಹೋಗಿದ್ದಾರೆ. 35 ವರ್ಷದ ಕಿರಿದಾದ ಬದುಕಿನ ಪಯಣದಲ್ಲಿ ನೂರಾರು ವರುಷ ನೆನೆಯುವಂತಹ ಕಾರ್ಯ ಸಾಧಿಸಿದ ಛಲಗಾರ. ನಾಯಕನಟನಾಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ ಕನ್ನಡ ಚಿತ್ರರಂಗವನ್ನು ಬೆಳಗಿದ್ದಾರೆ. ಕೇವಲ 35 ವಯಸ್ಸಿನಲ್ಲೇ ತಮ್ಮ ಚುರುಕಾದ ಜೀವನದಿಂದ ತುಂಬಾ ಎತ್ತರಕ್ಕೆ ಬೆಳೆದಿದ್ದ ಶಂಕರನಾಗ್‌, ಅಚಾನಕವಾಗಿ ನಮ್ಮನ್ನು ಆಗಲಿದರು.1990 ಸೆಪ್ಟೆಂಬರ್ 30ರ ಬೆಳಗ್ಗೆ ಜೋಕುಮಾರಸ್ವಾಮಿ ಚಿತ್ರದ ಶೂಟಿಂಗ್‌ಗಾಗಿ ಪತ್ನಿ ಮತ್ತು ಮಗಳು ಕಾವ್ಯ ಜೊತೆ ಕಾರಿನಲ್ಲಿ ಹೋಗುವಾಗ ದಾವಣಗೆರೆ ಹೊರವಲಯದ ಬಳಿ ಅಪಘಾತಕ್ಕೀಡಾಗಿ ಶಂಕರನಾಗ್ ನಿಧನರಾದರು. 

ಚಿರಂಜೀವಿ ಸರ್ಜಾ
3


ಚಿಕ್ಕಪ್ಪ ಅರ್ಜುನ್ ಸರ್ಜಾ ಅವರ ಕೈಕೆಳಗೆ ಸುಮಾರು ನಾಲ್ಕು ವರ್ಷಗಳ ಕಾಲ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ ಚಿರಂಜೀವಿ ಸರ್ಜಾ ಅವರು 2009ರಲ್ಲಿ ತೆರೆಕಂಡ ವಾಯುಪುತ್ರ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ನಂತರ ಭಿನ್ನ-ಭಿನ್ನ ಪಾತ್ರಗಳಲ್ಲಿ ಅಭಿನಯಿಸುವ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡಿದ್ದ ಚಿರು,  2020 ಜೂನ್ 7ರಂದು ಹೃದಯಾಘಾತದಿಂದ ತಮ್ಮ 39ನೇ ವಯಸ್ಸಿನಲ್ಲಿ ವಿಧಿವಶರಾದರು.

 

ಸುನೀಲ್
4

ಸುನೀಲ್ ಕನ್ನಡ ಚಿತ್ರರಂಗ ಕಂಡ ಸ್ಪುರದ್ರೂಪಿ ನಟ. ಸುನೀಲ್ 90ರ ದಶಕದ ಚಾಕಲೇಟ್ ಹೀರೋ ಎಂದೇ ಖ್ಯಾತಿ ಪಡೆದಿದ್ದರು. 1990 ರಿಂದ 1994 ರವರೆಗೆ ಸಿನಿರಂಗದಲ್ಲಿ ಸಕ್ರಿಯವಾಗಿದ್ದ ಸುನೀಲ್ ಸುಮಾರು ಮೂವತ್ತು ಚಿತ್ರಗಳಲ್ಲಿ ನಟಿಸಿದ್ದಾರೆ. ಬೆಳ್ಳಿ ಕಾಲುಂಗುರ, ದ್ರಾಕ್ಷಾಯಿಣಿ, ಮಾಲಾಶ್ರೀ ಮಾಮಾಶ್ರೀ, ಶೃತಿ ಮುಂತಾದ ಹಿಟ್ ಚಿತ್ರಗಳ ಮೂಲಕ ಪ್ರಸಿದ್ಧರಾಗಿದ್ದರು. ಸಿನಿಪರದೆಯ ಮೇಲೆ ಸುನೀಲ್ ಮತ್ತು ಮಾಲಾಶ್ರೀ  ಆ ಕಾಲದ ಫೇವರೇಟ್ ಜೋಡಿಯಾಗಿತ್ತು. ತಮ್ಮ ಚುರುಕು ಅಭಿನಯದಿಂದ ಕನ್ನಡದಲ್ಲಿ ಸಂಚಲನ ಮೂಡಿಸಿದ್ದ ಸುನೀಲ್, 1994 ಜುಲೈ 24ರಂದು ನಿರ್ಮಾಪಕ ಸಚಿನ್ ಮಲ್ಯ ಮತ್ತು ನಟಿ ಮಾಲಾಶ್ರೀಯವರೊಂದಿಗೆ ಬಾಗಲಕೋಟೆಯಿಂದ ಬೆಂಗಳೂರಿಗೆ ಕಾರಿನಲ್ಲಿ ಬರುವಾಗ ಅಪಘಾತದಲ್ಲಿ ನಿಧನರಾದರು. ಮಾಲಾಶ್ರೀ ಪವಾಡ ಸದೃಶವಾಗಿ ಬದುಕುಳಿದಿದ್ದರು. 

