ರಕ್ಷಿತ್ ಶೆಟ್ಟಿ ಮುಖ್ಯ ಪಾತ್ರದಲ್ಲಿ ಅಭಿನಯಿಸಿರುವ `777 ಚಾರ್ಲಿ' ವನ್ನು ಕಿರಣ್ ರಾಜ್ ಕೆ ನಿರ್ದೇಶಿಸಿದ್ದಾರೆ. ಪರಂವಃ ಸ್ಟುಡಿಯೋಸ್ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಈ ಚಿತ್ರಕ್ಕೆ ರಕ್ಷಿತ್ ಶೆಟ್ಟಿ ಮತ್ತು ಜಿ.ಎಸ್.ಗುಪ್ತ ಬಂಡವಾಳ ಹೂಡಿದ್ದಾರೆ.
ಸಂಗೀತಾ ಶೃಂಗೇರಿ ಮತ್ತು ರಾಜ್ ಬಿ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ಮಿಂಚಿದ್ದಾರೆ. ಶಾರ್ವರಿ ಮತ್ತು ಪ್ರಾಣ್ಯ ಎಂಬ ಪುಟಾಣಿ ಮಕ್ಕಳು ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಕಥೆ
ಧರ್ಮ (ರಕ್ಷಿತ್ ಶೆಟ್ಟಿ) ತನ್ನದೇ ಆದ ಕಾರಣಗಳಿಂದಾಗಿ ಸಮಾಜಕ್ಕೆ ವಿಮುಖನಾಗಿ, ಎಲ್ಲರಿಗೂ ಬೇಡವಾಗಿ ಬದುಕುತ್ತಿರುವ ಏಕಾಂಗಿ. ಸಿಂಪಲ್ಲಾಗಿ ಹೇಳಬೇಕೆಂದರೆ ಮನೆ ಮತ್ತು ಫ್ಯಾಕ್ಟರಿ ಅವನ ಬದುಕು. ಆಗ ಅತನ ಬಾಳಿನಲ್ಲಿ ಅಚಾನಕ್ಕಾಗಿ ಮುದ್ದಾದ ನಾಯಿಯೊಂದರ ಪ್ರವೇಶವಾಗುತ್ತದೆ. ಆರಂಭದಲ್ಲಿ ನಾಯಿಯ ಸಾಂಗತ್ಯ ಧರ್ಮನಿಗೆ ಕಿರಕಿರಿ ತಂದರೂ ಒಂದು ಸಂದರ್ಭದಲ್ಲಿ ನಾಯಿಯ ಮೇಲೆ ಧರ್ಮನಿಗೆ ಪ್ರೇಮ ಉಕ್ಕುತ್ತದೆ. ಇದಕ್ಕೆ ಮಹಾನ್ ಮಾನವತಾವಾದಿ, ನಟ ಚಾರ್ಲಿ ಚಾಪ್ಲಿನ್ ಸಹ ಕಾರಣನಾಗುತ್ತಾನೆ!
ಧರ್ಮ-ಚಾರ್ಲಿಯ ಸ್ನೇಹ-ಬಾಂಧವ್ಯ ಚೆನ್ನಾಗಿಯೇ ಸಾಗುತ್ತಿದ್ದ ಸಂದರ್ಭದಲ್ಲಿ ಧುತ್ತನೆ ವಿಷಮ ಸಂಗತಿಯೊಂದು ಬೆಳಕಿಗೆ ಬರುತ್ತದೆ ಅಲ್ಲಿಂದ ಕತೆಯ ಹಾದಿ ಹೊರಳುತ್ತದೆ. ಆ ವರೆಗೆ ಮೈಸೂರಿನ ಕಾಲೊನಿಯೊಂದರಲ್ಲಿ ಕತೆ, ಭಾರತದ ಉತ್ತರದತ್ತ ಹೊರಟು ನಿಲ್ಲುತ್ತದೆ. ಏಕೆ ಧರ್ಮ ಉತ್ತರ ಭಾರತಕ್ಕೆ ಪ್ರಯಾಣಿಸುತ್ತಾನೆ, ಧರ್ಮನ ಬಾಳನ್ನು ಮತ್ತೊಂದು ದಿಕ್ಕಿನತ್ತ ಹೊರಳಿಸಿದ ಸಂಗತಿ ಯಾವುದು ಎಂಬುದು ಚಿತ್ರದ ಪ್ರಮುಖ ತಿರುಳು.
