ಮಂಡ್ಯದ ಒಂದು ಹಳ್ಳಿಯ ಯುವಕ ಸಿದ್ದೇಗೌಡ (ಸತೀಶ್ ನೀನಾಸಂ) ನಿಗೆ ಸಣ್ಣ ವಯಸ್ಸಿನಿಂದ ಒಂದೇ ಕನಸು ಅದು 'ಗ್ರಾಮ ಪಂಚಾಯ್ತಿ ಸದಸ್ಯ' ಆಗಬೇಕು ಎಂಬುದು. ಚಿಕ್ಕವಯಸ್ಸಿನಲ್ಲಿ ತನ್ನ ತಾಯಿಗೆ ಆದ ಅವಮಾನ ಹಾಗೂ ಊರಿಗೆ ಒಳ್ಳೆಯದು ಮಾಡುವ ದೃಷ್ಟಿಯಿಂದ ಈ ಯುವಕ ಚುನಾವಣೆಗೆ ನಿಲ್ಲುವ ಆಸೆ ಇಟ್ಟುಕೊಂಡಿರುತ್ತಾನೆ. ಶೌಚಾಲಯವೂ ಇಲ್ಲದ ಊರಿನಲ್ಲಿ ಹುಟ್ಟಿದ ಸಿದ್ದೇಗೌಡ ಆ ಊರನ್ನು ಉದ್ಧಾರ ಮಾಡಬೇಕು ಎಂದು ಹೊರಡುತ್ತಾನೆ. ಸಿದ್ದೇಗೌಡ ಗ್ರಾಮ ಪಂಚಾಯ್ತಿ ಸದಸ್ಯ ಆಗುತ್ತಾನೋ ಇಲ್ವೋ ಎನ್ನುವುದು ಚಿತ್ರದ ಕುತೂಹಲಕಾರಿ ಅಂಶ.
ಗ್ರಾಮ ಪಂಚಾಯ್ತಿ ಸದಸ್ಯನಾಗಿದ್ದ ಬಚ್ಚೇಗೌಡ (ರವಿಶಂಕರ್) ಊರಿನ ಜನರನ್ನು ಜೀತದ ಆಳುಗಳಂತೆ ನೋಡುತ್ತಿರುತ್ತಾನೆ. ಭಯವನ್ನೇ ಬಂಡವಾಳ ಮಾಡಿಕೊಂಡಿರುವ ಬಚ್ಚೇಗೌಡನನ್ನು ಎದುರಿಸುವ ಶಕ್ತಿ ಊರಿನ ಯಾರಿಗೂ ಇರುವುದಿಲ್ಲ. ಈ ರೀತಿ ಇರುವ ಬಚ್ಚೇಗೌಡನ ಮುಂದೆ ಸಿದ್ದೇಗೌಡ ತೊಡೆ ತಟ್ಟುತ್ತಾನೆ, ಆತನ ವಿರುದ್ಧ ಚುನಾವಣೆಗೆ ನಿಲ್ಲುತ್ತಾನೆ. ಈ ಇಬ್ಬರಲ್ಲಿ ಯಾರು ಗ್ರಾಮ ಪಂಚಾಯ್ತಿ ಸದಸ್ಯ ಆಗುತ್ತಾರೆ ಎನ್ನುವುದನ್ನು ಚಿತ್ರದಲ್ಲಿಯೇ ನೋಡಬೇಕು.