ಗುರುಪ್ರಸಾದ್
ಗುರುಪ್ರಸಾದ್ ಜೀವನಚರಿತ್ರೆ
ಗುರುಪ್ರಸಾದ್ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಪ್ರಮುಖ ನಿರ್ದೇಶಕ, ನಿರ್ಮಾಪಕ,ನಟ ಮತ್ತು ಸಾಹಿತಿ. ತಮ್ಮ ನವಿರಾದ ಮತ್ತು ಸೂಕ್ಷ್ಮ ವ್ಯಂಗ್ಯಗಳ ಮೂಲಕ ಸಾಮಾಜಿಕ ಸಂದೇಶ ನೀಡುವ ಚಿತ್ರಗಳ ನಿರ್ದೇಶನದಲ್ಲಿ ಸಿದ್ಧಹಸ್ತರು.
1972 ರಲ್ಲಿ ಕನಕಪುರದಲ್ಲಿ ಜನಿಸಿದ ಗುರುಪ್ರಸಾದ್ ರಾಮಚಂದ್ರ ಶರ್ಮಾ 2006 ರಲ್ಲಿ ತೆರೆಕಂಡ `ಮಠ' ಚಿತ್ರದ ಮೂಲಕ ನಿರ್ದೇಶಕನಾಗಿ ಕನ್ನಡ ಚಿತ್ರರಂಗದಲ್ಲಿ ಸಿನಿಪಯಣ ಆರಂಭಿಸಿದರು. ಇದು ನವರಸ ನಾಯಕ ಜಗ್ಗೇಶ್ರ ನೂರನೇ ಚಿತ್ರ.
2009 ರಲ್ಲಿ ಇದೇ ಜೋಡಿ `ಎದ್ದೇಳು ಮಂಜುನಾಥ' ಚಿತ್ರದ ಮೂಲಕ ಮತ್ತೊಂದು ಸಮಾಜಿಕ ಚಿತ್ರ ನೀಡಿತು. ಈ ಚಿತ್ರಕ್ಕೆ ಫಿಲ್ಮಫೇರ್ ಪ್ರಶಸ್ತಿ ದೊರಕಿತು. ನಂತರ `ಡೈರೆಕ್ಟರ್ ಸ್ಪೇಷಲ್',`ಎರಡನೇ ಸಲ' ಚಿತ್ರಗಳನ್ನು ನಿರ್ದೇಶಿಸಿದರು.
ನಿರ್ದೇಶಕ ಮಾತ್ರವಲ್ಲದೇ ನಟನಾಗಿ `ಮಠ',`ಎದ್ದೇಳು ಮಂಜುನಾಥ',`ಮೈಲಾರಿ', `ಹುಡುಗರು',`ಅನಂತು v/s ನುಸ್ರತ್' ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.
ಕಿಚ್ಚ ಸುದೀಪ್ ನಿರೂಪಣೆಯ ಕನ್ನಡ ಬಿಗ್ಬಾಸ್ ಅವತರಣಿಕೆಯಲ್ಲಿ ಭಾಗವಹಿಸಿದ್ದ ಇವರು ಹಲವು ರಿಯಾಲಿಟಿ ಶೋಗಳಲ್ಲಿ ತೀರ್ಪುಗಾರರಾಗಿ ಭಾಗವಹಿಸಿದ್ದಾರೆ.