ಕೆಂಪಾಪುರದಲ್ಲಿ 'ಹೃದಯದಲ್ಲಿ ಇದೇನಿದು'
ಹಿಂದಿನ ಚಿತ್ರಗಳ ಹಾಡಿನ ಪಲ್ಲವಿ ಇಂದಿನ ಚಿತ್ರದ ಶೀರ್ಷಿಕೆಗಳಾಗುತ್ತಿರುವ ಈ ಸಂದರ್ಭದಲ್ಲಿ ಆ ಸಾಲಿಗೆ ಸೇರುತ್ತಿರುವ ಮತ್ತೊಂದು ಚಿತ್ರ 'ಹೃದಯದಲ್ಲಿ ಇದೇನಿದು'. ವಿಶಿಷ್ಟ ಪ್ರೇಮಕತೆಯುಳ್ಳ ಈ ಚಿತ್ರದ ಚಿತ್ರೀಕರಣ ಸರಾಗವಾಗಿ ನಡೆಯುತ್ತಿದೆ ಎಂದು ಪತ್ರಕರ್ತ, ನಿರ್ದೇಶಕ ಶಿವನ್ ತಿಳಿಸಿದ್ದಾರೆ.
ಶ್ರೀಹುಲಿಯೂರು ದುರ್ಗಾಂಬ ಪ್ರೊಡಕ್ಷನ್ ಲಾಂಛನದಲ್ಲಿ ಕುಮಾರಿ ದರ್ಶನ್ಪ್ರಿಯಾ ಹಾಗೂ ಕುಮಾರಿ ರೋಹಿಣಿ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಕೆಂಪಾಪುರದ ಖಾಸಗಿ ಮನೆಯೊಂದರಲ್ಲಿ ಚಿತ್ರೀಕರಣ ಸಾಗುತ್ತಿದೆ. ಮುಂಬೈನಿಂದ ಆಗಮಿಸಿದ ನಾಯಕಿ ರೂಪಾಲಿ ತಾತ ಲೋಕನಾಥ್ ನಿವಾಸದಲ್ಲಿ ಮತ್ತೊಬ್ಬ ನಾಯಕಿ ವಂದನಾಗುಪ್ತಾಳೊಂದಿಗೆ ಹರಟುವ ಸನ್ನಿವೇಶ ಈ ಭಾಗದಲ್ಲಿ ಚಿತ್ರೀಕೃತವಾಗಿದೆ.
ನಿರ್ದೇಶಕರೇ ಕತೆ, ಚಿತ್ರಕತೆ, ಸಂಭಾಷಣೆ ಬರೆದಿರುವ ಈ ಚಿತ್ರಕ್ಕೆ ತ್ಯಾಗರಾಜನ್ ಅವರ ಛಾಯಾಗ್ರಹಣವಿದೆ. ಧರ್ಮಪ್ರಕಾಶ್ ಸಂಗೀತ, ನಾಗೇಂದ್ರಪ್ರಸಾದ್, ಕವಿರಾಜ್, ಜಯಂತಕಾಯ್ಕಿಣಿ ಗೀತರಚನೆ, ತವಸಿರಾಜ್ ಸಾಹಸ, ಹೊಸ್ಮನೆಮೂರ್ತಿ ಕಲೆ ಹಾಗೂ ವೇಣುಗೋಪಾಲ್ ನಿರ್ಮಾಣನಿರ್ವಹಣೆಯಿರುವ ಚಿತ್ರದ ತಾರಾಬಳಗದಲ್ಲಿ ರಾಹುಲ್, ರೂಪಾಲಿ, ವಂದನಾಗುಪ್ತ, ಅವಿನಾಶ್, ರಂಗಾಯಣರಘು, ಸುಧಾಬೆಳವಾಡಿ, ಚಿತ್ರಾಶೆಣೈ ಮುಂತಾದವರಿದ್ದಾರೆ.
(ದಟ್ಸ್ಕನ್ನಡ ಸಿನಿವಾರ್ತೆ)


Click it and Unblock the Notifications