ರವಿಕೆ ಪ್ರಸಂಗ ಸಿನಿಮಾವನ್ನು ಸಂತೋಷ್ ಕೊಡೆಂಕೇರಿ ನಿರ್ದೇಶನ ಮಾಡಿದ್ದಾರೆ. ಕಥೆ ಮತ್ತು ಸಂಭಾಷಣೆಯನ್ನು ಪಾವನಾ ಸಂತೋಷ್ ನಿರ್ವಹಿಸಿದ್ದಾರೆ. ಚಿತ್ರದಲ್ಲಿ ಬ್ರಹ್ಮಗಂಟು ಸೀರಿಯಲ್ ಖ್ಯಾತಿ ಗೀತಾ ಭಾರತಿ ಭಟ್ ನಾಯಕಿಯಾಗಿ ನಟಿಸಿದ್ದಾರೆ. ಉಳಿದಂತೆ ಸುಮನ್ ರಂಗನಾಥ್, ರಾಕೇಶ್ ಮಯ್ಯ, ಸಂಪತ್ ಮೈತ್ರೇಯ, ಪದ್ಮಜಾ ರಾವ್, ಕೃಷ್ಣಮೂರ್ತಿ ಕವತಾರ್, ಪ್ರವೀಣ್ ಅಥರ್ವ, ರಘು ಪಾಂಡೇಶ್ವರ್, ಹನುಮಂತೇ ಗೌಡ, ಖುಷಿ ಆಚಾರ್, ಹನುಮಂತ್ ರಾವ್ ಕೆ ನಟಿಸಿದ್ದಾರೆ. ಮುರಳಿಧರ್ ಎನ್ ಛಾಯಾಗ್ರಹಣ, ರಘು ಶಿವರಾಮ್ ಸಂಕಲನ, ವಿನಯ್ ಶರ್ಮಾ ಸಂಗೀತಾ ಹಾಗೂ ರಮೇಶ್ ಕೃಷ್ಣ ಹಿನ್ನೆಲೆ ಸಂಗೀತ ಚಿತ್ರಕ್ಕಿದೆ.
ಕಥೆ: ದಕ್ಷಿಣ ಕನ್ನಡ ಜಿಲ್ಲೆಯ ಒಂದು ಹಳ್ಳಿಯಲ್ಲಿ ಈ ಸಿನಿಮಾದ ಕಥೆ ನಡೆಯುತ್ತದೆ. ಈ ಹಳ್ಳಿಯಲ್ಲಿ ಚಿತ್ರದ ನಾಯಕಿ 'ಸಾನ್ವಿ' ತಮ್ಮ ಚಿಕ್ಕ ಕುಟುಂಬದ ಜೊತೆ ಇರುತ್ತಾರೆ. ಇವರು 28ರ ಹರೆಯದ ಯುವತಿಯಾಗಿದ್ದು, ಈಗಾಗಲೇ ಅವಳಿಗೆ ಸಾಕಷ್ಟು ಮದುವೆ ಸಂಬಂಧಗಳು ಬಂದಿದ್ದರೂ ಯಾವುದೇ ಸಂಬಂಧಗಳು ಅವಳಿಗೆ ಸರಿಯಾಗಿರುವುದಿಲ್ಲ. ಸಾನ್ವಿ ಮದುವೆಯಾಗಲು ಒಬ್ಬ ಹ್ಯಾಂಡ್ಸಮ್ ಯುವಕನನ್ನು ಹುಡುಕುತ್ತಿರುತ್ತಾಳೆ. ಮನೆಯವರು ಕೂಡ ಬೇಗ ಮದುವೆ ಮಾಡಬೇಕು ಎಂಬ ಯೋಚನೆಯಲ್ಲಿರುತ್ತಾರೆ. ಎಷ್ಟೋ ಸಂಬಂಧಗಳಿಂದ ತಿರಸ್ಕರಿಸಲ್ಪಟ್ಟ ಸಾನ್ವಿಗೆ ಈ ಬಾರಿ ಒಂದು ಫಾರಿನ್ ಪ್ರಪೋಸಲ್ ಬರುತ್ತದೆ. ಆ ವೇಳೆ ರವಿಕೆ ಹೊಲಿಯಲು ಕೊಡುವಲ್ಲಿಂದ ಸಿನಿಮಾ ಆರಂಭಗೊಂಡು ಕೋರ್ಟ್ ಮೆಟ್ಟಿಲು ಹತ್ತುತ್ತದೆ. ಅದು ಹೇಗೆ ಎಂದು ಚಿತ್ರದ ಪ್ರಮುಖ ತಿರುಳು.
ಬಿಡುಗಡೆ: ರವಿಕೆ ಪ್ರಸಂಗ ಸಿನಿಮಾ ಫೆಬ್ರವರಿ 16ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಯಿತು.