ಮೈತ್ರಿ (2015)
ಮೈತ್ರಿ ಕಥೆ
ಮೈತ್ರಿ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಅವರು ನಾಯಕರಾಗಿ ಮತ್ತು ಅರ್ಚನ, ಭಾವನ, ಮೋಹನ್ ಲಾಲ್, ಅವರು ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಅತುಲ್ ಕುಲಕರ್ಣಿ, ರವಿ ಕಾಳೆ ಅವರ ತಾರ ರಂಗವೇ ಚಿತ್ರದಲ್ಲಿದೆ.
ಚಿತ್ರದ ನಿರ್ದೇಶಕ ಗಿರಿರಾಜ್ ಬಿಎಂ ಮತ್ತು ಇಳಯರಾಜ ಅವರ ಸಂಗೀತ ಸಂಯೋಜನೆ ಚಿತ್ರದಲ್ಲಿದೆ.
ಕಥೆ:
ಚಿತ್ರದಲ್ಲಿ ಪುನೀತ್ ಅವರು ಪುನೀತ್ ರಾಜ್ ಕುಮಾರ್ ಆಗಿಯೇ ಕಾಣಿಸುತ್ತಾರೆ. 'ಕರುನಾಡ ಕೋಟ್ಯಾಧಿಪತಿ' ಕಾರ್ಯಕ್ರಮದ ನಿರೂಪಕರಾಗಿ, ನಟರಾಗಿ ಅವರದು ಸಹಜಾಭಿನಯ. ಚಿತ್ರದಾದ್ಯಂತ ಅವರ ಪಾತ್ರ ನೈಜವಾಗಿ ಮೂಡಿಬಂದಿದೆ. ಆಗಾಗಿ ಪ್ರೇಕ್ಷಕರ ಮನಸ್ಸಿಗೆ ಅವರು ಇನ್ನಷ್ಟು ಹತ್ತಿರವಾಗುತ್ತಾ ಹೋಗುತ್ತಾರೆ.
ಬಾಲಾಪರಾಧಿಗಳಾಗಿ ಆದಿತ್ಯ, ಸಮರ್ಥ, ಕುಶಾಲ್, ದೇವು ಅವರದು ಗಮನಾರ್ಹವಾಗಿ ಮೂಡಿಬಂದಿವೆ. 'ಕರುನಾಡ ಕೋಟ್ಯಾಧಿಪತಿ' ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ರಿಮ್ಯಾಂಡ್ ಹೋಮ್ ನಲ್ಲಿರುವ ಬಾಲಾಪರಾಧಿ ಸಿದ್ಧರಾಮ ಏನೆಲ್ಲಾ ತಂತ್ರಗಳನ್ನು ಮಾಡುತ್ತಾನೆ, ಕಡೆಗೆ ಹೇಗೆ ಕೋಟ್ಯಾಧಿಪತಿಯಾಗುತ್ತಾನೆ ಎಂಬುದನ್ನು ತೆರೆಯ ಮೇಲೆ ನೋಡಿಯೇ ಆನಂದಿಸಿ.
ಚಿತ್ರದಲ್ಲಿ ಮೋಹನ್ ಲಾಲ್ ಅವರ ಪಾತ್ರ ಮೂಡಿಬಂದಿರುವುದು ಕೆಲವೇ ಕ್ಷಣಗಳಾದರೂ ಕಣ್ಣಂಚಲಿ ನೀರು ತರಿಸುತ್ತಾರೆ. ರಕ್ಷಣಾ ಇಲಾಖೆಯ ವಿಜ್ಞಾನಿಯಾಗಿ, ನೊಂದ ಅಪ್ಪನಾಗಿ ಅವರ ಪಾತ್ರ ಅಚ್ಚಳಿಯದ ನೆನಪಿನಂತೆ ಉಳಿಯುತ್ತದೆ.
ಅವರ ಪತ್ನಿಯಾಗಿ ಅರ್ಚನಾ ವೇದವ್ಯಾಸ್ ಅವರ ಪಾತ್ರವೂ ಅಷ್ಟೇ ಅಚ್ಚುಕಟ್ಟಾಗಿ ಮೂಡಿಬಂದಿದೆ. ಈ ಚಿತ್ರದಲ್ಲಿ ಪಾತ್ರಗಳು ಎಷ್ಟು ಗಮನಾರ್ಹವಾಗಿ ಮೂಡಿಬಂದಿವೆಯೋ ಕಥೆ ಕೂಡ ಅಷ್ಟೇ ಸೊಗಸಾಗಿ ಪ್ರೇಕ್ಷಕರನ್ನು ಕೊನೆಯ ತನಕ ಹಿಡಿದಿಡುವಂತೆ ಮಾಡುವಲ್ಲಿ ಯಶಸ್ವಿಯಾಗಿದೆ.
