ರಾಜ್ ನೇತೃತ್ವದಲ್ಲಿ ಬಂದ್ ನಿರ್ಧಾರ ದುರದೃಷ್ಟಕರ - ಧರ್ಮಸಿಂಗ್
ಬೆಂಗಳೂರು : ವರನಟ ಡಾ.ರಾಜ್ಕುಮಾರ್ ನೇತೃತ್ವದಲ್ಲಿ ನ.25ರಿಂದ ಅನಿರ್ದಿಷ್ಟಾವಧಿ ಬಂದ್ ಕೈಗೊಳ್ಳಲು ನಿರ್ಧರಿಸಿರುವ ಕನ್ನಡ ಚಿತ್ರೋದ್ಯಮದ ನಿರ್ಧಾರ ದುರದೃಷ್ಟಕರ ಎಂದು ಮುಖ್ಯಮಂತ್ರಿ ಧರ್ಮಸಿಂಗ್ ಬಣ್ಣಿಸಿದ್ದಾರೆ.
ಸರ್ಕಾರದ ಕಡೆಯಿಂದ ಮಾತುಕತೆಯ ಬಾಗಿಲುಗಳಿನ್ನೂ ತೆರೆದಿವೆ. ಒಂದುವೇಳೆ ಚಿತ್ರೋದ್ಯಮದ ಎಲ್ಲ ವಲಯಗಳು ಮಾತುಕತೆಗೆ ಮುಂದಾದರೆ ಸಿನಿಮಾ ಬಿಕ್ಕಟ್ಟಿಗೆ ಸೂಕ್ತ ಪರಿಹಾರವೊಂದನ್ನು ಕಂಡುಕೊಳ್ಳಬಹುದು ಎಂದು ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಧರ್ಮಸಿಂಗ್ ಆಶಾವಾದ ವ್ಯಕ್ತಪಡಿಸಿದರು.
ರಾಜ್ಯದ ಹಿತಾಸಕ್ತಿ ರಕ್ಷಿಸಲು ಸರ್ಕಾರ ಬದ್ಧವಾಗಿದೆ. ಗಡಿ ವಿವಾದವಾಗಲಿ, ಜಲ ವಿವಾದವಾಗಲೀ ಅಥವಾ ಭಾಷಾ ವಿಷಯವಾಗಲೀ, ಸರ್ಕಾರ ರಾಜ್ಯದ ಹಿತಾಸಕ್ತಿಗೆ ಧಕ್ಕೆಯಾಗುವಂತೆ ವರ್ತಿಸುವುದಿಲ್ಲ ಎಂದು ಧರ್ಮಸಿಂಗ್ ಸ್ಪಷ್ಟಪಡಿಸಿದರು.
ಕನ್ನಡೇತರ ಚಿತ್ರಗಳ ಪ್ರದರ್ಶನ ಕುರಿತ ವಿವಾದ ನ್ಯಾಯಾಲಯದ ಮುಂದಿದೆ. ಈ ಸಮಸ್ಯೆಯನ್ನು ಬಗೆಹರಿಸಲು ಸರ್ಕಾರ ಕೂಡ ಸಾಕಷ್ಟು ಪ್ರಯತ್ನ ನಡೆಸಿದೆ. ಈ ನಿಟ್ಟಿನಲ್ಲಿ ಉಪ ಮುಖ್ಯಮಂತ್ರಿ ಸಿದ್ಧರಾಮಯ್ಯ ಕೂಡ ಪ್ರಯತ್ನಿಸುತ್ತಿದ್ದಾರೆ ಎಂದರು.
ನ.25ರಂದು ವಿಧಾನಸೌಧದ ಮುಂಭಾಗದಲ್ಲಿ ಧರಣಿ ನಡೆಸಲು ಉದ್ದೇಶಿಸಿರುವ ರಾಜ್ ಹಾಗೂ ವಿಷ್ಣು ವಿರುದ್ಧ ಕ್ರಮ ಕೈಗೊಳ್ಳುವಿರಾ ಎನ್ನುವ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸದೆ ಧರ್ಮಸಿಂಗ್ ನುಣುಚಿಕೊಂಡರು.
(ಪಿಟಿಐ)
ಮುಖಪುಟ / ಸ್ಯಾಂಡಲ್ವುಡ್


Click it and Unblock the Notifications