ಪೈಲ್ವಾನ್ (2019)(U/A)
ಪೈಲ್ವಾನ್ ಕಥೆ
ಹಿನ್ನಲೆ- ಪೈಲ್ವಾನ್ ಚಿತ್ರವನ್ನು ಹೆಬ್ಬುಲಿ ಖ್ಯಾತಿಯ ಕೃಷ್ಣರವರು ನಿರ್ದೇಶಿಸಿದ್ದು, ಇದೇ ಮೊದಲ ಬಾರಿಗೆ ಕಿಚ್ಚ ಸುದೀಪ್ ಕುಸ್ತಿಪಟುವಿನ ಪಾತ್ರದಲ್ಲಿ ಕಾಣಿಸಿ ಕೊಂಡಿದ್ದಾರೆ.ನಾಯಕಿಯಾಗಿ ಚಿತ್ರದಲ್ಲಿ ಬಾಲಿವುಡ್ ನಟಿ ಆಕಾಂಕ್ಷಾ ಸಿಂಗ್ ಅಭಿನಯಿಸಿದ್ದರೆ, ಸುನೀಲ್ ಶೆಟ್ಟಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಕಥೆ- ಈ ಚಿತ್ರದಲ್ಲಿ ನಾಯಕ ಕಿಚ್ಚ ಅನಾಥ. ಪೈಲ್ವಾನ ಕುಟುಂಬವೊಂದರ ಮುಖ್ಯಸ್ಥ ಸರ್ಕಾರ್ ಕಿಚ್ಚನಿಗೆ ಆಶ್ರಯ ನೀಡುತ್ತಾನೆ. ನಂತರ ಕಿಚ್ಚನಿಗೆ ಸರ್ಕಾರನೇ ಸರ್ವಸ್ವವಾಗುತ್ತಾನೆ. ಹಾಗೇ ಸರ್ಕಾರನ ಕನಸಾದ ಬಾಕ್ಸಿಂಗ್ ನಲ್ಲಿ ಚಾಂಪಿಯನ್ ಅಗುವುದನ್ನು ನನಸು ಮಾಡಲು ಪಣತೊಡುತ್ತಾನೆ. ಆದರೆ ಇದೇ ದಾರಿಯಲ್ಲಿ ಹೋಗುವಾಗ ಒಬ್ಬ ದೊಡ್ಡ ಉದ್ಯಮಿ ದೇಶಪಾಂಡೆ (ಅವಿನಾಶ್) ಪುತ್ರಿ ರುಕ್ಮಿಣಿ (ಆಕಾಂಕ್ಷಾ) ಇವನ ಬಾಳಲ್ಲಿ ಬರುತ್ತಾಳೆ. ಪರಸ್ಪರ ಪ್ರೀತಿಯಲ್ಲಿ ಬಿದ್ದು ವಿವಾಹವಾಗುವ ಇವರಿಗೆ ರುಕ್ಮಿಣಿ ತಂದೆ ಅಡ್ಢಪಡಿಸಿ ಸರ್ಕಾರನ ಮುಂದೆ ಸಹಾಯಕ್ಕೆ ಅಂಗಲಾಚುತ್ತಾನೆ. ಆಗ ಸರ್ಕಾರ್, ಕಿಚ್ಚ ಇನ್ನು ಮುಂದೆ ರುಕ್ಮಿಣಿಯಿಂದ ದೂರವಿರುತ್ತಾನೆ ಎಂದು ಮಾತು ಕೊಡುತ್ತಾನೆ. ಆದರೆ ಮಾತು ತಪ್ಪಿದ ಕಿಚ್ಚ ಪತ್ನಿ ರುಕ್ಮಿಣಿ ಜೊತೆ ಊರೇ ಬಿಟ್ಟು ಹೊರಡುತ್ತಾನೆ. ಮುಂದೆ ಕಿಚ್ಚ ಮತ್ತೆ ಸರ್ಕಾರನ ಮಡಿಲು ಸೇರುತ್ತಾನಾ ? ಸರ್ಕಾರನ ಬಾಕ್ಸಿಂಗ್ ಕನಸು ನನಸು ಮಾಡುತ್ತಾನಾ ಎನ್ನುವುದು ಚಿತ್ರದ ಕಥೆ.
ಚಿತ್ರವಿಶೇಷ
1. ಪೈಲ್ವಾನ್ ಚಿತ್ರದ ಮೊದಲ ಟೀಸರ್ನ್ನು ಜನೇವರಿ 15, 2019 ರಂದು ಬಿಡುಗಡೆ ಮಾಡಲಾಯಿತು. ಟೀಸರ್ ನೋಡಿ ನಟರಾದ ಸಲ್ಮಾನ್ ಖಾನ್, ಧನುಷ್, ಪ್ರಭುದೇವ,ರಿತೇಶ್ ದೇಶಮುಖ್,ಪುರಿ ಜಗನ್ನಾಥ ಕೂಡ ಮೆಚ್ಚಿಕೊಂಡಿದ್ದು ವಿಶೇಷ.28 ಗಂಟೆಗಳ ಕಾಲ ಇಡಿ ಭಾರತದಲ್ಲಿ ಚಿತ್ರದ ಟೀಸರ್ ಟ್ರೆಂಡಿಂಗ್ನಲ್ಲಿತ್ತು.
