ಕಾಳಿದಾಸ ಕನ್ನಡ ಮೇಷ್ಟ್ರು (2019)(U)
ಕಾಳಿದಾಸ ಕನ್ನಡ ಮೇಷ್ಟ್ರು ಕಥೆ
ಹಿನ್ನಲೆ - ಕನ್ನಡ ಪ್ರೇಮವನ್ನು ನವಿರಾದ ಹಾಸ್ಯದ ಮೂಲಕ ಹೇಳಲು ನವರಸ ನಾಯಕ ಜಗ್ಗೇಶ್ `ಕಾಳಿದಾಸ ಕನ್ನಡ ಮೇಷ್ಟ್ರು' ಆಗಿ ಬಂದಿದ್ದಾರೆ. ಚಿತ್ರವನ್ನು ಸಾಹಿತಿ ಕವಿರಾಜ್ ನಿರ್ದೇಶಿಸಿದ್ದು ,ಮೇಘನಾ ಗಾಂವ್ಕರ್ ನಾಯಕಿಯಾಗಿ ಜಗ್ಗೇಶ್ಗೆ ಸಾಥ್ ನೀಡಿದ್ದಾರೆ. ಚಿತ್ರಕ್ಕೆ ಗುರುಕಿರಣ್ ಸಂಗೀತವಿದೆ.ದಿನಾಂಕ 10-12-2018 ರಂದು ಚಿತ್ರ ಕಂಠೀರವ ಸ್ಟುಡಿಯೋದಲ್ಲಿ ಚಿತ್ರೀಕರಣ ಪ್ರಾರಂಭಿಸಿತು..ಚಿತ್ರದ ಟ್ರೇಲರ್ ನ್ನು ಅಕ್ಟೋಬರ್ 21 ರಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಿಡುಗಡೆ ಮಾಡಿದರು.
ಚಿತ್ರದ ಸಾರಾಂಶ - ಇಂದು ಸರ್ಕಾರಿ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕೂಡ ಕಡಿಮೆಯಾಗಿ ಶಾಲೆಗಳು ಮುಚ್ಚಿಹೋಗುವ ಸ್ಥಿತಿಯಲ್ಲಿವೆ. ಈ ಸಮಸ್ಯೆಯನ್ನು ಕಥೆಯ ಮೂಲವಾಗಿಟ್ಟುಕೊಂಡು ಚಿತ್ರಮಾಡಿದ್ದಾರೆ ಕವಿರಾಜ್. ಚಿತ್ರದ ಶೂಟಿಂಗ್ ನಲ್ಲಿದ್ದಾಗ ಜಗ್ಗೇಶ್ ರವರು ಸರ್ಕಾರಿ ಶಾಲೆಗಳ ಸ್ಥಿತಿಗತಿಗಳ ಕುರಿತು ಗವಿಪುರಂ ಶಾಲೆಯಲ್ಲಿ ಒಂದು ವಿಡಿಯೋ ಸಂದೇಶದ ಮೂಲಕ ಸಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು.ಮೇಘನಾರವರು ಇಂಗ್ಲೀಷ್ ಮಾಧ್ಯಮ ಶಿಕ್ಷಣವನ್ನು ಪ್ರತಿಪಾದಿಸುವ ಪಾತ್ರದಲ್ಲಿ ಕಾಣಿಸಿಕೊಂಡರೆ, ಜಗ್ಗೇಶ್ ಸರ್ಕಾರಿ ಶಾಲೆಯ ಶಿಕ್ಷಕನ ಪಾತ್ರ ಮಾಡುತ್ತಿದ್ದಾರೆ.ಶಿಕ್ಷಣದಲ್ಲಿ ಕುಸಿಯುತ್ತಿರುವ ಮೌಲ್ಯಗಳು ಮತ್ತು ಅದರ ಪರಿಣಾಮವಾಗಿ ನಿರ್ಮಾಣವಾಗುತ್ತಿರುವ ನೈತಿಕ ಮೌಲ್ಯ ರಹಿತ ಸಮಾಜ ಮತ್ತು ಅದನ್ನ ತಡೆಗಟ್ಟಲು ಒಬ್ಬ ಶಿಕ್ಷಕನು ಪಡುವ ಪಾಡನ್ನು ಚಿತ್ರ ಹೇಳಲಿದೆ.ಹಾಗೇ ಉಗ್ರವಾಗಿ ಕಾಳಿಯ ಅವತಾರ ತಾಳುವ ಹೆಂಡತಿಯೊಡನೆ ಕನ್ನಡ ಪ್ರೇವವನ್ನು ಸಾರುವ ಕನ್ನಡ ಮೇಷ್ಟ್ರರ ದಾಂಪತ್ಯ ಹಾಸ್ಯ ಕೂಡ ಚಿತ್ರದಲ್ಲಿ ನವಿರಾಗಿದೆ.
