ಗುರುಪ್ರಸಾದ್ ಕನ್ನಡ ಚಿತ್ರರಂಗದ ಪ್ರಮುಖ ನಿರ್ದೇಶಕ, ನಿರ್ಮಾಪಕ, ನಟ ಮತ್ತು ಸಾಹಿತಿ. ತಮ್ಮ ನವಿರಾದ ಮತ್ತು ಸೂಕ್ಷ್ಮ ವ್ಯಂಗ್ಯಗಳ ಮೂಲಕ ಸಾಮಾಜಿಕ ಸಂದೇಶ ನೀಡುವ ಚಿತ್ರಗಳ ನಿರ್ದೇಶನದಲ್ಲಿ ಸಿದ್ಧಹಸ್ತರು. ಇವರು 1972ರಲ್ಲಿ ಕನಕಪುರದಲ್ಲಿ ಜನಿಸಿದರು.
ವೃತ್ತಿಜೀವನ
ಗುರುಪ್ರಸಾದ್ 2006ರಲ್ಲಿ ತೆರೆಕಂಡ `ಮಠ' ಚಿತ್ರದ ಮೂಲಕ ನಿರ್ದೇಶಕನಾಗಿ ಕನ್ನಡ ಚಿತ್ರರಂಗದಲ್ಲಿ ಸಿನಿಪಯಣ ಆರಂಭಿಸಿದರು. ಇದು ನವರಸ ನಾಯಕ ಜಗ್ಗೇಶ್ರ ನೂರನೇ ಚಿತ್ರ. 2009ರಲ್ಲಿ ಇದೇ ಜೋಡಿ `ಎದ್ದೇಳು ಮಂಜುನಾಥ' ಚಿತ್ರದ ಮೂಲಕ ಮತ್ತೊಂದು ಸಮಾಜಿಕ ಚಿತ್ರ ನೀಡಿತು. ಈ ಚಿತ್ರಕ್ಕೆ ಫಿಲ್ಮಫೇರ್ ಪ್ರಶಸ್ತಿ ದೊರಕಿತು. ನಂತರ ಡೈರೆಕ್ಟರ್ ಸ್ಪೇಷಲ್, ಎರಡನೇ ಸಲ ಚಿತ್ರಗಳನ್ನು ನಿರ್ದೇಶಿಸಿದರು.
ನಿರ್ದೇಶಕ ಮಾತ್ರವಲ್ಲದೇ ನಟನಾಗಿ ಮಠ, ಎದ್ದೇಳು ಮಂಜುನಾಥ, ಮೈಲಾರಿ, ಹುಡುಗರು, ಅನಂತು v/s ನುಸ್ರತ್ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. ಕಿಚ್ಚ ಸುದೀಪ್ ನಿರೂಪಣೆಯ ಕನ್ನಡ ಬಿಗ್ಬಾಸ್ ಅವತರಣಿಕೆಯಲ್ಲಿ ಭಾಗವಹಿಸಿದ್ದ ಇವರು, ಹಲವು ರಿಯಾಲಿಟಿ ಶೋಗಳಲ್ಲಿ ತೀರ್ಪುಗಾರರಾಗಿ ಭಾಗವಹಿಸಿದ್ದಾರೆ.
ನಿಧನ; ಗುರುಪ್ರಸಾದ್ ಅವರು 2024ರ ನವೆಂಬರ್ 3ರಂದು ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ನ್ಯೂ ಹೆವೆನ್ ಅಪಾರ್ಟ್ಮೆಂಟ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.