2. ಪ್ರಸ್ತುತ ಚಿತ್ರತಂಡ ಚಿತ್ರವನ್ನು 9 ಭಾಷೆಗಳಲ್ಲಿ ಬಿಡುಗಡೆ ಮಾಡಬೇಕೆನ್ನುವ ವಿಚಾರವತ್ತು. ಕನ್ನಡ, ಹಿಂದಿ, ಮಲಯಾಳಂ, ತೆಲುಗು, ತಮಿಳು ಭಾಷೆಗಳಲ್ಲದೇ ಮರಾಠಿ, ಭೋಜಪುರಿ, ಪಂಜಾಬಿ, ಬಂಗಾಳಿ ಭಾಷೆಗಳಲ್ಲಿ ಬಿಡುಗಡೆಯಾಮಾಡುವ ಸನ್ನಾಹದಲ್ಲಿದ್ದ ಚಿತ್ರತಂಡ ಕೊನೆಗೆ ಕನ್ನಡ, ತೆಲುಗು, ಮಲಯಾಳಂ, ಹಿಂದಿ ಮತ್ತು ತಮಿಳು ಭಾಷೆಗಳಲ್ಲಿ ಮಾತ್ರ ಬಿಡುಗಡೆ ಮಾಡುತ್ತಿದೆ.
3. ಚಿತ್ರದ ಕುಸ್ತಿ ದೃಶ್ಯಗಳ ಚಿತ್ರಿಕರಣವನ್ನು ಹೈದರಾಬಾದಿನ ರಾಮೋಜಿ ಫಿಲಂ ಸಿಟಿಯಲ್ಲಿ ಸೆರೆಹೆಡೆಯಲಾಯಿತು.
4. ಚಿತ್ರದ ಶೂಟಿಂಗ್ ಫೆಬ್ರವರಿ 22,2019 ರಂದು ಮುಂಬೈನಲ್ಲಿ ಒಂದು ಹಾಡಿನ ಚಿತ್ರೀಕರಣದೊಂದಿಗೆ ಮುಗಿಯಿತು.
5. ಚಿತ್ರವನ್ನು ನಿರ್ದೇಶಕ ಕೃಷ್ಣರವರ ಪತ್ನಿ ಸ್ವಪ್ನ ಕೃಷ್ಣರವರು ನಿರ್ಮಿಸಿದ್ದಾರೆ.
6. ಚಿತ್ರಕ್ಕೆ ಬಾಲಿವುಡನ್ ಪ್ರಸಿದ್ಧ ನೃತ್ಯ ನಿರ್ದೇಶಕ ಗಣೇಶ್ ಆಚಾರ್ಯ ಕೋರಿಯೋಗ್ರಾಫಿ ಮಾಡಿದ್ದಾರೆ.
7.ಕನ್ನಡದ ಚಿತ್ರತಂಡವೊಂದು ಮೊದಲ ಬಾರಿಗೆ ಹಿಂದಿ ಕಾಮಿಡಿ ಶೋನಲ್ಲಿ ಭಾಗವಹಿಸಿತು. ಸೋನಿ ವಾಹಿನಿಯ `ದಿ ಕಪಿಲ ಶರ್ಮಾ ಶೋ' ನಲ್ಲಿ ಕಿಚ್ಚ ಸುದೀಪ್,ಸುನೀಲ್ ಶೆಟ್ಟಿ ಮುಂತಾದವರು ಭಾಗವಹಿಸಿದ್ದರು.
8.ಚಿತ್ರದ ಆಡಿಯೋ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಚಿತ್ರದುರ್ಗದಲ್ಲಿ ಪುನೀತ್ ರಾಜಕುಮಾರ್ ಬಿಡುಗಡೆ ಮಾಡಬೇಕಿತ್ತು ., ಆದರೆ ಉತ್ತರ ಕರ್ನಾಟಕದ ಪ್ರವಾಹದ ಕಾರಣಕ್ಕೆ ಅದನ್ನು ರದ್ದು ಮಾಡಿ ನಂತರ ಬೆಂಗಳೂರಿನ ಕೋರಮಂಗಲದ ಅಡಿಟೋರಿಯಂ ಒಂದರಲ್ಲಿ ಬಿಡುಗಡೆ ಮಾಡಲಾಯಿತು.
9. ಈ ಚಿತ್ರ ಸೆಪ್ಟಂಬರ್ 12, 2019 ರಂದು ಕರ್ನಾಟಕದಾದ್ಯಂತ ಸುಮಾರು 460 ಪರದೆಗಳಲ್ಲಿ ಮತ್ತು ದೇಶಾದ್ಯಂತ 50 ಪರದೆಗಳಲ್ಲಿ ಕನ್ನಡ ಭಾಷೆಗಳಲ್ಲಿ ಬಿಡುಗಡೆಗೊಂಡಿತು. ಕನ್ನಡ ಸೇರಿದಂತೆ, ಹಿಂದಿ, ತೆಲಗು, ತಮಿಳು ಮತ್ತು ಮಲಯಾಳಂ ಭಾಷೆ ಸೇರಿ ವಿಶ್ವಾದ್ಯಂತ ಸುಮಾರು 3000 ಪರದೆಗಳಲ್ಲಿ ತೆರೆಕಂಡಿದೆ.
10. ಈ ಚಿತ್ರದಲ್ಲಿ ಸುದೀಪ್ ಮಲಯಾಳಂ ಭಾಷೆಯೊಂದನ್ನು ಹೊರತು ಪಡಿಸಿ, ಉಳಿದ ನಾಲ್ಕು ಭಾಷೆಗಳಾದ ಕನ್ನಡ, ತೆಲಗು, ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ತಾವೇ ಸ್ವತಃ ಡಬ್ ಮಾಡಿದ್ದಾರೆ.