ನಟಿ ಅದಿತಿ ಪ್ರಭುದೇವ ತಮ್ಮ ಮೊದಲ ಹೆಸರು ಬದಲಿಸಿದ್ದು ಯಾಕೆ?
ಕನ್ನಡ ಚಿತ್ರರಂಗಕ್ಕೆ ಇತ್ತೀಚಿಗೆ ಪದಾರ್ಪಣೆ ಮಾಡಿ ಬೇಡಿಕೆಯ ನಟಿಯಾಗಿರುವ ಅದಿತಿ ಪ್ರಭುದೇವ ಅವರು ಸದ್ಯ ತಮ್ಮ ತೋತಾಪುರಿ ಚಿತ್ರದ ಗೆಲುವಿನ ಖುಷಿಯಲ್ಲಿದ್ದಾರೆ. ಅಜಯ್ ರಾವ್ ನಟನೆಯ ಧೈರ್ಯಂ ಚಿತ್ರದ ಮೂಲಕ ಚಂದನವನಕ್ಕೆ ಕಾಲಿಟ್ಟ ಅದಿತಿ ಪ್ರಭುದೇವ, ಕಡಿಮೆ ಅವಧಿಯಲ್ಲಿ ಹೆಚ್ಚಿನ ಸಿನಿಮಾಗಳನ್ನು ಮಾಡಿ ಜನಪ್ರಿಯತೆ ಪಡೆದುಕೊಂಡಿದ್ದಾರೆ.
ಯಾವುದೇ ಪಾತ್ರವನ್ನಾದರೂ ಸರಾಗವಾಗಿ ಮಾಡುವ ಅದಿತಿ, ಕನ್ನಡ ಚಿತ್ರರಂಗದ ಶಾನೆ ಟಾಪ್ ಹುಡುಗಿ ಎನ್ನುವ ಹೆಗ್ಗಳಿಕೆ ಕೂಡ ಪಡೆದುಕೊಂಡಿದ್ದಾರೆ. ಪಟ-ಪಟ ಅಂತಾ ಕನ್ನಡ ಮಾತನಾಡುವ ಅದಿತಿ ಪ್ರಭುದೇವ ಕನ್ನಡಕ್ಕೆ ನೀಡುವ ಗೌರವ ನೋಡಿ ಅಭಿಮಾನಿಗಳು ಪ್ರೀತಿಯಿಂದ ಅಪ್ಪಟ ಕನ್ನಡತಿ ಎಂದು ಹೊಗಳಿದ್ದಾರೆ. ಕೇವಲ ನಟನೆಯಿಂದ ಅಷ್ಟೇ ಅಲ್ಲದೇ ಅದಿತಿ ತಮ್ಮ ಸರಳ ನಡೆ, ನುಡಿಯಿಂದ ಕೂಡ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ತಮ್ಮದೇ ಯೂಟ್ಯೂಬ್ ಚಾನೆಲ್ ಹೊಂದಿರುವ ಅದಿತಿ ಪ್ರಭುದೇವ ರೊಟ್ಟಿ ತಟ್ಟುವುದರಿಂದ ಹಿಡಿದು ಗಿಡಗಳ ಸಂರಕ್ಷಣೆವರೆಗಿನ ವಿಡಿಯೋಗಳನ್ನು ಮಾಡುತ್ತಾರೆ. ಇನ್ನು ಇತ್ತೀಚಿಗೆ ತೆರೆಕಂಡಿದ್ದ ಜಗ್ಗೇಶ್ ಅಭಿನಯದ 'ತೋತಾಪುರಿ' ಚಿತ್ರದಲ್ಲಿಯೂ ಶಕಿಲಾ ಭಾನು ಎನ್ನುವ ವಿಭಿನ್ನ ಪಾತ್ರದಲ್ಲಿ ನಟಿಸಿ ಅದಿತಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದರು. ಈ ಖುಷಿಯಲ್ಲಿರುವ ಅದಿತಿ ತಮ್ಮ ಹೆಸರು ಬದಲಿಸಿದ ಬಗ್ಗೆ ಹೇಳಿಕೊಂಡಿದ್ದಾರೆ.