ಚಿತ್ರದ ಕೊನೆಗೆ ಒಂದು ಡೈಲಾಗ್ ಹೀಗಿದೆ, ಮೋಹನ್ ಲಾಲ್ ಜೊತೆಗೆ ಪುನೀತ್ ಮಾತನಾಡುತ್ತಾ, ಇಂದು ನಿಮ್ಮ ಮಗ ಬದುಕಿದ್ದರೆ ನಿಮ್ಮ ಬಗ್ಗೆ ತುಂಬ ಹೆಮ್ಮೆ ಪಡುತ್ತಿದ್ದರು ಎಂದು. ಅದಕ್ಕೆ ಮೋಹನ್ ಲಾಲ್ ಅವರು, ಇಂದು ನಿಮ್ಮ ತಂದೆ ಬದುಕಿದ್ದರೆ ಮಗನ ಬಗ್ಗೆ ಹೆಮ್ಮೆ ಪಡುತ್ತಿದ್ದರು ಎನ್ನುತ್ತಾರೆ.
ಈ ರೀತಿಯ ಸಂಭಾಷಣೆಗಳು ಪ್ರೇಕ್ಷಕರಿಗೆ ಬೋನಸ್ ನಂತಿವೆ ಚಿತ್ರದಲ್ಲಿವೆ. ರಿಮ್ಯಾಂಡ್ ಹೋಮ್ ವಾರ್ಡನ್ ಆಗಿ ಅತುಲ್ ಕುಲಕರ್ಣಿ ಅವರದು ಭಿನ್ನವಾದ ಪಾತ್ರ. ಬಾಲಾಪರಾಧಿಗಳ ಬಗೆಗಿನ ಅವರ ಭಿನ್ನ ನಿಲುವು, ಧೋರಣೆಗಳನ್ನು ತೋರಿಸುವ ವಾರ್ಡನ್ ಆಗಿ ಅವರದು ಮನೋಜ್ಞ ಅಭಿನಯ.
ಇಳಯರಾಜ ಅವರ ಸಂಗೀತದ ಬಗ್ಗೆ ಎರಡು ಮಾತಿಲ್ಲ. ಚಿತ್ರದ ಹಾಡುಗಳು ಅಷ್ಟೇ ಸಾಂದರ್ಭಿಕವಾಗಿ ಮೂಡಿಬಂದಿದ್ದು ಕಥೆಯ ಭಾಗವಾಗಿ ಅವು ನಿಲ್ಲುತ್ತವೆ. ಎಂ.ವಿ ಕೃಷ್ಣಕುಮಾರ್ ಅವರ ಛಾಯಾಗ್ರಹಣ, ಕೆ.ಎಂ ಪ್ರಕಾಶ್ ಅವರ ಸಂಕಲನವೂ ಅಷ್ಟೇ ಅಚ್ಚುಕಟ್ಟಾಗಿ ಮೂಡಿಬಂದಿವೆ. ಖಳನಟನಾಗಿ ರವಿಕಾಳೆ ಅವರು ಗಮನಸೆಳೆಯುತ್ತಾರೆ.
ಒಟ್ಟಾರೆಯಾಗಿ ಪುನೀತ್ ರಾಜ್ ಕುಮಾರ್ ಅವರು ಒಂದು ವಿಭಿನ್ನ ಕಥೆ ಪಾತ್ರದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ಅವರ ಎಂದಿನ ಚಿತ್ರಗಳಿಗೆ ಹೋಲಿಸಿದರೆ ಇದೊಂದು ಕಂಪ್ಲೀಟ್ ಡಿಫರೆಂಟ್ ಚಿತ್ರ ಎನ್ನಬಹುದು. ಈ ರೀತಿಯ ಭಿನ್ನ ಕಥೆಗಾಗಿ ಹಂಬಲಿಸುವ ಪ್ರೇಕ್ಷಕರಿಗೆ ಹಾಗೂ ಅಭಿಮಾನಿಗಳಿಗೆ ಅವರು ಭೂರಿ ಮನರಂಜನೆ ನೀಡಿದ್ದಾರೆ.