ಕಥೆ- ಕನ್ನಡ ಶಾಲೆಯಲ್ಲಿ ಓದಿ ಶಿಕ್ಷಕರಾಗಿರುವ ಸ್ವಾಭಿಮಾನಿ ಮೇಷ್ಟ್ರು ಕಾಳಿದಾಸ (ಜಗ್ಗೇಶ್). ತಮ್ಮ ಮಗ ಪ್ರತಿಷ್ಠಿತ ಕಾನ್ವೆಂಟ್ನಲ್ಲಿ ಓದಬೇಕು ಎಂದು ಹಠ ತೊಟ್ಟಿರುವ ಕಾಳಿದಾಸನ ಪತ್ನಿ (ಮೇಘನಾ ಗಾಂವ್ಕರ್). ಕನ್ನಡ ಶಾಲೆ ಮೇಷ್ಟ್ರು ಆದರೂ ಮಗನಿಗೆ ಮಾತ್ರ ಕಾನ್ವೆಂಟ್ ನಲ್ಲಿ ಸೇರಿಸಬೇಕು ಎಂದು ಪತ್ನಿಯ ಒತ್ತಡಕ್ಕೆ ಮಣಿದು ಅಡ್ಮಿಷನ್ ಪಡೆಯುವುದಕ್ಕೆ ಮೇಷ್ಟ್ರು ಅನುಭವಿಸುವ ತೊಳಲಾಟ, ಸಂಕಟ ಮೊದಲಾರ್ಧದಲ್ಲಿದೆ. ಅರ್ಜಿ ಪಡೆಯಲು ರಾತ್ರಿ ಇಡೀ ಕಾಯುವುದು, ಮಗ ಶಾಲೆಗೆ ಸೇರಲು ಪೋಷಕರು ಸಂದರ್ಶನ ಎದುರಿಸುವುದು, ಪೋಷಕರಿಗೆ ಇಂಗ್ಲಿಷ್ ಜ್ಞಾನ ಇಲ್ಲವೆಂದು ರಿಜೆಕ್ಟ್ ಮಾಡುವುದು, ಸೀಟು ಸಿಗಲ್ಲ ಎಂಬ ಕಾರಣಕ್ಕೆ ಲಂಚ ಕೊಟ್ಟು ಶಾಲೆಗೆ ಸೇರಿಸುವುದು ಹೀಗೆ, ಡೋನೆಷನ್ ಗಾಗಿ ದುಡ್ಡು ಸೇರಿಸಲು ಪರದಾಡುವುದು ಹೀಗೆ ಚಿತ್ರದ ಕಥೆ ಸಾಗುತ್ತದೆ.
ಚಿತ್ರವನ್ನು ಉದಯ್ ಕುಮಾರ್ ರವರು ಉದಯ್ ಫಿಲಂಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ.ಚಿತ್ರಕ್ಕಾಗಿ ಒಂದು ಪ್ರೋಮೋ ಹಾಡು ಶೂಟ್ ಮಾಡಲಾಗಿದ್ದು ಅದರಲ್ಲಿ ಕನ್ನಡದ 21 ನಾಯಕಿಯರು ಕಾಣಿಸಿಕೊಂಡಿದ್ದಾರೆ.ಚಿತ್ರದ ಟ್ರೇಲರ್ ಗೆ ನಟ ಶರಣ್ ಧ್ವನಿ ನೀಡಿದ್ದಾರೆ.