ನನ್ನ ಹೆಸರು ಸುದೀಪಣ್ಣ ಎನ್ನುತ್ತಿದ್ದರು
ಇತ್ತೀಚಿಗೆ ನಡೆದ ಸಂದರ್ಶವೊಂದರಲ್ಲಿ ಮಾತನಾಡಿದ ನಟಿ ಅದಿತಿ ಪ್ರಭುದೇವ, ಸಿನಿಮಾಕ್ಕಾಗಿ ಹೆಸರು ಬದಲಿಸಿರುವುದಲ್ಲ. ಸುದೀಪನ ಎನ್ನುವುದು ಒಂದು ವಿಚಿತ್ರವಾದ ಹೆಸರು. ಆ ಹೆಸರು ಬೇಗ ಯಾರಿಗೂ ಗೊತ್ತಾಗುವುದಿಲ್ಲ. ನನ್ನ ಹೆಸರನ್ನು ಕೆಲವರು ಸುದೀಪಣ್ಣ ಎನ್ನುತ್ತಿದ್ದರು. ಇನ್ನೂ ಕೆಲವರು ಸುದೀಪ ಎನ್ನುತ್ತಿದ್ದರು. ಮೊದಲು ನನ್ನ ಹೆಸರು ಹೇಳುವುದೇ ಒಂದು ರಂಪಾ-ರಾಮಾಯಣ ಆಗುತ್ತಿತ್ತು. ಹೀಗಾಗಿ ಮೊದಲ ಸಿನಿಮಾದಲ್ಲಿ ಹೆಸರು ಬದಲಿಸುವ ಸಂದರ್ಭ ಬಂದಿತ್ತು. ಈ ವೇಳೆ ಅದಿತಿ, ಆಕಾಂಕ್ಷ ಹೀಗೆ ಅನೇಕ ಹೆಸರುಗಳನ್ನು ಹೇಳಿದರು, ಅದಿತಿ ನನಗೆ ಇಷ್ಟವಾಯಿತು. ಪ್ರಭುದೇವ ನನ್ನ ತಂದೆ ಹೆಸರು ಹೀಗಾಗಿ ಈಗ ನನ್ನ ಹೆಸರು ಅದಿತಿ ಪ್ರಭುದೇವ ಆಯ್ತು ಎಂದರು.

ತೃಪ್ತಿಕರ ಜೀವನ ನಡೆಸಬೇಕು ಎನ್ನುವುದು ನನ್ನ ಉದ್ದೇಶ
ಹಿರೋಯಿನ್ ಆಗಿ ತಮ್ಮ ಯಶಸ್ಸಿನ ಬಗ್ಗೆ ಮಾತನಾಡಿದ ಅವರು, ತುಂಬಾ ಜನ ಹೆಣ್ಣು ಮಕ್ಕಳಿಗೆ ನಾವು ಹೀಗೆ ಇರಬೇಕು, ಇದೇ ಆಗಬೇಕು ಎನ್ನುವ ಆಸೆ ಇರುತ್ತದೆ. ಆದರೆ ನನಗೆ ಯಾವುದೇ ಕನಸಿರಲಿಲ್ಲ. ನನಗೆ ಇಂಜಿನಿಯರಿಂಗ್ ಮಾಡಿದ್ದೇನೆ. ಚೆನ್ನಾಗಿ ಕೆಲಸ ಮಾಡಬೇಕು. ಫ್ಯಾಮಿಲಿಗೆ ನನ್ನಿಂದ ಸಹಾಯವಾಗಬೇಕು ಎಂದು ಚಿಕ್ಕ ಚಿಕ್ಕ ಆಸೆ ಇತ್ತು. ತೃಪ್ತಿಕರ ಜೀವನ ನಡೆಸಬೇಕು ಎನ್ನುವುದು ಯಾವಗಲೂ ನನ್ನ ಮನಸ್ಸಿನಲ್ಲಿತ್ತು. ನನ್ನ ಜೀವನದಲ್ಲಿ ನನಗೆ ಯಾವುದೇ ವಿಚಾರದಲ್ಲಿ ರಿಗ್ರೇಟ್ಸ್ ಇಲ್ಲ. ಸದ್ಯ ನೆಮ್ಮದಿಯಾಗಿದ್ದೇನೆ ಎಂದರು.

ನಮ್ಮ ಜೀವನಕ್ಕೆ ನಾವೇ ಹೊಣೆ
ಮಾತು ಮುಂದುವರಿಸಿದ ಅದಿತಿ, ನಾನು ನನ್ನ ಹೊಟ್ಟೆಪಾಡಿಗೆ, ಬಟ್ಟೆಗಾಗಿ, ನನ್ನ ಅಗತ್ಯಗಳಿಗಾಗಿ ಆ್ಯಕ್ಟಿಂಗ್ ಮಾಡುತ್ತೇನೆ. ಇದನ್ನು ಹೊರತಾಗಿ ಮನೆಯಲ್ಲಿ ಏನು ಕೆಲಸ ಇದೆ ಅದನ್ನು ಮಾಡಿಕೊಂಡಿರುತ್ತೇನೆ. ನಮ್ಮ ಮನೆಯಲ್ಲಿ ನನ್ನನ್ನು ರಾಣಿ ತರ ಎಲ್ಲಾ ಬೆಳೆಸಿಲ್ಲ. ಕೆಲಸದವರತರಾನೆ ಬೆಳೆಸಿದ್ದಾರೆ. ರಾಣಿಗಿಂತ ಹೆಚ್ಚಾಗಿ ಪ್ರೀತಿ ಕೊಟ್ಟಿದ್ದಾರೆ. ಆದರೆ ನಾನು ಯಾರ ಮೇಲೂ ಅವಲಂಬಿತಳಾಗಿರಬಾರದು ನಿನ್ನ ಕೆಲಸ ನೀನೇ ಮಾಡಿಕೊಳ್ಳಬೇಕು ಎಂದು ಬೆಳೆಸಿದ್ದಾರೆ. ನನಗೂ ಒಂದು ಅರಿವಾಗಿದೆ, ನಮ್ಮ ಜೀವನದಲ್ಲಿ ನಾವು ಯಾರ ಮೇಲಾದರೂ ಪೂರ್ತಿ ಭರವಸೆ ಇಡುತ್ತೇವೆ ಎಂದರೆ ಅದು ನಮ್ಮ ಮೇಲೆ ಮಾತ್ರ ನಮ್ಮ ಜೀವನಕ್ಕೆ ನಾವೇ ಹೊಣೆ ಎಂದಿದ್ದಾರೆ.

ನನ್ನ ವಿಡಿಯೋಗಳನ್ನು ನಾನೇ ಎಡಿಟ್ ಮಾಡುತ್ತೇನೆ
ಇನ್ನು ತಮ್ಮ ಯೂಟ್ಯೂಬ್ ಚಾನೆಲ್ ಬಗ್ಗೆ ಮಾತನಾಡಿದ ಅದಿತಿ ಪ್ರಭುದೇವ, ಈ ಯೂಟ್ಯೂಬ್ ಕೆಲಸ ಒಂದೊಂದು ಸಾರಿ ಎಷ್ಟು ಹಿಂಸೆ ಅನಿಸುತ್ತದೆ. ನನ್ನ ಯೂಟ್ಯೂಬ್ಗೆ ನಾನೇ ವಿಡಿಯೋ ಮಾಡುತ್ತೇನೆ. ನಾನೇ ಕ್ಯಾಮರಾ ಆನ್ ಮಾಡಿ ಬಳಿಕ ಏನು ಕಂಟೆಂಟ್ ಮಾಡಬೇಕು ಅದನ್ನು ಮಾಡಿ, ನಂತರ ನಾನೇ ಹೋಗಿ ವಿಡಿಯೋ ಎಂಡ್ ಕೊಡುತ್ತೇನೆ. ಅಷ್ಟೇ ಅಲ್ಲ, ಮತ್ತೆ ನಾನೇ ಎಡಿಟ್ ಕೂಡ ಮಾಡುತ್ತೇನೆ. ಇದರಿಂದ ಕೆಲವು ದಿನ ನಿದ್ದೆಗೆಟ್ಟಿದ್ದೇನೆ. ಆದರೂ ಒಂದು ರೀತಿಯಾದ ಖುಷಿ ಇದೆ. ನನ್ನ ಜೀವನ ಇಷ್ಟು ಬ್ಯುಸಿಯಾಗಿರುವುದರಿಂದ ನನಗೆ ಬೇರೆ ವಿಚಾರಗಳ ಬಗ್ಗೆ ಆಲೋಚನೆ ಮಾಡಲು ಸಮಯವಿಲ್ಲ ಎಂದು ತಮ್ಮ ದಿನಚರಿಯ ಬಗ್ಗೆ ಹೇಳಿಕೊಂಡರು.


Click it and Unblock the Notifications











