ರಿಷಭ್ ಶೆಟ್ಟಿ ನಿರ್ದೇಶನದ ಈ ಚಿತ್ರ ಅಳಿವಿನಂಚಿನಲ್ಲಿರುವ ಕನ್ನಡ ಶಾಲೆಗಳು ಪರಿಸ್ಥಿತಿಯನ್ನು ಚಿತ್ರಿಸುತ್ತದೆ. ಅನಂತನಾಗ್ ಲಾಯರ್ ಪಾತ್ರದಲ್ಲಿ ಮಿಂಚಿದ್ದರೆ, ಕರಾವಳಿ ಮತ್ತು ಕಾಸರಗೋಡಿನ ಕೆಲ ಬಾಲ ಪ್ರತಿಭೆಗಳು ಚಿತ್ರದಲ್ಲಿ ನಟಿಸಿವೆ. ಈ ಚಿತ್ರ ಅತ್ತ್ಯುತ್ತಮ ಮಕ್ಕಳ ಚಿತ್ರವಾಗಿ 66 ನೇ ರಾಷ್ಟ್ರ ಪ್ರಶಸ್ತಿ ಪಡೆಯಿತು.
ಕಣ್ಮನ ತಣಿಸುವ ಕಾಸರಗೋಡಿನ ನಿಸರ್ಗ ಸಿರಿಯಲ್ಲಿ ಬೇಸಿಗೆ ರಜೆ ಕಳೆದು ಮಕ್ಕಳು ಪುನಃ ಶಾಲೆಗೆ ಹೋಗುವುದರಿಂದ ಸಿನಿಮಾ ಪ್ರಾರಂಭ ಆಗುತ್ತದೆ. ಶಾಲೆಯಲ್ಲಿ ಮಕ್ಕಳ ಆಟ, ಪಾಠ, ತುಂಟಾಟ. ಈ ನಡುವೆ ಮೂರು ವರ್ಷಗಳಿಂದ ಪಾಸ್ ಆಗದೇ ಒಂದೇ ಕ್ಲಾಸ್ ನಲ್ಲಿ ಓದುತ್ತಿರುವ 'ದಡ್ಡ ಪ್ರವೀಣ'ನ 'ಕ್ರಷ್' ಸ್ಟೋರಿ. ಅಲ್ಲಿಗೆ ಮೊದಲಾರ್ಧ ಸಮಾಪ್ತಿ.ಚೆನ್ನಾಗಿ ನಡೆಯುತ್ತಿದ್ದರೂ, ರಾಮಣ್ಣ ರೈ ಕೊಡುಗೆಯ 'ಸರ್ಕಾರಿ ಹಿ.ಪ್ರಾ.ಶಾಲೆ, ಕಾಸರಗೋಡು' ಶಾಲೆಗೆ ದಿಢೀರ್ ಅಂತ ಬೀಗ ಹಾಕಬೇಕಾಗುತ್ತದೆ. ಇದಕ್ಕೆ ಕಾರಣ ಏನು.? ಶಾಲೆಯನ್ನ ಮಕ್ಕಳು ಹೇಗೆ ಉಳಿಸಿಕೊಳ್ಳುತ್ತಾರೆ.? ಉಳಿಸಿಕೊಳ್ಳಲು ಏನೇನು ಮಾಡುತ್ತಾರೆ ಎಂಬುದೇ ಚಿತ್ರಕಥೆ.