 

ಸಂಚಾರಿ ವಿಜಯ್
5

ಸಂಚಾರಿ ವಿಜಯ್ ಕನ್ನಡ ಚಿತ್ರರಂಗದ ಅದ್ಭುತ ನಟ. ಇವರು ಕನ್ನಡ ಮಾತ್ರವಲ್ಲದೆ, ತಮಿಳು, ತೆಲುಗು ಮತ್ತು ಹಿಂದಿ ಸಿನಿಮಾಗಳಲ್ಲೂ ಕೆಲಸ ಮಾಡಿದ್ದರು.   62ನೇ ರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಇವರ 'ನಾನು ಅವನಲ್ಲ ಅವಳು' ಚಿತ್ರಕ್ಕೆ ಅತ್ಯುತ್ತಮ ನಟ ಪ್ರಶಸ್ತಿ ಸಿಕ್ಕಿದ್ದು, ಇದರಲ್ಲಿ ಅವರು ತೃತೀಯ ಲಿಂಗಿಯ ಪಾತ್ರ ನಿರ್ವಹಿಸಿದ್ದರು. ಇವರ ಮತ್ತೊಂದು ಸಿನಿಮಾದ 'ಹರಿವು' ಅತ್ಯುತ್ತಮ ಕನ್ನಡ ಪ್ರಾದೇಶಿಕ ಚಲನಚಿತ್ರ ಪ್ರಶಸ್ತಿ ಪಡೆದಿತ್ತು. ಹೀಗೆ ಅವರು ಚಿತ್ರರಂಗದಲ್ಲಿ ಉತ್ತುಂಗಕ್ಕೇರುತ್ತಿರುವಾಗಲೇ 2021ರ ಜೂನ್ 12ರಂದು ರಾತ್ರಿ 11.30 ರ ಸುಮಾರಿಗೆ ಸ್ನೇಹಿತ್ ನವೀನ್ ಜೊತೆ ಬೈಕ್ ನಲ್ಲಿ ಹೋಗುವಾಗ ಅಪಘಾತಕ್ಕೆ ಒಳಗಾದರು. ಈ ವೇಳೆ ಮೆದುಳು ಮತ್ತು ಬಲ ತೊಡೆಗೆ ತೀವ್ರ ಪೆಟ್ಟಾಗಿದ್ದರಿಂದ ಜೂನ್ 15ರಂದು ನಿಧನರಾದರು. ಹಲವು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿದ್ದ ವಿಜಯ್, ಕೊನೆಯುಸಿರೆಳೆಯುವಾಗಲೂ ತಮ್ಮ ಅಂಗಾಂಗಳ ದಾನದ ಮೂಲಕ ಸಮಾಜಕ್ಕೆ ಕೊಡುಗೆ ನೀಡಿದ್ದರು. 

 

ಉದಯ್
6

ಬಡ ಕುಟಂಬದಿಂದ ಬಂದ ಉದಯ್, ಚಿತ್ರರಂಗಕ್ಕೂ ಬರುವ ಮುನ್ನ ಆಟೋ ಡ್ರೈವರ್ ಆಗಿದ್ದರು. 'ದುನಿಯಾ' ಚಿತ್ರದಲ್ಲಿ ಕೆಲಸ ಮಾಡಿದ್ದ ಅವರು, ನಂತರದ ದಿನಗಳಲ್ಲಿ  ನಟ ದುನಿಯಾ ವಿಜಯ್ ಅವರ ಸ್ನೇಹಿತರಾದರು. ಮೊದಲು ಚಿಕ್ಕ-ಪುಟ್ಟ ಪಾತ್ರಗಳಲ್ಲಿ ನಟಿಸುತ್ತಿದ್ದ ಉದಯ್ ಅವರಿಗೆ ಕೀರ್ತೀ ತಂದ ಪಾತ್ರ `ಜಯಮ್ಮನ ಮಗ' ಚಿತ್ರದ ರಕ್ತಾಕ್ಷ. ಅವರು ಈ ಪಾತ್ರದ ನಟನೆಗಾಗಿ 2013ರ `ಅತ್ತ್ಯುತ್ತಮ ಖಳನಾಯಕ' ಸೈಮಾ ಪ್ರಶಸ್ತಿ ಪಡೆದರು. ಆಗಷ್ಟೇ ಚಿತ್ರರಂಗದಲ್ಲಿ ಉತ್ತುಂಗಕ್ಕೆ ಏರಿದ್ದ ಉದಯ್, 2016ರ ನವೆಂಬರ್ ನಲ್ಲಿ ತಿಪ್ಪಗೊಂಡನಹಳ್ಳಿ ಜಲಾಶಯದಲ್ಲಿ `ಮಾಸ್ತಿಗುಡಿ' ಚಿತ್ರದ ಕ್ಲೈಮಾಕ್ಸ್ ಶೂಟಿಂಗ್ ಮಾಡುವಾಗ  ಕೆರೆಯಲ್ಲಿ ಮುಳುಗಿ ನಿಧನರಾದರು. 