ಬೆಳವಣಿಗೆ
ರಿಕ್ಕಿ ಮತ್ತು ಕಿರಿಕ್ ಪಾರ್ಟಿ ಚಿತ್ರಗಳಲ್ಲಿ ರಿಷಭ್ ಶೆಟ್ಟಿಗೆ ಸಹಾಯಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದ ಕಿರಣರಾಜ್ ಕೆ ಈ ಚಿತ್ರದ ಮೂಲಕ ಮೊದಲ ಬಾರಿಗೆ ನಿರ್ದೇಶಕನ ಕ್ಯಾಪ್ ತೊಟ್ಟರು. ಚಿತ್ರದಲ್ಲಿ ನಾಯಿಯ ಪಾತ್ರ ಪ್ರಮುಖವಾಗಿರುವುದರಿಂದ, ಮೂರು ಲ್ಯಾಬ್ರೊಡಾರ್ ನಾಯಿ ತಳಿಗಳಿಗೆ ತರಬೇತಿ ನೀಡಲಾಯಿತು.
ಚಿತ್ರದ ಕೆಲ ಘಟನೆಗಳು ಕಿರಣರಾಜ್ ನಿಜ ಜೀವನದಿಂದ ಸ್ಪೂರ್ತಿ ಪಡೆದಿವೆ. ಚಿತ್ರಕ್ಕೆ ಮೊದಲು ಅರವಿಂದ್ ನಾಯಕನಾಗಿ ಆಯ್ಕೆಯಾಗಿದ್ದರೂ, ಚಿತ್ರದ ಚಿತ್ರೀಕರಣ ತಡವಾದ ಕಾರಣ ಅರವಿಂದ್ `ಭೀಮಸೇನ ನಳ ಮಹಾರಾಜ' ಚಿತ್ರಕ್ಕಾಗಿ ಈ ಚಿತ್ರವನ್ನು ತ್ಯಜಿಸಿದರು. ನಂತರ ರಕ್ಷಿತ್ ಶೆಟ್ಟಿ ನಾಯಕನಾಗಿ ಆಯ್ಕೆಯಾದರು.
ಚಿತ್ರೀಕರಣ
ಚಿತ್ರದ ಮೊದಲ ಹಂತದ ಚಿತ್ರೀಕರಣ 30 ದಿನಗಳ ಕಾಲ ಮೈಸೂರಿನಲ್ಲಿ ನೆಡೆಯಿತು. ಮೈಸೂರಿನ ಮಾನಸ ಗಂಗೋತ್ರಿ ಕ್ಯಾಂಪಸ್ನ ವಸತಿ ನಿವಾಸದಲ್ಲಿ ಚಿತ್ರೀಕರಣ ನೆಡೆಯಿತು. ನಂತರ ಚಿತ್ರದ ಎರಡನೇ ಭಾಗದ ಚಿತ್ರೀಕರಣವನ್ನು ಮಂಗಳೂರು, ಚಿಕ್ಕಮಗಳೂರು ಮತ್ತು ಉತ್ತರ ಭಾರತದಲ್ಲಿ ಚಿತ್ರೀಕರಿಸಲಾಯಿತು.
ಮಂಗಳೂರಿನ ಮೀನು ಮಾರುಕಟ್ಟೆಯಲ್ಲಿ ಹಲವು ದೃಶ್ಯಗಳನ್ನು ಚಿತ್ರೀಕರಿಸಿದೆ. ಈ ಚಿತ್ರದ ಭಾಗಶಃ ಶೂಟಿಂಗ್ ಅವನೇ ಶ್ರೀಮನ್ನಾರಾಯಣ ಚಿತ್ರದ ಜೊತೆ ಜೊತೆಯಲ್ಲಿ ಚಿತ್ರೀಕರಿಸಲಾಯಿತು
ರಿಲೀಸ್
ಈ ಚಿತ್ರ ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಭಾರತದಾದ್ಯಂತ ಬಿಡುಗಡೆಯಾಗಲಿದೆ. ಚಿತ್ರ ಬಿಡುಗಡೆಯಾಗುವ ಮುನ್ನವೇ ಜೂನ್ 2, 6 ಮತ್ತು 7 ರಂದು ದೆಹಲಿ, ಜೈಪುರ್, ಮುಂಬೈ ಸೇರಿದಂತೆ ಭಾರತದ 22 ನಗರಗಳಲ್ಲಿ ಪೇಡ್ ಪ್ರೀಮಿಯರ್ ಶೋ ಪ್ರದರ್ಶನ ಕಂಡಿತು.
ಮಲಯಾಳಂನಲ್ಲಿ ಪೃಥ್ವಿರಾಜ್ ಸುಕುಮಾರನ್ ಚಿತ್ರದ ವಿತರಣೆ ಹಕ್ಕನ್ನು ಪಡೆದಿದ್ದರೆ, ತಮಿಳಿನಲ್ಲಿ ಕಾರ್ತಿಕ್ ಸುಬ್ಬರಾಜ್ ವಿತರಣೆ ಮಾಡುತ್ತಿದ್ದಾರೆ.
ರಾಷ್ಟ್ರ ಪ್ರಶಸ್ತಿ : 'ಚಾರ್ಲಿ 777' 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಅತ್ಯುತ್ತಮ ಕನ್ನಡ ಸಿನಿಮಾ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿದೆ.