ನಿಷ್ಕರ್ಷ (2019)
ನಿಷ್ಕರ್ಷ ಕಥೆ
ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದಲ್ಲಿ ಮೂಡಿಬಂದ ಸಸ್ಪೆನ್ಸ್ ಥ್ರಿಲ್ಲರ್ `ನಿಷ್ಕರ್ಷ' ಚಿತ್ರದಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ಕಮಾಂಡೋ ಅಜಯಕುಮಾರ್ ಪಾತ್ರದಲ್ಲಿ ನಟಿಸಿದರು. ಅನಂತನಾಗ್ ಇನ್ನೊಂದು ಮುಖ್ಯ ಪಾತ್ರದಲ್ಲಿ ನಟಿಸಿದರೆ, ಬಿ.ಸಿ.ಪಾಟೀಲ್ ಖಳನಾಯಕನಾಗಿ ನಟಿಸಿದರು. ಕಮಾಂಡೋ ಪಡೆಗಳ ಆಪರೇಷನ್ ಮೇಲೆ ಬಂದ ಮೊದಲ ಕನ್ನಡ ಚಿತ್ರವಾದ ನಿಷ್ಕರ್ಷದಲ್ಲಿ ಯಾವುದೇ ನಾಯಕಿಯಿಲ್ಲ ಮತ್ತು ಚಿತ್ರ ಗೀತೆಗಳು ಇಲ್ಲ.
ಈ ಚಿತ್ರ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಅತ್ಯುತ್ತಮ ಚಿತ್ರ ಪ್ರಶಸ್ತಿಯೊಂದಿಗೆ ಮೂರು ಪ್ರಶಸ್ತಿ ಪಡೆಯಿತು. ಚಿತ್ರದ 95% ಶೂಟಿಂಗ್ ಒಂದೇ ಬಿಲ್ಡಿಂಗ್ ನಲ್ಲಿ ನಡೆಯಿತು. 1993 ಡಿಸೆಂಬರ್ 24 ರಂದು ಬಿಡುಗಡೆಯಾದ ಈ ಚಿತ್ರ ಹಲವು ಚಿತ್ರಮಂದಿರಗಳಲ್ಲಿ ಶತದಿನೋತ್ಸವ ಪೂರೈಸಿತು.ಇಪ್ಪತ್ತೈದು ವರ್ಷಗಳ ನಂತರ ಮತ್ತೇ ಡಿಜಿಟಲ್ ಅವತಾರದಲ್ಲಿ 2019 ಸೆಪ್ಟೆಂಬರ್ 20 ರಂದು ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಗೊಳ್ಳುತ್ತಿದೆ.ಈ ಚಿತ್ರಕ್ಕಾಗಿ ವಿಷ್ಣುವರ್ಧನ್ 7.5 ಲಕ್ಷ ಸಂಭಾವನೆ ಪಡೆದರೆ, ಅನಂತನಾಗ್ 2.5 ಲಕ್ಷ ಪಡೆದರು.
ನಂತರ ಚಿತ್ರ ನಿರ್ಮಾಣದಲ್ಲಿ ಹಣದ ಕೊರತೆಯಾದಾಗ ವಿಷ್ಣು ತಮ್ಮ ಸಂಭಾವನೆಯಲ್ಲಿ ಒಂದು ಲಕ್ಷ ಕಡಿಮೆ ಮಾಡಿದರು.ಚಿತ್ರದ ಶೂಟಿಂಗ್ ಇನ್ನೇನು ಮುಗಿಯುವ ಹಂತದಲ್ಲಿದ್ದಾಗ, ಅಲ್ಲಿನ ಸ್ಥಳಿಯ ನಿವಾಸಿಗಳು ಚಿತ್ರೀಕರಣದಿಂದ ತಮಗಾಗುವ ತೊಂದರೆಗಳನ್ನು ವಿವರಿಸಿ ಚಿತ್ರದ ಶೂಟಿಂಗ್ ಗೆ ತಡೆಯಾಜ್ಞೆ ತಂದರು. ನಂತರ ಒಂದು ತಿಂಗಳ ನ್ಯಾಯಾಲಯ ವಿವಾದದ ನಂತರ ಚಿತ್ರ ಮುಂದಿನ ಶೂಟಿಂಗ್ ಆರಂಭಿಸಿತು.ಚಿತ್ರದಲ್ಲಿ ವಿಷ್ಣು ಹೆಲಿಕಾಪ್ಟರ್ ಮೇಲೆ ಬರುವಾಗ ವಿಧಾನಸೌಧವನ್ನು ನೋಡಬಹುದು. ಆ ದೃಶ್ಯವನ್ನು ಚಿತ್ರೀಕರಿಸಲು ನಿಯಮ ಮೀರಿ ಹೆಲಿಕಾಪ್ಟರ್ ನ್ನು 500 ಅಡಿಗಳಿಗಿಂತ ಕೆಳಗೆ ಹಾರಿಸಿ ಚಿತ್ರೀಕರಿಸಿತು. ಚಿತ್ರದಲ್ಲಿ ಈ ದೃಶ್ಯ ಅದ್ಭುತವಾಗಿ ಬಂತು.
ಕಥೆ- ಒಂದು ದರೋಡೆಕೋರರ ಗುಂಪು ಬ್ಯಾಂಕ್ ಲೂಟಿ ಮಾಡಲು ಹೋಗಿ ಅಲ್ಲಿನ ತಾಂತ್ರಿಕ ಭದ್ರತೆಯ ಕಾರಣದಿಂದ ಅಲ್ಲಿಯೇ ಸಿಕ್ಕಿ ಬೀಳುತ್ತಾರೆ. ಸುಮಾರು 40 ಜನಗಳನ್ನು ಒತ್ತೆಯಾಳುಗಳಾಗಿ ಇಟ್ಟುಕೊಳ್ಳುವ ಈ ಗುಂಪು ತಮಗೇ ಅಲ್ಲಿಂದ ಸುರಕ್ಷಿತವಾಗಿ ಹೋಗಲು ಮಾರ್ಗ ನೀಡಬೇಕು, ಇಲ್ಲವೆಂದರೆ ತಮ್ಮ ಅಡಿಯಲ್ಲಿರುವ ಜನರನೆಲ್ಲಾ ಕೊಲ್ಲುವುದಾಗಿ ಬೆದರಿಕೆ ಹಾಕುತ್ತಾರೆ. ಈ ಸಂದಿಗ್ಧ ಸ್ಥಿತಿಯನ್ನು ನಿಭಾಯಿಸಲು ಮತ್ತು ಜನರನ್ನು ಸುರಕ್ಷಿತವಾಗಿ ರಕ್ಷಿಸಲು ಪೋಲಿಸ್ ಇಲಾಖೆ ಕಮಾಂಡೋ ಪಡೆಗಳ ಸಹಾಯ ಬೇಡುತ್ತದೆ. ಈ ಆಪರೇಷನ್ ಹೊಣೆಹೊತ್ತ ಕಮಾಂಡರ್ ಅಜಯ್ ಕುಮಾರ್ (ವಿಷ್ಣುವರ್ಧನ್) ಹೇಗೆ ತನ್ನ ಚಾಣಾಕ್ಷತನದಿಂದ ಅಲ್ಲಿನ ಜನರನ್ನೆಲ್ಲಾ ರಕ್ಷಿಸಿ, ದರೋಡೆಕೋರರನ್ನು ಕೊಲ್ಲುತ್ತಾನೆ ಎಂಬುದು ಚಿತ್ರದ ಮುಂದಿನ ಕತೆ.