ಅನಿಲ್
7

ಸಿನಿಮಾ ಇಂಡಸ್ಟ್ರಿಗೆ ಬರುವ ಮುನ್ನ ನಟ ಅನಿಲ್ ಕುಮಾರ್ ಅವರು ಬೀಡಾ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ತದನಂತರ 800 ರೂಪಾಯಿಗೆ ಟರ್ನರ್ ಕೆಲಸ ಕೂಡ ಮಾಡಿದ್ದರು. ಕೊನೆಗೆ ಗಾಡಿಗಳನ್ನು ಸೀಜ್ ಮಾಡುವ ಕೆಲಸಕ್ಕೆ ಕೈಹಾಕಿದರು. ಕಟ್ಟುಮಸ್ತಾದ ದೇಹವನ್ನು ಹೊಂದಿದ್ದ ಅನಿಲ್ ಕುಮಾರ್ ಅವರು ಸಿನಿಮಾ ಜಗತ್ತಿನಲ್ಲಿ ಮಿಂಚುವ ಕನಸು ಕಂಡವರಲ್ಲ. ಆಕಸ್ಮಿಕವಾಗಿ ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಟ್ಟರು.  ಅನಿಲ್ ಕುಮಾರ್ ಅವರು ಸಿನಿಮಾ ಕ್ಷೇತ್ರಕ್ಕೆ ಬರಲು ಮುಖ್ಯ ಕಾರಣ ನಟ ದುನಿಯಾ ವಿಜಯ್. ಒಮ್ಮೆ ಗಾಡಿಗಳನ್ನು ಸೀಜ್ ಮಾಡಲು ಅನಿಲ್ ಹೋಗಿದ್ದಾಗ, ಅಲ್ಲಿ ಸಿನಿಮಾದ ಫೈಟರ್ ಗಳನ್ನು ನೋಡಿ ಪರಿಚಯ ಮಾಡಿಕೊಂಡರು. ತದನಂತರ ಕೃಷ್ಣರಾವ್ ಪಾರ್ಕ್ ನಲ್ಲಿ ಫೈಟಿಂಗ್ ತರಬೇತಿ ಪಡೆಯಲು ಹೋದಾಗ ಅಲ್ಲಿಗೆ ದುನಿಯಾ ವಿಜಯ್ ಬಂದಿದ್ದರು. ಆಗ ಅನಿಲ್ ಅವರನ್ನು ಪರಿಚಯ ಮಾಡಿಕೊಂಡರು. ವಿಜಯ್ ಅವರ ಪರಿಚಯ ಆಗುವಷ್ಟರಲ್ಲಿ ಕುಂಗ್ ಫು ಹಾಗೂ ಬಾಕ್ಸಿಂಗ್ ಕಲಿತಿದ್ದ ಅನಿಲ್ ಕುಮಾರ್, ವಿಜಯ್ ಅವರಿಗೆ ಇನ್ನಷ್ಟೂ ಹತ್ತಿರವಾದರು. ಅಷ್ಟೊತ್ತಿಗಾಗಲೇ ವಿಜಿ ಅವರ 'ದುನಿಯಾ' ಸಿನಿಮಾ ಸೆಟ್ಟೇರಿತ್ತು. ಅದರಲ್ಲಿ ಅನಿಲ್ ಗೆ ಪುಟ್ಟ ಅವಕಾಶ ಸಿಕ್ಕಿತು. ಹೀಗೆ 'ದುನಿಯಾ' ಚಿತ್ರದಿಂದ ಆರಂಭವಾದ ಇವರ ಸಿನಿಪಯಣ 25 ಚಿತ್ರಗಳ ಗಡಿ ಮುಟ್ಟಿತ್ತು. ಆದರೆ,  2016ರ ನವೆಂಬರ್ ನಲ್ಲಿ ತಿಪ್ಪಗೊಂಡನಹಳ್ಳಿ ಜಲಾಶಯದಲ್ಲಿ `ಮಾಸ್ತಿಗುಡಿ' ಚಿತ್ರದ ಕ್ಲೈಮಾಕ್ಸ್ ಶೂಟಿಂಗ್ ಮಾಡುವಾಗ  ಕೆರೆಯಲ್ಲಿ ಮುಳುಗಿ ಇವರು ನಿಧನರಾದರು. 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+